ರಾಯಚೂರು: ಸಾರ್ವತ್ರಿಕ ಯೋಜನೆಗಳ ಫಲ ಅನುಭವಿಸಲು ಹಾಗೂ ಪ್ರತಿಯೊಬ್ಬರ ಜೀವನಾವಶ್ಯಕ, ಸಾಮಾಜಿಕ ಭದ್ರತೆ ಹಕ್ಕುಗಳಾದ ಆಹಾರ, ಉದ್ಯೋಗ, ಪಿಂಚಣಿಗೆ ಆಧಾರ್ ಜೋಡಣೆ ಮಾಡುವುದನ್ನು ತಕ್ಷ ಣವೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿ, ಆಹಾರದ ಹಕ್ಕಿಗಾಗಿ ಆಂದೋಲನ, ನವಜೀವನ ಮಹಿಳಾ ಒಕ್ಕೂಟ ರಾಯಚೂರು ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.
ಸಾರ್ವತ್ರಿಕ ಯೋಜನೆಗಳಲ್ಲಿ ಭ್ರಷ್ಟಾಚಾರ ತಡೆಗಟ್ಟಲು ಯೋಜನೆಗಳು ಸುಲಭವಾಗಿ ಜನರಿಗೆ ತಲುಪಿಸಲು ಆಧಾರ್ ಚೀಟಿ ತರಲಾಗುತ್ತಿದೆ ಎಂದು 2009ರಲ್ಲಿ ಸರಕಾರ ಹೇಳಿಕೊಂಡಿದೆ. 2010ರಹೊತ್ತಿಗೆ ಆಧಾರ್ನಿಂದ ಕೆಲಸವಾಗುತ್ತಿಲ್ಲ ಎಂದೂ ಒಪ್ಪಿಕೊಂಡಿತ್ತು. ಆದರೂ ಕಲ್ಯಾಣ ಯೋಜನೆಗಳಿಗೆ, ಅವು ಕಾನೂನಿನಿಂದ ಹಕ್ಕಾಗಿ ಜನರಿಗೆ ಸಿಕ್ಕಿದ್ದರೂ ಆಧಾರ್ ಜೋಡಣೆ ಕಡ್ಡಾಯವಾಗಿ ಮಾಡಿಸಬೇಕು ಎಂದು ಸರಕಾರ ಆದೇಶಿಸುತ್ತಿದೆ ಎಂದು ಸರಿಯಾದ ಕ್ರಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೇಶನ್ ಸಿಗುತ್ತಿಲ್ಲ: ಯೋಜನೆಗಳು ಜನರಿಗೆ ಸಮರ್ಪಕವಾಗಿ ದೊರೆಯುವಂತೆ ಮಾಡಲು ಆಧಾರ್ ಜಾರಿಗೆ ತಂದಿದೆ ಎಂದು ಸರಕಾರ ಹೇಳುತ್ತಿದ್ದರೂ, ಅದು ಸರಾಗವಾಗುವ ಬದಲಾಗಿ ಮತ್ತಷ್ಟು ಜಟಿಲವಾಗುತ್ತಿದೆ. ವೃದ್ಧರಿಗೆ ಪಿಂಚಣಿ, ಉದ್ಯೋಗ ಖಾತರಿಯಲ್ಲಿ ಕೆಲಸ ಮಾಡಿದವರಿಗೆ ಕೂಲಿ, ಆಧಾರ್ ಆಧರಿತ ಬಯೋಮೆಟ್ರಿಕ್ ಸಮಸ್ಯೆಯಿಂದಾಗಿ ರೇಶನ್ ಕಾರ್ಡ್ ಇದ್ದವರಿಗೂ ರೇಶನ್ ಸಿಗುತ್ತಿಲ್ಲ.
ಸೇವೆಗೆ ಪೆಟ್ಟು: ಮಕ್ಕಳಿಗೆ ಆಧಾರ್ ಇಲ್ಲವೆಂಬ ಕಾರಣಕ್ಕಾಗಿ ಪಡಿತರ ಚೀಟಿಯಲ್ಲಿ ಹೆಸರು ಸೇರಿಸುತ್ತಿಲ್ಲ. ಇದೀಗ ಶಾಲಾ ಬಿಸಿಯೂಟಕ್ಕೂ ಕೂಡ ಆಧಾರ್ ಜೋಡಣೆ ಕಡ್ಡಾಯ ಮಾಡುತ್ತಿರುವುದು ಆಧಾರ್ ಬಳಕೆಗೆ ಒತ್ತಾಯ ಮಾಡುತ್ತಿರುವುದು ಕಂಡುಬರುತ್ತಿದೆ. ಸುಪ್ರೀಂಕೋರ್ಟ್ ರಿಟ್ ಪಿಟೀಶನ್ನಲ್ಲಿ ನ್ಯಾ.ಬರ್ದೆ ಇವರು ನೀಡಿದ ಆದೇಶದಂತೆ, ಆಧಾರ್ ಕಡ್ಡಾಯವಲ್ಲವೆಂದು ಸರಕಾರ ಹೆಚ್ಚು ಪ್ರಚಾರ ಮಾಡಬೇಕು. ಆಧಾರ್ ಚೀಟಿ ಹೊಂದಿಲ್ಲವೆಂಬ ಕಾರಣಕ್ಕೆ ಸರಕಾರದ ಸೇವೆಗಳು ನಿರಾಕರಣೆಯಾಗಬಾರದು ಎಂದು ಹೇಳಲಾಗಿದೆ. ಆದರೆ ವಾಸ್ತವದಲ್ಲಿ ಸರಕಾರ ನಡೆದುಕೊಳ್ಳುತ್ತಿರುವುದು ತದ್ವಿರುದ್ದವಾಗಿದೆ ಎಂದು ಪ್ರತಿಭಟನಾ ನಿರತರು ದೂರಿದರು.
ಆಧಾರ್ ಜೋಡಣೆ ಮಾಡದವರು ಉದ್ಯೋಗ ಖಾತರಿ ಕೆಲಸಕ್ಕೆ ಅರ್ಜಿ ಹಾಕದಿರಿ ಎಂದು ಹೇಳಲಾಗುತ್ತಿದೆ. ಕೆಲಸ ಮಾಡಿದವರ ಕೂಲಿ ಹಣಕ್ಕೂ ಆಧಾರ್ ಬೇಕು. ವೃದ್ಧಾಪ್ಯ ವೇತನಕ್ಕೂ ಆಧಾರ್ ಜೋಡಣೆ ಕಡ್ಡಾಯ ಮಾಡಿರುವುದು ಅವೈಜ್ಞಾನಿಕವಾಗಿದೆ. ಮಧ್ಯಾಹ್ನದ ಬಿಸಿಯೂಟ ಮತ್ತು ಅಂಗನವಾಡಿಗಳಲ್ಲೂ ಆಧಾರ್ ಜೋಡಣೆ ಕಡ್ಡಾಯ ಮಾಡುತ್ತಿರುವುದರಿಂದ ಮಕ್ಕಳ ಅಪೌಷ್ಠಿಕತೆ ಊಟಕ್ಕೂ ಕೊಡಲಿ ಪೆಟ್ಟು ಬಿದ್ದಂತಾಗಿದೆ ಎಂದು ಗಮನ ಸೆಳೆದರು.
ಆಧಾರ್ ಜೋಡಣೆ ಕೂಡಲೇ ವಾಪಸ್ ಪಡೆಯಬೇಕು, ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಮಾಡುತ್ತಿದ್ದು ರಾಜ್ಯ ಸರಕಾರ ಯಾವುದೇ ಒತ್ತಡಗಳಿಗೆ ಮಣಿದು ಸಾರ್ವಜನಿಕರ ಹಕ್ಕಿನೊಂದಿಗೆ ಚೆಲ್ಲಾಟವಾಟಬಾರದು ಪ್ರತಿಭಟನಾ ನಿರತರು ಆಗ್ರಹಿಸಿದರು. ಪದಾಧಿಕಾರಿಗಳಾದ ವಿರುಪಮ್ಮ, ಶಾಂಭವಿ, ಗಂಗಮ್ಮ, ಈರಮ್ಮ, ದುರುಗಮ್ಮ, ಮಾಳಮ್ಮ, ಹನುಮೇಶ, ಯಲ್ಲಮ್ಮ, ಹುಚ್ಚಪ್ಪ, ರೇಣುಕಾ ಸೇರಿದಂತೆ ಅನೇಕರಿದ್ದರು.