ಮಸ್ಕಿ:ಎನ್ನಾರ್ಬಿಸಿ 5ಎ ನಾಲೆ ಅನುಷ್ಠಾನಗೊಳಿಸಿ ಡಿಪಿಆರ್ ಮಾಡುವಂತೆ ಒತ್ತಾಯಿಸಿ, ಕರ್ನಾಟಕ ಪ್ರಾಂತರೈತ ಸಂಘದ ನೇತೃತ್ವದಲ್ಲಿ ವ್ಯಾಪ್ತಿಯ ರೈತರು ತಹಸೀಲ್ದಾರ್ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು.
ನಗರದ ಭ್ರಮರಾಂಭ ದೇವಸ್ಥಾನದಿಂದ ಶುಕ್ರವಾರ ಪ್ರತಿಭಟನಾ ಮೆರವಣಿಗೆ ಆರಂಭಿಸಿದರು. ಕನಕವೃತ್ತ, ವಾಲ್ಮೀಕಿ ವೃತ್ತದ ಮೂಲಕ ಬಸವೇಶ್ವರ ನಗರದಲ್ಲಿನ ತಹಸೀಲ್ದಾರ್ ಕಾರ್ಯಾಲಯಕ್ಕೆ ತೆರಳಿ ಮನವಿ ಸಲ್ಲಿಸಿದರು. ನಂತರ ಕರ್ನಾಟಕ ಪ್ರಾಂತರೈತ ಸಂಘದ ಜಿಲ್ಲಾಧ್ಯಕ್ಷ ಡಿ.ವೀರನಗೌಡ ಮಾತಮಾಡಿ, ನಮ್ಮ ಜಿಲ್ಲೆಯಲ್ಲಿ ಎರಡು ಜೀವ ನದಿಗಳಾದ ಕೃಷ್ಣಾ ಮತ್ತು ತುಂಗಭದ್ರಾ ಹರಿಯೂತ್ತಿದ್ದರೂ ಈ ಜಿಲ್ಲೆಯನ್ನು ಕೇಂದ್ರ ಸರಕಾರ ಸುಮಾರು ವರ್ಷಗಳ ಹಿಂದೆ ಬರ ಪೀಡಿತ ಜಿಲ್ಲೆಯೆಂದು ಘೋಷಿಸಿದೆ. ಕೃಷ್ಣಾ ಕಣಿವೆಯಲ್ಲಿ ಲಭ್ಯವಿರುವ ನೀರಿನಿಂದ ಈ ಪ್ರದೇಶ ಅಭಿವೃದ್ಧಿಪಡಿಸಿ, ಬರ ಪೀಡಿತ ಎನ್ನುವ ಸದ್ಯದ ಸಮಸ್ಯೆಯನ್ನು ತಳ್ಳಲು ಬಚಾವತ್ ಟ್ರಿಬ್ಯುನಲ್ನಲ್ಲಿ 754 ಟಿಎಂಸಿ ನೀರನ್ನು ಉಪಯೋಗಿಸಲು ಸಿಡಬ್ಯುಸಿ ತೀರ್ಪನ್ನು ನೀಡಿದೆ. ಆದರೆ ಇಲ್ಲಿಯವೆಗೆ ಈ ಬಗ್ಗೆ ರಾಜ್ಯ ಸರಕಾರವು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಭಾಗದ ಜನರು ತಮ್ಮ ಮುಖ್ಯ ಕಸುಬಾದ ವ್ಯವಸಾಯ ಬಿಟ್ಟು, ಉಪ ಜೀವನ ನಡೆಸಲು ಸಂಸಾರ ಸಮೇತ ದೂರದ ಊರುಗಳಿಗೆ ಗುಳೆ ಹೋಗುವಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದು ದೂರಿದರು. ತುಂಗಭದ್ರಾ ಎಡದಂಡೆ ನಾಲೆಯ ಕೆಳ ಭಾಗದಲ್ಲಿ ಬೆಳೆಗೆ ನೀರಿಲ್ಲದೇ ಭತ್ತ ನಾಟಿ ಮಾಡಿದ ಹೊಲಗಳು ಸಂಪೂರ್ಣ ಹಾಳಾಗಿವೆ. ಪ್ರತಿಯೊಬ್ಬ ರೈತನಿಗೆ ಸರಕಾರದಿಂದ 50 ಸಾವಿರ ರೂ. ಪರಿಹಾರ ನಿಧಿ ನೀಡಬೇಕೆಂದು ಮನವಿ ಮಾಡಿದರು.
ಅಪ್ಪಾಜಿಗೌಡ ಕಾರ್ಲಕುಂಟಿ, ಬಸನಗೌಡ ಮುದಬಾಳ, ಅಮರೇಗೌಡ, ಬಸವರಾಜ ಉದ್ಬಾಳ, ಲಿಂಗರಾಜ, ಕೃಷ್ಣ ಚಿಗರಿ, ಮಾನಪ್ಪ ಲೆಕ್ಕಿಹಾಳ, ಮಲ್ಲಣ್ಣ ರೇವಣಕಿ, ಶಾಂತಭಾಯಿ ಸೇರಿ ನೂರಾರು ರೈತರು ಮತ್ತು ಮಹಿಳೆಯರಿದ್ದರು.