ರಾಯಚೂರು: ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮುಸ್ಲಿಂ ನೌಕರರ ಸಂಘ, ಸರಕಾರಿ ಪ್ರಥಮ ದರ್ಜೆ ಕಾಲೇಜು, ಅನಾಸ್ ಎಜುಕೇಶನ್ ಆ್ಯಂಡ್ ರೂರಲ್ ಡೆವಲಪ್ಮೆಂಟ್ ಟ್ರಸ್ಟ್ ಹಾಗೂ ನ್ಯಾಶನಲ್ ಇನ್ಸ್ಟಿಟ್ಯೂಟ್ ಎಜುಕೇಶನ್ ಅಕಾಡೆಮಿ ಸಹಯೋಗದಲ್ಲಿ ಭಾನುವಾರ ನಡೆದ ಉದ್ಯೋಗ ಮೇಳದಲ್ಲಿ ನಿರೀಕ್ಷೆಗೂ ಮೀರಿ ನಿರುದ್ಯೋಗಿ ಯುವಕ, ಯುವತಿಯರು ಭಾಗವಹಿಸಿದ್ದು ಕಂಡುಬಂತು.
ಉದ್ಯೋಗ ಮೇಳದಲ್ಲಿ ಪ್ರತಿ ಅಭ್ಯರ್ಥಿಗೆ ಹೆಸರು ನೋಂದಾಯಿಸಲು 100 ರೂ.ಶುಲ್ಕ ನಿಗದಿಪಡಿಸಲಾಗಿತ್ತು. ಉದ್ಯೋಗ ಮೇಳದಲ್ಲಿ ಹುಬ್ಬಳ್ಳಿ, ಚಿತ್ರದುರ್ಗ, ಬೆಂಗಳೂರು ಸೇರಿದಂತೆ ಹೈದರಾಬಾದ್ ಕರ್ನಾಟಕ ಭಾಗದ ರಾಯಚೂರು, ಕಲಬುರಗಿ, ಬೀದರ್, ಬಳ್ಳಾರಿ, ಕೊಪ್ಪಳ, ಯಾದಗಿರಿ ಹಾಗೂ ವಿಜಯಪುರ ಸೇರಿದಂತೆ ನಾನಾ ಜಿಲ್ಲೆಗಳಿಂದ ಎಸ್ಎಸ್ಎಲ್ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಹಾಗೂ ಪಿಎಚ್ಡಿ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ಪಾಲ್ಗೊಂಡಿದ್ದರು.
ಉದ್ಯೋಗ ಮೇಳದಲ್ಲಿ ಬೆಂಗಳೂರಿನ ಇನ್ಫೋಸಿಸ್, ಎವಿಕೆ ಸಾಫ್ಟ್ವೇರ್, ಆಕ್ಟೆಲ್, ಪ್ಲಿಪ್ಕಾರ್ಟ್, ಮುನೀರ್ ಕಾರ್ಸ್, ವೊಡಾಫೋನ್, ಅಮೇಜಾನ್, ಅಪೋಲೊ ಇಂಡಿಯಾ ವಾಯ್ಸ್, ಎಕ್ಸಿಸ್ ಸೇಲ್ಸ್, ಲಿಯೊಡ್ಸ್, ಎಕ್ಸ್ಪೀಡಿಯಾ, ಮಧುರಾ ಫ್ಯಾಷನ್ಸ್, ಸೌದಿ, ದುಬೈ ಕತರ್ನ ಓವರ್ಸೀಸ್, ರಾಯಚೂರಿನ ಫ್ಯೂಚರ್ಟೆಕ್ ಗ್ಲೋಬಲ್ ಸರ್ವಿಸ್, ಲಿಟ್ಲ್ ಏಂಜೆಲ್ ಸ್ಕೂಲ್, ರೇಸ್ ಕಾನ್ಸೆಪ್ಟ್ ಶಾಲೆ, ಮದರ್ ಎಜುಕೇಶನ್ ಟ್ರಸ್ಟ್ ಕಂಪನಿಗಳು ಸೇರಿದಂತೆ ಜಿಲ್ಲೆ ರಾಜ್ಯದ 86 ಕಂಪನಿಗಳ ಮುಖ್ಯಸ್ಥರು ಆಗಮಿಸಿ ಅಭ್ಯರ್ಥಿಗಳ ಜತೆಗೆ ವಿಶೇಷ ಸಂದರ್ಶನ ನಡೆಸಿದರು.
ಬಿಸಿಲಲ್ಲೇ ಫಾರಂ ಫಿಲಪ್: ಬಿಸಿಲನ್ನೂ ಲೆಕ್ಕಿಸದೇ ನಿರುದ್ಯೋಗಿ ಯುವಕ, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರಿಂದ ಪರಿಸ್ಥಿತಿ ನಿಭಾಯಿಸಲು ಆಯೋಜಕರಿಗೆ ಸವಾಲಾಗಿ ಪರಿಣಮಿಸಿತ್ತು. ಕೆಲ ಯುವಕ ಯುವತಿಯರು ಬಿಸಿಲಿನಲ್ಲಿಯೇ ಕುಳಿತು ಅರ್ಜಿಗಳನ್ನು ತುಂಬುತ್ತಿರುವುದು ಕಂಡುಬಂದಿತು. ಸಾವಿರಾರು ಸಂಖ್ಯೆಯಲ್ಲಿ ಅಭ್ಯರ್ಥಿಗಳು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಅರಸಿ ಬಂದಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸದೇ ನಿರ್ಲಕ್ಷ ್ಯವಹಿಸಲಾಗಿದೆ ಎಂದು ದೂರಿದರು. ಕಾಲೇಜಿನ ಒಂದೊಂದು ಕೊಠಡಿಯಲ್ಲಿ ನಾಲ್ಕು ಕಂಪನಿಗಳ ವಿಭಾಗ ಮಾಡಿ ಅಭ್ಯರ್ಥಿಗಳ ಸಂದರ್ಶನ ನಡೆಸಲಾಯಿತು. ಇದರಿಂದ ಹೆಸರು ನೋಂದಾಯಿಸಿ ಸಾಲುಗಟ್ಟಿ ನಿಂತ ಅಭ್ಯರ್ಥಿಗಳ ಸರದಿ ಬರಲು ಗಂಟೆಗಟ್ಟಲೇ ಕಾಯಬೇಕಾಯಿತು.
................
ನಿರುದ್ಯೋಗಿ ಅಭ್ಯರ್ಥಿಗಳಿಂದ ಟೆಂಟ್ ತುಂಬಿಹೋಗಿದ್ದು, ಕುಳಿತುಕೊಳ್ಳಲು ಸೂಕ್ತ ಸ್ಥಳವಿಲ್ಲ. ಹೆಸರು ನೋಂದಾಯಿಸಲು ಹರಸಾಹಸಪಡುವಂತಾಗಿದ್ದು, ಬಿಸಿಲಿನಿಂದ ರಕ್ಷಿಸಿಕೊಳ್ಳಲೂ ಆಗುತ್ತಿಲ್ಲ. ಉದ್ಯೋಗ ಮೇಳದಲ್ಲಿ ಅಭ್ಯರ್ಥಿಗಳಿಗೆ ಅನುವಾಗುವಂತೆ ಸೂಕ್ತ ಮುಂಜಾಗ್ರತಾ ಕ್ರಮವಹಿಸುವ ಅಗತ್ಯವಿತ್ತು.
-ಶಂಕರಪ್ರಸಾದ್, ಬೀದರ್.