ರಾಯಚೂರು: ಮಂತ್ರಾಲಯದಲ್ಲಿ ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರ 346ನೇ ಆರಾಧನಾ ಮಹೋತ್ಸವವು ಆ.8ರಿಂದ ಮೂರು ದಿನ ನಡೆಯಲಿದೆ.
ಆ.6ರಿಂದ ಆ.12ರವರೆಗೆ ‘ಸಪ್ತರಾತ್ರೋತ್ಸವ’ ನಡೆಯಲಿದೆ. ಸಪ್ತರಾತ್ರೋತ್ಸವದ ಮೊದಲ ದಿನ ಆ.6ರಂದು ಸಂಜೆ 5ಕ್ಕೆ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಪ್ರಾರ್ಥನೋತ್ಸವ, ಶಾಕೋತ್ಸವ, ಧಾನ್ಯೋತ್ಸವ, ರಜತ ಮಂಟಪೋತ್ಸವ ಧಾರ್ಮಿಕ ವಿಧಿವಿಧಾನ ನೆರವೇರಿಸಲಿದ್ದಾರೆ. ನಂತರ ದಾಸವಾಣಿ, ನೃತ್ಯರೂಪಕ ಕಾರ್ಯಕ್ರಮಗಳು ಜರುಗಲಿವೆ.
ಆ.7ರಂದು ಚಂದ್ರಗ್ರಹಣವಿರುವುದರಿಂದ ಅಂದು ಶ್ರೀಮಠದಲ್ಲಿ ಯಾವುದೇ ರೀತಿಯ ಉತ್ಸವ ನಡೆಯುವುದಿಲ್ಲ. ಅದಕ್ಕೆ ಬದಲು ವಿವಿಧೆಡೆಯಿಂದ ಆಗಮಿಸುವ ಕಲಾವಿದರು ದಾಸವಾಣಿ, ಭರತನಾಟ್ಯ, ನೃತ್ಯ ರೂಪಕ ನಡೆಸಿಕೊಡಲಿದ್ದಾರೆ. ಆ.8ರಂದು ಶ್ರೀರಾಘವೇಂದ್ರತೀರ್ಥರ ಆರಾಧನೆಯ ಮೊದಲ ದಿನ ಸಿಂಹ ವಾಹನೋತ್ಸವ ನಡೆಯಲಿದೆ. ಅದೇ ದಿನ ಸಂಜೆ ದಾಸವಾಣಿ ಕಾರ್ಯಕ್ರಮ ಜರುಗಲಿದೆ. ಆ.9ರಂದು ರಾಯರ ಮಧ್ಯಾರಾಧನೆ ದಿನ ಗಜ, ರಜತ, ಸ್ವರ್ಣ ರಥೋತ್ಸವ ನಡೆಯಲಿದೆ. ಸಂಜೆ ಭರತನಾಟ್ಯ, ದಾಸವಾಣಿ, ವಿದ್ಯಾ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.
ಆ.10ರಂದು ರಾಯರ ಉತ್ತರಾರಾಧನೆ ಸಂದರ್ಭ ಬೆಳಗ್ಗೆ ಶ್ರೀಮಠದ ಮುಂಭಾಗದಲ್ಲಿ ಮಹಾರಥೋತ್ಸವ ನಡೆಯಲಿದೆ. ಸಂಜೆ ಕರ್ನಾಟಕ ಶಾಸ್ತ್ರೀಯ ಸಂಗೀತ, ದಾಸವಾಣಿ ಸೇರಿ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಆ.11ರಂದು ಶ್ರೀಸುಜ್ಞಾನೇಂದ್ರತೀರ್ಥರ ಆರಾಧನಾ ಮಹೋತ್ಸವ ನಡೆಯಲಿದ್ದು, ಆ.12ರಂದು ಆರಾಧನಾ ಮಹೋತ್ಸವದ ಸರ್ವ ಸಮರ್ಪಣೋತ್ಸವ ನೆರವೇರಿಸಲಾಗುವುದು ಎಂದು ಶ್ರೀಮಠ ತಿಳಿಸಿದೆ.
ಗ್ರಂಥ ಬಿಡುಗಡೆ: ಆರಾಧನಾ ಮಹೋತ್ಸವ ಅಂಗವಾಗಿ ಶ್ರೀಮಠದಿಂದ ಹೊರತರಲಾಗುತ್ತಿರುವ ‘ಹರಿದಾಸರು ಕಂಡ ವಿದ್ಯಾಮಠ’, ‘ಅಣುವ್ಯಾಖ್ಯಾನ ಲಘು ಕಾಶಿಕಾ ಸಂಸ್ಕೃತ’, ‘ಕರ್ಮ ನಿರ್ಣಯಾರ್ಥ ಪ್ರಕಾಶನ ಸಂಸ್ಕೃತ’ ಕೃತಿಗಳನ್ನು ಶ್ರೀಗಳು ಆ.8ರಂದು ಸಂಜೆ ಬಿಡುಗಡೆ ಮಾಡಲಿದ್ದಾರೆ. ‘ಪರಿಮಳ ಗ್ರಂಥದ ಕನ್ನಡ ಮಾಲಿಕೆ’ಯ ಎರಡನೇ ಸಂಚಿಕೆ, ‘ಭಾವದೀಪ ಕನ್ನಡ ಮಾಲಿಕೆಯ 11 ಮತ್ತು 12ನೇ ಸಂಚಿಕೆ’, ‘ಶ್ರೀರಾಯರ ಚರಿತ್ರೆಯ ಹಿಂದಿ ಮತ್ತು ಮರಾಠಿ ಅನುವಾದ ಕೃತಿ’ಗಳನ್ನೂ ಆರಾಧನೆ ವೇಳೆ ಬಿಡುಗಡೆಗೊಳಿಸಲಾಗುತ್ತದೆ.
ಪ್ರಶಸ್ತಿ ಪ್ರದಾನ ಆ.8ಕ್ಕೆ: ಶ್ರೀಮಠದ ಪ್ರತಿಷ್ಠಿತ ‘ಶ್ರೀರಾಘವೇಂದ್ರಾನುಗ್ರಹ ಪ್ರಶಸ್ತಿ’ಗೆ ಈ ಬಾರಿ ಉಡುಪಿಯ ಪೂರ್ಣಪ್ರಜ್ಞ ವಿದ್ಯಾಪೀಠದ ವಿದ್ವಾನ್ ವೆಂಕಟೇಶಾಚಾರ್ಯ, ಆಂಧ್ರದ ರಾಜಮಂಡ್ರಿಯ ವಿಶ್ವನಾಥ ಗೋಪಾಲಕೃಷ್ಣ ಶಾಸ್ತ್ರಿ, ಹಾವೇರಿಯ ಡಾ.ಗುರುರಾಜ್ ಶ್ರೀನಿವಾಸರಾವ್ ವೈದ್ಯ ಹಾಗೂ ಶಿಕ್ಷಣ ಪ್ರೇಮಿ ಪಿ.ಆರ್.ವಿಠ್ಠಲ್ ಅವರು ಆಯ್ಕೆಯಾಗಿದ್ದಾರೆ. ಈ ಸಾಧಕರಿಗೆ ಆ.8ರಂದು ಸಂಜೆ 7.30ರಿಂದ 9ರ ವರೆಗೆ ನಡೆಯುವ ಸಮಾರಂಭದಲ್ಲಿ ಶ್ರೀಗಳು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಶ್ರೀಮಠ ತಿಳಿಸಿದೆ.