ಆ್ಯಪ್ನಗರ

18 ಪ್ರಕರಣಗಳನ್ನು ಭೇದಿಸಿದ್ದ ಶ್ವಾನ ರೂಬಿಗೆ ಸರಕಾರಿ ಗೌರವದೊಂದಿಗೆ ಅಂತಿಮ ವಿದಾಯ

ಸುಮಾರು 246 ಪ್ರಕರಣಗಳ ತನಿಖೆಗೆ ಬಳಕೆಯಾಗಿದ್ದ ಈ ಶ್ವಾನ 18 ಪ್ರಕರಣದಲ್ಲಿ ಅಪರಾಧಿಗಳನ್ನು ಪತ್ತೆ ಹಚ್ಚಲು ನೆರವಾಗಿ ಇಲಾಖೆಗೆ ಗೌರವ ತಂದಿತ್ತು.

Vijaya Karnataka 6 Dec 2019, 8:32 pm
ರಾಯಚೂರು: ಜಿಲ್ಲಾ ಪೊಲೀಸ್‌ ಶ್ವಾನದಳದಲ್ಲಿ13 ವರ್ಷ 6 ತಿಂಗಳ ಕಾಲ ಸೇವೆ ಸಲ್ಲಿಸಿ ಮೃತಪಟ್ಟ ಶ್ವಾನ ರೂಬಿಯ ಅಂತ್ಯಸಂಸ್ಕಾರವನ್ನು ಶುಕ್ರವಾರ ಸಕಲ ಸರಕಾರಿ ಗೌರವದೊಂದಿಗೆ ನೆರವೇರಿಸಲಾಯಿತು.
Vijaya Karnataka Web Rubi Dog


ನಗರದ ಪೊಲೀಸ್‌ ಪರೇಡ್‌ ಮೈದಾನದಲ್ಲಿ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಗೌರವ ವಂದನೆ ಸಲ್ಲಿಸಲಾಯಿತು. ಸ್ವತಃ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಅಂತಿಮ ಸಂಸ್ಕಾರ ನೆರವೇರಿಸಿದರು.

2006ರ ಜುಲೈ 3ರಂದು ಸೇವೆಗೆ ನಿಯುಕ್ತಿಗೊಂಡಿದ್ದ ಶ್ವಾನ ರೂಬಿ ರಾಯಚೂರು ಶ್ವಾನದಳ ಘಟಕದಲ್ಲಿ ಸುದೀರ್ಘ ಸೇವೆ ಸಲ್ಲಿಸಿತ್ತು. ಬೆಂಗಳೂರಿನ ಆಡುಗೋಡಿಯಲ್ಲಿ ತರಬೇತಿ ಪಡೆದಿದ್ದ ಈ ಶ್ವಾನ ಅಪರಾಧ ಪ್ರಕರಣಗಳ ತನಿಖೆಗೆಂದೇ ನೇಮಕಗೊಂಡಿತ್ತು. ಸುಮಾರು 246 ಪ್ರಕರಣಗಳ ತನಿಖೆಗೆ ಬಳಕೆಯಾಗಿದ್ದ ಈ ಶ್ವಾನ 18 ಪ್ರಕರಣದಲ್ಲಿ ಅಪರಾಧಿಗಳನ್ನು ಪತ್ತೆ ಹಚ್ಚಲು ನೆರವಾಗಿ ಇಲಾಖೆಗೆ ಗೌರವ ತಂದಿತ್ತು.

ಮಾನ್ವಿ ತಾಲೂಕಿನ ಜಾನೇಕಲ್‌ ಗ್ರಾಮದ ಅಂಬೇಡ್ಕರ್‌ ಪ್ರತಿಮೆ ವಿರೂಪಗೊಳಿಸಿದ್ದ ಕಿಡಿಗೇಡಿಗಳನ್ನು ಶ್ವಾನವೇ ಪತ್ತೆ ಮಾಡಿತ್ತು. ಇನ್ನು ಪೊಲೀಸ್‌ ಇಲಾಖೆಗೆ ತಲೆನೋವಾಗಿ ಪರಿಣಮಿಸಿದ್ದ ಶಕ್ತಿನಗರ ಆರ್‌ಟಿಪಿಎಸ್‌ ಮುಂದೆ ಜರುಗಿದ ಎಂಜಿನಿಯರ್‌ ಒಬ್ಬರ ಕೊಲೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲೂ ಸಹಾಯ ಮಾಡಿತ್ತು. ಅನಾರೋಗ್ಯದಿಂದ ರೂಬಿ ಮೃತಪಟ್ಟಿದ್ದರಿಂದ ಜಿಲ್ಲಾ ಪೊಲೀಸ್‌ ಇಲಾಖೆ ಹಾಗೂ ಶ್ವಾನದಳ ಘಟಕಕ್ಕೆ ತುಂಬಲಾರದ ನಷ್ಟವಾಗಿದೆ. ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ರೂಬಿ ಅಗಲಿಕೆ ನೋವು ತಂದಿದೆ ಎಂದು ಎಸ್‌ಪಿ ಸಂತಾಪ ಸೂಚಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ