ಸಿಂಧನೂರು; ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ತಾಲೂಕಿನ ತುರುವಿಹಾಳ, ಬಳಗಾನೂರಿನಲ್ಲಿ್ಲ ಚುನಾವಣೆ ರಂಗು ಕಾವೇರಿದೆ. ನಾಮಪತ್ರ ಸಲ್ಲಿಕೆ ಮಂಗಳವಾರ ಪೂರ್ಣಗೊಂಡಿದ್ದು, ಈಗೇನಿದ್ದರೂ ಅಖಾಡದಲ್ಲಿ ಗೆಲುವಿಗಾಗಿ ಕಸರತ್ತು ಶುರುವಾಗಿದೆ.
ತುರುವಿಹಾಳ ಪ.ಪಂ.ನ 14 ವಾರ್ಡ್ಗಳಿಗೆ ನಾಮಪತ್ರ ಸಲ್ಲಿಕೆ ಕೊನೆಯ ದಿನ ಕಾಂಗ್ರೆಸ್-17, ಬಿಜೆಪಿ-20, ಜೆಡಿಎಸ್-6, ಪಕ್ಷೇತರ-7 ಜನರು ಸೇರಿ ಒಟ್ಟು 50 ನಾಮಪತ್ರಗಳು ಸಲ್ಲಿಕೆಯಾಗಿವೆ. ತಿರಸ್ಕೃತವಾಗಬಾರದು ಎನ್ನುವ ಮುಂಜಾಗ್ರತೆಯಿಂದ ಕೆಲವು ಅಭ್ಯರ್ಥಿಗಳು ಎರಡು ಸೆಟ್ ನಾಮಪತ್ರ ಸಲ್ಲಿಸಿದ್ದಾರೆ. ಬಳಗಾನೂರು ಪ.ಪಂ.ನ 12ವಾರ್ಡ್ಗಳಿಗೆ ಕಾಂಗ್ರೆಸ್-12, ಬಿಜೆಪಿ-12, ಜೆಡಿಎಸ್-4, ಪಕ್ಷೇತರ-7 ನಾಮಪತ್ರಗಳು ಸೇರಿ ಒಟ್ಟು 35 ನಾಮಪತ್ರ ಸಲ್ಲಿಕೆಯಾಗಿವೆ. ಏ.15ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ.
ಬಹುತೇಕ ಅಂತಿಮ : ಚುನಾವಣೆ ಘೋಷಣೆಯಾದಾಗಿನಿಂದ ಎರಡೂ ಪಟ್ಟಣದಲ್ಲಿ ಚುನಾವಣೆ ಸ್ಪರ್ಧೆಗಿಳಿಯಲು ಭಾರಿ ಪೈಪೋಟಿ ಶುರುವಾಗಿತ್ತು. ಎರಡು ಕಡೆ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು ಬಹುತೇಕ ಕಣದಲ್ಲಿ ಉಳಿಯುವುದು ಅಂತಿಮವಾಗಿದೆ. ಈಗಿನಿಂದಲೇ ಪ್ರಚಾರ ಕಾರ್ಯ ಶುರುವಾಗಿದೆ. ತುರುವಿಹಾಳದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದ್ದು, ಒಂದೇ ಸಮುದಾಯದ ಇಬ್ಬರು ನಾಯಕರಿಗೆ ಪ್ರತಿಷ್ಠೆಯಾಗಿದೆ. ಮಸ್ಕಿ ವಿಧಾನ ಸಭೆ ಕ್ಷೇತ್ರಕ್ಕೆ ಎಂಎಲ್ಎ ಅಭ್ಯರ್ಥಿಯಾಗಿ ಸ್ಪರ್ಧಿಸುವ ಆಕಾಂಕ್ಷಿಗಳಿಗೆ ಈ ಭಾಗದಲ್ಲಿ ಹಿಡಿತ ಸಾಧಿಸಿದರೆ ಹೆಚ್ಚಿನ ವರವಾಗಲಿದೆ ಎನ್ನುವ ಕಾರಣಕ್ಕೆ ತುರುವಿಹಾಳ ಪಟ್ಟಣ ಪಂಚಾಯಿತಿ ಮೇಲೆ ಕಣ್ಣು ಇಡಲಾಗಿದೆ. ಜೆಡಿಎಸ್ ಪಕ್ಷದ ಪೈಪೋಟಿ ಅಷ್ಟಕ್ಕಷ್ಟೇ ಎನಿಸಿದ್ದು, ಕಾಂಗ್ರೆಸ್-ಬಿಜೆಪಿ ನಡುವೆ ನೇರ ಪೈಪೋಟಿ ಇದೆ.
ಎಲ್ಲೆಲ್ಲೂ ಪ್ರಚಾರ: ನಾಮಪತ್ರ ಸಲ್ಲಿಕೆ ಪೂರ್ಣಗೊಳ್ಳುತ್ತಿದ್ದಂತೆ ಅಭ್ಯರ್ಥಿಗಳ ಮತ ಬೇಟೆ ಕಾರ್ಯ ಚುರುಕಾಗಿದೆ. ಬಳಗಾನೂರು ಪಟ್ಟಣ ಪಂಚಾಯಿತಿಯಲ್ಲಿ ಪ್ರಚಾರದ ಬಿರುಸು ಕೊಂಚ ಕಳೆಗಟ್ಟಿದರೂ ಆರ್ಥಿಕವಾಗಿ ಬಲಿಷ್ಠರಿರುವ ವಾರ್ಡ್ಗಳಲ್ಲಿ ಭಾರಿ ಪೈಪೋಟಿ ನಡೆದಿದೆ. ಟಿಕೆಟ್ ವಂಚಿತರು ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದು, ಮತಗಳಿಕೆಗೆ ಎಲ್ಲೆಲ್ಲೂ ಪ್ರಚಾರ ಶುರು ಮಾಡಿದ್ದಾರೆ. ಇನ್ನು ತುರುವಿಹಾಳದಲ್ಲಿ ಚುನಾವಣೆ ರಂಗು ಯುವಕರಲ್ಲೂ ಉತ್ಸಾಹ ಮೂಡಿಸಿದೆ. ಫೇಸ್ಬುಕ್, ವಾಟ್ಸ್ ಆ್ಯಪ್ನ ಸಾಮಾಜಿಕ ಜಾಲ ತಾಣಗಳಲ್ಲೂ ಮತ ಬೇಡುವ ಮನವಿಗಳು ರಾರಾಜಿಸುತ್ತಿವೆ. ಸ್ಪರ್ಧೆ ಮಾಡಿದ ವಾರ್ಡ್ಗಳಲ್ಲಿ ದಿನಕ್ಕೆ ಹತ್ತು ಬಾರಿ ಸಭೆಗಳನ್ನು ಸ್ಪರ್ಧಾಳುಗಳು ನಡೆಸುತ್ತಿದ್ದಾರೆ. ಅಣ್ಣ-ಅಕ್ಕ, ಅಳಿಯ-ಮಾವ ಎಂದು ಸಂಬಂಧಗಳನ್ನು ಉಲ್ಲೇಖಿಸಿ ಮತಗಳಿಕೆಗೆ ಮುಂದಾಗಿದ್ದಾರೆ.
ವರ್ಚಸ್ಸು: ಬಿಜೆಪಿ-ಕಾಂಗ್ರೆಸ್ ಮುಖಂಡರಿಗೂ ಪಟ್ಟಣ ಪಂಚಾಯಿತಿಗಳ ಚುನಾವಣೆ ಪ್ರತಿಷ್ಠೆಯಾಗಿದೆ. ತುರುವಿಹಾಳದಲ್ಲಿ ಕಾಂಗ್ರೆಸ್ನ ಶಾಸಕ ಪ್ರತಾಪಗೌಡ ಪಾಟೀಲ್, ಬಿಜೆಪಿಯ ಮುಖಂಡ ಆರ್.ಬಸನಗೌಡ ತಮ್ಮ ಹಿಂಬಾಲಕರಿಗೆ ಸ್ಥಳೀಯ ಸಂಸ್ಥೆ ಗದ್ದುಗೆ ಹಿಡಿಯಲು ಶತಾಯ ಗತಾಯ ಪ್ರಯತ್ನ ನಡೆಸಿದ್ದರೆ, ಇಬ್ಬರು ನಾಯಕರ ಹಿಂಬಾಲಕರು ಅಷ್ಟೇ ಉತ್ಸಾಹದಿಂದ ಚುನಾವಣೆಯಲ್ಲಿ ವರ್ಚಸ್ಸು ಪ್ರದರ್ಶನ ಮಾಡುತ್ತಿದ್ದಾರೆ. ಬಳಗಾನೂರು ಪಟ್ಟಣದಲ್ಲಿ ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್ ಅವರಿಗೆ ಸ್ಥಳೀಯ ಬಿಜೆಪಿ ಯುವಕ ಮುಖಂಡರು ಎದುರಾಳಿಯಾಗಿದ್ದಾರೆ. ಎರಡು ಪಕ್ಷಗಳ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ. ಚುನಾವಣೆಗೆ ಕೇವಲ 11ದಿನಗಳು ಬಾಕಿ ಇದ್ದು, ಈಗಿನಿಂದ ಪ್ರಚಾರ ಭರಾಟೆ ಹುಬ್ಬೇರಿಸುವಂತೆ ಮಾಡಿದೆ.
ಅವಿರೋಧ ಆಯ್ಕೆ : ತಾಲೂಕಿನ ಬಳಗಾನೂರು ಪಟ್ಟಣ ಪಂಚಾಯಿತಿಯ 11ನೇ ವಾರ್ಡ್ನಿಂದ ಪಕ್ಷೇತರ ಅಭ್ಯರ್ಥಿ ಸತ್ಯವತಿ ಸೂರ್ಯಚಂದ್ರರಾವ್ ಅವಿರೋಧ ಆಯ್ಕೆಯಾಗಿದ್ದು, ಚುನಾವಣೆ ಅಧಿಕಾರಿಯ ಅಂತಿಮ ಘೋಷಣೆಯೊಂದೇ ಬಾಕಿ ಇದೆ.
-----
ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಮಂಗಳವಾರ ಕಾಂಗ್ರೆಸ್, ಬಿಜೆಪಿ ಟಿಕೆಟ್ ಪಡೆಯಲು ಹೆಚ್ಚು ಪೈಪೋಟಿ ಶುರುವಾಗಿತ್ತು. ಬಿ ಫಾರಂಗಾಗಿ ಪಕ್ಷದ ನಾಯಕರ ದುಂಬಾಲು ಬಿದ್ದಿದ್ದ ಹಲವು ಆಕಾಂಕ್ಷಿಗಳು, ಕೊನೆಯವರೆಗೂ ಟಿಕೆಟ್ಗಾಗಿ ಹೋರಾಡಿ ಕೆಲವರು ಬಿ ಫಾರಂ ಪಡೆದುಕೊಂಡರೆ, ಟಿಕೆಟ್ ವಂಚಿತರು ಪಕ್ಷೇತರರಾಗಿ ಕಣಕ್ಕೆ ಇಳಿದರು. ತುರುವಿಹಾಳದಲ್ಲಿ ಕಾಂಗ್ರೆಸ್-ಬಿಜೆಪಿ ಟಿಕೆಟ್ಗೆ ಹೆಚ್ಚಿನ ಬೇಡಿಕೆ ವ್ಯಕ್ತವಾದರೆ, ಬಳಗಾನೂರಿನಲ್ಲಿ ಕಾಂಗ್ರೆಸ್ ಟಿಕೆಟ್ಗಾಗಿ ಹೆಚ್ಚು ಜನ ಮುಗಿಬಿದ್ದರು. ಕಾಂಗ್ರೆಸ್ ಟಿಕೆಟ್ ವಂಚಿತರು ಬಿಜೆಪಿ ಬಿ ಫಾರಂ ಪಡೆದರೆ, ಜೆಡಿಎಸ್ನ ಬಿ ಫಾರಂ ಪಡೆಯಲು ಬಹುತೇಕ ಆಕಾಂಕ್ಷಿಗಳು ಹಿಂಜರಿದರು. ಜೆಡಿಎಸ್ನ ಕೆಲವು ನಾಯಕರು ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಕಾದು ನಿಂತು 'ಯಾರಿಗೆ ಟಿಕೆಟ್ ಬೇಕು ಬನ್ನಿ..' ಎನ್ನುವಂತೆ ಬಿ ಫಾರಂ ಹಂಚುತ್ತಿರುವುದು ಕಂಡು ಬಂತು.