ಆ್ಯಪ್ನಗರ

ಅಭ್ಯರ್ಥಿಗಳಿಗೆ ಹುದ್ದೆ ಕೈತಪ್ಪುವ ಆಪತ್ತು

ಹುದ್ದೆ ನೇಮಕಾತಿ ಅಧಿಸೂಚನೆ ಸಂದರ್ಭದಲ್ಲಿ ಇಲ್ಲದ ಷರತ್ತನ್ನು ನೇಮಕಾತಿ ಆದೇಶದಲ್ಲಿ ದಿಢೀರ್ ಸೇರಿಸಿರುವುದರಿಂದ ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ(ಆರ್‌ಟಿಪಿಎಸ್)ದಲ್ಲಿ ಬಾಯ್ಲರ್ ಅಟೆಂಡೆಂಟ್ ಗ್ರೇಡ್-2ರ ಹುದ್ದೆಗೆ ನೇಮಕವಾದವರು, ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬ ಸ್ಥಿತಿ ಎದುರಿಸುವಂತಾಗಿದೆ.

Vijaya Karnataka 12 Sep 2017, 8:03 am
ಜಗನ್ನಾಥ ಆರ್.ದೇಸಾಯಿ, ರಾಯಚೂರು
Vijaya Karnataka Web candidates are worried about the job
ಅಭ್ಯರ್ಥಿಗಳಿಗೆ ಹುದ್ದೆ ಕೈತಪ್ಪುವ ಆಪತ್ತು


ಹುದ್ದೆ ನೇಮಕಾತಿ ಅಧಿಸೂಚನೆ ಸಂದರ್ಭದಲ್ಲಿ ಇಲ್ಲದ ಷರತ್ತನ್ನು ನೇಮಕಾತಿ ಆದೇಶದಲ್ಲಿ ದಿಢೀರ್ ಸೇರಿಸಿರುವುದರಿಂದ ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ(ಆರ್‌ಟಿಪಿಎಸ್)ದಲ್ಲಿ ಬಾಯ್ಲರ್ ಅಟೆಂಡೆಂಟ್ ಗ್ರೇಡ್-2ರ ಹುದ್ದೆಗೆ ನೇಮಕವಾದವರು, ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬ ಸ್ಥಿತಿ ಎದುರಿಸುವಂತಾಗಿದೆ.

ಹೈ.ಕ. ಭಾಗದ ಅರ್ಹ ಅಭ್ಯರ್ಥಿಗಳಿಗೆ ಅವಕಾಶ ತಪ್ಪಿಸಲು ಕರ್ನಾಟಕ ವಿದ್ಯುತ್ತ ನಿಗಮ (ಕೆಪಿಸಿ) ಹುನ್ನಾರ ನಡೆಸಿದೆ ಎಂಬುದು ಹುದ್ದೆ ಆಕಾಂಕ್ಷಿಗಳ ಅಳಲಾಗಿದೆ. ಬಾಯ್ಲರ್ ಅಟೆಂಡೆಂಟ್ ಗ್ರೇಡ್-2 ಹುದ್ದೆಗೆ ನೇಮಕಾತಿ ಮಾಡಲು 2016ರ ಸೆ.29ರಂದು ಕೆಪಿಸಿ ಅಧಿಸೂಚನೆ ಹೊರಡಿಸಿತ್ತು. ಹೈ.ಕ. ಭಾಗದ 371ನೇ ಕಲಂ(ಜೆ) ಅಡಿ ಒಟ್ಟು 68 ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಅರ್ಜಿ ಸಲ್ಲಿಸಲು 2016ರ ಅ.24 ಕಡೆಯ ದಿನವಾಗಿತ್ತು. ಎಸ್ಸೆಸ್ಸೆಲ್ಸಿ ಹಾಗೂ ತತ್ಸಮಾನ ಅರ್ಹತೆ ಹೊಂದಿದವರು, ಬಾಯ್ಲರ್ ಅಟೆಂಡೆಂಟ್ ಗ್ರೇಡ್-2 ತರಬೇತಿ ಪಡೆದ ಪ್ರಮಾಣ ಪತ್ರ ಮತ್ತು ಹೆಸರಾಂತ ಸಂಸ್ಥೆಯಲ್ಲಿ ಎರಡು ವರ್ಷ ಈ ಹುದ್ದೆ ನಿರ್ವಹಿಸಿದ ಅನುಭವ ಪ್ರಮಾಣಪತ್ರ ಮಾತ್ರ ಸಲ್ಲಿಸಲು ಹಿಂದಿನ ಅಧಿಸೂಚನೆಯಲ್ಲಿ ಸೂಚಿಸಲಾಗಿತ್ತು.

ಈ ಅಧಿಸೂಚನೆ ಆಧರಿಸಿ, ಸಾವಿರಾರು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಶೈಕ್ಷಣಿಕ ಅರ್ಹತೆ ಮತ್ತು ಮೆರಿಟ್ ಆಧಾರದಲ್ಲಿಯೇ ನೇಮಕಾತಿಗೆ ಮುಂದಾದ ಕೆಪಿಸಿ, ಎಲ್ಲ ಪ್ರಕ್ರಿಯೆಗಳ ನಂತರ ಈಚೆಗೆ ನೇಮಕಾತಿ ಆದೇಶ ಕಳಿಸಿದೆ. ಮೆರಿಟ್ ಪಟ್ಟಿಯಲ್ಲಿ ತಮ್ಮ ಹೆಸರನ್ನು ಕಂಡು ಸಂಭ್ರಮದಲ್ಲಿದ್ದ ಅಭ್ಯರ್ಥಿಗಳಿಗೆ ಕೆಪಿಸಿ ವಿಧಿಸಿದ ಹೊಸ ಷರತ್ತು ಇಕ್ಕಟ್ಟಿಗೆ ಸಿಲುಕಿಸಿದೆ. ನೇಮಕಾತಿ ಆದೇಶ ಪಡೆದವರು ಸೆ.20ರೊಳಗೆ ಸೇವೆಗೆ ಹಾಜರಾಗಬೇಕು ಎಂದು ತಿಳಿಸಲಾಗಿದೆ. ಈ ಅವಧಿಯಲ್ಲಿ ಹೊಸ ಷರತ್ತು ಪೂರೈಸುವುದು ಕಷ್ಟಸಾಧ್ಯವಾಗಿದೆ. ನೌಕರಿಯೇ ಕೈತಪ್ಪುವ ಭೀತಿ ಎದುರಾಗಿದೆ.

ಏನಿದು ಹೊಸ ಷರತ್ತು?: ನೇಮಕಾತಿ ಹೊಸ ಆದೇಶದ ಪ್ರಕಾರ ಸೇವೆಗೆ ಹಾಜರಾಗುವವರು, ತಾವು ಈ ಹಿಂದೆ ಸೇವೆ ಸಲ್ಲಿಸಿದ ಅವಧಿಗೆ ಸಂಬಂಧಿಸಿದಂತೆ ಭವಿಷ್ಯನಿಧಿ (ಪಿಎಫ್) ಖಾತೆ ಹೊಂದಿರುವ ಹಾಗೂ ಅದರ ಎಲ್ಲ ವಿವರಗಳಿರುವ ಲೆಕ್ಕಪಟ್ಟಿಯನ್ನು ಭವಿಷ್ಯನಿಧಿ ಕಚೇರಿಯ ಸಹಾಯಕ ಆಯುಕ್ತರಿಂದ ದೃಢೀಕೃತ ಪ್ರಮಾಣ ಪತ್ರ ಸಲ್ಲಿಸುವಂತೆ ಕೆಪಿಸಿ ಷರತ್ತು ವಿಧಿಸಿದೆ. ಆರ್‌ಟಿಪಿಎಸ್‌ನಲ್ಲಿ ಸುಮಾರು 2 ಸಾವಿರ ಕಾರ್ಮಿಕರು ಗುತ್ತಿಗೆ ಆಧಾರದಲ್ಲಿಯೇ ದುಡಿಯುತ್ತಿದ್ದಾರೆ. ಅಂಥವರಲ್ಲಿ ಬಹುತೇಕರಿಗೆ ಗುತ್ತಿಗೆದಾರರು ಭವಿಷ್ಯನಿಧಿ ಖಾತೆ ತೆರೆದು ವಂತಿಗೆ ಪಾವತಿಸಿದ್ದು ತೀರಾ ಕಡಿಮೆ. ಹೀಗಾಗಿ ಬಹುತೇಕರು ನೈಜವಾಗಿ ಪಿಎಫ್ ಖಾತೆ ಹೊಂದಿಲ್ಲ ಎಂಬ ಮಾತು ಕೇಳಿಬಂದಿದೆ. ಪಿಎಫ್ ಖಾತೆ ಇಲ್ಲದೇ ಹೊಸದಾಗಿ ಆಯ್ಕೆಯಾದ ಸೇವೆಗೆ ಹಾಜರಾಗಲೂ ಅವಕಾಶವಿಲ್ಲದಾಗಿದೆ.

ಮೂವರಷ್ಟೇ ಷರತ್ತು ಪಾಲನೆ:ಒಟ್ಟು 68 ಹುದ್ದೆಗಳಲ್ಲದೇ ಸ್ಥಳೀಯರಲ್ಲದ ಒಟ್ಟು 17 ಹುದ್ದೆಗಳಲ್ಲಿ 9 ಜನ ಹೈ.ಕ. ಭಾಗದವರೇ ಆಯ್ಕೆಯಾಗಿದ್ದಾರೆ. ಹೈ.ಕ. ಮತ್ತು ಹೈ.ಕ.ಯೇತರ ಸೇರಿ 77 ಅಭ್ಯರ್ಥಿಗಳ ಪೈಕಿ ಸದ್ಯದ ಮಾಹಿತಿಯಂತೆ ಸೇವೆಗೆ ಹಾಜರಾಗಲು ಕೇವಲ ಮೂವರು ಈ ಷರತ್ತು ಪಾಲಿಸುವ ಲಕ್ಷಣವಿದೆ. ಉಳಿದವರು ಅಡಕತ್ತರಿಯಲ್ಲಿ ಸಿಲುಕಿದ್ದು, ಷರತ್ತು ಸಡಿಲಿಕೆಗೆ ಒತ್ತಾಯಿಸುತ್ತಿದ್ದಾರೆ.

ಅಭ್ಯರ್ಥಿಗಳು ತಮ್ಮ ಸೇವಾನುಭವಕ್ಕೆ ಸಂಬಂಧಿಸಿ ಖೊಟ್ಟಿ ಪ್ರಮಾಣ ಪತ್ರ ಸಲ್ಲಿಸಿ ಸೇವೆಗೆ ಹಾಜರಾಗುವ ಅನುಮಾನ ಹಿನ್ನೆಲೆಯಲ್ಲಿ ಪಿಎಫ್ ಮಾಹಿತಿ ಸಲ್ಲಿಕೆ ಕಡ್ಡಾಯಗೊಳಿಸಲಾಗಿದೆ ಎಂದು ಕೆಪಿಸಿ ಉನ್ನತ ಮೂಲಗಳು ತಿಳಿಸಿವೆ. ಮತ್ತೊಂದೆಡೆ ಬಾಯ್ಲರ್ ಅಟೆಂಡ್ ಮಾಡುವವರು ತಾಂತ್ರಿಕವಾಗಿ ಸಮರ್ಥರಿರಬೇಕಿದೆ. ಖೊಟ್ಟಿ ಪ್ರಮಾಣಪತ್ರ ಸಲ್ಲಿಸಿ, ಸೇವೆಗೆ ಸೇರಿದರೆ ಕರ್ತವ್ಯ ನಿರ್ವಹಣೆ ವೇಳೆ ಎದುರಾಗುವ ತಾಂತ್ರಿಕ ಸಮಸ್ಯೆ ನಿಭಾಯಿಸುವಲ್ಲಿ ವಿಫಲವಾಗಿ ಅನಾಹುತ ಸಂಭವಿಸಿದರೆ ಹೊಣೆ ಹೊರುವವರು ಯಾರು? ಎಂಬುದು ಕೆಪಿಸಿ ಉನ್ನತ ಅಧಿಕಾರಿಗಳು ವಾದವಾಗಿದೆ.

......................

ಆರ್‌ಟಿಪಿಎಸ್‌ನಲ್ಲಿ ನೇಮಕಾತಿಗೆ ಹೊರಡಿಸಿದ ಅಧಿಸೂಚನೆಯಲ್ಲಿ ಪಿಎಫ್ ಪ್ರಮಾಣ ಪತ್ರ ಕಡ್ಡಾಯಗೊಳಿಸಿದ ಬಗ್ಗೆ ಮಾಹಿತಿ ಇರಲಿಲ್ಲ. ಗುತ್ತಿಗೆದಾರರು ಕಾರ್ಮಿಕರಿಗೆ ಪಿಎಫ್ ಸೌಲಭ್ಯ ನೀಡುವುದು ತೀರಾ ವಿರಳ. ವೇತನ ಮಾತ್ರ ಪಾವತಿಸುತ್ತಾರೆ. ಅವರನ್ನು ಸೌಲಭ್ಯ ಕೇಳಿದರೆ ಗುತ್ತಿಗೆ ಆಧಾರದ ನೌಕರಿಗೂ ಕುತ್ತು ಬರುತ್ತದೆ. ಪಿಎಫ್ ಖಾತೆ ಬಗ್ಗೆ ಯಾರೂ ಗಮನಕೊಡುವುದಿಲ್ಲ. ಪಿಎಫ್ ಪ್ರಮಾಣ ಪತ್ರವನ್ನು ನೇಮಕಾತಿ ಆದೇಶದಲ್ಲಿ ಕಡ್ಡಾಯಗೊಳಿಸಿದ್ದು ಆತಂಕ ಮೂಡಿಸಿದೆ.

-ಹೆಸರು ಹೇಳಲಿಚ್ಚಿಸದ ಅಭ್ಯರ್ಥಿ, ರಾಯಚೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ