ಆ್ಯಪ್ನಗರ

ಕರೇಗುಡ್ಡ ನಿವಾಸಿಗಳಲ್ಲಿ ಗರಿಗೆದರಿದ ನಿರೀಕ್ಷೆ

ತುಂಗಭದ್ರಾ ಎಡದಂಡೆಯಿಂದ ನೀರು ದೊರೆಯದಿದ್ದರೂ ಈ ಗ್ರಾಮ, ನೀರಾವರಿ ಎಂದೇ ಕಂದಾಯ ಇಲಾಖೆಗಳಲ್ಲಿ ಗುರುತಿಸಿಕೊಂಡಿದೆ. ಬೇಸಿಗೆ ಬಂದರೆ ಕುಡಿಯುವ ನೀರಿಗೆ ತತ್ವಾರ. ಹಳ್ಳದ ಒರತೆಯ ನೀರೇ ಗತಿ. ದಿನಕ್ಕೆರಡು ಬಾರಿ ಮಾತ್ರ ಬಂದು ಹೋಗುವ ಸಾರಿಗೆ ಸಂಸ್ಥೆಯ ಬಸ್. ಇನ್ನುಳಿದ ಸಮಯದಲ್ಲಿ ಮುಖ್ಯ ರಸ್ತೆಗೆ ಕಾಲ್ನಡಿಗೆ ಅನಿವಾರ್ಯ. ವಿದ್ಯುತ್ ಕಡಿತ ನಿರಂತರ. ಶಾಲೆಯ ಸ್ಥಿತಿ ಅಧೋಗತಿ.

Vijaya Karnataka 11 Jun 2019, 12:00 am
ಜಗನ್ನಾಥ ಆರ್.ದೇಸಾಯಿ ರಾಯಚೂರು
Vijaya Karnataka Web RAC-RCH10JD02


ತುಂಗಭದ್ರಾ ಎಡದಂಡೆಯಿಂದ ನೀರು ದೊರೆಯದಿದ್ದರೂ ಈ ಗ್ರಾಮ, ನೀರಾವರಿ ಎಂದೇ ಕಂದಾಯ ಇಲಾಖೆಗಳಲ್ಲಿ ಗುರುತಿಸಿಕೊಂಡಿದೆ. ಬೇಸಿಗೆ ಬಂದರೆ ಕುಡಿಯುವ ನೀರಿಗೆ ತತ್ವಾರ. ಹಳ್ಳದ ಒರತೆಯ ನೀರೇ ಗತಿ. ದಿನಕ್ಕೆರಡು ಬಾರಿ ಮಾತ್ರ ಬಂದು ಹೋಗುವ ಸಾರಿಗೆ ಸಂಸ್ಥೆಯ ಬಸ್. ಇನ್ನುಳಿದ ಸಮಯದಲ್ಲಿ ಮುಖ್ಯ ರಸ್ತೆಗೆ ಕಾಲ್ನಡಿಗೆ ಅನಿವಾರ್ಯ. ವಿದ್ಯುತ್ ಕಡಿತ ನಿರಂತರ. ಶಾಲೆಯ ಸ್ಥಿತಿ ಅಧೋಗತಿ.

ಇದು, ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯಕ್ಕೆಂದು ಆಯ್ಕೆಮಾಡಿಕೊಂಡಿರುವ ಮಾನ್ವಿ ತಾಲೂಕಿನ ನಕ್ಕುಂದಿ ಗ್ರಾ.ಪಂ. ವ್ಯಾಪ್ತಿಯ ಕರೇಗುಡ್ಡ ಗ್ರಾಮದ ಸದ್ಯದ ಚಿತ್ರಣ.

ಜೂ.28ರಂದು ಸಿಎಂ ಗ್ರಾಮ ವಾಸ್ತವ್ಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕರೇಗುಡ್ಡ ಗ್ರಾಮದಲ್ಲಿ ಭರದ ಸಿದ್ಧತೆ ನಡೆಸಿದೆ. ಸಿಎಂ ವಾಸ್ತವ್ಯದಿಂದ ತಮ್ಮ ಕಷ್ಟದ ದಿನಗಳು ಕಳೆಯಲಿವೆ ಎಂಬುದು ಗ್ರಾಮಸ್ಥರ ನಂಬಿಕೆಯಾಗಿದೆ. ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿದ್ದು, 1ರಿಂದ 7ನೇ ತರಗತಿಯವರೆಗೆ ಬೋಧಿಸಲಾಗುತ್ತಿದೆ. ಸದ್ಯ ಕೇವಲ ಮೂವರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಶಾಲೆಯಲ್ಲಿ ಕೊಠಡಿ ಕೊರತೆಯಿದೆ. ಒಟ್ಟು ಏಳಲ್ಲಿ ಐದು ಕೊಠಡಿಗಳು ಮಾತ್ರ ತರಗತಿ ನಡೆಸಲು ಯೋಗ್ಯವಾಗಿವೆ. ಇನ್ನೆರಡು ಶಿಥಿಲಾವಸ್ಥೆಯಲ್ಲಿವೆ.

ಶಿಕ್ಷಕರ ಕೊರತೆ ಇರುವುದರಿಂದ ಇನ್ನಿಬ್ಬರು ಶಿಕ್ಷಕರನ್ನು ನಿಯೋಜಿಸುವ ಭರವಸೆ ಸಿಕ್ಕಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. 1998ರಲ್ಲಿ ಅರ್ಧಮರ್ಧ ನಿರ್ಮಿಸಿದ ಒಂದು ಶಾಲಾ ಕೊಠಡಿಯೂ ಇದೆ. ಸದ್ಯ ಸುಸ್ಥಿತಿಯಲ್ಲಿವೆ ಎಂದು ಹೇಳಲಾಗುತ್ತಿರುವ ಒಂದು ಶಾಲಾ ಕೊಠಡಿಯ ಚಾವಣಿಯಿಂದ ಸಿಮೆಂಟ್ ಪದರು ಕಿತ್ತಿದ್ದು ಸರಳುಗಳು ಹೊರಗೆ ಕಾಣುತ್ತಿವೆ.

ಕಾಲ್ನಡಿಗೆ ಅನಿವಾರ್ಯ: ಗ್ರಾಮವು ಮಾನ್ವಿ-ಸಿಂಧನೂರು ಮುಖ್ಯ ರಸ್ತೆಯಿಂದ ಸುಮಾರು ಐದು ಕಿ.ಮೀ. ದೂರದಲ್ಲಿದೆ. ರಸ್ತೆ ಚೆನ್ನಾಗಿದೆ. ಆದರೂ ಸಾರಿಗೆ ಸಂಸ್ಥೆಯ ಬಸ್ ದಿನಕ್ಕೆ ಮೂರು ಸಲ ಬಂದು ಹೋಗುತ್ತದೆ. ಆನಂತರ ಗ್ರಾಮಕ್ಕೆ ತಲುಪಬಯಸುವವರು ಖಾಸಗಿ ಆಟೊಗಳಲ್ಲಿಯೇ ಸಂಚರಿಸಬೇಕು. ಇಲ್ಲವೇ ಬ್ಯಾಗವಾಟಕ್ಕೆ ಸಾಗುವ ಮುಖ್ಯ ರಸ್ತೆಯ ಕ್ರಾಸ್‌ನಲ್ಲಿ ಇಳಿದು ಕಾಲ್ನಡಿಗೆಯಲ್ಲಿ ಊರು ಸೇರಬೇಕು.

ಗ್ರಾಮದಲ್ಲಿ ಪ್ರೌಢಶಾಲೆಯಿಲ್ಲ. ಹೀಗಾಗಿ ಗ್ರಾಮದ ಮಕ್ಕಳು ಬ್ಯಾಗವಾಟಕ್ಕೆ ಮುಂದಿನ ಶಿಕ್ಷಣಕ್ಕೆ ತೆರಳುತ್ತಾರೆ. ಗ್ರಾಮದಲ್ಲಿ 1300 ಮತದಾರರಿದ್ದು, ಮೂರರಿಂದ ನಾಲ್ಕು ಸಾವಿರ ನಿವಾಸಿಗಳಿದ್ದಾರೆ. ಇವರಲ್ಲಿ ಬಹುತೇಕರು ಬೇಸಿಗೆ ಬಂದರೆ ಮಹಾನಗರಗಳಿಗೆ ಗುಳೆ ಹೋಗುವುದು ರೂಢಿ. ಗ್ರಾಮದಲ್ಲಿ ಕೊಳವೆಬಾವಿಯ ಮೂಲಕವೇ ನೀರೊದಗಿಸಲಾಗುತ್ತದೆ. ವಿದ್ಯುತ್ ಕೈಕೊಡುವುದರಿಂದ ಸರ್ವಕಾಲಕ್ಕೂ ನೀರಿನ ಅಭಾವವಿದೆ. ಬೇಸಿಗೆಯ ದಿನಗಳಲ್ಲಿ ಗ್ರಾಮದ ಬಳಿ ಹರಿಯುವ ಹಳ್ಳದ ನೀರೇ ಗತಿ ಎಂಬಂತಿದೆ.

ಸ್ಮಶಾನಕ್ಕೆ ಜಾಗದ ಕೊರತೆ: ಗ್ರಾಮದಲ್ಲಿ ಅಂತ್ಯಸಂಸ್ಕಾರ ಕೈಗೊಳ್ಳಲು ಸೂಕ್ತ ಜಾಗವಿಲ್ಲ ಎಂಬ ಕೊರಗು ಗ್ರಾಮಸ್ಥರದ್ದಾಗಿದೆ. ಗ್ರಾಮ ಹೊರವಲಯದ ಹಳ್ಳದ ದಂಡೆಯಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಅಂತ್ಯಸಂಸ್ಕಾರವನ್ನೂ ಗೌರವಯುತವಾಗಿ ಕೈಗೊಳ್ಳಲು ಅವಕಾಶವಿಲ್ಲ ಎಂಬ ನೋವು ಗ್ರಾಮಸ್ಥರನ್ನು ಕಾಡುತ್ತಿದೆ.

ಗ್ರಾಮವು ತುಂಗಭದ್ರಾ ನೀರಾವರಿ ಯೋಜನೆಯ ಎಡದಂಡೆ ಕಾಲುವೆ ಮೂಲಕ ನಕ್ಕುಂದಿ, ಬ್ಯಾಗವಾಟ್ ಕಾಲುವೆಯ ಮೂಲಕ ನೀರು ಪಡೆಯಬೇಕು. ನೀರು ಪಡೆಯಲು 8 ದಿನ ಕಾಲುವೆಯ ಮೇಲೆ ಕಾದು ಕೂತು ತಮ್ಮ ಊರಿಗೆ ನೀರು ಹರಿಸಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಕಾಲುವೆ ಕಾವಲು ಕಾಯುವ ಕೆಲಸ ಬೇಡವೇ ಬೇಡ ಎಂದು ಕಳೆದ ಕೆಲವು ವರ್ಷದಿಂದ ನೀರಾವರಿಯಿಂದಲೇ ಗ್ರಾಮದ ರೈತರು ದೂರವುಳಿದಿದ್ದಾರೆ. ಆದರೆ, ಕಂದಾಯ ದಾಖಲೆಗಳಲ್ಲಿ ನೀರಾವರಿ ಎಂದು ದಾಖಲಾಗಿರುವುದರಿಂದ ಬೆಳೆ ನಷ್ಟ ಪರಿಹಾರ ಸಿಗದೇ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.

ಗ್ರಾಮದ ಅಲ್ಲಲ್ಲಿ ಅರೆಬರೆ ಸಿಸಿ ರಸ್ತೆ ನಿರ್ಮಾಣಮಾಡಿ ಕೈಬಿಡಲಾಗಿದೆ. ಕುಡಿಯುವ ನೀರಿನ ನೀರೆತ್ತುವ ಮೋಟಾರ್ ಸುಟ್ಟರೆ ಮೂರು ದಿನ ನೀರಿಲ್ಲದ ಸ್ಥಿತಿ. ಗ್ರಾಮದಲ್ಲಿ ಆರೋಗ್ಯ ಕೇಂದ್ರವಿಲ್ಲ. ಆರೋಗ್ಯ ಸಹಾಯಕಿಯರೇ ಆಗಾಗ್ಗೆ ಗ್ರಾಮಕ್ಕೆ ಭೇಟಿ ನೀಡಿ ವಾಪಸಾಗುತ್ತಾರೆ.

............

ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ. ಬಸ್‌ಗಳು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಸಿಸಿ ರಸ್ತೆಗಳನ್ನು ಅರೆಬರೆಯಾಗಿ ಮಾಡಿ ಕೈಬಿಡಲಾಗಿದೆ. ಸಿಎಂ ಗ್ರಾಮಕ್ಕೆ ಬರುತ್ತಿರುವುದು ಸಂತಸ ತಂದಿದೆ. ಗ್ರಾಮದ ಸಮಸ್ಯೆಗಳು ಪರಿಹಾರ ಕಾಣುವ ನಿರೀಕ್ಷೆಯಿದೆ.

-ಮಹಾಂತಯ್ಯ, ಗ್ರಾಮಸ್ಥರು, ಕರೇಗುಡ್ಡ

.............

ಕುಡಿಯುವ ನೀರಿನ ಸಮಸ್ಯೆಯನ್ನು ತುರ್ತಾಗಿ ಪರಿಹರಿಸುವ ಕಾರ್ಯವನ್ನು ಅಧಿಕಾರಿಗಳು ಮಾಡುತ್ತಿಲ್ಲ. ಗ್ರಾಮವು ನೀರಾವರಿ ಎಂದು ದಾಖಲೆಗಳಲ್ಲಿದೆ. ಆದರೆ, ಹನಿ ನೀರು ಗದ್ದೆಗಳಿಗೆ ಹರಿಯುತ್ತಿಲ್ಲ. ಇದೇ ಕಾರಣಕ್ಕೆ ರೈತರಿಗೆ ಬೆಳೆನಷ್ಟ ಪರಿಹಾರ ಸಿಗುತ್ತಿಲ್ಲ.

-ಹಂಪಯ್ಯ, ರೈತರು, ಕರೇಗುಡ್ಡ

...........
ಕರೇಗುಡ್ಡ ಗ್ರಾಮದಲ್ಲಿ ಸಿಎಂ ಗ್ರಾಮ ವಾಸ್ತವ್ಯ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆಗೆ ಚಾಲನೆ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗ್ರಾಮ ಎದುರಿಸುತ್ತಿರುವ ಸಮಸ್ಯೆಯ ಪಟ್ಟಿ ಮಾಡಲಾಗಿದೆ. ಪರಿಹಾರ ಒದಗಿಸುವ ಕ್ರಮ ಕೈಗೊಳ್ಳಲಾಗುತ್ತದೆ.

-ಜಿ.ಕುಮಾರನಾಯಕ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ಬೆಂಗಳೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ