ಆ್ಯಪ್ನಗರ

ನಕಲಿ ರಾಯಲ್ಟಿ: 7 ಆರೋಪಿಗಳ ಬಂಧನ

ನಕಲಿ ರಾಯಲ್ಟಿ ಪರವಾನಗಿ ತಯಾರಿಸಿ, ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಜಾಲವನ್ನು ಜಿಲ್ಲಾ ಪೊಲೀಸ್‌ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜಂಟಿ ಕಾರ್ಯಾಚರಣೆ ಮೂಲಕ ಭೇದಿಸಲಾಗಿದ್ದು, ಏಳು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಡಿ.ಕಿಶೋರ್‌ಬಾಬು ಹೇಳಿದರು.

Vijaya Karnataka 10 Dec 2018, 4:53 pm
ರಾಯಚೂರು/ದೇವದುರ್ಗ : ನಕಲಿ ರಾಯಲ್ಟಿ ಪರವಾನಗಿ ತಯಾರಿಸಿ, ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಜಾಲವನ್ನು ಜಿಲ್ಲಾ ಪೊಲೀಸ್‌ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜಂಟಿ ಕಾರ್ಯಾಚರಣೆ ಮೂಲಕ ಭೇದಿಸಲಾಗಿದ್ದು, ಏಳು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ಡಿ.ಕಿಶೋರ್‌ಬಾಬು ಹೇಳಿದರು.
Vijaya Karnataka Web fake royalty 7 accused arrested
ನಕಲಿ ರಾಯಲ್ಟಿ: 7 ಆರೋಪಿಗಳ ಬಂಧನ


ನಗರದ ಎಸ್‌ಪಿ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ''ಸಿಂಧನೂರು ತಾಲೂಕಿನ ಅಲಬನೂರು ಬ್ಲಾಕ್‌ನಿಂದ ಮರಳು ಸಾಗಿಸುವುದಾಗಿ ದಾಖಲೆ ಸೃಷ್ಟಿಸಲಾಗಿದೆ. ಆದರೆ, ಅಲಬನೂರು ಬ್ಲಾಕ್‌ ಮುಚ್ಚಿ ಒಂದು ತಿಂಗಳು ಕಳೆದಿದ್ದರಿಂದ ಅನುಮಾನ ಬಂದು ತನಿಖೆ ನಡೆಸಿದಾಗ ಈ ಅಕ್ರಮ ಜಾಲ ಪತ್ತೆಯಾಗಿದೆ. ಯಾದಗಿರಿ ಜಿಲ್ಲೆ ಶಹಾಪುರ ಮೂಲದ ಲಾರಿ ಚಾಲಕ ನಿಂಗಯ್ಯ, ಮೊದಲನೇ ಸಹಚರ ದೇವದುರ್ಗ ಮೂಲದ ಖಾಜಾಹುಸೇನ್‌, ನಕಲಿ ರಾಯಲ್ಟಿ ತಯಾರಿಸುತ್ತಿದ್ದ ಕಿಂಗ್‌ಪಿನ್‌ ರಾಮಕೃಷ್ಣ, ಬಾಗಲಕೋಟ ಜಿಲ್ಲೆ ಇಳಕಲ್‌ ಮೂಲದ ಅಂದಾನಯ್ಯ, ಶರಣೇಗೌಡ, ದೇವದುರ್ಗದ ಹನುಮಂತ, ಮೌನೇಶ ಅವರನ್ನು ಬಂಧಿಸಲಾಗಿದೆ'' ಎಂದರು.

ಪ್ರಕರಣದ ವಿವರ: ''ಯಾದಗಿರಿ ಜಿಲ್ಲೆ ಶಹಾಪುರ ಮೂಲದ ಲಾರಿಯನ್ನು ದೇವದುರ್ಗ ತಾಲೂಕಿನ ಹೂವಿನಹೆಡಗಿ ಬಳಿ ತಡೆದು ವಿಚಾರಣೆ ಮಾಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ನಗರದ ಶರಣೇಗೌಡ, ಇಳಕಲ್‌ನ ದಾನಯ್ಯ ಮಧ್ಯಸ್ಥಿಕೆಯಲ್ಲಿ ಮಾನ್ವಿಯ ರಾಮಕೃಷ್ಣ ಅವರ ಮನೆಯಲ್ಲಿ ನಕಲಿ ರಾಯಲ್ಟಿ ಪರವಾನಗಿಗಳನ್ನು ಮುದ್ರಿಸಲಾಗುತ್ತಿತ್ತು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ನೀಡುವಂಥ ಮಾದರಿಯಲ್ಲಿಯೇ ಈ ನಕಲಿ ಪರವಾನಗಿಗಳನ್ನು ಮುದ್ರಿಸಲಾಗಿದೆ. ದೇವದುರ್ಗದ ಹನುಮಂತ, ಮೌನೇಶ ವಿಶ್ವಕರ್ಮ ಅವರ ಮೂಲಕ ಅನಧಿಕೃತ ಮರಳು ಸಾಗಿಸಲು ಈ ಪರವಾನಗಿಗಳನ್ನು ಬಳಸುತ್ತಿದ್ದರು'' ಎಂದು ವಿವರಿಸಿದರು.

''ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿಶ್ವನಾಥ, ದೇವದುರ್ಗ ಸಿಪಿಐ ಸಂಜೀವಕುಮಾರ್‌ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿತ್ತು. ಕೃತ್ಯಕ್ಕೆ ಬಳಸುತ್ತಿದ್ದ ಲ್ಯಾಪ್‌ಟಾಪ್‌, ಪ್ರಿಂಟರ್‌, ಪೇಪರ್‌, ಬಣ್ಣ ಸೇರಿ ಇತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಕಳೆದ ಹಲವು ದಿನಗಳಿಂದ ನಕಲಿ ರಾಯಲ್ಟಿ ಪರವಾನಗಿ ತಯಾರಿಸುವ ಕೃತ್ಯ ನಡೆದಿತ್ತು. ಲಿಂಗಸೂಗೂರು ಡಿಎಸ್‌ಪಿ ನೇತೃತ್ವದಲ್ಲಿ ತಂಡ ರಚಿಸಿ, ತನಿಖೆ ಕೈಗೊಳ್ಳಲಾಗಿದೆ. ಪೊಲೀಸರು ಹಾಗೂ ಗಣಿ ಇಲಾಖೆ ಅಧಿಕಾರಿಗಳಿಗೆ ನಗದು ಬಹುಮಾನ ಘೋಷಿಸಲಾಗಿದೆ'' ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌.ಬಿ.ಪಾಟೀಲ್‌, ಲಿಂಗಸೂಗೂರು ಡಿಎಸ್‌ಪಿ ಎಸ್‌.ಎಚ್‌.ಸುಬೇದಾರ್‌ ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ