ಆ್ಯಪ್ನಗರ

ಮರುಳಾಗದ ಪೊಲೀಸ್, ಜಿಲ್ಲಾಡಳಿತ

ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ (ಆರ್‌ಟಿಪಿಎಸ್) ಬಳಿ ಇರಿಸಿದ್ದ ಮರಳಿನ ಚೀಲಗಳನ್ನು ಕಿತ್ತೊಗೆದು ಕೃಷ್ಣಾ ನದಿ ನೀರು ಪಡೆಯುವ ತೆಲಂಗಾಣ ಹಾಗೂ ಕರ್ನಾಟಕದ ರೈತರ ಒತ್ತಾಸೆಗೆ ಪೊಲೀಸ್ ಹಾಗೂ ಜಿಲ್ಲಾಡಳಿತ ಮರುಳಾಗಿಲ್ಲ.

ವಿಕ ಸುದ್ದಿಲೋಕ 31 Mar 2017, 8:22 am
ರಾಯಚೂರು: ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ (ಆರ್‌ಟಿಪಿಎಸ್) ಬಳಿ ಇರಿಸಿದ್ದ ಮರಳಿನ ಚೀಲಗಳನ್ನು ಕಿತ್ತೊಗೆದು ಕೃಷ್ಣಾ ನದಿ ನೀರು ಪಡೆಯುವ ತೆಲಂಗಾಣ ಹಾಗೂ ಕರ್ನಾಟಕದ ರೈತರ ಒತ್ತಾಸೆಗೆ ಪೊಲೀಸ್ ಹಾಗೂ ಜಿಲ್ಲಾಡಳಿತ ಮರುಳಾಗಿಲ್ಲ.
Vijaya Karnataka Web
ಮರುಳಾಗದ ಪೊಲೀಸ್, ಜಿಲ್ಲಾಡಳಿತ


ಆರ್‌ಟಿಪಿಎಸ್ ಮತ್ತು ವೈಟಿಪಿಎಸ್ ವಿದ್ಯುತ್ ಕೇಂದ್ರಗಳಿಗೆ ಬೇಸಿಗೆಯಲ್ಲಿ ನೀರಿನ ಅಭಾವ ಉಂಟಾಗದಂತೆ ಮುಂಜಾಗ್ರತೆ ಕ್ರಮವಾಗಿ ಕೃಷ್ಣಾ ನದಿಗೆ ಅಡ್ಡ ಮರಳಿನ ಚೀಲಗಳನ್ನು ಇರಿಸಿ ನೀರು ಸಂಗ್ರಹಿಸುವುದು ರೂಢಿ. ಆದರೆ, ಈ ಬಾರಿ ನದಿಯಲ್ಲಿ ನೀರು ಬತ್ತಿದ್ದರಿಂದ ನದಿ ಪಾತ್ರದ ಜಮೀನುಗಳ ಬೆಳೆ ಒಣಗುತ್ತಿವೆ. ನದಿಗೆ ನೀರು ಹರಿಸುವಂತೆ ಆಗ್ರಹಿಸಿ ರೈತರು ಕಳೆದ ಕೆಲ ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ.

ಬೆಳೆ ಸಂರಕ್ಷಣೆ ಹಿನ್ನೆಲೆಯಲ್ಲಿ ಕೃಷ್ಣಾ ನದಿ ಪಾತ್ರದ ಆರ್‌ಟಿಪಿಎಸ್ ಮತ್ತು ವೈಟಿಪಿಎಸ್ ಜಾಕ್‌ವೆಲ್ ಬಳಿ ಬುಧವಾರ ದಾಳಿ ನಡೆಸಿದ ತೆಲಂಗಾಣ ಮತ್ತು ಕರ್ನಾಟಕ ಭಾಗದ ಕೆಲ ರೈತರು, ನದಿಯ ಮಧ್ಯೆ ಅಡ್ಡ ಇರಿಸಿದ್ದ ಮರಳಿನ ಚೀಲಗಳನ್ನು ಕಿತ್ತೊಗೆದು ಆಕ್ರೋಶ ವ್ಯಕ್ತಪಡಿಸಿದರು. ನೀರು ಹೊರಹರಿದು ಕೆಲಹೊತ್ತು ಆತಂಕದ ಸ್ಥಿತಿ ನಿರ್ಮಾಣವಾಗಿತ್ತು.

ಬೆಳೆಗೆ ಅಭಾವ ಸೃಷ್ಟಿ: ‘‘ವೈಟಿಪಿಎಸ್ ಬಳಕೆಗೆ ನಿರ್ದಿಷ್ಟವಾಗಿ ನದಿಗೆ ನೀರು ಹರಿಸಿಲ್ಲ. ರೈತರು ಬಳಸಬೇಕಾದ ನೀರನ್ನು ವೈಟಿಪಿಎಸ್‌ಗೆ ಪಡೆಯುವ ಮೂಲಕ ರೈತರ ಬೆಳೆಗೆ ಅಭಾವ ಸೃಷ್ಟಿಸಲಾಗಿದೆ’’ ಎಂದು ರೈತರು, ಪೊಲೀಸರ ಸಮ್ಮುಖದಲ್ಲಿಯೇ ಅಸಮಾಧಾನ ವ್ಯಕ್ತಪಡಿಸಿದರು. ನೀರು ಹೊರಹರಿಯುತ್ತಿದ್ದಂತೆಯೇ ರೈತರು ಅಲ್ಲಿಂದ ವಾಪಸಾಗಿದ್ದರು.

ರೈತರು ಕಿತ್ತುಹಾಕಿದ್ದ ಮರಳಿನ ಚೀಲಗಳ ಸ್ಥಳದಲ್ಲಿ ಹೊಸದಾಗಿ ಮರಳು ತುಂಬಿದ ಚೀಲ ಇರಿಸುವ ಮೂಲಕ ನೀರಿನ ಹೊರಹರಿವಿಗೆ ತಡೆಯೊಡ್ಡಲಾಯಿತು. ಈ ಮಧ್ಯೆ ಆರ್‌ಟಿಪಿಎಸ್ ಮತ್ತು ವೈಟಿಪಿಎಸ್ ಕೇಂದ್ರಗಳಿಗೆ ಗೂಗಲ್ ಬ್ಯಾರೇಜ್‌ನಿಂದ ಹರಿಸುತ್ತಿರುವ 200 ಕ್ಯೂಸೆಕ್ ನೀರು ನಿಲುಗಡೆ ಉದ್ದೇಶದೊಂದಿಗೆ ಗುರುವಾರ ಪೊಲೀಸ್ ಬಿಗಿ ಕಾವಲಿನಲ್ಲಿ ಮರಳಿನ ಚೀಲಗಳನ್ನು ಯಥಾಸ್ಥಿತಿಯಲ್ಲಿ ಇರಿಸಿ ನೀರಿನ ಹೊರಹರಿವು ತಡೆಯಲಾಯಿತು. ಸ್ಥಳದಲ್ಲಿ ಶಕ್ತಿನಗರ ಪೊಲೀಸ್ ಠಾಣೆಯ ಸಿಬ್ಬಂದಿ ಬೀಡುಬಿಟ್ಟಿದ್ದಾರೆ.

ಕೆಪಿಸಿಗೆ ತಲೆಬಿಸಿ: ಬೇಸಿಗೆ ಹಿನ್ನೆಲೆಯಲ್ಲಿ ಒತ್ತಡದಲ್ಲಿರುವ ಕೆಪಿಸಿ ಅಧಿಕಾರಿಗಳಿಗೆ ನೀರಿನ ಅಭಾವ ತಲೆನೋವು ತಂದಿದೆ. ನದಿಯ ನೀರಿನ ಬಳಕೆ ವಿಚಾರದಲ್ಲಿ ರೈತರು ಆಗಾಗ್ಗೆ ಮರಳಿನ ಚೀಲ ಕಿತ್ತುಹಾಕುತ್ತಿರುವುದು ಆರ್‌ಟಿಪಿಎಸ್‌ನಲ್ಲಿ ವಿದ್ಯುತ್ ಉತ್ಪಾದನೆಗೆ ತೊಡಕು ಉಂಟಾಗುವ ಆತಂಕ ಎದುರಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ