ಆ್ಯಪ್ನಗರ

ಕೊರೊನಾ ವೈರಸ್ ಲಾಕ್‌ಡೌನ್‌ ಎಫೆಕ್ಟ್: ಥರ್ಮಲ್ ವಿದ್ಯುತ್‌ಗೆ ಮಾರ್ಕೆಟ್‌ ಇಲ್ಲ..!

ರಾಜ್ಯದ ಜಲ ವಿದ್ಯುತ್‌, ಸೌರಶಕ್ತಿ ಮತ್ತು ಪವನ ವಿದ್ಯುತ್‌ಗಳಿಂದಾಗಿ ಪ್ರಸಕ್ತ ವರ್ಷದ ಬೇಸಿಗೆ ಸರಾಗವಾಗಿ ವಿದ್ಯುತ್‌ ಸಮಸ್ಯೆಯಾಗದೇ ಕಳೆದಿದೆ. ಕೊರೊನಾ ಲಾಕ್‌ಡೌನ್‌ನಿಂದಾಗಿ ಉಷ್ಣ ವಿದ್ಯುತ್‌ಗೆ ಬೇಡಿಕೆ ಇಲ್ಲದಂತಾಗಿದೆ. ಹೀಗಾಗಿ, ನಿರ್ವಹಣೆಯ ವೆಚ್ಚ ಹೆಗಲೇರುವ ಆತಂಕ ಮೂಡಿದೆ.

Vijaya Karnataka Web 16 Jun 2020, 4:36 pm
ಜಗನ್ನಾಥ ಆರ್‌.ದೇಸಾಯಿ
Vijaya Karnataka Web coronavirus lockdown effect thermal power production reduced in raichur
ಕೊರೊನಾ ವೈರಸ್ ಲಾಕ್‌ಡೌನ್‌ ಎಫೆಕ್ಟ್: ಥರ್ಮಲ್ ವಿದ್ಯುತ್‌ಗೆ ಮಾರ್ಕೆಟ್‌ ಇಲ್ಲ..!

ರಾಯಚೂರು:
ಬೇಸಿಗೆಯ ಬಿರುಬಿಸಿಲ ದಿನಗಳಲ್ಲಿ ರಾಜ್ಯಕ್ಕೆ ಆಧಾರವಾಗಿ ನಿಲ್ಲುತ್ತಿದ್ದ ಥರ್ಮಲ್‌ ವಿದ್ಯುತ್‌ಗೆ ಕೊರೊನಾ ಲಾಕ್‌ಡೌನ್‌ನಿಂದ ಕೇಳುವವರಿಲ್ಲದ ಸ್ಥಿತಿ. ತೀವ್ರ ಕುಸಿತ ಕಂಡ ವಿದ್ಯುತ್‌ ಬಳಕೆಯಿಂದಾಗಿ ಥರ್ಮಲ್‌ ವಿದ್ಯುತ್‌ ಕೇಂದ್ರಗಳ ಉತ್ಪಾದನೆಯ ಸಾಧನೆ ಕಳೆದ ಐದು ತಿಂಗಳ ಅವಧಿಯಲ್ಲಿ ಕುಸಿತ ಕಾಣುವಂತಾಗಿದೆ.

ಕೊರೊನಾ ಲಾಕ್‌ ಡೌನ್‌ ಜಾರಿ, ಅಂಫಾನ್‌ ಹಾಗೂ ನಿಸರ್ಗ ಚಂಡಮಾರುತಗಳಿಂದ ರಾಜ್ಯದಲ್ಲಿ ಪ್ರಸಕ್ತ ವರ್ಷ ವಿದ್ಯುತ್‌ ಬೇಡಿಕೆ ತೀವ್ರ ಕುಸಿತ ಕಂಡಿದೆ. ಬೇಸಿಗೆಯಲ್ಲಿ ತಾಪಮಾನವು ಹೆಚ್ಚಳ ಕಂಡರೂ ವಿದ್ಯುತ್‌ಗೆ ಭಾರೀ ಬೇಡಿಕೆ ಬರಲಿಲ್ಲ. ಜಲ ವಿದ್ಯುತ್‌ ಮತ್ತು ಸೌರಶಕ್ತಿ ವಿದ್ಯುತ್‌ ಘಟಕಗಳು ರಾಜ್ಯದ ಬೇಡಿಕೆಯ ಭಾರವನ್ನು ಹಗುರವಾಗಿಸಿದವು. ಕೊರೊನಾ ಲಾಕ್‌ಡೌನ್‌ನಿಂದ ಥರ್ಮಲ್‌ ಘಟಕಗಳಲ್ಲಿ ಅವುಗಳ ಸಾಮರ್ಥ್ಯಕ್ಕೆ ತಕ್ಕಂತೆ ಉತ್ಪಾದನೆಗೆ ಹೆಚ್ಚಿನ ಅವಕಾಶ ಸಿಗದಂತಾಯಿತು.

​ಕೊರೊನಾ ಲಾಕ್‌ಡೌನ್‌ ಎಫೆಕ್ಟ್

ರಾಜ್ಯದಲ್ಲಿ ಬೇಸಿಗೆಯ ಆರಂಭದಲ್ಲಿಯೇ ಕೊರೊನಾ ನಿಯಂತ್ರಿಸಲು ಸರಕಾರ ಲಾಕ್‌ ಡೌನ್‌ ಜಾರಿಗೆ ತಂದಿತು. ಅದರಿಂದ ಸುಮಾರು ಒಂದೂವರೆ ತಿಂಗಳಿಗೂ ಅಧಿಕ ಅವಧಿಗೆ ವಾಣಿಜ್ಯ ಚಟುವಟಿಕೆ ಸ್ಥಗಿತಗೊಂಡಿತ್ತು. ಹೀಗಾಗಿ, ವಿದ್ಯುತ್‌ ಬಳಕೆ ಪ್ರಮಾಣ ಬಿರುಬೇಸಿಗೆಯ ದಿನಗಳಲ್ಲಿಯೇ 7 ರಿಂದ 8 ಸಾವಿರ ಮೆವ್ಯಾಗೆ ಕುಸಿಯಿತು. ದೈನಂದಿನ ವಿದ್ಯುತ್‌ ಉತ್ಪಾದನೆ ಬೇಡಿಕೆಗಿಂತ ಹೆಚ್ಚಾಗಿದ್ದರಿಂದ ಸಮಸ್ಯೆಯೇ ಕಂಡುಬರಲಿಲ್ಲ.

​ಕೈಹಿಡಿದ ಜಲ ವಿದ್ಯುತ್, ಸೌರಶಕ್ತಿ

ಜಲ ವಿದ್ಯುತ್‌ ಮತ್ತು ಸೌರಶಕ್ತಿಯಿಂದ ರಾಜ್ಯಕ್ಕೆ ಹೇರಳ ವಿದ್ಯುತ್‌ ದೊರೆಯಿತು. ಹೀಗಾಗಿ ರಾಜ್ಯದಲ್ಲಿ ಬೇಸಿಗೆಯಲ್ಲಿ ವಿದ್ಯುತ್‌ ಗೆ ಅತೀವ ಬೇಡಿಕೆಯೇ ಉಂಟಾಗಲಿಲ್ಲ. ಪರಿಣಾಮ ಥರ್ಮಲ್‌ ಘಟಕಗಳಿಗೆ ವಿಶ್ರಾಂತಿ ನೀಡಲಾಯಿತು. ಇದೀಗ ಸಾಮರ್ಥ್ಯಕ್ಕಿಂತ ತೀರಾ ಕಡಿಮೆ ಪ್ರಮಾಣದ ವಿದ್ಯುತ್‌ ಉತ್ಪಾದಿಸಿದ್ದರಿಂದ ನಿರ್ವಹಣೆ ವೆಚ್ಚ ಹೊರುವಂಥ ಪರಿಸ್ಥಿತಿ ಕೆಪಿಸಿಗೆ ಎದುರಾಗಿದೆ.

​ಪಿಎಲ್‌ಎಫ್‌ ಕುಸಿತ

ರಾಯಚೂರಿನ ಶಕ್ತಿನಗರದ ಆರ್‌ಟಿಪಿಎಸ್‌, ಯರಮರಸ್‌ನ ವೈಟಿಪಿಎಸ್‌ ಹಾಗೂ ಬಳ್ಳಾರಿಯ ಕುಡಿತಿನಿಯ ಬಿಟಿಪಿಎಸ್ ನ ಥರ್ಮಲ್‌ ವಿದ್ಯುತ್‌ ಕೇಂದ್ರಗಳಲ್ಲಿ ಪ್ರಸಕ್ತ ವರ್ಷದ ಫೆಬ್ರವರಿಯ ನಂತರದಲ್ಲಿ ವಿದ್ಯುತ್‌ಗೆ ಬೇಡಿಕೆಯೇ ಬರದೇ ಉತ್ಪಾದನೆ ನಿಯಂತ್ರಿಸಿದ್ದರಿಂದ ಪ್ಲಾಂಟ್‌ ಲೋಡ್‌ ಫ್ಯಾಕ್ಟರ್‌ ಮೇಲೆ ಪರಿಣಾಮ ಬೀರಿದೆ. ವಿದ್ಯುತ್‌ ಕೇಂದ್ರದ ಉತ್ಪಾದನೆ ಸಾಮರ್ಥ್ಯಕ್ಕೆ ಅನುಗುಣವಾಗಿ ವಿದ್ಯುತ್‌ ಉತ್ಪಾದಿಸುವುದಕ್ಕೆ ಪ್ಲಾಂಟ್‌ ಲೋಡ್‌ ಫ್ಯಾಕ್ಟರ್‌ ಎಂದು ಕರೆಯಲಾಗುತ್ತದೆ. ಬೇಡಿಕೆಯೇ ಬಾರದೆ ಹೋಗಿದ್ದರಿಂದ ಮಾರ್ಚ್ನಲ್ಲಿ ಒಟ್ಟು ಸಾಮರ್ಥ್ಯಕ್ಕೆ ಹೋಲಿಸಿದರೆ ಅತಿ ಕಡಿಮೆ ವಿದ್ಯುತ್ ಉತ್ಪಾದಿಸಲಾಗಿದೆ

​ವೆಚ್ಚದ ಹೊರೆ

ರಾಜ್ಯದ ಜಲ ವಿದ್ಯುತ್‌, ಸೌರಶಕ್ತಿ ಮತ್ತು ಪವನ ವಿದ್ಯುತ್‌ಗಳಿಂದಾಗಿ ಪ್ರಸಕ್ತ ವರ್ಷದ ಬೇಸಿಗೆ ಸರಾಗವಾಗಿ ವಿದ್ಯುತ್‌ ಸಮಸ್ಯೆಯಾಗದೇ ಕಳೆದಿದೆ. ಕೊರೊನಾ ಲಾಕ್‌ಡೌನ್‌ ಸಹ ಬಹಳಷ್ಟು ಈ ನಿಟ್ಟಿನಲ್ಲಿ ಕೆಪಿಸಿಗೆ ನೆರವಾಗಿದೆ. ಆದರೆ ಥರ್ಮಲ್‌ ವಿದ್ಯುತ್‌ ಕೇಂದ್ರಗಳಲ್ಲಿ ಉತ್ಪಾದನೆ ಇಳಿಕೆಯಾಗಿ ನಿರ್ವಹಣೆಯ ವೆಚ್ಚ ಹೆಗಲೇರುವ ಆತಂಕ ಮೂಡಿದೆ. ಸಾಮರ್ಥ್ಯಕ್ಕೆ ತಕ್ಕಂತೆ ಉತ್ಪಾದನೆ ಮಾಡುವ ಪ್ರಮಾಣದ ಮೇಲೆ ಪರಿಣಾಮ ಬೀರಿದೆ ಎಂದು ರಾಯಚೂರಿನ ಶಕ್ತಿ ನಗರದ ಇಡಿ ವೇಣುಗೋಪಾಲ್‌ ಸಹ ಸ್ಪಷ್ಟನೆ ನೀಡಿದ್ಧಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ