ಆ್ಯಪ್ನಗರ

ಬಾಡಿಗೆ ಉಳಿಸಲು ನೊಗಕ್ಕೆ ಹೆಗಲು

ಅತ್ತ ಕೃಷಿ ಸಚಿವರು ಬೆಳೆ ನಷ್ಟ ಪರಿಶೀಲನೆಯಲ್ಲಿ ನಿರತರಾಗಿದ್ದರು. ಅವರ ಕಣ್ಣಳತೆ ದೂರದಲ್ಲಿ ಅನ್ನದಾತರಿಬ್ಬರು ನೊಗಕ್ಕೆ ಹೆಗಲು ಕೊಟ್ಟು ಗಳೆ ಹೊಡೆಯುತ್ತಿದ್ದರು. ಈ ಎರಡು ಚಿತ್ರಗಳಿಗೆ ಸಾಕ್ಷಿಯಾಗಿದ್ದು, ತಾಲೂಕಿನ ವಿಜಯನಗರಕ್ಯಾಂಪ್.

Vijaya Karnataka 19 Aug 2018, 12:00 am
ಜಗನ್ನಾಥ ಆರ್.ದೇಸಾಯಿ, ರಾಯಚೂರು
Vijaya Karnataka Web RAC-RCH18JD01


ಅತ್ತ ಕೃಷಿ ಸಚಿವರು ಬೆಳೆ ನಷ್ಟ ಪರಿಶೀಲನೆಯಲ್ಲಿ ನಿರತರಾಗಿದ್ದರು. ಅವರ ಕಣ್ಣಳತೆ ದೂರದಲ್ಲಿ ಅನ್ನದಾತರಿಬ್ಬರು ನೊಗಕ್ಕೆ ಹೆಗಲು ಕೊಟ್ಟು ಗಳೆ ಹೊಡೆಯುತ್ತಿದ್ದರು. ಈ ಎರಡು ಚಿತ್ರಗಳಿಗೆ ಸಾಕ್ಷಿಯಾಗಿದ್ದು, ತಾಲೂಕಿನ ವಿಜಯನಗರಕ್ಯಾಂಪ್.

ಜಿಲ್ಲೆಯಲ್ಲಿ ತುಂಗಭದ್ರಾ ಹಾಗೂ ಕೃಷ್ಣಾ ನದಿಗಳು ಉಕ್ಕಿ ಹರಿಯುತ್ತಿದ್ದರೂ ಖುಷ್ಕಿ ರೈತರು ಮಾತ್ರ ಆಗಸದತ್ತ ಮುಖಮಾಡಿ ಕುಳಿತಿದ್ದಾರೆ. ಮಳೆಯ ತೀವ್ರ ಅಭಾವ ಜಿಲ್ಲೆಯ ಖುಷ್ಕಿ ರೈತರನ್ನು ಕಂಗಾಲಾಗಿಸಿದೆ. ತೇವಾಂಶ ಕೊರತೆಯಿಂದ ಒಂದೆಡೆ ಸಾಲಶೋಲಮಾಡಿ ಬಿತ್ತನೆ ಮಾಡಿದ ಬೆಳೆ ರಕ್ಷಿಸುವುದೇ ಸವಾಲಾಗಿದೆ.

ಈಗಾಗಲೇ ಬೀಜ, ಬಿತ್ತನೆ, ಗೊಬ್ಬರ, ಬಾಡಿಗೆ ಹೆಸರಲ್ಲಿ ಸಾವಿರಾರು ರೂಪಾಯಿ ಖರ್ಚುಮಾಡಿದ್ದಾಗಿದೆ. ಸದ್ಯಕ್ಕೆ ರೈತರ ಜೇಬುಗಳೂ ಖಾಲಿಯಾಗಿವೆ. ಎತ್ತುಗಳನ್ನು ಬಾಡಿಗೆ ಮೇಲೆ ಪಡೆದು ಕೃಷಿ ಕೈಗೊಳ್ಳಲಾಗದ ಅಸಹಾಯಕ ಸ್ಥಿತಿ, ಜಿಲ್ಲೆಯ ಹಲವು ರೈತರನ್ನು ಕಾಡುತ್ತಿದೆ. ತಾವೇ ಎತ್ತುಗಳಂತೆ ನೊಗಕ್ಕೆ ಹೆಗಲು ಕೊಟ್ಟು ಬೆಳೆ ರಕ್ಷಿಸಿಕೊಳ್ಳುತ್ತಿರುವ ದೃಶ್ಯಗಳು ಮನಕಲಕುತ್ತಿವೆ. ವಿಜಯನಗರಕ್ಯಾಂಪ್‌ಗೆ ಶನಿವಾರ, ಕೃಷಿ ಸಚಿವ ಎನ್.ಎಚ್.ಶಿವಶಂಕರ್ ರೆಡ್ಡಿ ಅವರ ಭೇಟಿ ಸಂದರ್ಭದಲ್ಲೂ ಇಂಥದ್ದೇ ಚಿತ್ರಣ ಕಂಡುಬಂತು.

ರೈತ ಕುಟುಂಬದ ಯುವಕರಿಬ್ಬರು ಎರಡನೇ ಬಾರಿ ಬಿತ್ತನೆ ಮಾಡಿದ ಕೂರಿಗೆ ಭತ್ತದ ಬೆಳೆ ರಕ್ಷಿಸಲು ಸಿಮೆಂಟ್ ತಗಡಿಗೆ ಹಗ್ಗ ಕಟ್ಟಿ ಎಳೆದು ಕಳೆ ತೆಗೆಯುತ್ತಿದ್ದರು. ಕಣ್ಣಳತೆ ದೂರದಲ್ಲೇ ಸಚಿವರು, ರೈತರನ್ನು ಸಂಕಷ್ಟದಿಂದ ಪಾರುಮಾಡುವ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸುತ್ತಿದ್ದರು.

ಸೋದರರ ಸವಾಲು:ರೈತ ನರಸಿಂಹಲು ತಮ್ಮ ಎರಡು ಎಕರೆ ಹೊಲದಲ್ಲಿ ಮುಂಗಾರು ಆರಂಭದ ಜೂನ್‌ನಲ್ಲಿಯೇ ಭತ್ತ ನಾಟಿ ಮಾಡಿದ್ದರು. ಆದರೆ, ಮಳೆ ಕೈಕೊಟ್ಟಿದ್ದರಿಂದ ಹಾಗೂ ತುಂಗಭದ್ರಾ ಎಡದಂಡೆ ಕಾಲುವೆಯಿಂದ ನೀರು ಬಾರದೇ ಬೆಳೆ ಒಣಗಿತ್ತು. ಅದರಿಂದ ನೊಂದ ಅವರು, ಕೂರಿಗೆ ಭತ್ತ ಪದ್ಧತಿ ಅಡಿ ಬಿತ್ತಿದ್ದ ಭತ್ತವನ್ನು ಹರಗಿ ನಾಶಗೊಳಿಸಿದರು. ಆನಂತರ ಅಲ್ಪಸ್ವಲ್ಪ ಮಳೆ ಸುರಿಯಿತು. ಕಾಲುವೆಯಲ್ಲಿ ನೀರು ಹರಿಸಲಾಯಿತು. ತಮ್ಮ ಹೊಲಕ್ಕೂ ನೀರು ಬರುವುದೆಂಬ ನಂಬಿಕೆಯಿಂದ ಮತ್ತೊಮ್ಮೆ ಭತ್ತವನ್ನು ಬಿತ್ತಿದ್ದಾರೆ. ಮೊದಲ ಬಾರಿ ಬಿತ್ತನೆ ಮಾಡಿದ್ದಾಗ ಸ್ವಂತ ಎತ್ತುಗಳನ್ನು ಹೊಂದಿರದ ನರಸಿಂಹಲು ಅವರ ಕುಟುಂಬವು ಗ್ರಾಮದಲ್ಲಿ ದಿನವೊಂದಕ್ಕೆ 1ಸಾವಿರ ರೂ.ಗಳಂತೆ ಬಾಡಿಗೆ ನೀಡಿ ಎತ್ತುಗಳನ್ನು ಪಡೆದು ಬಿತ್ತನೆ ಮಾಡಿದ್ದರು.

ಆದರೆ, ಎರಡನೇ ಬಾರಿ ಮತ್ತೆ ದಿನವೊಂದಕ್ಕೆ 1ಸಾವಿರ ರೂ. ನೀಡದೇ ತಾವೇ ಶ್ರಮವಹಿಸಿ ಬಿತ್ತನೆ ಮಾಡಿದ್ದಾರೆ. ಮಳೆ ಕೊರತೆಯ ಹಿನ್ನೆಲೆ ಮತ್ತಷ್ಟು ಹಣವನ್ನು ಹೊಲದಲ್ಲಿ ಹೂಡುವುದು ಬೇಡ ಎಂದು ನಿರ್ಧರಿಸಿದ ನರಸಿಂಹಲು ಕುಟುಂಬದವರು ಇದೀಗ ತಾವೇ ಎತ್ತುಗಳಂತೆ ಹೊಲದಲ್ಲಿ ನೊಗ ಹೊತ್ತು ಕೃಷಿ ಚಟುವಟಿಕೆ ಕೈಗೊಂಡಿದ್ದಾರೆ. ನರಸಿಂಹಲು ಹಾಗೂ ಅವರ ಸೋದರ ಮಹೇಶ್ ಅವರು, ತಮ್ಮ ಮನೆಯ ಚಾವಣಿಗೆ ಹೊದಿಸಿದ್ದ ಸಿಮೆಂಟ್ ಶೀಟಿನ ತುಣಕನ್ನೇ ತಂದರು. ಅದರ ಮೇಲೆ ಕಲ್ಲಿರಿಸಿ ಹಗ್ಗ ಹಿಡಿದು ಎಳೆದು ತಮ್ಮ ಹೊಲದಲ್ಲಿನ ಕಳೆ ತೆಗೆದರು.

ಕೃಷಿ ಸಚಿವ ಶಿವಶಂಕರ್ ರೆಡ್ಡಿ ಅವರು, ಅದೇ ಗ್ರಾಮದ ಸಮೀಪದ ಹೊಲಗಳಿಗೆ ಭೇಟಿ ನೀಡಿದಾಗಲೂ ಈ ಸೋದರರು ತಮ್ಮ ಕಾಯಕ ಮುಂದುವರಿಸಿದ್ದರು. ಆದರೆ, ಸಚಿವರು ಮಾತ್ರ ಈ ಯುವ ರೈತರ ಕಡೆಗೆ ಗಮನ ಕೊಡದೇ ಬೇರೊಂದು ಹೊಲಕ್ಕೆ ತೆರಳಿದರು. ಅಲ್ಲಿಯೇ ಬೆಳೆ ಹಾನಿ ಪರಿಶೀಲಿಸಿ ಮರಳಿದರು.

..............

ಮಳೆಯ ಕೊರತೆಯಿಂದ ಈಗಾಗಲೇ ಒಂದು ಬಾರಿ ಹೊಲದಲ್ಲಿ ಬೆಳೆದ ಬೆಳೆ ಒಣಗಿದ್ದರಿಂದ ನಾಶಮಾಡಲಾಗಿದೆ. ಕಾಲುವೆಯಿಂದಲೂ ನೀರು ಬಂದಿಲ್ಲ. ಕುಟುಂಬದಲ್ಲಿ ಎತ್ತುಗಳಿಲ್ಲ. ಟ್ರ್ಯಾಕ್ಟರ್ ಗೆ ನೀಡುವಷ್ಟು ಹಣವಿಲ್ಲ. ಹೀಗಾಗಿ ಹಣವನ್ನು ಹೆಚ್ಚು ವೆಚ್ಚ ಮಾಡದೇ ಸಹೋದರನ ಜತೆಗೂಡಿ ಕಳೆ ತೆಗೆಯಲು ನೊಗಕ್ಕೆ ಹೆಗಲು ಕೊಟ್ಟು ಎಳೆಯುತ್ತಿದ್ದೇವೆ.

-ನರಸಿಂಹಲು, ರೈತ, ವಿಜಯ ನಗರ ಕ್ಯಾಂಪ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ