ಮಸ್ಕಿ: ಪಟ್ಟಣದ ತುಂಗಭದ್ರಾ ಎಡದಂಡೆ ನಾಲೆಯ ಪಕ್ಕದಲ್ಲಿರುವ ಶಾಶ್ವತ ಕುಡಿವ ನೀರಿನ ಕೆರೆಯಲ್ಲಿ ನೀರು ಖಾಲಿಯಾಗಿದ್ದು, ಕೆರೆ ತುಂಬಿಸಲು ಪುರಸಭೆ ಸಿಬ್ಬಂದಿ, ಗುರುವಾರ ಸಕಲ ಸಿದ್ಧತೆಯಲ್ಲಿ ತೊಡಗಿದ್ದಾರೆ.
ತುಂಗಭದ್ರಾ ಎಡದಂಡೆ ನಾಲೆಗೆ ಜುಲೈ 17ರಿಂದ ಕುಡಿವ ಸಲುವಾಗಿ ನೀರು ಹರಿಸಲಾಗಿದೆ. ಕೆರೆಗೆ ನೀರು ತುಂಬಿಸಲು ಸಕಲ ಸಿದ್ಧತೆ ಮಾಡಿಕೊಳ್ಳುವಂತೆಜಿಲ್ಲಾಧಿಕಾರಿಗಳು ಜುಲೈ 14ರಂದು ನಡೆದ ಸಭೆಯಲ್ಲಿ ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ನೀರು ಹರಿಸಲಾಗಿದೆ. ಪಟ್ಟಣಕ್ಕೆ ಶುಕ್ರವಾರ ಬೆಳಗ್ಗೆ ಅಥವಾ ಶನಿವಾರದ ನೀರು ತಲುಪಲಿವೆ ಎಂದು ಪುರಸಭೆ ಮುಖ್ಯಾಧಿಕಾರಿ ರಡ್ಡಿರಾಯನಗೌಡ ತಿಳಿಸಿದ್ದಾರೆ. ಎಡದಂಡೆ ನಾಲೆಯಿಂದ ಶಾಶ್ವತ ಕುಡಿವ ನೀರಿನ ಕೆರೆಗೆ ನೀರು ತುಂಬಿಸಲು 10 ಎಚ್ಪಿಯ 3 ಮೋಟಾರ್ಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಅವಶ್ಯಕತೆ ಬಿದ್ದಲ್ಲ್ಲಿ ಇನ್ನುಷ್ಟು ಮೋಟಾರ್ ಅಳವಡಿಸಿ ಕೆರೆ ತುಂಬಿಸಲಾಗುತ್ತದೆ ಎಂದು ಪುರಸಭೆ ಅಧ್ಯಕ್ಷ ಮೌನೇಶ ಮುರಾರಿ ಹೇಳಿದ್ದಾರೆ.
ಮುನ್ನೆಚ್ಚರಿಕೆ ಇಲ್ಲ: ಪಟ್ಟಣದ ಜನತೆಗೆ ಅಲ್ಪಸ್ವಲ್ಪ ನೀರಿನ ತೊಂದರೆಯಾಗುತ್ತಿದ್ದಂತೆ ನಾಲೆಗೆ ನೀರು ಹರಿಸಿ ಸಮಸ್ಯೆಗೆ ಸ್ಪಂದಿಸಲಾಗುತ್ತಿದೆ. ಆದರೆ ಪ್ರತಿ ಬಾರಿ ಹಣ ಖರ್ಚು ಮಾಡಿ ಕೆರೆ ಭರ್ತಿ ಮಾಡಿದರೂ ಪಟ್ಟಣದ ಜನತೆಗೆ ಐದು ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ಕೆರೆಯಲ್ಲಿ ನೀರು ಖಾಲಿಯಾಗುತ್ತಿದೆ. ಜನತೆಗೆ ಸಮರ್ಪಕವಾಗಿ ನೀರು ಸಿಗುತ್ತಿಲ್ಲ. ಕೆರೆಯ ಎಲ್ಲಿ ಹೋಗುತ್ತವೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆಲ್ಲ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಿಷೇದಾಜ್ಞೆ ಜಾರಿ: ಎಡದಂಡೆ ಮುಖ್ಯ ಕಾಲುವೆ ಮೈಲ್ 47ರಿಂದ 104ರವರೆಗಿನ ಪ್ರದೇಶದಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಕಾಲುವೆ ಪ್ರದೇಶದಲ್ಲಿ 100 ಮೀಟರ್ ಅಕ್ಕ, ಪಕ್ಕ ರೈತರು ಅನಧಿಕೃತವಾಗಿ ತಮ್ಮ ಹೊಲಗಳಿಗೆ ನೀರು ಹರಿಸುವುದಾಗಲಿ ಅಥವಾ ಪಂಪ್ಸೆಟ್, ತೂಬುಗಳ ಮೂಲಕ ನೀರು ಎತ್ತುವಳಿ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕಾಲುವೆ ಪ್ರದೇಶಗಳಲ್ಲಿ ದಂಡ ಪ್ರಕ್ರಿಯೆ ಸಂಹಿತೆ ಕಲಂ 144ನ್ನು ಕಾಲುವೆ ಪ್ರದೇಶದ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌಮತ್ ಆದೇಶ ಹೊರಡಿಸಿದ್ದಾರೆ.