ಆ್ಯಪ್ನಗರ

ಭಕ್ತರ ಕಾಪಾಡುವ ಬೆಟ್ಟದ ಮಲ್ಲಿಕಾರ್ಜುನ

ಕರ್ನಾಟಕ ಸುಪ್ರಸಿದ್ಧ ಐತಿಹಾಸಿಕ ಸ್ಥಳಗಳಲ್ಲಿ ಮಸ್ಕಿಯೂ ಒಂದು. ಇತಿಹಾಸಕಾರರಿಗೆ ಇಲ್ಲಿನ ದೇವನಾಂಪ್ರಿಯ ಸಾಮ್ರಾಟ್‌ ಅಶೋಕ ಶಿಲಾಶಾಸನ ಪ್ರಾಗೈತಿಹಾಸಿಕ ಕುರುಹುಗಳು ಅಧ್ಯಯನಕ್ಕೆ ಆಕರಗಳಾಗಿದ್ದರೆ, ಧಾರ್ಮಿಕವಾಗಿ ಮಸ್ಕಿಯ ಬೆಟ್ಟದ ಮಲ್ಲಿಕಾರ್ಜುನ ದೇವಸ್ಥಾನ ಎರಡನೇ ಶ್ರೀಶೈಲವೆಂದು ಖ್ಯಾತಿ ಪಡೆದಿದೆ.

Vijaya Karnataka 23 Aug 2019, 5:00 am
ಮಸ್ಕಿ : ಕರ್ನಾಟಕ ಸುಪ್ರಸಿದ್ಧ ಐತಿಹಾಸಿಕ ಸ್ಥಳಗಳಲ್ಲಿ ಮಸ್ಕಿಯೂ ಒಂದು. ಇತಿಹಾಸಕಾರರಿಗೆ ಇಲ್ಲಿನ ದೇವನಾಂಪ್ರಿಯ ಸಾಮ್ರಾಟ್‌ ಅಶೋಕ ಶಿಲಾಶಾಸನ ಪ್ರಾಗೈತಿಹಾಸಿಕ ಕುರುಹುಗಳು ಅಧ್ಯಯನಕ್ಕೆ ಆಕರಗಳಾಗಿದ್ದರೆ, ಧಾರ್ಮಿಕವಾಗಿ ಮಸ್ಕಿಯ ಬೆಟ್ಟದ ಮಲ್ಲಿಕಾರ್ಜುನ ದೇವಸ್ಥಾನ ಎರಡನೇ ಶ್ರೀಶೈಲವೆಂದು ಖ್ಯಾತಿ ಪಡೆದಿದೆ.
Vijaya Karnataka Web bettada mallikarjuna
ಭಕ್ತರ ಕಾಪಾಡುವ ಬೆಟ್ಟದ ಮಲ್ಲಿಕಾರ್ಜುನ


ಶ್ರಾವಣಮಾಸ ಬಂತೆಂದರೆ ಇಲ್ಲಿನ ಜನರಿಗೆ ಹಬ್ಬದ ವಾತಾವರಣ. ಸುಮಾರು 450 ಅಡಿ ಎತ್ತರದ ಬೆಟ್ಟದ ಮೇಲಿರುವ ಮಲ್ಲಿಕಾರ್ಜುನ ದೇವರಿಗೆ ನಿತ್ಯವೂ ಶ್ರದ್ಧಾ ಭಕ್ತಿಯಿಂದ ರುದ್ರಾಭಿಷೇಕ, ಅನ್ನ ಸಂತರ್ಪಣೆ ನಡೆಯುತ್ತದೆ. ನಿತ್ಯವೂ ಭಕ್ತರು ಜಾತಿ ಬೇಧ ಭಾವವಿಲ್ಲದೇ ಶ್ರಾವಣ ಸೋಮವಾರ ಮುಂಜಾನೆ 3ರಿಂದ ಸಾಲು ಸಾಲಾಗಿ ಇರುವೆಗಳಂತೆ ಬೆಟ್ಟ ಹತ್ತುತ್ತಾರೆ. ಇನ್ನೂ ಕೆಲವರು ಬೆಟ್ಟದ ಹಿಂದಿನಿಂದ ದೇವಸ್ಥಾನಕ್ಕಾಗಿ ನಿರ್ಮಿಸಿರುವ ಸಿಸಿ ರಸ್ತೆಯ ಮೂಲಕ ಹೋಗಿ ಗುಡ್ಡದ ಮಲ್ಲಯ್ಯನ ದರ್ಶನ ಪಡೆಯುತ್ತಾರೆ.

ವಿಶೇಷತೆ: ಬೆಟ್ಟದಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶ್ರೀಶೈಲದಂತೆ ಪೂರ್ವ ದಿಕ್ಕಿಗೆ ಒಂದು ಮಹಾದ್ವಾರ, ದಕ್ಷಿಣೋತ್ತರವಾಗಿ ದ್ವಾರ ಬಾಗಿಲುಗಳಿವೆ. ದೇವಾಲಯ ಹೊರಗೆ ಮತ್ತು ಒಳಗಡೆ ಇತಿಹಾಸ ಹಾಗೂ ಪುರಾಣ ಪ್ರಸಿದ್ಧ ಹುಬ್ಬು ಚಿತ್ರಗಳನ್ನು ಚಿತ್ರಿಸಲಾಗಿದೆ.

ಶ್ರಾವಣ ಮಾಸದ ಮೂರನೇ ಸೋಮವಾರ ಪಟ್ಟಣದಿಂದ ಮಲ್ಲಿಕಾರ್ಜುನ ದೇವರ ಪಲ್ಲಕ್ಕಿಯನ್ನು ಅರ್ಚಕರು ಹಾಗೂ ಭಕ್ತರು ಹೊತ್ತುಕೊಂಡು, ಸುಮಾರು ಹದಿನೈದು ಕಿ.ಮೀ ದೂರದ ತೀರ್ಥಬಾವಿಯಲ್ಲಿನ ಅಮರೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿ ಮಲ್ಲಿಕಾರ್ಜುನ ದೇವರಿಗೆ ಪೂಜೆ ನೆರವೇರಿಸುತ್ತಾರೆ. ಕೊಂಡದಲ್ಲಿ ಹರಿದು ಬರುವ ತೀರ್ಥವನ್ನು ಕುಂಭದಲ್ಲಿ ತುಂಬಿಕೊಂಡು ಮರಳಿ ಪಟ್ಟಣಕ್ಕೆ ಆಗಮಿಸುತ್ತಾರೆ.

ರಥೋತ್ಸವ: ಪಟ್ಟಣದ ಹಿರಿಯರು ಭಕ್ತರು ಎದುರುಗೊಂಡು ಪಲ್ಲಕ್ಕಿಯನ್ನು ಸಕಲ ವಾದ್ಯ-ಮೇಳಗಳೊಂದಿಗೆ ವೈಭವದೊಂದಿಗೆ ಪ್ರಮುಖ ಬಿದಿಗಳಲ್ಲಿ ವಿಜೃಂಭಣೆಯಿಂದ ಡೊಳ್ಳು ಕುಣಿತದೊಂದಿಗೆ ಭಕ್ತಿ ಪೂರ್ವಕವಾಗಿ ಬರಮಾಡಿಕೊಂಡು ನಂತರ ದೇವರ ಹೂಹಾರ(ಹೂಮಾಲೆ) ಹರಾಜು ನಡೆಯುತ್ತದೆ. ಶ್ರಾವಣ ಮಾಸದ ಕೊನೆಯ ಸೋಮವಾರದಂದು ತೇರು ಬಜಾರದಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನ, ಮುಖ್ಯ ಬಿದಿ, ದೈವದಕಟ್ಟೆ ಹಾಗೂ ಬಸವೇಶ್ವರ ದೇನಸ್ಥಾನದವರೆಗೆ ದೇವರ ಉಚ್ಛಾಯ ಉತ್ಸವ ಜರುಗುತ್ತದೆ. ಬೆಟ್ಟದ ಅಡಿ ಸಹಸ್ರಾರು ಭಕ್ತರು ದೇವರ ದರ್ಶನ ಪಡೆಯುತ್ತಾರೆ. ಆಂಧ್ರದ ಆದೋನಿ, ಕಾರ್ನೂಲ್‌, ಕಡಪ ಮಹಾರಾಷ್ಟ್ರ ಹಾಗೂ ನೆರೆಯ ಜಿಲ್ಲೆಗಳಾದ ಕಲಬುರಗಿ, ವಿಜಯಪುರ, ಬಾಗಲಕೋಟ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಾರೆ. ಆ.26 ರಂದು ಬೆಟ್ಟದ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವವೂ ಜರುಗುತ್ತದೆ.

ಬೆಟ್ಟದ ಮೇಲಿರುವ ಮಲ್ಲಿಕಾರ್ಜುನ ದೇವರ ನಿತ್ಯವೂ ದರ್ಶನ ಪಡೆಯುವುದು ಕಷ್ಟವೆಂದು ಹಿರಿಯರು 1970 ರಲ್ಲಿ ಮುಖ್ಯ ಬಜಾರನಲ್ಲಿ ಪ್ರತ್ಯೇಕವಾಗಿ ಶ್ರೀಶೈಲ ಜಗದ್ಗುರುಗಳ ಸಾನ್ನಿಧ್ಯದಲ್ಲಿ ದೇವಸ್ಥಾನವನ್ನು ಭಕ್ತರು ಸ್ಥಾಪಿಸಿದ್ದಾರೆ. ಇಲ್ಲಿ ಪ್ರತಿ ವರ್ಷ ಭಾರತ ಹುಣ್ಣಿಮೆಯಂದು ಅತಿ ವಿಜೃಂಭಣೆ ರಥೋತ್ಸವ ಜರುಗುತ್ತದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ