ಸಿಂಧನೂರು: ತುಂಗಭದ್ರಾ ನದಿ ದಂಡೆಯ ಹಳ್ಳಿಗಳಿಗೆ ಕುಡಿವ ನೀರು ಹಾಗೂ ಎಡದಂಡೆ ನಾಲೆಗೆ ಬೆಳೆಗಾಗಿ ನೀರು ಹರಿಸುವಂತೆ ಒತ್ತಾಯಿಸಿ, ಜೆಡಿಎಸ್ ಕಾರ್ಯಕರ್ತರು ಭಾನುವಾರ ತಾಲೂಕಿನ ಶ್ರೀಪುರಂಜಂಕ್ಷ ನ್ನ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ತಾಲೂಕಿನ ತುಂಗಭದ್ರಾ ನದಿ ದಂಡೆಯಲ್ಲಿ ಬರುವ ಸಿಂಗಾಪುರ, ಮುಕ್ಕುಂದಾ, ಹುಡಾ, ಭೈರೇಶ್ವರಕ್ಯಾಂಪ್, ಅಪ್ಪಾರಾವ್ಕ್ಯಾಂಪ್, ಸಾಲಗುಂದಾ, ಕೆಂಗಲ್, ದಡೇಸುಗೂರು, ಉಪ್ಪಳ, ಒಳಬಳ್ಳಾರಿ, ಹೆಡಗಿನಾಳ ಸೇರಿದಂತೆ ಇತರೆ ಹಳ್ಳಿಗಳ ಜನರು ಕುಡಿಯುವ ನೀರಿಗಾಗಿ ನದಿಯನ್ನೇ ಅವಲಂಬಿಸಿದ್ದಾರೆ. ಆದರೀಗ ನದಿ ಸಂಪೂರ್ಣ ಬತ್ತಿಹೋಗಿದ್ದು, ಜನ ಜಾನುವಾರುಗಳಿಗೆ ನೀರಿಲ್ಲವಾಗಿದೆ. ಹೀಗಾಗಿ ನದಿಗೆ ಕೂಡಲೇ ನೀರು ಹರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ತುಂಗಭದ್ರಾ ಜಲಾಶಯದಲ್ಲಿ ಸದ್ಯ 42 ಟಿಎಂಸಿ ನೀರು ಸಂಗ್ರಹ ಇದ್ದು, ಎಡದಂಡೆ ನಾಲೆಯ ರೈತರ ಬೆಳೆಗಾಗಿ ಹರಿಸಬೇಕು. ನೀರಾವರಿ ಸಲಹಾ ಸಮಿತಿ ಸಭೆ ವಿಳಂಬವಾಗಿ ಮಾಡಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಬಾರದು. ಈ ಹಿಂದೆ 40 ಟಿಎಂಸಿ ಸಂಗ್ರಹವಿದ್ದಾಗಲೂ ಕಾಲುವೆಗೆ ನೀರು ಹರಿಬಿಡಲಾಗಿದೆ. ಸರಕಾರ ಹಾಗೂ ಜನಪ್ರತಿನಿಧಿಗಳು ರೈತರ ನೆರವಿಗೆ ಬರುತ್ತಿಲ್ಲ. ಅಧಿಕಾರಿಗಳು ಮೇಲ್ಭಾಗದ ಕಾರ್ಖಾನೆಗಳ ಮಾಲೀಕರ ಜತೆ ಕೈ ಜೋಡಿಸಿ ನೀರಿನ ಸಂಗ್ರಹಣೆಯ ಲೆಕ್ಕದಲ್ಲಿ ಏರುಪೇರು ಮಾಡುತ್ತಿರುವ ಅನುಮಾನವಿದೆ. ರೈತರ ಹಿತಕ್ಕಾಗಿ ಕಾರ್ಖಾನೆಗಳಿಗೆ ನೀಡುತ್ತಿರುವ ನೀರನ್ನು ಸ್ಥಗಿತಗೊಳಿಸಬೇಕು. ರೈತರ ಬೆಳೆಗಳಿಗೆ ನೀರೊದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾಜಿ ಶಾಸಕ ವೆಂಕಟರಾವ್ ನಾಡಗೌಡ, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎನ್.ಶಿವನಗೌಡ ಗೊರೇಬಾಳ, ಅಶೋಕಗೌಡ ಗದ್ರಟಗಿ, ಲಕ್ಷ ್ಮಣ, ಜಿಲಾನಿಪಾಷಾ ಮಾತನಾಡಿದರು. ಬಳಿಕ ತಹಸೀಲ್ದಾರ್ ಶಂಶಾಲಂ ಅವರ ಮೂಲಕ ರಾಜ್ಯ ಸರಕಾರಕ್ಕೆ ಮನವಿಪತ್ರ ರವಾನಿಸಲಾಯಿತು.
ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಎಂ.ಲಿಂಗಪ್ಪ ದಡೇಸೂಗೂರು, ತಾ.ಪಂ.ಸದಸ್ಯರಾದ ಗೋವಿಂದರಾಜ್, ಉದಯಗೌಡ, ಜಿ.ಸತ್ಯನಾರಾಯಣ, ಎಂ.ನಾಗೇಶ, ವೆಂಕಟೇಶ ನಂಜಲದಿನ್ನಿ, ಸಾಯಿರಾಮ ಕೃಷ್ಣ, ಚಂದ್ರಶೇಖರಯ್ಯಸ್ವಾಮಿ, ಅಮರೇಗೌಡ ಪೊಲೀಸ್ ಪಾಟೀಲ್, ಗೋಪಾಲಗೌಡ ಮುಕ್ಕುಂದಾ, ಚಂದ್ರಶೇಖರ ಎಂ., ರಾಮಾರಾವ್, ತಿಮ್ಮಾರೆಡ್ಡಿ ಹುಡಾ, ಪಂಪಾರೆಡ್ಡಿ, ನರಸರೆಡ್ಡಿ, ಶಂಕರಗೌಡ ಎಲೆಕೂಡ್ಲಿಗಿ, ಹನುಮಂತಪ್ಪ ಪುಲದಿನ್ನಿ, ಎಂ.ಡಿ.ನದೀಮುಲ್ಲಾ ಸೇರಿದಂತೆ ಹಲವರು ಇದ್ದರು.
ಟ್ರಾಫಿಕ್: ಮೂರು ತಾಸಿಗೂ ಹೆಚ್ಚುಕಾಲ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ತಡೆ ನಡೆಸಿದ್ದರಿಂದ ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಯಿತು. ಪೊಲೀಸರು ರಸ್ತೆ ಸಂಚಾರ ತಡೆಯಿಂದ ಪ್ರಯಾಣಿಕರಿಗೆ ಸಮಸ್ಯೆಯಾಗದಂತೆ ಪರ್ಯಾಯ ಮಾರ್ಗದ ಕುರಿತು ಪ್ರಯಾಣಿಕರಿಗೆ ತಿಳಿಸಿದರು. ಆದರೆ ಪ್ರಯಾಣಿಕರು ಗೊಂದಲಕ್ಕೆ ಒಳಗಾಗಿ ಹೆದ್ದಾರಿಯಲ್ಲಿಯೇ ಗಂಟೆಗಟ್ಟಲೆ ನಿಲ್ಲುವಂತಾಯಿತು. ಡಿವೈಎಸ್ಪಿ ಶ್ರೀಧರ ಮಾಳಿಗೇರ, ಸಿಪಿಐಗಳಾದ ನಾಗರಾಜ ಕಮ್ಮಾರ್, ಚಂದ್ರಶೇಖರ, ಪಿಎಸ್ಐಗಳಾದ ಸುಶೀಲ್ ಕುಮಾರ್, ಮಂಜುನಾಥ ಸೇರಿ ಸಿಬ್ಬಂದಿ ಬಿಗಿಬಂದೋಬಸ್ತ್ ಮಾಡಿದ್ದರು.