ಆ್ಯಪ್ನಗರ

ದಿಲ್ಲಿಯಲ್ಲಿ ಪ್ಲಾಸ್ಮಾ ಬ್ಯಾಂಕ್ ಸ್ಥಾಪನೆ‌, ಪ್ಲಾಸ್ಮಾ ದೇಣಿಗೆ ನೀಡಲು ಕೇಜ್ರಿವಾಲ್‌ ಮನವಿ

ಕೊರೊನಾದಿಂದ ಸಾವಿಗೀಡಾದ ವೈದ್ಯ ಡಾ. ಅಶೀಮ್‌ ಗುಪ್ತಾ ಅವರಿಗೆ 1 ಕೋಟಿ ರೂಪಾಯಿ ಪರಿಹಾರವನ್ನೂ ಕೇಜ್ರಿವಾಲ್‌ ಘೋಷಿಸಿದ್ದಾರೆ. ದಿಲ್ಲಿಯ ಕೋವಿಡ್‌ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಸೋಂಕಿತರಾಗಿದ್ದ ಗುಪ್ತಾ ನಂತರ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದರು.

Agencies 29 Jun 2020, 2:37 pm

ಹೊಸದಿಲ್ಲಿ: ಕೊರೊನಾ ವೈರಸ್‌ ವಿರುದ್ಧ ಹೋರಾಟ ತೀವ್ರಗೊಳಿಸಲು ನಿರ್ಧರಿಸಿರುವ ದಿಲ್ಲಿ ಸರಕಾರ ಪ್ಲಾಸ್ಮಾ ಬ್ಯಾಂಕ್‌ ಸ್ಥಾಪನೆಗೆ ನಿರ್ಧರಿಸಿದೆ. ಕೊರೊನಾ ವೈರಸ್‌ ಸೋಂಕಿನಿಂದ ಚೇತರಿಸಿಕೊಂಡವರು ಪ್ಲಾಸ್ಮಾ ದೇಣಿಗೆ ನೀಡುವಂತೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮನವಿ ಮಾಡಿಕೊಂಡಿದ್ದಾರೆ.
Vijaya Karnataka Web Arvind Kejriwal


ಈ ಸಂಬಂಧ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಪ್ಲಾಸ್ಮಾ ನೀಡಲು ಉದ್ದೇಶಿಸಿರುವವರಿಂದ ಅದನ್ನು ಪಡೆದುಕೊಳ್ಳಲು ಬೇಕಾದ ವ್ಯವಸ್ಥೆಯನ್ನು ಮಾಡುವುದಾಗಿ ಹೇಳಿದ್ದಾರೆ. ಇನ್ನೆರಡು ದಿನದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಈ ಪ್ಲಾಸ್ಮಾ ಬ್ಯಾಂಕ್‌ ಕಾರ್ಯಾರಂಭ ಮಾಡಲಿದೆ ಎಂದು ಅವರು ತಿಳಿಸಿದ್ದಾರೆ.

ಇಲ್ಲಿಯವರೆಗೆ 29 ರೋಗಿಗಳ ಮೇಲೆ ಪ್ಲಾಸ್ಮಾ ಥೆರಪಿ ನಡೆಸಲಾಗಿದ್ದು, ಇದರ ಫಲಿತಾಂಶ ಧನಾತ್ಮಕವಾಗಿದೆ ಎಂದು ಹೇಳಿರುವ ಅವರು, ರೋಗದಿಂದ ಚೇತರಸಿಕೊಂಡವರು ಮುಂದೆ ಬಂದು ಪ್ಲಾಸ್ಮಾ ದೇಣಿಗೆ ನೀಡುವಂತೆ ಮನವಿ ಮಾಡಿದ್ದಾರೆ. ದಕ್ಷಿಣ ದಿಲ್ಲಿಯ ವಸಂತ್‌ ಕುಂಜ್‌ನಲ್ಲಿರುವ ಲಿವರ್‌ ಮತ್ತು ಬಿಲಿಯರಿ ಸೈನ್ಸ್‌ನಲ್ಲಿ ಈ ಬ್ಯಾಂಕ್‌ ಆರಂಭವಾಗಲಿದೆ. ಇದು ಬೇಡಿಕೆ ಮತ್ತು ಪೂರೈಕೆ ನಡುವಿನ ಸೇತುವೆಯಾಗಿ ಕೆಲಸ ಮಾಡಲಿದೆ ಎಂದು ಸಿಎಂ ವಿವರಿಸಿದ್ದಾರೆ.
ಕೊರೊನಾದಿಂದ ಚೇತರಿಸಿಕೊಂಡ ದಿಲ್ಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌

ಈ ಕೇಂದ್ರಕ್ಕೆ ಜನರು ತೆರಳಿ ಪ್ಲಾಸ್ಮಾ ದೇಣಿಗೆ ನೀಡಲು ಬೇಕಾದ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಹೇಳಿರುವ ಕೇಜ್ರಿವಾಲ್‌ ಇದಕ್ಕೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಯನ್ನು ಕೆಲವೇ ದಿನದಲ್ಲಿ ತಿಳಿಸಲಾಗುವುದು ಎಂದಿದ್ದಾರೆ. ಪ್ಲಾಸ್ಮಾ ನೀಡುವ ಬಗೆಗಿನ ಯಾವುದೇ ಪ್ರಶ್ನೆಗಳಿದ್ದರೆ ಅವನ್ನು ಪರಿಹರಿಸುವುದಕ್ಕಾಗಿ ಸಹಾಯವಾಣಿಯನ್ನು ಆರಂಭಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.

ದಿಲ್ಲಿಯಲ್ಲಿ ಇಲ್ಲಿಯವರೆಗೆ 83,077 ಕೊರೊನಾ ವೈರಸ್‌ ಪ್ರಕರಣಗಳು ದೃಢಪಟ್ಟಿದ್ದು, ದೇಶದಲ್ಲೇ ಮಹಾರಾಷ್ಟ್ರ ಬಿಟ್ಟರೆ ಅತೀ ಹೆಚ್ಚಿನ ಪ್ರಕರಣಗಳು ರಾಷ್ಟ್ರ ರಾಜಧಾನಿಯಲ್ಲಿ ವರದಿಯಾಗಿವೆ. ಇದೇ ದಿಲ್ಲಿಯಲ್ಲಿ ಮೊದಲ ಯಶಸ್ವೀ ಪ್ಲಾಸ್ಮಾ ಥೆರಪಿ ನಡೆದಿತ್ತು. ಈ ಥೆರಪಿ ನಂತರ ವೆಂಟಿಲೇಟರ್‌ನಲ್ಲಿದ್ದ 49 ವರ್ಷದ ವ್ಯಕ್ತಿಯೊಬ್ಬರು ಚೇತರಿಸಿಕೊಂಡಿದ್ದರು.

ಇನ್ನು ಪತ್ರಿಕಾಗೋಷ್ಠಿಯಲ್ಲಿ ಕೊರೊನಾದಿಂದ ಸಾವಿಗೀಡಾದ ವೈದ್ಯ ಡಾ. ಅಶೀಮ್‌ ಗುಪ್ತಾ ಅವರಿಗೆ 1 ಕೋಟಿ ರೂಪಾಯಿ ಪರಿಹಾರವನ್ನೂ ಕೇಜ್ರಿವಾಲ್‌ ಘೋಷಿಸಿದ್ದಾರೆ. ದಿಲ್ಲಿಯ ಕೋವಿಡ್‌ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಸೋಂಕಿತರಾಗಿದ್ದ ಗುಪ್ತಾ ನಂತರ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ