ಮುದಗಲ್: ಸಮೀಪದ ತಲೇಖಾನ ವ್ಯಾಪ್ತಿಯ ನಾನಾ ಗ್ರಾಮಗಳ ಗ್ರಾಮ ಸಭೆ ಯರದೊಡ್ಡಿ ಗ್ರಾಮದಲ್ಲಿ ಶನಿವಾರ ನಡೆಯಿತು. ದೇಸಾಯಿ ಭೋಗಾಪುರ, ಕಸ್ತೂರ ನಾಯ್ಕನ ತಾಂಡಾಗಳಲ್ಲಿ ಬಸವ ವಸತಿ, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಅಂಬೇಡ್ಕರ್ ವಸತಿ ಯೋಜನೆಗಳ ಕುರಿತು ಗ್ರಾಮಸಭೆ ಜರುಗಿತು.
ಯರದೊಡ್ಡಿಯಲ್ಲಿ ನಡೆದ ಸಭೆಯಲ್ಲಿ ಪಿಡಿಒ ಪಂಪನಗೌಡ ಮಾತನಾಡಿ, ತಲೇಖಾನ ಗ್ರಾ.ಪಂ.ವ್ಯಾಪ್ತಿಯಲ್ಲಿ ಈಗಾಗಲೇ ನಾಲ್ಕು ಹಳ್ಳಿಗಳಲ್ಲಿ ವಸತಿ ಯೋಜನೆಗಳ ಫಲಾನುಭವಿಗಳ ಆಯ್ಕೆ ಕುರಿತು ಗ್ರಾಮಸಭೆ ನಡೆಸಲಾಗಿಗಿದೆ. ಕಾರಣಾಂತರಗಳಿಂದ ಯರದೊಡ್ಡಿ, ತಲೇಖಾನ, ದೇಸಾಯಿ ಭೋಗಾಪುರ ಹಾಗೂ ಕಸ್ತೂರ ನಾಯ್ಕನ ತಾಂಡಾಗಳಲ್ಲಿ ಗ್ರಾಮಸಭೆ ನಡೆಸದೇ ಮುಂದೂಡಲಾಗಿತ್ತು. ಆದರೆ, ಇಂದಿನ ಗ್ರಾಮಸಭೆಯಲ್ಲಿ ಆಯಾ ವಾರ್ಡ್ನ ವರ್ಗವಾರು ಮೀಸಲಾತಿ ಕಲ್ಪಿಸಿ ಮನೆಗಳನ್ನು ನೀಡಲಾಗಿದ್ದು, ಸೂಕ್ತ ಫಲಾನುಭವಿಗಳನ್ನು ಗ್ರಾಮಸ್ಥರು ಸೂಚಿಸಬೇಕೆಂದರು ತಿಳಿಸಿದರು.
ಸಭೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳ ಆಯ್ಕೆಯಲ್ಲಿ ಯಾವುದೇ ಗೊಂದಲ ಉಂಟಾಗಲಿಲ್ಲ. ಸಾಮಾನ್ಯ ವರ್ಗದ 2 ಫಲಾನುಭವಿಗಳನ್ನು ಗುರುತಿಸುವಲ್ಲಿ ಗೊಂದಲ ಉಂಟಾಯಿತು. ಗ್ರಾಮದಲ್ಲಿ ಹೆಚ್ಚು ಜನ ಸಾಮಾನ್ಯ ವರ್ಗಕ್ಕೆ ಸೇರಿದವರಾಗಿದ್ದು, ಆದರೆ ಕೇವಲ 2 ಮನೆಗಳನ್ನು ನೀಡಿರುವುದರ ಬಗ್ಗೆ ಗ್ರಾಮದ ಬಸವರಾಜ ಅವರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಿಡಿಒ ಪಂಪನಗೌಡ, ಸರಕಾರ ಜನಸಂಖ್ಯೆ ಆಧಾರದ ಮೇಲೆ ಮನೆಗಳನ್ನು ನೀಡಿದೆ. ನಿಯಮ ಪಾಲನೆ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದರು. ಆಗ ಸಭೆಯಲ್ಲಿ ಸಾಮಾನ್ಯ ವರ್ಗದ 2 ಫಲಾನುಭವಿಗಳ ಹೆಸರನ್ನು ಎಲ್ಲರೂ ಸೂಚಿಸಿದರು. ನೋಡಲ್ ಅಧಿಕಾರಿ ಸಿದ್ದಪ್ಪ, ಗ್ರಾ.ಪಂ.ಸದಸ್ಯರಾದ ಕಮಲಮ್ಮ ತಿರುಪತಿ, ಆನಂದ ಕುಮಾರ, ಶ್ರೀನಿವಾಸ, ವೆಂಕನಗೌಡ ಸೇರಿದಂತೆ ಅನೇಕರು ಇದ್ದರು.