ಆ್ಯಪ್ನಗರ

ಅಶುದ್ಧ ನೀರೇ ಅನಿವಾರ್ಯ!

ಹಲವು ಗ್ರಾಮಸ್ಥರು ಅಶುದ್ಧ ನೀರನ್ನೇ ಕುಡಿಯುತ್ತಿದ್ದಾರೆ! ಶುದ್ಧೀಕರಣಗೊಳಿಸದೇ ನೇರವಾಗಿ ನದಿಯಿಂದ ನೀರು ಪೂರೈಕೆಯಾಗುತ್ತಿದ್ದು, ಕಾಯಿಲೆ ಭೀತಿ ಜನರನ್ನು ಕಾಡುತ್ತಿದೆ.

ವಿಕ ಸುದ್ದಿಲೋಕ 7 Apr 2017, 9:00 am

ಸೋಮಣ್ಣ ಗುರಿಕಾರ, ಹಟ್ಟಿಚಿನ್ನದಗಣಿ

ಹಲವು ಗ್ರಾಮಸ್ಥರು ಅಶುದ್ಧ ನೀರನ್ನೇ ಕುಡಿಯುತ್ತಿದ್ದಾರೆ! ಶುದ್ಧೀಕರಣಗೊಳಿಸದೇ ನೇರವಾಗಿ ನದಿಯಿಂದ ನೀರು ಪೂರೈಕೆಯಾಗುತ್ತಿದ್ದು, ಕಾಯಿಲೆ ಭೀತಿ ಜನರನ್ನು ಕಾಡುತ್ತಿದೆ.

ಒಂದು ರೀತಿ ಎಲ್ಲವೂ ಇದ್ದು, ಏನೂ ಇಲ್ಲದಂತಹ ಸ್ಥಿತಿ ಇಲ್ಲಿಯ ಜನರದ್ದು.

ಸಮೀಪದ ಟಣಮಕಲ್‌ ಬಳಿ ಹರಿಯುವ ಕೃಷ್ಣಾ ನದಿ ದಡದಲ್ಲಿ ನಿರ್ಮಿಸಿದ ವಾಟರ್‌ ಫಿಲ್ಟರ್‌ ಬೆಡ್‌ನಲ್ಲಿ ಫಿಲ್ಟರ್‌ ಮಾಡುವ ಯಂತ್ರಗಳಿವೆ. ಆದರೆ, ಕಳೆದ ಒಂದು ವರ್ಷದಿಂದ ಈ ಯಂತ್ರಗಳು ಸ್ಥಗಿತವಾಗಿವೆ. ಪರಿಣಾಮ ನೀರು ಅರೆಬರೆ ಶುದ್ಧವಾಗುತ್ತಿದೆ. ನದಿಯ ನೀರು ಶುದ್ಧಗೊಳ್ಳದೇ ನೇರವಾಗಿ ಸಾರ್ವಜನಿಕರಿಗೆ ಪೂರೈಕೆಯಾಗುತ್ತಿದೆ. ಮತ್ತೊಂದೆಡೆ ನದಿಯ ನೀರಿನ ಹೊಂಡನ್ನು ಬೇರ್ಪಡಿಸಲು ಯಂತ್ರವೊಂದನ್ನು ಅಳವಡಿಸಲಾಗಿದೆ. ಸದ್ಯ ಈ ಯಂತ್ರವೂ ಕಳೆದ ಆರು ತಿಂಗಳಿಂದ ಕೆಲಸ ಸ್ಥಗಿತಗೊಳಿಸಿದೆ. ಹೀಗಾಗಿ ಅರೆಬರೆ ಫಿಲ್ಟರ್‌ಗೊಂಡ ನೀರನ್ನೇ ಇಲ್ಲಿನ ಜನ ಕುಡಿಯುತ್ತಿದ್ದಾರೆ. ನೀರು ಶುದ್ಧೀಕರಣ ಯಂತ್ರಗಳು ಇದ್ದೂ ಇಲ್ಲದಂತಾಗಿವೆ. ಅಶುದ್ಧ ನೀರು ಕುಡಿಯುತ್ತಿರುವ ಜನರಿಗೆ ನಾನಾ ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತಿದೆ.

ಪರಿಪೂರ್ಣವಾಗಿಲ್ಲ: ಹಟ್ಟಿಗ್ರಾಮ, ಹಟ್ಟಿ ಹೊಸೂರು, ಕೋಠಾ, ಗುರುಗುಂಟಾ ಹಾಗೂ ರಾಯದುರ್ಗ ಗ್ರಾಮಗಳಿಗೆ ಶುದ್ಧ ಹಾಗೂ ಶಾಶ್ವತ ಕುಡಿವ ನೀರು ಪೂರೈಸುವ ಉದ್ದೇಶದಿಂದ ಬಹು ಗ್ರಾಮಗಳ ಕುಡಿವ ನೀರಿನ ಯೋಜನೆ ಮಾಡಲಾಗಿದೆ. ವಿಶ್ವಬ್ಯಾಂಕ್‌ ನೆರವಿನಡಿ ಯೋಜನೆಯ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಕಾಮಗಾರಿ ಮುಕ್ತಾಯಗೊಂಡು, ಕಳೆದ 3 ವರ್ಷದಿಂದ ನೀರು ಪೂರೈಸಲಾಗುತ್ತಿದೆ.

ಪದೇಪದೆ ಸಮಸ್ಯೆ: ಈ ಯೋಜನೆಗಾಗಿ 18 ಕೋಟಿ ರೂ. ವೆಚ್ಚ ಮಾಡಲಾಗಿದೆ. 2012ರಲ್ಲಿ ಕಾಮಗಾರಿ ಆರಂಭವಾಗಿ ತೆವಳುತ್ತ ಸಾಗಿ 2014ಕ್ಕೆ ಮುಕ್ತಾಯಗೊಂಡಿದೆ. ಆದರೂ, ಯೋಜನೆ ವ್ಯಾಪ್ತಿಗೆ ಒಳಪಟ್ಟ ಐದು ಗ್ರಾಮಗಳಿಗೆ ಇನ್ನೂ ಪರಿಪೂರ್ಣ ನೀರು ಪೂರೈಕೆಯಾಗುತ್ತಿಲ್ಲ. ಹಟ್ಟಿಗ್ರಾಮಕ್ಕೆ ನೀರು ಪೂರೈಕೆ ಆರಂಭವಾಗಿದ್ದರೂ ಪದೇಪದೆ ವಿದ್ಯುತ್‌ ಸಮಸ್ಯೆ, ಒಡೆದು ಹೋಗುತ್ತಿರುವ ಪೈಪ್‌ಲೈನ್‌ಗಳಿಂದ ಆಗಾಗ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವುದು ಮುಂದುವರಿದಿದೆ. ಈ ಸಮಸ್ಯೆ ಯಾವಾಗ ಬಗೆಹರಿಯುತ್ತದೆ ಎಂದು ಜನ ಎದುರುನೋಡುತ್ತಿದ್ದಾರೆ.

Vijaya Karnataka Web
ಅಶುದ್ಧ ನೀರೇ ಅನಿವಾರ್ಯ!


------
ಶುದ್ಧ ಹಾಗೂ ಶಾಶ್ವತ ಕುಡಿವ ನೀರಿನ ಬಹುಗ್ರಾಮಗಳ ಕುಡಿವ ನೀರಿನ ಯೋಜನೆಗೆ, ಹೊಸದಾಗಿ ವಾಟರ್‌ ಫಿಲ್ಟರ್‌ ಬೆಡ್‌ ನಿರ್ಮಾಣಕ್ಕೆ ಜಿ.ಪಂ.ನಿಂದ 1 ಕೋಟಿ ರೂ. ಒದಗಿಸಲಾಗಿದೆ. ಒಂದು ತಿಂಗಳೊಳಗಾಗಿ ಟೆಂಡರ್‌ ಕರೆಯುವ ಸಾಧ್ಯತೆ ಇದೆ. ಹಟ್ಟಿ ಪಟ್ಟಣದಲ್ಲಿ ಹೆಚ್ಚುವರಿ ಪೈಪ್‌ಲೈನ್‌ ಹಾಗೂ ಓವರ್‌ ಹೆಡ್‌ ಟ್ಯಾಂಕ್‌ಗಳ ನಿರ್ಮಾಣಕ್ಕೆ 50 ಲಕ್ಷ ರೂ. ಬಿಡುಗಡೆಯಾಗಿದ್ದು, ಎರಡು ದಿನದಲ್ಲಿ ಟೆಂಡರ್‌ ಆಗಲಿದೆ.

-ಸಾಹೀರಾಬೇಗಂ, ಎಂ.ಡಿ.ರಝಾಕ್‌, ಜಿ.ಪಂ.ಸದಸ್ಯರು, ಹಟ್ಟಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ