ಆ್ಯಪ್ನಗರ

‘ಶಾಶ್ವತ ಪರಿಹಾರ ಆಗ್ರಹಿಸಿ ನಿರಂತರ ಹೋರಾಟ’

ಕೃಷ್ಣಾ ನದಿ ಪ್ರವಾಹದಿಂದ ಸಂಕಷ್ಟಕ್ಕೆ ಈಡಾದ ನಡುಗಡ್ಡೆ ಗ್ರಾಮಗಳ ಜನರಿಗೆ ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹಿಸಿ, ನಿರಂತರ ಹೋರಾಟ ನಡೆಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.

Vijaya Karnataka 10 Aug 2019, 5:00 am
ರಾಯಚೂರು : ಕೃಷ್ಣಾ ನದಿ ಪ್ರವಾಹದಿಂದ ಸಂಕಷ್ಟಕ್ಕೆ ಈಡಾದ ನಡುಗಡ್ಡೆ ಗ್ರಾಮಗಳ ಜನರಿಗೆ ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹಿಸಿ, ನಿರಂತರ ಹೋರಾಟ ನಡೆಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
Vijaya Karnataka Web constant struggle for a permanent solution
‘ಶಾಶ್ವತ ಪರಿಹಾರ ಆಗ್ರಹಿಸಿ ನಿರಂತರ ಹೋರಾಟ’


ತಾಲೂಕಿನ ಯರಗೋಡಿ ಗ್ರಾಮದ ಗಂಜಿ ಕೇಂದ್ರದಲ್ಲಿ ಶುಕ್ರವಾರ, ನೆರೆ ಸಂತ್ರಸ್ತರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ''ರಾಜ್ಯದ 14 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಕಂಡು ಬಂದಿದೆ. ಜಿಲ್ಲಾ ಮತ್ತು ತಾಲೂಕಾಡಳಿತಗಳು ಪರಿಹಾರ ಕಾರ್ಯವನ್ನು ಸಾಗರೋಪಾದಿಯಲ್ಲಿ ನಡೆಸಿವೆ. ರಸ್ತೆಗಳು, ಮನೆಗಳು ಹಾಳಾಗಿವೆ. ರಾಯಚೂರು ಜಿಲ್ಲೆಯಲ್ಲಿ ರಾಯಚೂರು, ದೇವದುರ್ಗ ಹಾಗೂ ಲಿಂಗಸುಗೂರು ತಾಲೂಕಿನ ಕೃಷ್ಣಾ ನದಿ ತೀರದ ಹಳ್ಳಿಗಳಲ್ಲಿ ಪ್ರವಾಹ ಸ್ಥಿತಿ ಗಂಭೀರವಾಗಿದೆ. ಕರಕಲಗಡ್ಡಿ, ಮಾದರಗಡ್ಡಿ ಹಾಗೂ ಹೊಂಕಮ್ಮನಗಡ್ಡಿಗಳು ನಡುಗಡ್ಡೆಗಳಾಗಿವೆ'' ಎಂದರು.

ಕಾಂಗ್ರೆಸ್‌ ಬದ್ಧ: ''ತಾಲೂಕಾಡಳಿತ ಗಂಜಿ ಕೇಂದ್ರ ಆರಂಭಿಸಿದೆ. ಮನೆ, ಕೃಷಿ ಭೂಮಿ ಸೇರಿ ಅಗತ್ಯ ಶಾಶ್ವತ ಪರಿಹಾರ ಒದಗಿಸಿದರೆ ಅಲ್ಲಿನ ನಿವಾಸಿಗಳು ನಡುಗಡ್ಡೆ ಬಿಟ್ಟು ಬರುವುದಾಗಿ ಹೇಳಿದ್ದಾರೆ. ಯರಗೋಡಿ ಅಥವಾ ಬೇರೆಡೆ ಸರಕಾರಿ ಅಥವಾ ಅರಣ್ಯ ಭೂಮಿ ಗುರುತಿಸಿ, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸಹಾಯಕ ಆಯುಕ್ತರಿಗೆ ಸೂಚಿಸಲಾಗಿದೆ. ಸರಕಾರದ ವಿರುದ್ಧ ನಿರಂತರ ಹೋರಾಟ ಮಾಡಿಯಾದರೂ ನಡುಗಡ್ಡೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ಕಾಂಗ್ರೆಸ್‌ ಬದ್ಧವಾಗಿದೆ'' ಎಂದು ತಿಳಿಸಿದರು.

''ರಾಜ್ಯದಲ್ಲಿ ಏಕಚಕ್ರಾಧಿಪತ್ಯದ ಸರಕಾರವಿದೆ. ಜಿಲ್ಲೆಯಲ್ಲಿ ಪ್ರವಾಹದ ಸಂಕಷ್ಟ ಇದ್ದರೂ ಅದನ್ನು ಕೇಳಲು ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲದಾಗಿದೆ. ಸರಕಾರ ರಚನೆಗೆ ತೋರಿದ ಆಸಕ್ತಿ, ಸಚಿವ ಸಂಪುಟ ರಚನೆಗೆ ಸಿಎಂ ಬಿ.ಎಸ್‌.ಯಡಿಯೂರಪ್ಪ ತೋರುತ್ತಿಲ್ಲ'' ಎಂದು ದೂರಿದರು.

ಈ ಸಂದರ್ಭದಲ್ಲಿ ಪ್ರವಾಹ ಪರಿಹಾರ ಕಾರ್ಯ ಅಧ್ಯಯನ ಸಮಿತಿ ಸದಸ್ಯ ಶಾಸಕ ಅಮರೇಗೌಡ ಬಯ್ಯಾಪುರ, ಎಂಎಲ್‌ಸಿ ಎನ್‌.ಎಸ್‌.ಬೋಸ್‌ರಾಜ್‌, ಶಾಸಕರಾದ ಡಿ.ಎಸ್‌.ಹೂಲಗೇರಿ, ಬಸವರಾಜ ಪಾಟೀಲ್‌ ಇಟಗಿ, ಮಾಜಿ ಎಂಪಿ ಬಿ.ವಿ.ನಾಯಕ, ಮುಖಂಡರಾದ ವಸಂತಕುಮಾರ, ಶರಣಪ್ಪ ಮೇಟಿ, ಜಿ.ಪಂ.ಸದಸ್ಯರಾದ ಸಂಗಣ್ಣ ದೇಸಾಯಿ, ಬಸನಗೌಡ ಕಂಬಳಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಭೂಪನಗೌಡ ಕರಡಕಲ್‌, ಪಾಮಯ್ಯ ಮುರಾರಿ, ತಾ.ಪಂ ಸದಸ್ಯ ವಾಹಿದ್‌ ಖಾದ್ರಿ, ಅಮ್ಜದ್‌ ಹಟ್ಟಿ, ವೆಂಕಟೇಶ ಗುತ್ತೇದಾರ, ಪರಶುರಾಮ ನಗನೂರು, ರಾಘವೇಂದ್ರ ಮಾದರ್‌ ಹಾಗೂ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ