ಆ್ಯಪ್ನಗರ

ವಿವಿ ಸ್ಥಾಪನೆ: ರಾಜ್ಯಪಾಲರಿಂದ ಸುಗ್ರೀವಾಜ್ಞೆ ಕಡತ ವಾಪಸ್

ಎರಡು ಜಿಲ್ಲೆಗಳನ್ನೊಳಗೊಂಡಂತೆ ರಾಯಚೂರು ಹೊಸ ವಿವಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಕಾರ್ಯಾರಂಭವಾಗುವುದು ಅನುಮಾನ. ಸರಕಾರ ಕಳಿಸಿದ್ದ ವಿವಿ ಸ್ಥಾಪನೆ ಕುರಿತ ಸುಗ್ರೀವಾಜ್ಞೆಯ ಕಡತವನ್ನು ರಾಜ್ಯಪಾಲರು ವಾಪಸ್ ಕಳಿಸಿದ್ದರಿಂದ ಇಂತಹ ಸಂಶಯ ಮೂಡಿದೆ.

Vijaya Karnataka 19 Jun 2019, 12:00 am
ಜಗನ್ನಾಥ ಆರ್.ದೇಸಾಯಿ ರಾಯಚೂರು
Vijaya Karnataka Web establishment of vv return of the supreme order file from the governor
ವಿವಿ ಸ್ಥಾಪನೆ: ರಾಜ್ಯಪಾಲರಿಂದ ಸುಗ್ರೀವಾಜ್ಞೆ ಕಡತ ವಾಪಸ್


ಎರಡು ಜಿಲ್ಲೆಗಳನ್ನೊಳಗೊಂಡಂತೆ ರಾಯಚೂರು ಹೊಸ ವಿವಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಕಾರ್ಯಾರಂಭವಾಗುವುದು ಅನುಮಾನ. ಸರಕಾರ ಕಳಿಸಿದ್ದ ವಿವಿ ಸ್ಥಾಪನೆ ಕುರಿತ ಸುಗ್ರೀವಾಜ್ಞೆಯ ಕಡತವನ್ನು ರಾಜ್ಯಪಾಲರು ವಾಪಸ್ ಕಳಿಸಿದ್ದರಿಂದ ಇಂತಹ ಸಂಶಯ ಮೂಡಿದೆ.

ಕಳೆದ ಎರಡೂವರೆ ವರ್ಷದಿಂದ ರಾಯಚೂರು ಹೊಸ ವಿವಿ ಸ್ಥಾಪನೆ ವಿಚಾರ ಸರಕಾರದ ಮಟ್ಟದಲ್ಲಿ ಚರ್ಚೆಯಲ್ಲಿದೆ. ಕಳೆದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ವಿವಿ ಸ್ಥಾಪನೆ ಪ್ರಕ್ರಿಯೆ ಕೊಂಚ ಚುರುಕು ಕಂಡಿತ್ತು. ಕಳೆದ ತಿಂಗಳು ನಡೆದ ಸಂಪುಟ ಸಭೆಯಲ್ಲಿ ರಾಯಚೂರು ಹೊಸ ವಿವಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಕಾರ್ಯಾರಂಭ ಮಾಡಲು ಸಮ್ಮತಿಸಲಾಗಿತ್ತು. ಆದರೆ, ಸದ್ಯ ರಾಜ್ಯ ಸರಕಾರದ ಆಶಯಕ್ಕೆ ಮತ್ತೆ ಹಿನ್ನಡೆಯಾಗಿದೆ.

ಏನಿದು ಹೊಸ ಸಮಸ್ಯೆ?: 2016ರಲ್ಲಿ ರಾಯಚೂರಿನಲ್ಲಿ ನಡೆದಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರಾಯಚೂರು ಮತ್ತು ಯಾದಗಿರಿ ಒಳಗೊಂಡು ಹೊಸ ವಿವಿ ಸ್ಥಾಪನೆ ವಿಚಾರಕ್ಕೆ ಚಾಲನೆ ಸಿಕ್ಕಿತ್ತು. ಗುಲ್ಬರ್ಗಾ ವಿವಿ ನಿವೃತ್ತ ಕುಲಪತಿ ಪ್ರೊ.ಕುಟಿನ್ಹೋ ನೇತೃತ್ವದ ತಂಡ ತಾಲೂಕಿನ ಯರಗೇರಾದಲ್ಲಿರುವ ಪಿಜಿ ಸೆಂಟರ್ ಗೆ ಭೇಟಿ ನೀಡಿ ಹೊಸ ವಿವಿ ಸ್ಥಾಪನೆಗೆ ಸಂಬಂಧಿಸಿದ ಸಾಧಕ ಬಾಧಕಗಳ ಬಗ್ಗೆ ಮಾಹಿತಿ ಕಲೆ ಹಾಕಿತು. ಆನಂತರದಲ್ಲಿ ನಿಧಾನಗತಿ ಕಾಣಿಸಿತು. ಜನಪ್ರತಿನಿಧಿಗಳ ನಿರಾಸಕ್ತಿ ಕಾಣಿಸಿತು. ವಿವಿ ಸ್ಥಾಪನೆ ಮುಂದಕ್ಕೆ ಹೋಯಿತು. ಕಳೆದ ಎರಡೂವರೆ ವರ್ಷದಿಂದ ವಿವಿ ಸ್ಥಾಪನೆ ಚರ್ಚೆ ಅಂತಿಮ ರೂಪಕ್ಕೆ ಬರುವ ಹೊತ್ತಿನಲ್ಲಿ ಹಿನ್ನಡೆ ಕಾಡಿದೆ. ಕಳೆದ ತಿಂಗಳಾಂತ್ಯ ರಾಜ್ಯ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ರಾಯಚೂರು ಹೊಸ ವಿವಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಕಾರ್ಯಾರಂಭವಾಗಬೇಕಿತ್ತು. ವಿವಿ ಆರಂಭಗೊಳ್ಳಲಿದೆ ಎಂದು ಅನೇಕ ವಿದ್ಯಾರ್ಥಿಗಳು ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ್ದು, ತೊಂದರೆಗೆ ಸಿಲುಕುವಂತಾಗಿದೆ.

ಸುಗ್ರೀವಾಜ್ಞೆ ವಾಪಸ್: ಸಚಿವ ಸಂಪುಟ ಸಭೆಯ ನಂತರದಲ್ಲಿ ಸರಕಾರ ರಾಜ್ಯಪಾಲರಿಗೆ ಸುಗ್ರೀವಾಜ್ಞೆ ಕಡತ ಕಳಿಸಿಕೊಟ್ಟಿತು. ತರಾತುರಿಯಲ್ಲಿ ಸರಕಾರ ವಿವಿ ಸ್ಥಾಪನೆಗೆ ಮುಂದಾಗಿದ್ದನ್ನು ಕಂಡ ರಾಜ್ಯಪಾಲರು ವಿವಿ ಸ್ಥಾಪನೆಗೆ ಇಷ್ಟೇಕೆ ಅವಸರ ಎಂದು ಪ್ರಶ್ನಿಸಿ ಕಡತ ಮರಳಿಸಿದ್ದಾರೆ. ಆ ಮೂಲಕ ಹೊಸ ತಲೆನೋವು ತಂದೊಡ್ಡಿದ್ದಾರೆ. ರಾಜ್ಯಪಾಲರ ಕಚೇರಿಯಿಂದ ಕಡತ ಮರಳುತ್ತಿದ್ದಂತೆ ಉಭಯ ಜಿಲ್ಲೆಗಳ ಶಿಕ್ಷಣ ಪ್ರೇಮಿಗಳಲ್ಲಿ ಮತ್ತೆ ಅಸಮಾಧಾನ ಮೂಡಿದೆ. ವಿವಿ ಸ್ಥಾಪನೆಯಾಗುವ ಉದ್ದೇಶದಿಂದ ವರ್ಷದ ಹಿಂದೆ ವಿಶೇಷಾಧಿಕಾರಿಯನ್ನು ಸರಕಾರ ನೇಮಿಸಿದ್ದು, ಅವರಿಗೂ ಸರಕಾರ ಕೆಲಸವಿಲ್ಲದಂತೆ ಮಾಡಿದೆ. ಕೇವಲ ಹೊಸ ವಿವಿಗೆ ಸಂಬಂಧಿಸಿ ವಿಶೇಷಾಧಿಕಾರಿ ಪ್ರೊ.ಮುಜಫರ್ ಅಸ್ಸಾದಿ ಅವರಿಂದ ಸಲಹೆ ಪಡೆಯಲಾಗುತ್ತಿದೆ. ಅವುಗಳ ಜಾರಿಗೆ ಪೂರಕ ಅನುದಾನವೂ ಇಲ್ಲದಂತಾಗಿದೆ.

ಮರಳಿ ಪ್ರಯತ್ನ: ಈ ನಡುವೆ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ವಿವಿ ಸ್ಥಾಪನೆಯ ತುರ್ತು ಅವಶ್ಯಕತೆಯನ್ನು ಮನವರಿಕೆ ಮಾಡಿಕೊಡುವಂಥ ರೀತಿಯಲ್ಲಿ ರಾಜ್ಯಪಾಲರಿಗೆ ಪತ್ರ ಸಿದ್ಧಗೊಳಿಸಲು ಸೂಚಿಸಲಾಗಿದೆ ಎಂದು ಮೂಲಗಳು ಹೇಳಿವೆ. ಶೀಘ್ರವೇ ಉನ್ನತ ಶಿಕ್ಷಣ ಸಚಿವರೊಂದಿಗೆ ಎರಡೂ ಜಿಲ್ಲೆಗಳ ಉಸ್ತುವಾರಿ ಸಚಿವರು ರಾಜ್ಯಪಾಲರ ಬಳಿ ನಿಯೋಗದಲ್ಲಿ ತೆರಳಿ ವಿವಿ ಸ್ಥಾಪನೆಯ ಅವಶ್ಯಕತೆ ಮತ್ತು ಉದ್ದೇಶದ ಬಗ್ಗೆ ವಿವರಿಸಿ ಮನವರಿಕೆ ಮಾಡಿಕೊಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ಗೊತ್ತಾಗಿದೆ. ಆದರೆ, ಸದ್ಯದ ನಿರ್ಧಾರ ವಿವಿ ಸ್ಥ್ಥಾಪನೆಯಾಗುವ ಹುಮ್ಮಸ್ಸಿನಿಂದ ಸ್ನಾತಕೋತ್ತರ ವಿವಿಧ ತರಗತಿಗಳಿಗೆ ಪ್ರವೇಶಕ್ಕೆ ಮುಂದಾಗಿದ್ದ ವಿದ್ಯಾರ್ಥಿಗಳನ್ನು ಗೊಂದಲಕ್ಕೆ ಸಿಲುಕಿಸಿದೆ.


..

ರಾಯಚೂರು ವಿವಿ ಸ್ಥಾಪನೆ ನಿಟ್ಟಿನಲ್ಲಿ ಸರಕಾರ ಮತ್ತು ಜಿಲ್ಲೆಯ ಪ್ರತಿನಿಧಿಗಳು ಗಂಭೀರವಾಗಿ ಪ್ರಯತ್ನಿಸುತ್ತಿಲ್ಲ. ಅದರಿಂದಾಗಿಯೇ ವಿವಿ ಸ್ಥಾಪನೆ ಸಾಕಷ್ಟು ವಿಳಂಬವಾಗಿದೆ. ಇದೀಗ ರಾಜ್ಯಪಾಲರು ಕಡತ ಮರಳಿಸಿರುವುದು ಹೊಸ ಸಮಸ್ಯೆ ತಂದೊಡ್ಡಿದೆ.

-ಡಾ.ರಝಾಕ್ ಉಸ್ತಾದ್, ರಾಜ್ಯ ಉಪಾಧ್ಯಕ್ಷರು, ಹೈ.ಕ.ಹೋರಾಟ ಸಮಿತಿ, ರಾಯಚೂರು

...

ರಾಜ್ಯಪಾಲರು ಕಡತ ಮರಳಿಸಿರುವುದು ಗಮನಕ್ಕೆ ಬಂದಿದೆ. ಉನ್ನತ ಶಿಕ್ಷಣ ಸಚಿವರ ಜತೆ ಈಗಾಗಲೇ ಚರ್ಚಿಸಿದ್ದು, ಶೀಘ್ರ ವಿವಿ ಸ್ಥಾಪನೆಯ ಅವಶ್ಯಕತೆಯ ಬಗ್ಗೆ ರಾಜ್ಯಪಾಲರನ್ನು ಭೇಟಿ ಮಾಡಿ ವಿವರಿಸಲಾಗುತ್ತದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ವಿವಿ ಕಾರ್ಯಾರಂಭಿಸುವುದರಲ್ಲಿ ಸಂದೇಹ ಬೇಡ.

-ವೆಂಕಟರಾವ್ ನಾಡಗೌಡ, ಜಿಲ್ಲಾ ಉಸ್ತುವಾರಿ ಸಚಿವರು, ರಾಯಚೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ