ಆ್ಯಪ್ನಗರ

ಕೊಪ್ಪಳ-ರಾಯಚೂರು ಜಿಲ್ಲೆಗಳ ರೈತರ ಪಕ್ಷಾತೀತ ಹೋರಾಟದ ಸಭೆ

ತುಂಗಭದ್ರಾ ಜಲಾಶಯ ಭಾಗದಲ್ಲಿ ನೀರಿನ ಪ್ರಮಾಣ ಕುಸಿತ, ಅನಧಿಕೃತವಾಗಿ ಆಂಧ್ರ ಹಾಗೂ ಬಲದಂಡೆಗೆ ನೀರು ಪೂರೈಕೆ, ಎಡದಂಡೆ ನಾಲೆ ರೈತರಿಗೆ ನೀರಿಲ್ಲದೆ ಇರುವಂತಹ ಧಾವಂತ ಪರಿಸ್ಥಿತಿ ಎದುರಿಸಲು ಸಜ್ಜಾಗುವುದು, ಸಮನಾಂತರ ಜಲಾಶಯ ನಿರ್ಮಾಣ ಮತ್ತು ಜಲಾಶಯ ಟೇಲೆಂಡ್‌ ಆಗುವ ಭೀತಿ ತಪ್ಪಿಸುವ ನಿಟ್ಟಿನಲ್ಲಿ ಹೋರಾಟ ರೂಪಿಸಬೇಕು ಎಂಬ ಒಕ್ಕೊರಲ ಧ್ವನಿ ಸೋಮವಾರ ಮೊಳಗಿತು.

Vijaya Karnataka 25 Jun 2019, 5:00 am
ಸಿಂಧನೂರು : ತುಂಗಭದ್ರಾ ಜಲಾಶಯ ಭಾಗದಲ್ಲಿ ನೀರಿನ ಪ್ರಮಾಣ ಕುಸಿತ, ಅನಧಿಕೃತವಾಗಿ ಆಂಧ್ರ ಹಾಗೂ ಬಲದಂಡೆಗೆ ನೀರು ಪೂರೈಕೆ, ಎಡದಂಡೆ ನಾಲೆ ರೈತರಿಗೆ ನೀರಿಲ್ಲದೆ ಇರುವಂತಹ ಧಾವಂತ ಪರಿಸ್ಥಿತಿ ಎದುರಿಸಲು ಸಜ್ಜಾಗುವುದು, ಸಮನಾಂತರ ಜಲಾಶಯ ನಿರ್ಮಾಣ ಮತ್ತು ಜಲಾಶಯ ಟೇಲೆಂಡ್‌ ಆಗುವ ಭೀತಿ ತಪ್ಪಿಸುವ ನಿಟ್ಟಿನಲ್ಲಿ ಹೋರಾಟ ರೂಪಿಸಬೇಕು ಎಂಬ ಒಕ್ಕೊರಲ ಧ್ವನಿ ಸೋಮವಾರ ಮೊಳಗಿತು.
Vijaya Karnataka Web RAC-RCH24SND3


ನಗರದ ಸ್ತ್ರೀಶಕ್ತಿ ಭವನದಲ್ಲಿ ನಡೆದ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಜನರ ಘನತೆಯ ಬದುಕಿಗಾಗಿ ಪಕ್ಷಾತೀತ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಮಾಜಿ ಸಂಸದ, ಶಾಸಕರು ಹಾಗೂ ರೈತರ ಮುಖಂಡರೆಲ್ಲರೂ ತುಂಗಭದ್ರಾ ಜಲಾಶಯದ ಸಮಸ್ಯೆ ಕುರಿತು ಮನಬಿಚ್ಚಿ ಮಾತನಾಡಿದರು. ಐದು ದಶಕಗಳ ಇತಿಹಾಸವಿರುವ ಜಲಾಶಯದಿಂದ ಎಡದಂಡೆ ಭಾಗದ ರೈತರು ಆರ್ಥಿಕವಾಗಿ ಸದೃಢರಾಗಿರುವುದು ಮತ್ತು ಮೂರ್ನಾಲ್ಕು ವರ್ಷಗಳ ಅವಧಿಯಲ್ಲಿ ನೀರಿನ ಹರಿಯುವಿಕೆ ಪ್ರಮಾಣ ಗಣನೀಯ ಕುಸಿತದಿಂದ ಇಡೀ ರೈತ ಕುಲ ಸಂಕಷ್ಟಕ್ಕೆ ಸಿಲುಕಿರುವ ಕುರಿತಾಗಿ ಗಂಭೀರ ಚರ್ಚೆ ನಡೆಯಿತು. ಈ ವಿಚಾರವಾಗಿ ಹೋರಾಟ ಸಮಿತಿ ರೂಪಿಸುವುದು, ಹೋರಾಟ ನಡೆಸುವ ಬಗೆಯ ಕುರಿತು ಎಲ್ಲರೂ ಅಭಿಪ್ರಾಯ ವ್ಯಕ್ತಪಡಿಸಿದರು.

ಒಗ್ಗೂಡೋಣ: ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಮಳೆ, ನೀರು, ಸಿಬ್ಬಂದಿ ಕೊರತೆಯಿಂದಾಗಿ ನೀರಾವರಿ ಭಾಗದಲ್ಲಿ ಸಮಸ್ಯೆ ದ್ವಿಗುಣವಾಗಿದೆ. ನಮ್ಮದು ಟೇಲೆಂಡ್‌ ಜಲಾಶಯ ಆಗುವ ವಾತಾವರಣ ನಿರ್ಮಾಣ. 1964ರಲ್ಲಿ ಎಡದಂಡೆ ನಾಲೆಗೆ ಚಾಲನೆ ಸಿಕ್ಕಿದೆ. ಇತ್ತೀಚಿನ ವರ್ಷಗಳ ಈ ಭಾಗದ ರೈತರು ಭಾರಿ ಸಮಸ್ಯೆ ಎದುರಿಸುತ್ತಿದ್ದಾರೆ. ತುಂಗಭದ್ರಾ ಬೋರ್ಡ್‌ನಲ್ಲಿ ಆಂಧ್ರದವರೇ ಹೆಚ್ಚಿದ್ದಾರೆ. ಇದರಿಂದಲೂ ನಮಗೆ ಅನ್ಯಾಯವಾಗುತ್ತಿದೆ. ಬಲದಂಡೆ ಭಾಗದ ರೈತರಿಗೆ ಅನುಕೂಲ ಕಲ್ಪಿಸಿಕೊಡಲಾಗುತ್ತಿದೆ. ನಮಗಾಗುತ್ತಿರುವ ಅನ್ಯಾಯ ತಪ್ಪಿಸಲು ಹೋರಾಟ ರೂಪಿಸಬೇಕು. ನವಲಿ ಬಳಿ ಸಮನಾಂತರ ಜಲಾಶಯ ನಿರ್ಮಾಣಕ್ಕೆ ಸರಕಾರ ಶೀಘ್ರ ಮುಂದಾಗಬೇಕು. ಸಚಿವ ವೆಂಕಟರಾವ್‌ ನಾಡಗೌಡ, ವರ್ಷದಲ್ಲಿ ಅಡಿಗಲ್ಲು ಹಾಕುವುದಾಗಿ ಹೇಳಿರುವುದು ಸ್ವಾಗತಾರ್ಹ. ಆದರೆ ಇದು ಕಷ್ಟದ ಕೆಲಸವಾಗಿದ್ದು, ತೀವ್ರಗತಿಯಲ್ಲಿ ನಿರ್ದಿಷ್ಟ ಗುರಿ ತಲುಪಬೇಕು ಎಂದರು.

ಚಿಂತನೆ: ರೈತ ಮುಖಂಡ ಹನುಮನಗೌಡ ಬೆಳಗುರ್ಕಿ ಮಾತನಾಡಿ, ಮೊಬೈಲ್‌ ಯುಗದಲ್ಲಿ ನಾವೆಲ್ಲರೂ ಕಾರ್ಯೋನ್ಮುಖರಾಗಬೇಕು. ನಾವು ಮಾಡುವ ಹೋರಾಟ ಹಾಗೂ ಕೆಲಸಗಳು ಶಾಶ್ವತವಾಗಿ ಉಳಿಯಬೇಕು. ಜಲಾಶಯದ ಸಮಸ್ಯೆ ಇಂದು, ನಿನ್ನೆಯದಲ್ಲ. ಎಲ್ಲರಿಗೂ ಈ ಬಗ್ಗೆಯೂ ಗೊತ್ತಿದೆ. ಜಲಾಶಯದ ಸಾಮಾರ್ಥ್ಯ‌ ಹಾಗೂ ಮಳೆ ಕುಸಿತದಿಂದಾಗಿ ತೊಂದರೆಯಾಗುತ್ತಿದೆ. ರೈತರು ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕು. ಅಧಿಕಾರಿಗಳು ಕೊಡುವ ಮಾಹಿತಿ ಮೇಲೆಯೇ ನಾವು ಅವಲಂಬಿತವಾಗಿದ್ದು, ಎಚ್ಚರಗೊಳ್ಳಬೇಕಾದ ಅಗತ್ಯವಿದೆ ಎಂದರು.

ರೈತ ಮುಖಂಡ ತಿಪ್ಪೇರುದ್ರಸ್ವಾಮಿ ಮಾತನಾಡಿ, ತುಂಗಭದ್ರಾ ಜಲಾಶಯವನ್ನು ಅನೇಕ ಸಮಸ್ಯೆಗಳು ಕಾಡುತ್ತಿವೆ. ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಹೋರಾಡದೆ ಇದ್ದರೆ, ಮುಂದಿನ ದಿನಗಳಲಿ ರೈತರ ಶಾಪಕ್ಕೆ ಗುರಿಯಾಗಬೇಕಾಗುತ್ತದೆ. ರಾಜಕೀಯಕ್ಕಾಗಿ ರೈತರಿಗೆ ಯಾರೂ ಮೋಸ ಮಾಡಬಾರದು. ಒಗ್ಗೂಡಿ ಹೋರಾಟ ಮಾಡಬೇಕು ಎಂದರು.

ಮಸ್ಕಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಸವಂತರಾಯ ಕುರಿ ಮಾತನಾಡಿ, ಕೇಂದ್ರ ಸಮಿತಿ, ತಾಲೂಕು ಸಮಿತಿಗಳನ್ನು ರಚನೆ ಮಾಡಬೇಕು. ಪ್ರಮುಖವಾಗಿ ಪ್ರತಿಯೊಬ್ಬರೂ ಹೋರಾಟದ ಭಾಗವಾಗಬೇಕು ಎಂದರು.

ಸಭೆಯಲ್ಲಿ ಮಾಜಿ ಸಂಸದ ಕೆ.ವಿರೂಪಾಕ್ಷ ಪ್ಪ, ವಿಧಾನಪರಿಷತ್‌ ಸದಸ್ಯ ಬಸವರಾಜ ಪಾಟೀಲ್‌ ಇಟಗಿ, ರೈತ ಮುಖಂಡ ವೀರನಗೌಡ, ಮಾಜಿ ಶಾಸಕರಾದ ಬಸನಗೌಡ ಬ್ಯಾಗವಾಟ್‌, ಗಂಗಾಧರ ನಾಯಕ, ಮುಖಂಡರಾದ ಗಿರೇಗೌಡ ಗಂಗಾವತಿ, ಈಶಪ್ಪ ಸಾಹುಕಾರ ಕುರುಕುಂದಿ, ರಜಾಕ್‌ ಉಸ್ತಾದ್‌, ಜನಾರ್ದನ, ಮಲ್ಲನಗೌಡ ಕಾನಿಹಾಳ, ಅಶೋಕ ಭೂಪಾಲ್‌, ಈ.ಸುಬ್ಬಾರಾವ್‌, ಲಿಂಗರಾಜ್‌ ಪಾಟೀಲ್‌, ಜಿ.ಸತ್ಯನಾರಾಯಣ ಸೇರಿ ಹಲವರು ಇದ್ದರು. ಜಿ.ಪಂ.ಸದಸ್ಯ ಬಸವರಾಜ ಹಿರೇಗೌಡರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ