Please enable javascript.ಮೇ ಅಂತ್ಯಕ್ಕೆ ಹಬೆಯಂತ್ರದ ಪ್ರಜ್ವಲನೆ - ಮೇ ಅಂತ್ಯಕ್ಕೆ ಹಬೆಯಂತ್ರದ ಪ್ರಜ್ವಲನೆ - Vijay Karnataka

ಮೇ ಅಂತ್ಯಕ್ಕೆ ಹಬೆಯಂತ್ರದ ಪ್ರಜ್ವಲನೆ

Vijaya Karnataka Web 13 May 2015, 8:19 am
Subscribe

ಮಹತ್ವಾಕಾಂಕ್ಷೆಯ ಯರಮರಸ್ ಶಾಖೋತ್ಪನ್ನ ವಿದ್ಯುತ್ ಯೋಜನೆ (ವೈಟಿಪಿಎಸ್) ಮೊದಲ ಘಟಕದ ಹಬೆಯಂತ್ರದ ಪ್ರಜ್ವಲನೆ (ಬಾಯ್ಲರ್ ಲೈಟ್‌ಅಪ್) ಮೇ ಅಂತ್ಯದೊಳಗೆ ನಡೆಸಲು ತಯಾರಿ ನಡೆದಿದೆ.

ಮೇ ಅಂತ್ಯಕ್ಕೆ ಹಬೆಯಂತ್ರದ ಪ್ರಜ್ವಲನೆ


ಮೃತ್ಯುಂಜಯ ಕಪಗಲ್, ರಾಯಚೂರು

ಮಹತ್ವಾಕಾಂಕ್ಷೆಯ ಯರಮರಸ್ ಶಾಖೋತ್ಪನ್ನ ವಿದ್ಯುತ್ ಯೋಜನೆ (ವೈಟಿಪಿಎಸ್) ಮೊದಲ ಘಟಕದ ಹಬೆಯಂತ್ರದ ಪ್ರಜ್ವಲನೆ (ಬಾಯ್ಲರ್ ಲೈಟ್‌ಅಪ್) ಮೇ ಅಂತ್ಯದೊಳಗೆ ನಡೆಸಲು ತಯಾರಿ ನಡೆದಿದೆ.

ಪ್ರಜಲ್ವನೆ ಪೂರ್ವದಲ್ಲಿ ಗಿರಣಿ, ಬಂಕರ್, ಹೆಚ್ಚು ತೂಕದ ಕುಲುಮೆಯ ಎಣ್ಣೆ, ಸಾಮಾನ್ಯ ಹಾಗೂ ಖನಿಜರಹಿತ ನೀರು, ರಾಸಾಯನಿಕ ಸೇರ್ಪಡೆ, ಜನರೇಟರ್, ಟರ್ಬೈನ್, ಕಲ್ಲಿದ್ದಲು ಮತ್ತು ಹಾರೋಬೂದಿ ನಿರ್ವಹಣೆ, ನಿಯಂತ್ರಣ ವ್ಯವಸ್ಥೆ, ಇನ್ನಿತರ ವಿಭಾಗಗಳ ಅಂತಿಮ ಸಿದ್ಧತೆಗಳಾಗುತ್ತಿವೆ.

ಯುನಿಟ್‌ಗೆ 2.30ರೂ. ವೆಚ್ಚ: ಸುಪರ್ ಕ್ರಿಟಿಕಲ್ ತಂತ್ರಜ್ಞಾನ ಬಳಕೆಯಿಂದ ಪ್ರತಿ ಯೂನಿಟ್ ಉತ್ಪಾದನಾ ವೆಚ್ಚ 2.30 ರೂ. ಎಂದು ಅಂದಾಜಿಸಲಾಗಿದೆ. ಆರ್‌ಟಿಪಿಎಸ್‌ಗೆ ತುಲನೆ ಮಾಡಿದರೆ ಶೇ.15ರಷ್ಟು ಕಡಿಮೆ ಭೂಮಿ, ನೀರು, ಕಲ್ಲಿದ್ದಲು, ಮಾನವ ಶಕ್ತಿ ಬಳಕೆಯಾಗುತ್ತದೆ. ಕಾಲಮಿತಿ ಪ್ರಕಾರ ಕಳೆದ ವರ್ಷ ಆಗಸ್ಟ್‌ಗೆ ಮೊದಲ ಘಟಕದ ಬಾಯ್ಲರ್ ಲೈಟಪ್, ಡಿಸೆಂಬರ್ ಸಿಂಕ್ರೋನೈಜೇಷನ್, ಇದೇ ವರ್ಷದ ಫೆಬ್ರವರಿಗೆ ಪರೀಕ್ಷಾರ್ಥ ವಿದ್ಯುತ್ ಉತ್ಪಾದನೆ ಪೂರ್ಣಗೊಳಿಸಬೇಕಿತ್ತು.

ನಿರ್ಮಾಣ ವೆಚ್ಚ ಏರಿಕೆ; ಅನುಮತಿ ಹಂತದ ಅಡಚಣೆಗಳು, ಕೆಲ ಕಾರ್ಮಿಕರು ಬಲಿಯಾದ ದುರಂತಗಳ ವಿಘ್ನದಿಂದ ಒಂಬತ್ತು ತಿಂಗಳು ತಡವಾಗಿದೆ. ಪರಿಣಾಮ ಎರಡು ಘಟಕಗಳ ನಿರ್ಮಾಣಕ್ಕೆ ಅಂದಾಜಿಸಿದ ವೆಚ್ಚ 8,000 ರಿಂದ 9,015 ಕೋಟಿ ರೂ.ಗಳಿಗೆ ಏರಿದೆ. ಕೆಪಿಸಿ ಹಾಗೂ ಬಿಎಚ್‌ಇಎಲ್ ಜಂಟಿ ಸಹಭಾಗಿತ್ವದ ಆರ್‌ಪಿಸಿಎಲ್ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ. ವೈಟಿಪಿಎಸ್‌ನ ತಲಾ 800 ಮೆಗಾ ವ್ಯಾಟ್‌ನ 2 ಘಟಕಗಳಿಂದ ವಾರ್ಷಿಕ 11,913 ದಶಲಕ್ಷ ಯೂನಿಟ್ ವಿದ್ಯುತ್ ರಾಜ್ಯ ಜಾಲಕ್ಕೆ ಲಭ್ಯವಾಗಲಿದೆ. ಕೃಷ್ಣಾ ನದಿ ಮೂಲದ 2.40 ಟಿಎಂಸಿ ಅಡಿ ನೀರನ್ನು ವೈಟಿಪಿಎಸ್‌ಗೆ ರಾಜ್ಯ ಸರಕಾರ ಹಂಚಿದೆ. ಕೇಂದ್ರದ ಪರಿಸರ ಸಚಿವಾಲಯ, 2009ರ ನವೆಂಬರ್‌ನಲ್ಲಿ ಅಸ್ತು ಎಂದಿದ್ದು, ಬಾಯ್ಲರ್-ಟರ್ಬೈನ್-ಜನರೇಟರ್ ನಿರ್ಮಿಸುವ ಸಗಟು ಗುತ್ತಿಗೆ ಬಿಎಚ್‌ಇಎಲ್ ಪಡೆದಿದೆ.

ರೈಲ್ವೆ ಮಾರ್ಗ ನಿರ್ಮಾಣ ಬಾಕಿ: ಪಶ್ಚಿಮ ಬಂಗಾಳದ ದೆವೊಚಾ-ಪಚ್ಮಿ, ದೆವಾನ್‌ಗಂಜ್ ಹರಿನ್‌ಸಿಂಘ್ ಕಲ್ಲಿದ್ದಲು ಘಟಕಗಳಲ್ಲಿ ಕಾದಿಟ್ಟ 2,012 ದಶಲಕ್ಷ ಮೆಟ್ರಿಕ್ ಟನ್ ಪೈಕಿ 382 ದಶಲಕ್ಷ ಟನ್ ಕಲ್ಲಿದ್ದಲು ಹಂಚಿಕೆಯಾಗಿದ್ದು, ಕೇಂದ್ರ ಕಲ್ಲಿದ್ದಲು ಸಚಿವಾಲಯ 2013ರ ಸೆಪ್ಟಂಬರ್‌ನಲ್ಲಿ ರಾಜ್ಯ ಸರಕಾರಕ್ಕೆ ಅಧಿಕೃತ ಪತ್ರ ಕಳುಹಿಸಿದೆ. ಹಂಚಿಕೆಯಾದ ಕಲ್ಲಿದ್ದಲು ವೈಟಿಪಿಎಸ್‌ನ ಎರಡು, ಯದ್ಲಾಪೂರದ ಒಂದು ಮತ್ತು ಬಿಟಿಪಿಎಸ್‌ನ ಮೂರನೇ ಘಟಕಕ್ಕೆ ಬಳಸಿಕೊಳ್ಳಲು ಕೆಪಿಸಿ ಈಗಾಗಲೇ ನಿರ್ಧರಿಸಿದ್ದು, ವೈಟಿಪಿಎಸ್‌ಗೆ ರೈಲ್ವೆ ಮಾರ್ಗ ನಿರ್ಮಾಣದ ಕೆಲಸ ಬಾಕಿಯಿದೆ.

ತಾಂತ್ರಿಕ, ಆಡಳಿತಾತ್ಮಕವಾಗಿ ಸಾಕಷ್ಟು ತೊಂದರೆ ಎದುರಿಸಿದ ವೈಟಿಪಿಎಸ್ ಕೊನೆಗೂ ಮಹತ್ವದ ಘಟ್ಟ ತಲುಪಿದೆ. ಬಾಯ್ಲರ್ ಲೈಟಪ್ ಬಳಿಕ, ಸಿಂಕ್ರೋನೈಜೇಷನ್ ಹಾಗೂ ಪರೀಕ್ಷಾರ್ಥ ವಿದ್ಯುತ್ ಉತ್ಪಾದನೆಗೆ ಇನ್ನೆಷ್ಟು ತಿಂಗಳು ಹಿಡಿಯುತ್ತವೆಯೋ ಗೊತ್ತಿಲ್ಲ. ಕೆಎಐಡಿಬಿ ಔದ್ಯೋಗಿಕ ಅಭಿವೃದ್ಧಿ ಕೇಂದ್ರಕ್ಕೆ ಸ್ವಾಧೀನಪಡಿಸಿಕೊಂಡ ಭೂಮಿಯಲ್ಲಿ 930 ಎಕರೆ ವೈಟಿಪಿಎಸ್ ಯೋಜನೆಗೆ ನೀಡಿದೆ. ಯರಮರಸ್ ಮತ್ತು ಯದ್ಲಾಪೂರ ವಿದ್ಯುತ್ ಯೋಜನೆಗಳಿಗೆ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, 2009ರ ಮೇ 26ಕ್ಕೆ ಶಿಲಾನ್ಯಾಸ ನೆರವೇರಿಸಿದ್ದನ್ನು ಸ್ಮರಿಸಬಹುದು. ----

ವೈಟಿಪಿಎಸ್ ಮೊದಲ ಘಟಕದ ಬಾಯ್ಲರ್ ಲೈಟ್‌ಅಪ್, ಮೇ ಅಂತ್ಯದೊಳಗೆ ನಡೆಯಲಿದೆ. ಬಾಯ್ಲರ್, ಕುಲುಮೆ, ನಿಯಂತ್ರಣ ವ್ಯವಸ್ಥೆ, ಮಿಲ್ ಹಾಗೂ ಬಂಕರ್ ಇನ್ನಿತರ ವಿಭಾಗಗಳ ಅಂತಿಮ ಸಿದ್ಧತೆ ನಿರೀಕ್ಷಿತ ಪ್ರಗತಿಯಲ್ಲಿದೆ.

-ಎಂ.ಮಹೇಶ್ವರರಾವ್, ವ್ಯವಸ್ಥಾಪಕ ನಿರ್ದೇಶಕ, ಕೆ.ಪಿ.ಸಿ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ