ಆ್ಯಪ್ನಗರ

ಶಾಸಕರ ಕಡಕ್‌ ಎಚ್ಚರಿಕೆಗೆ ಬೆಚ್ಚಿದ ಇಲಾಖೆ: ಕುಡಿವ ನೀರು ಸರಬರಾಜಿಗೆ ಕ್ರಮ

ಪಟ್ಟಣದ ಶಾಶ್ವತ ಕುಡಿವ ನೀರಿನ ಬಹುಗ್ರಾಮಗಳ ಯೋಜನೆ ಕಾಮಗಾರಿಯ ದುರಸ್ತಿಗೆ ಶಾಸಕ ಡಿ.ಎಸ್‌.ಹೂಲಗೇರಿ ಅವರು ನೀಡಿದ ಕಡಕ್‌ ಎಚ್ಚರಿಕೆಗೆ ಬೆಚ್ಚಿದ ಗ್ರಾಮೀಣ ನೀರು ಸರಬರಾಜು ಇಲಾಖೆ ಶನಿವಾರದಿಂದ ಕೆಲಸ ಆರಂಭಿಸಿದೆ.

Vijaya Karnataka 16 Sep 2018, 5:00 am
ಹಟ್ಟಿಚಿನ್ನದಗಣಿ : ಪಟ್ಟಣದ ಶಾಶ್ವತ ಕುಡಿವ ನೀರಿನ ಬಹುಗ್ರಾಮಗಳ ಯೋಜನೆ ಕಾಮಗಾರಿಯ ದುರಸ್ತಿಗೆ ಶಾಸಕ ಡಿ.ಎಸ್‌.ಹೂಲಗೇರಿ ಅವರು ನೀಡಿದ ಕಡಕ್‌ ಎಚ್ಚರಿಕೆಗೆ ಬೆಚ್ಚಿದ ಗ್ರಾಮೀಣ ನೀರು ಸರಬರಾಜು ಇಲಾಖೆ ಶನಿವಾರದಿಂದ ಕೆಲಸ ಆರಂಭಿಸಿದೆ.
Vijaya Karnataka Web RAC-RCH15HGM P3


ಪಟ್ಟಣ ಸೇರಿ ಹಟ್ಟಿ ಹೊಸೂರು, ಕೋಠಾ, ಗುರುಗುಂಟಾ, ರಾಯದುರ್ಗ ಗ್ರಾಮಗಳಿಗೆ ಶಾಶ್ವತ ಕುಡಿವ ನೀರು ಒದಗಿಸುವ ಬಹುಗ್ರಾಮಗಳ ನೀರಿನ ಯೋಜನೆ ಕಳೆದ ಒಂದೂವರೆ ತಿಂಗಳಿಂದ ಮೋಟಾರ್‌ಗಳ ದುರಸ್ತಿ ಸೇರಿ ಇತರ ಕಾರಣಗಳಿಂದ ನೀರು ಪೂರೈಕೆ ಸ್ಥಗಿತವಾಗಿದೆ.

ಏನಿದು ಯೋಜನೆ?: ಟಣಮಕಲ್‌ ಬಳಿಯ ಕೃಷ್ಣಾನದಿಯಿಂದ ಬಹುಗ್ರಾಮಗಳ ನೀರಿನ ಯೋಜನೆಗೆ ನೀರು ಹರಿಸಲಾಗುತ್ತಿದೆ. ಕಳೆದ 5 ವರ್ಷಗಳ ಹಿಂದೆ ವಿಶ್ವಬ್ಯಾಂಕಿನ ನೆರವಿನಡಿ 18 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಿರ್ವಹಿಸಲಾಗಿದೆ. 2017ರ ಡಿಸೆಂಬರ್‌ವರೆಗೆ ಗ್ರಾಮೀಣ ನೀರು ಸರಬರಾಜು ಇಲಾಖೆ ಗುತ್ತಿಗೆ ಮೂಲಕ ನಿರ್ವಹಣೆ ಮಾಡುತ್ತ ಬಂದಿದೆ. ನಿರ್ವಹಣೆ ಗುತ್ತಿಗೆ ಅವಧಿ ಮುಗಿದಿದ್ದರಿಂದ ಜಿ.ಪಂ.ನವರು ಮರು ಗುತ್ತಿಗೆ ಟೆಂಡರ್‌ ಕರೆಯದ ಪರಿಣಾಮ ಕಳೆದ ಡಿಸೆಂಬರ್‌ನಿಂದ ಯೋಜನೆ ಹಳ್ಳ ಹಿಡಿದಿದೆ. ಸಮರ್ಪಕ ನೀರು ಪೂರೈಕೆಯಾಗದೇ ಯೋಜನೆ ವ್ಯಾಪ್ತಿಯ ಗ್ರಾಮಗಳ ಜನತೆ ನೀರಿಗಾಗಿ ನಿತ್ಯ ಅಲೆದಾಡುವಂತಾಗಿದೆ. ಈ ಭಾಗದ ಜನತೆಯ ಹೋರಾಟ, ಒತ್ತಾಯದ ಮೇಲೆ ಅಧಿಕಾರಿಗಳು ಆಗಾಗ ಸ್ಪಂದಿಸಿದ್ದು ಬಿಟ್ಟರೆ, ನೀರು ಪೂರೈಕೆಗೆ ಶಾಶ್ವತ ಕ್ರಮಕೈಗೊಂಡಿರಲಿಲ್ಲ.

ಕಳೆದ ಒಂದೂವರೆ ತಿಂಗಳ ಹಿಂದೆ ಕೃಷ್ಣಾ ನದಿ ದಡದ ಪ್ರಮುಖ ಎರಡು ಮೋಟಾರ್‌ಗಳು ದುರಸ್ತಿಗೆ ಬಂದು ನೀರು ಪೂರೈಕೆ ಸಂಪೂರ್ಣವಾಗಿ ಸ್ಥಗಿತಗೊಂಡಿತು. ಸ್ಥಳೀಯ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸೇರಿ ಜನತೆ ಶಾಸಕರ ಮೇಲೆ ಪದೇ ಪದೆ ಒತ್ತಡ ಹೇರಿದರು. ಶಾಸಕರು, ಜಿ.ಪಂ.ಸಿಇಒ ಜತೆ ಮಾತನಾಡಿ, ಮೋಟಾರ್‌ಗಳ ದುರಸ್ತಿಗೆ ಸೂಚಿಸಿದರು. ಆದರೆ, ನದಿಯಲ್ಲಿ ಪ್ರವಾಹ ಬಂದಿದ್ದರಿಂದ ಮೋಟಾರ್‌ಗಳ ಅಳವಡಿಕೆ ಅಸಾಧ್ಯವಾಯಿತು. ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದರಿಂದ ಇಂದಿಗೂ ನೀರು ಪೂರೈಕೆಯಾಗುತ್ತಿಲ್ಲ.

ಶಾಸಕರ ಎಚ್ಚರಿಕೆ: ಸದ್ಯ ನದಿಯಲ್ಲಿ ನೀರಿನ ಪ್ರವಾಹ ಕಡಿಮೆಯಾಗಿದೆ. ಆದರೆ, ಜಾಕ್ವೆಲ್‌ನಲ್ಲಿ ಹೊಂಡು, ಮರಳು ಸೇರಿದ್ದರಿಂದ ನೀರು ಪೂರೈಕೆಗೆ ಅಡ್ಡಿಯಾಗಿದೆ. ಶಾಸಕರು ಪಟ್ಟಣಕ್ಕೆ ಇತ್ತೀಚೆಗೆ ಭೇಟಿನೀಡಿದ ಸಂದರ್ಭದಲ್ಲಿ ಜನತೆ ಕುಡಿವ ನೀರಿನ ಸಮಸ್ಯೆ ಬಗ್ಗೆ ಅಳಲು ತೋಡಿಕೊಂಡರು. ಶಾಸಕರು ಸಂಬಂಧಿಸಿದ ಇಲಾಖೆಯವರಿಗೆ ಕಡಕ್‌ ಎಚ್ಚರಿಕೆ ನೀಡಿದರು. ಕಾಮಗಾರಿಯ ಸ್ಥಳಕ್ಕೆ ಕೆಲಸಗಾರರನ್ನು ಶನಿವಾರ ಕಳಿಸಿರುವ ಇಲಾಖೆಯ ಅಧಿಕಾರಿಗಳು, ಜಾಕ್ವೆಲ್‌ನಲ್ಲಿ ತುಂಬಿದ ಹೊಂಡು, ಮರಳನ್ನು ಹೊರತೆಗೆದು ಮೋಟಾರ್‌ಗಳ ಅಳವಡಿಕೆ ಮುಂದಾಗಿದ್ದಾರೆ. ಸೋಮವಾರದ ವೇಳೆಗೆ ಹಟ್ಟಿ ಪಟ್ಟಣಕ್ಕೆ ನೀರು ಪೂರೈಕೆಯಾಗುವ ಭರವಸೆಯಿದೆ.

..........

ಶಾಸಕ ಡಿ.ಎಸ್‌.ಹೂಲಗೇರಿಯವರ ಎಚ್ಚರಿಕೆಯಿಂದ ಗ್ರಾಮೀಣ ನೀರು ಸರಬರಾಜು ಇಲಾಖೆ, ಹಟ್ಟಿ ಪಟ್ಟಣಕ್ಕೆ ನೀರು ಪೂರೈಸಲು ಅಗತ್ಯ ದುರಸ್ತಿ ಕೆಲಸ ಕೈಗೊಂಡಿದೆ. ನಾವೂ ಸ್ಥಳದಲ್ಲಿದ್ದು ಕಾಮಗಾರಿ ಪರಿಶೀಲಿಸುತ್ತಿದ್ದೇವೆ. ಭಾನುವಾರದಿಂದ ನೀರು ಪೂರೈಸಲಾಗುತ್ತದೆ. ಸೋಮವಾರದ ವೇಳೆಗೆ ಹಟ್ಟಿ ಪಟ್ಟಣಕ್ಕೆ ನೀರು ಬರಲಿದೆ.

-ಸೀರಾಜುದ್ದೀನ್‌, ಸದಸ್ಯ, ಪ.ಪಂ., ಹಟ್ಟಿಚಿನ್ನದಗಣಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ