ಮಸ್ಕಿ: ಸಮೀಪದ ಮಾರಲದಿನ್ನಿ ಗ್ರಾಮ ಪಂಚಾಯಿತಿಯಲ್ಲಿ ಬಾಪೂಜಿ ಸೇವಾ ಕೇಂದ್ರ ಉದ್ಘಾಟನೆಯಾಗಿ ಮೂರು ತಿಂಗಳು ಕಳೆದರೂ ಸೇವೆ ಪ್ರಾರಂಭವಾಗಿಲ್ಲ. ಇದರಿಂದ ಪಡಿತರ ಚೀಟಿಗೆ ಆಧಾರ್ ಜೋಡಣೆ ಮಾಡಲು ಜನರು ಪರದಾಡುವಂತಾಗಿದೆ.
ಪಂಚಾಯಿತಿಯಲ್ಲಿ 3ಜಿ ಬ್ರಾಡ್ ಬ್ಯಾಂಡ್ ವ್ಯವಸ್ಥೆ , ಕಂಪ್ಯೂಟರ್ ಮತ್ತು ಆಪರೇಟರ್ ಇದ್ದು, ಪಡಿತರ ಚೀಟಿಗೆ ಆಧಾರ್ ಜೋಡಣೆ ಮಾಡಿ ಎಂದು ಪಂಚಾಯಿತಿಗೆ ಹೋದರೆ ನೆಟ್ವರ್ಕ್ ಇಲ್ಲ. ಕೆಲಸ ಮಾಡಲು ಸಿಬ್ಬಂದಿ ಕೊರತೆ ಇದೆ. ಲಿಂಗಸುಗೂರಿನ ಬಾಲಾಜಿ ಸೈಬರ್ ಸೆಂಟರ್ಗೆ ಹೋಗಿ ಎಂದು ಹೇಳುತ್ತಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಆಧಾರ ಲಿಂಕ್ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರಿಂದ ನ್ಯಾಯಬೆಲೆ ಅಂಗಡಿ ಸಂಚಾಲಕರು ಅಕ್ಕಿ ವಿತರಣೆ ಮಾಡುತ್ತಿಲ್ಲ. ಇದರಿಂದ ಕೂಲಿ ಕೆಲಸ ಬಿಟ್ಟು ಗ್ರಾಮದಿಂದ ಸೈಬರ್ ಸೆಂಟರ್ಗೆ ಅಲೆದಾಡುವಂತಾಗಿದೆ. ಆಧಾರ್ ಸಂಖ್ಯೆ ಲಿಂಕ್ ಮಾಡಲು ಕಂಪ್ಯೂಟರ್ ಅಂಗಡಿಯವರು 50 ರೂ. ಕೇಳುತ್ತಾರೆ ಎಂದು ಪಡಿತರದಾರರು ಅಳಲು ತೋಡಿಕೊಂಡಿದ್ದಾರೆ.
ಬೇಜವಾಬ್ದಾರಿ: ಈ ಹಿಂದೆ ಗ್ರಾ.ಪಂ.ನಲ್ಲಿ ಪಡಿತರ ಚೀಟಿ ಅರ್ಜಿ ಸಲ್ಲಿಸಿದ್ದೇವೆ, ಆಧಾರ್ ಲಿಂಕ್ ಕೂಡ ಇಲ್ಲಿಯೇ ಮಾಡಿಸಿದ್ದೇವೆ. ಇತ್ತೀಚೆಗೆ 3ಜಿ ಬ್ರಾಡ್ ಬ್ಯಾಂಡ್ ಸೇವೆ ಒದಗಿಸಲಾಗಿದ್ದರೂ ಪಂಚಾಯಿತಿ ಸಿಬ್ಬಂದಿ ಇಲ್ಲದ ನೆಪಹೇಳಿ ಫಲಾನುಭವಿಗಳನ್ನು ವಾಪಸ್ ಕಳುಹಿಸುತ್ತಿದ್ದಾರೆ ಎಂದು ಸ್ಥಳೀಯರು ಅರೋಪಿಸುತ್ತಾರೆ.
....
ಪಡಿತರ ಚೀಟಿಯಲ್ಲಿ ಕುಟುಂಬದ ಐವರು ಸದಸ್ಯರ ಹೆಸರಿದ್ದು, ಒಬ್ಬರದ್ದು ಮಾತ್ರ ಆಧಾರ ಲಿಂಕ್ ಆಗಿದ್ದರಿಂದ ಕಡಿಮೆ ಅಕ್ಕಿ ವಿತರಣೆ ಮಾಡುತ್ತಿದ್ದಾರೆ. ಇದರಿಂದ ಕಿರಾಣಿ ಅಂಗಡಿಯಲ್ಲಿ ಅಕ್ಕಿ ಖರೀದಿಸುವಂತಾಗಿದೆ.
- ಹೆಸರೇಳಲಿಚ್ಛಿಸದ ಪಡಿತರ ಚೀಟಿದಾರ
......
ಸಿಬ್ಬಂದಿ ಕೊರತೆಯಿಂದ ಬಾಪೂಜಿ ಸೇವಾ ಕೇಂದ್ರ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ನೆಟ್ವರ್ಕ್ ಸಮಸ್ಯೆ ಇರುವುದರಿಂದ ಪಡಿತರದಾರರಿಗೆ ಆಧಾರ್ ಲಿಂಕ್ ಕಲ್ಪಿಸಲು ಆಗಿಲ್ಲ. ಶೀಘ್ರದಲ್ಲೇ ತಾಂತ್ರಿಕ ಸಮಸ್ಯೆ ಸರಿಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು.
-ಎಂ.ಡಿ.ಉಮರ್ ಪಿಡಿಒ, ಮಾರಲದಿನ್ನಿ ಗ್ರಾ.ಪಂ.