ಆ್ಯಪ್ನಗರ

ಕೊರೊನಾ ನಿಯಂತ್ರಣಕ್ಕೆ ಪ್ರಧಾನಿ ಮೋದಿ ಸಲಹೆ ಸೂಚನೆ

ಸೌಮ್ಯ ರೋಗಲಕ್ಷಣಗಳೇ ಹೆಚ್ಚಿರುವ ಕಾರಣ ಹೋಮ್‌ ಐಸೊಲೇಷನ್‌ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳ ಪ್ರಸರಣಕ್ಕೆ ಲಗಾಮು ಹಾಕಬೇಕು'' ಎಂದು ನಿರ್ದೇಶನ ನೀಡಿದರು.

Vijaya Karnataka 10 Jan 2022, 12:06 am
ಹೊಸದಿಲ್ಲಿ: ಕೊರೊನಾ ಸೋಂಕಿತರು ಗಣನೀಯ ಹೆಚ್ಚಳವಾಗಿ ದೇಶಾದ್ಯಂತ ಮೂರನೇ ಅಲೆಯು ಆತಂಕ ಮೂಡಿಸಿರುವ ನಡುವೆಯೇ ಭಾನುವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್‌-19 ಸ್ಥಿತಿಗತಿ ಕುರಿತು ಮಹತ್ವದ ಸಭೆ ನಡೆಸಿದರು.
Vijaya Karnataka Web ನರೇಂದ್ರ ಮೋದಿ
ನರೇಂದ್ರ ಮೋದಿ


ಹೊಸದಿಲ್ಲಿಯಲ್ಲಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಿದ ಮೋದಿ ಅವರು, ''ಮಾಸ್ಕ್‌ ಧರಿಸುವುದನ್ನು ದೇಶಾದ್ಯಂತ ಕಡ್ಡಾಯಗೊಳಿಸಬೇಕು. ಸಾಮಾಜಿಕ ಅಂತರ ಪಾಲನೆ ಹಾಗೂ ಜಿಲ್ಲಾ ಮಟ್ಟದಲ್ಲಿಆರೋಗ್ಯಸೇವೆಯ ಮೂಲಭೂತ ಸೌಕರ್ಯಗಳ ವ್ಯವಸ್ಥೆ ಕಡೆಗೆ ಹೆಚ್ಚು ಗಮನಹರಿಸಬೇಕು. ಸೌಮ್ಯ ರೋಗಲಕ್ಷಣಗಳೇ ಹೆಚ್ಚಿರುವ ಕಾರಣ ಹೋಮ್‌ ಐಸೊಲೇಷನ್‌ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳ ಪ್ರಸರಣಕ್ಕೆ ಲಗಾಮು ಹಾಕಬೇಕು'' ಎಂದು ನಿರ್ದೇಶನ ನೀಡಿದರು.

ಮುಖ್ಯವಾಗಿ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲಾಗುತ್ತಿರುವ ಅಭಿಯಾನದ ವೇಗ ಹೆಚ್ಚಿಸಿ, ಶೀಘ್ರವೇ ದೇಶದ ಎಲ್ಲಮಕ್ಕಳಿಗೆ ಲಸಿಕೆಯ ಒಂದು ಡೋಸ್‌ ಆದರೂ ಪೂರ್ಣಗೊಳಿಸುವಂತೆ ಆರೋಗ್ಯ ಸಚಿವಾಲಯಕ್ಕೆ ಸೂಚನೆ ನೀಡಿದರು. ಗೃಹ ಸಚಿವ ಅಮಿತ್‌ ಶಾ, ಆರೋಗ್ಯ ಸಚಿವ ಮನ್ಸುಖ್‌ ಮಂಡಾವಿಯ, ನೀತಿ ಆಯೋಗ ಸದಸ್ಯ ಡಾ.ವಿ.ಕೆ. ಪೌಲ್‌, ಐಸಿಎಂಆರ್‌ ಮುಖ್ಯಸ್ಥ ಡಾ. ಬಲರಾಮ್‌ ಭಾರ್ಗವ ಸೇರಿ ಅನೇಕ ಉನ್ನತ ಮಟ್ಟದ ಅಧಿಕಾರಿಗಳು ಸಭೆಯಲ್ಲಿಭಾಗಿಯಾಗಿದ್ದರು.
402 ಸಂಸತ್ ಸಿಬ್ಬಂದಿಗೆ ಕೊರೊನಾ ವೈರಸ್ ಪಾಸಿಟಿವ್: ಬಜೆಟ್ ಅಧಿವೇಶನಕ್ಕೆ ತೊಡಕು?
ಮಂಡಾವಿಯ ಸಭೆ

ಕೋವಿಡ್‌-19 ಪ್ರಕರಣಗಳು ದೇಶಾದ್ಯಂತ ಗಣನೀಯ ಹೆಚ್ಚಳ ಕಾಣುತ್ತಿರುವ ಹಿನ್ನೆಲೆಯಲ್ಲಿಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಂಡಾವಿಯ ಅವರು ಸೋಮವಾರ ಐದು ರಾಜ್ಯಗಳ ಆರೋಗ್ಯ ಸಚಿವರ ಜತೆಗೆ ಮಹತ್ವದ ಸಭೆ ನಡೆಸಲಿದ್ದಾರೆ. ರಾಜಸ್ಥಾನ, ಮಧ್ಯಪ್ರದೇಶ, ಗೋವಾ, ಗುಜರಾತ್‌, ಮಹಾರಾಷ್ಟ್ರ ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ದಾದ್ರಾ ಹಾಗೂ ನಗರ್‌ಹವೇಲಿ, ದಮನ್‌ ಹಾಗೂ ದಿಯುನ ಆರೋಗ್ಯ ಸಚಿವರು ಹಾಗೂ ಆರೋಗ್ಯ ಇಲಾಖೆ ಪ್ರತಿನಿಧಿಗಳ ಜತೆಗೆ ಮಹತ್ವದ ಸಭೆಯನ್ನು ಆನ್‌ಲೈನ್‌ ಮೂಲಕ ನಡೆಸಲಿದ್ದಾರೆ.

224 ದಿನಗಳ ನಂತರ ಗರಿಷ್ಠ ಕೇಸ್‌

ಭಾನುವಾರ ಬೆಳಗ್ಗೆ 8 ಗಂಟೆಗೆ ಕೊನೆಯಾದ 24 ಗಂಟೆ ಅವಧಿಯಲ್ಲಿ ದೇಶಾದ್ಯಂತ ಕೊರೊನಾ ಸೋಂಕಿನ 1,59,632 ಹೊಸ ಪ್ರಕರಣಗಳು ವರದಿಯಾಗಿವೆ. ಇದು ಕಳೆದ 224 ದಿನಗಳಲ್ಲೇ ಗರಿಷ್ಠ ಪ್ರಮಾಣವಾಗಿದೆ. ದೇಶದಲ್ಲಿಸಕ್ರಿಯ ಸೋಂಕಿತರ ಸಂಖ್ಯೆ 6 ಲಕ್ಷ ಮುಟ್ಟಿದೆ. ಇದು ಕೂಡ ಕಳೆದ 197 ದಿನಗಳಲ್ಲೇ ಗರಿಷ್ಠ ಸಂಖ್ಯೆಯಾಗಿದೆ. ಕಳೆದ ವರ್ಷ ಮೇ 29ರಂದು ಎರಡನೇ ಅಲೆಯ ಆರ್ಭಟವಿದ್ದಾಗ ಏಕದಿನ ದಾಖಲೆಯಾಗಿ 1.65 ಲಕ್ಷ ಜನರಿಗೆ ಕೊರೊನಾ ಸೋಂಕು ತಗುಲಿತ್ತು. ಮತ್ತೊಂದೆಡೆ, ದೇಶದಲ್ಲಿ 552 ಓಮಿಕ್ರಾನ್‌ ಸೋಂಕಿತರು ಪತ್ತೆಯಾಗಿದ್ದು ಓಮಿಕ್ರಾನ್‌ ಸೋಂಕಿತರ ಸಂಖ್ಯೆ 3,623 ತಲುಪಿದೆ. ಈ ಪೈಕಿ 1,409 ಸೋಂಕಿತರು ರೋಗಲಕ್ಷಣಗಳಿಂದ ಚೇತರಿಸಿಕೊಂಡಿದ್ದಾರೆ. ಕೊರೊನಾಗೆ ಬಲಿಯಾದವರ ಸಂಖ್ಯೆ 4.83 ಲಕ್ಷ ದಾಟಿದ್ದು, ದೇಶದಲ್ಲಿ ಕೊರೊನಾ ಪಾಸಿಟಿವಿಟಿ ಪ್ರಮಾಣ 10.21% ದಾಟಿದೆ.

ಇಟಲಿಗೆ ಸೋಂಕು: ತನಿಖೆಗೆ ಆದೇಶ

ಕಳೆದ ಮೂರು ದಿನಗಳಿಂದಲೂ ಪಂಜಾಬ್‌ನ ಅಮೃತಸರಕ್ಕೆ ಇಟಲಿಯಿಂದ ಬಂದಿಳಿದ ವಿಮಾನದಲ್ಲಿ ಪ್ರಯಾಣಿಕರಲ್ಲಿ ಬಹುತೇಕ ಮಂದಿಗೆ ಕೊರೊನಾ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸೋಂಕಿತರ ತಪಾಸಣೆ ನಡೆಸಿ ವರದಿ ನೀಡಿದ ಖಾಸಗಿ ಪ್ರಯೋಗಾಲಯದ ವಿರುದ್ಧ ಆರೋಗ್ಯಾಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಕೂಡ ಪ್ರಯೋಗಾಲಯವನ್ನು ಬದಲಾಯಿಸಿ, ಸ್ಥಳೀಯವಾಗಿಯೇ ಪರೀಕ್ಷೆ ನಡೆಸಲು ಅಗತ್ಯ ವ್ಯವಸ್ಥೆ ಮಾಡುವಂತೆ ವಿಮಾನ ನಿಲ್ದಾಣ ಸಿಬ್ಬಂದಿಗೆ ಸೂಚಿಸಿದೆ. ಮೊದಲು ಕೊರೊನಾ ದೃಢಪಟ್ಟ ಪ್ರಯಾಣಿಕರು, ಬಳಿಕ ಕೆಲವೇ ಗಂಟೆಗಳಲ್ಲಿ ಸ್ಥಳೀಯ ಮತ್ತೊಂದು ಪ್ರಯೋಗಾಲಯದಲ್ಲಿ ತಪಾಸಣೆ ಮಾಡಿಸಿದಾಗ ಕೊರೊನಾ ಸೋಂಕು ಇಲ್ಲಎಂದು ವರದಿ ಬಂದಿರುವುದು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ.

ವೈದ್ಯರಲ್ಲಿ ಕೋವಿಡ್ ಸೋಂಕು: ಶಸ್ತ್ರಚಿಕಿತ್ಸೆ ನಡೆಸಲು ಆಸ್ಪತ್ರೆಗಳಲ್ಲಿ ಸರ್ಜನ್‌ಗಳೇ ಇಲ್ಲ!

ದಿಲ್ಲಿ, ಮುಂಬಯಿಯಲ್ಲಿ ಉತ್ತುಂಗ

ಕೊರೊನಾ ಸೋಂಕಿನ ಮೂರನೇ ಅಲೆಯು ಮಹಾರಾಷ್ಟ್ರದ ಮುಂಬಯಿ ಹಾಗೂ ದಿಲ್ಲಿಗಳಲ್ಲಿ ಮುಂದಿನ ವಾರ ಉತ್ತುಂಗ ತಲುಪಲಿದೆ. ಈ ವೇಳೆಯ ಮುಂಬಯಿಯಲ್ಲಿಸರಾಸರಿ ನಿತ್ಯ 60,000 ಹಾಗೂ ದಿಲ್ಲಿಯಲ್ಲಿ ನಿತ್ಯ 30,000 ಹೊಸ ಪ್ರಕರಣಗಳು ವರದಿಯಾಗಲಿವೆ. ದೇಶದಲ್ಲಿ ಜನವರಿ ಕೊನೆ ವೇಳೆ ಮೂರನೇ ಅಲೆ ಉತ್ತುಂಗ ತಲುಪಲಿದ್ದು, ಆಗ ಪ್ರತಿದಿನ 4ರಿಂದ 8 ಲಕ್ಷ ಹೊಸ ಪ್ರಕರಣಗಳು ವರದಿಯಾಗುವ ಸಾಧ್ಯತೆ ಇದೆ ಎಂದು ಕಾನ್ಪುರ ಐಐಟಿ ಪ್ರಾಧ್ಯಾಪಕ ಮಹೇಂದ್ರ ಅಗರ್‌ವಾಲ್‌ ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ