ಆ್ಯಪ್ನಗರ

ದಾಖಲಾತಿ ಹೆಚ್ಚಳಕ್ಕೆ ಹೈಟೆಕ್ ಟಚ್

ಸ್ಥಳೀಯ ಸರಕಾರಿ ಪದವೀ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳಕ್ಕೆ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಸಿಬ್ಬಂದಿ ಹೈಟೆಕ್ ಪ್ರಚಾರಕ್ಕೆ ಮುಂದಾಗಿದ್ದಾರೆ.

ವಿಕ ಸುದ್ದಿಲೋಕ 25 May 2017, 6:45 am
ಹಟ್ಟಿಚಿನ್ನದಗಣಿ: ಸ್ಥಳೀಯ ಸರಕಾರಿ ಪದವೀ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳಕ್ಕೆ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಸಿಬ್ಬಂದಿ ಹೈಟೆಕ್ ಪ್ರಚಾರಕ್ಕೆ ಮುಂದಾಗಿದ್ದಾರೆ.
Vijaya Karnataka Web
ದಾಖಲಾತಿ ಹೆಚ್ಚಳಕ್ಕೆ ಹೈಟೆಕ್ ಟಚ್


ಕಾಲೇಜಿನಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗವಿದ್ದು ಕೊಠಡಿ, ಉಪನ್ಯಾಸಕರು ಸೇರಿದಂತೆ ಇನ್ನಿತರೆ ಸಮರ್ಪಕ ಸೌಕರ್ಯಗಳಿವೆ. ಕಳೆದ ಹಲವು ವರ್ಷಗಳಿಂದ ದಾಖಲಾತಿ ಪ್ರಮಾಣ ಕುಸಿದಿದ್ದರಿಂದ ಸರಕಾರದ ಆದೇಶದ ಹಿನ್ನೆಲೆಯಲ್ಲಿ ಪ್ರಚಾರಾಂದೋಲನ ನಡೆಸುವ ಮೂಲಕ ವಿದ್ಯಾರ್ಥಿಗಳನ್ನು ಕಾಲೇಜಿನತ್ತ ಸೆಳೆಯುತ್ತಿದ್ದಾರೆ.

2006-07ನೇ ಸಾಲಿನಲ್ಲಿ ಮೂರು ವಿಭಾಗಗಳನ್ನೊಳಗೊಂಡು ಗರಿಷ್ಠ 705 ವಿದ್ಯಾರ್ಥಿಗಳಿದ್ದರು. ಆದರೆ, ಮುಂದೆ ಕುಸಿಯುತ್ತ ಹೋಗಿರುವುದು ಎದ್ದು ಕಾಣುತ್ತದೆ. 2007-08ರಲ್ಲಿ 596, 2008-09ರಲ್ಲಿ 373, 2009-10ರಲ್ಲಿ 186, 2010-11ರಲ್ಲಿ 118, 2011-12ರಲ್ಲಿ 128, 2012-13ರಲ್ಲಿ 131, 2013-14ರಲ್ಲಿ 120, 2014-15ರಲ್ಲಿ 119, 2015-16ರಲ್ಲಿ 106 ಕ್ಕೆ ಕುಸಿದರೆ 2016-17ರಲ್ಲಿ ಸಾಲಿನಲ್ಲಿ ಮೂರು ವಿಭಾಗ ಸೇರಿ 40 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದರು. ಇದರಿಂದ ಕಾಲೇಜು ಸಿಬ್ಬಂದಿ ದಾಖಲಾತಿ ಪ್ರಮಾಣ ಹೆಚ್ಚಿಸಲು ಶತಪ್ರಯತ್ನ ನಡೆಸಿದೆ.

ಸೌಕರ್ಯ: 1982ರಲ್ಲಿ ಕಲಾ ಹಾಗೂ ವಾಣಿಜ್ಯ ವಿಭಾಗದೊಂದಿಗೆ ಆರಂಭವಾದ ಸರಕಾರಿ ಪದವೀ ಪೂರ್ವ ಕಾಲೇಜಿನಲ್ಲಿ 2000ನೇ ವರ್ಷದಿಂದ ವಿಜ್ಞಾನ ವಿಭಾಗ ಆರಂಭವಾಗಿದೆ. ವಿದ್ಯಾರ್ಥಿಗಳ ಕೊರತೆ ಎದುರಿಸದ ಈ ಕಾಲೇಜು ಸದಾ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ವಿದ್ಯಾರ್ಥಿಗಳು ಯಾಕೋ ಇತ್ತ ಮುಖ ಮಾಡದಿದ್ದರಿಂದ ಕಾಲೇಜು ಬಿಕೋ ಎನ್ನುವಂತಾಗಿದೆ. ಸರಕಾರದ ಈ ಕಾಲೇಜಿನಲ್ಲಿ ನುರಿತ ಉಪನ್ಯಾಸಕ ವಂದ, ಬೋಧನೆಗೆ ಸುಸಜ್ಜಿತ ಕಟ್ಟಡದ ವ್ಯವಸ್ಥೆ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಯೋಗಾಲಯವಿದೆ. ಇಷ್ಟೆಲ್ಲ ಅನುಕೂಲವಿದ್ದರೂ ಇಲ್ಲಿ ಅಭ್ಯಾಸಕ್ಕೆ ವಿದ್ಯಾರ್ಥಿಗಳು ಮನಸು ಮಾಡದೇ ಇರುವುದು ತಲೆಬಿಸಿಗೆ ಕಾರಣವಾಗಿದೆ.

ಸಮಿತಿ: ಬಹುತೇಕ ಎಲ್ಲ ಸೌಕರ್ಯಗಳನ್ನು ಒಳಗೊಂಡಿರುವ ಸರಕಾರಿ ಪದವೀ ಪೂರ್ವ ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದ್ದರೂ ವಿದ್ಯಾರ್ಥಿಗಳು ಇಲ್ಲಿ ಕಲಿಯಲು ಹಿಂದೇಟು ಹಾಕಿದ್ದು, ಇದನ್ನು ಸವಾಲಾಗಿ ಪರಿಗಣಿಸಿರುವ ಎಸ್ಡಿಎಂಸಿ ಸಮಿತಿ ಹಾಗೂ ಕಾಲೇಜು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಕಾಲೇಜಿನ ವಿಶೇಷತೆಗಳನ್ನು ಪಾಲಕರಲ್ಲಿ ಮನವರಿಕೆ ಮಾಡಿಕೊಡುವ ಮೂಲಕ ದಾಖಲಾತಿ ಹೆಚ್ಚಳಕ್ಕೆ ಮುಂದಾಗಿದ್ದಾರೆ. ಸರಕಾರಿ ಪ್ರೌಢಶಾಲೆ ಸೇರಿದಂತೆ ಇತರೆ ಶಾಲೆಗಳಿಗೆ ಇಲ್ಲಿನ ಸಿಬ್ಬಂದಿ ತೆರಳಿ ಕರಪತ್ರ ವಿತರಿಸುವ ಮೂಲಕ ಮಾಹಿತಿ ನೀಡಿ, ಗಮನಸೆಳೆಯುತ್ತಿದ್ದಾರೆ.

....

ಕಾಲೇಜಿನಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಕಡಿಮೆಯಾಗುತ್ತಿರುವುದು ನಿಜ. ಇದನ್ನು ತಪ್ಪಿಸಲು ಸ್ವಂತ ಹಣದಿಂದ ಕರಪತ್ರ ತಯಾರಿಸಿ ಹಟ್ಟಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಹೈಸ್ಕೂಲ್‌ಗಳಿಗೆ ಪ್ರಾಚಾರ್ಯರು ಸೇರಿದಂತೆ ಇನ್ನಿತರ ಸಿಬ್ಬಂದಿ ಭೇಟಿ ನೀಡಿ ಮನವರಿಕೆ ಮಾಡಿಕೊಡಲಾಗಿತ್ತಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾಗುವ ವಿಶ್ವಾಸವಿದೆ.

-ವೆಂಕಟೇಶ ಸುರಪುರ, ಕಾರ್ಯಾಧ್ಯಕ್ಷ, ಶಾಲಾ ಸುಧಾರಣಾ ಸಮಿತಿ, ಸ.ಪ.ಪೂ ಕಾಲೇಜು, ಹಟ್ಟಿ ಚಿನ್ನದ ಗಣಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ