ಆ್ಯಪ್ನಗರ

ರಾಯಚೂರು: ನೆರೆ ಸಂತ್ರಸ್ತರಿಗೆ ಶೀಘ್ರ ಸಿಗಲಿದೆ ಆಸರೆ

ತುಂಗಭದ್ರಾದಲ್ಲಿ 180, ಜೂಕೂರಿನಲ್ಲಿ250, ಇಡಪನೂರುನಲ್ಲಿ 80, ಗುರ್ಜಾಪುರದಲ್ಲಿ 310 ಕುಟುಂಬಗಳಿಗೆ ಮನೆ ಕಟ್ಟಿಕೊಡುವ ಸವಾಲು ಜಿಲ್ಲಾಡಳಿತಕ್ಕೆ ಎದುರಾಗಿದೆ. ಇಡಪನೂರು ಹೊರತುಪಡಿಸಿ ಇನ್ನುಳಿದ ಗ್ರಾಮಗಳ ಕುಟುಂಬಗಳು ಅಸುರಕ್ಷಿತ ಪರಿಸ್ಥಿತಿಯಲ್ಲಿ ತಮ್ಮ ಗ್ರಾಮಗಳಲ್ಲೇ ವಾಸವಾಗಿದ್ದಾರೆ.

Vijaya Karnataka Web 27 Nov 2020, 5:30 pm
ಜಗನ್ನಾಥ ಆರ್‌.ದೇಸಾಯಿ, ರಾಯಚೂರು
Vijaya Karnataka Web ಆಸರೆ ಮನೆ
ಆಸರೆ ಮನೆ



ಕೃಷ್ಣಾ ಮತ್ತು ತುಂಗಭದ್ರಾ ನದಿ ತೀರದ ನಾಲ್ಕು ಗ್ರಾಮಗಳ ನಿವಾಸಿಗಳಿಗೆ ಕೊನೆಗೂ ಸ್ಥಳಾಂತರದ ಭಾಗ್ಯ ದೊರೆಯುವ ನಿರೀಕ್ಷೆಗಳು ಗರಿಗೆದರಿವೆ.

ಜಿಲ್ಲೆಯಲ್ಲಿ 2009ರಲ್ಲಿ ಸುರಿದ ಧಾರಾಕಾರ ಮಳೆ ಹಾಗೂ ನದಿಗಳ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ ರಾಯಚೂರು ತಾಲೂಕಿನ ಗುರ್ಜಾಪುರ, ತುಂಗಭದ್ರಾ, ಜೂಕೂರು ಹಾಗೂ ಇಡಪನೂರು ನಿವಾಸಿಗಳು ಅಂದಿನಿಂದಲೂ ಆತಂಕದಲ್ಲಿಯೇ ಜೀವನ ನಡೆಸುವಂತಾಗಿದೆ. ಪ್ರತಿ ಸಲ ನದಿಯ ಪ್ರವಾಹದಿಂದ ಆತಂಕಕ್ಕೆ ಸಿಲುಕುವ ಈ ಗ್ರಾಮಗಳ ನಿವಾಸಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಜಿಲ್ಲಾಡಳಿತ ಇನ್ಫೋಸಿಸ್‌ ಮತ್ತು ಶ್ರೀರಾಮಕೃಷ್ಣ ಮಿಷನ್‌ ಸಂಸ್ಥೆಗೆ ಪ್ರಸ್ತಾವನೆ ಸಲ್ಲಿಸಿದ್ದು ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ.

ಆತಂಕದ ಬದುಕು

ಗುರ್ಜಾಪುರ, ತುಂಗಭದ್ರಾ, ಜೂಕೂರು, ಇಡಪನೂರು ಗ್ರಾಮಗಳಲ್ಲಿ ಧಾರಾಕಾರ ಮಳೆ ಮತ್ತು ಪ್ರವಾಹದಿಂದ ನದಿ ಹಾಗೂ ಇಡಪನೂರು ಗ್ರಾಮದ ಹಳ್ಳದ ದಂಡೆಯಲ್ಲಿರುವ ಬಡ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಇಡಪನೂರು ಗ್ರಾಮದಲ್ಲಿ ಕಳೆದ ತಿಂಗಳು ಸುರಿದ ಮಳೆಗೆ ಮನೆ ಕಳೆದುಕೊಂಡು ಹಾನಿ ಅನುಭವಿಸಿದರೆ, ಇನ್ನುಳಿದ ಗ್ರಾಮಸ್ಥರು 2009ರಿಂದಲೂ ನದಿ ತೀರದಲ್ಲಿಯೇ ಆತಂಕದ ಬದುಕು ಕಳೆಯುತ್ತಿದ್ದಾರೆ.

ತುಂಗಭದ್ರಾದಲ್ಲಿ 180, ಜೂಕೂರಿನಲ್ಲಿ250, ಇಡಪನೂರುನಲ್ಲಿ 80, ಗುರ್ಜಾಪುರದಲ್ಲಿ 310 ಕುಟುಂಬಗಳಿಗೆ ಮನೆ ಕಟ್ಟಿಕೊಡುವ ಸವಾಲು ಜಿಲ್ಲಾಡಳಿತಕ್ಕೆ ಎದುರಾಗಿದೆ. ಇಡಪನೂರು ಹೊರತುಪಡಿಸಿ ಇನ್ನುಳಿದ ಗ್ರಾಮಗಳ ಕುಟುಂಬಗಳು ಅಸುರಕ್ಷಿತ ಪರಿಸ್ಥಿತಿಯಲ್ಲಿ ತಮ್ಮ ಗ್ರಾಮಗಳಲ್ಲೇ ವಾಸವಾಗಿದ್ದಾರೆ.

ಪ್ರವಾಹ ಬಂದಾಗಲೆಲ್ಲ ಸ್ಥಳಾಂತರದ ಭೀತಿ ಎದುರಿಸುತ್ತಿದ್ದಾರೆ. ಕಳೆದ ತಿಂಗಳು ಸುರಿದ ಧಾರಾಕಾರ ಮಳೆ ಸಂದರ್ಭದಲ್ಲಿ ಇಡಪನೂರು ಬಳಿಯ ಹಳ್ಳ ಉಕ್ಕಿ ಹರಿದ ಪರಿಣಾಮ ಮನೆ ಕಳೆದುಕೊಂಡ ಅಲ್ಲಿನ ನಿವಾಸಿಗಳ ಬದುಕು ಬೀದಿಗೆ ಬಿದ್ದಿದೆ. ಸದ್ಯ ತಾತ್ಕಾಲಿಕ ವ್ಯವಸ್ಥೆಯಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಪ್ರಸ್ತಾವನೆ ನಾಲ್ಕು ಗ್ರಾಮಗಳ ನಿವಾಸಿಗಳಿಗೆ ಆಸರೆ ಜತೆಗೆ ಮೂಲ ಸೌಲಭ್ಯ ಒದಗಿಸಿ ವಸತಿ ವ್ಯವಸ್ಥೆ ನಿರ್ಮಾಣಕ್ಕೆ ಜಿಲ್ಲಾಡಳಿತ ಯೋಜಿಸಿದೆ. ಇದುವರೆಗೆ ಹಕ್ಕುಪತ್ರ ವಿತರಣೆಯೇ ನನೆಗುದಿಗೆ ಬಿದ್ದಿತ್ತು.

ರಾಯಚೂರು ತಾಲೂಕಿನ ನಾಲ್ಕು ಗ್ರಾಮಗಳಲ್ಲಿ ನೆರೆ ಸಂತ್ರಸ್ತರಿಗೆ ಆಸರೆ ಒದಗಿಸುವ ನಿಟ್ಟಿನಲ್ಲಿ ಇನ್ಫೋಸಿಸ್‌ ಮತ್ತು ಶ್ರೀರಾಮಕೃಷ್ಣ ಮಿಷನ್‌ ಸಂಸ್ಥೆಗಳಿಗೆ ಸಂಪರ್ಕಿಸಲಾಗಿದೆ. ಪ್ರಸ್ತಾವನೆಯನ್ನೂ ಕಳಿಸಿಕೊಡಲಾಗಿದೆ. ಉತ್ತಮ ರೀತಿಯ ಸ್ಪಂದನೆಯೂ ಸಿಕ್ಕಿದೆ.
ಸಂತೋಷ ಕಾಮಗೌಡ, ಸಹಾಯಕ ಆಯುಕ್ತರು, ರಾಯಚೂರು

ಜಿಲ್ಲಾಧಿಕಾರಿ ಆರ್‌. ವೆಂಕಟೇಶ್‌ ಕುಮಾರ್‌ ಅವರು ಸಭೆ ನಡೆಸಿ ಜೂಕೂರು, ಗುರ್ಜಾಪೂರ ಗ್ರಾಮಗಳಲ್ಲಿ ಸಂತ್ರಸ್ತರ ಜತೆ ಸಹಾಯಕ ಆಯುಕ್ತ ಸಂತೋಷ ಕಾಮಗೌಡ ನೇತೃತ್ವದಲ್ಲಿಗ್ರಾಮ ಸಭೆ ನಡೆಸಿ ನಿವಾಸಿಗಳ ಸಮಸ್ಯೆ ಆಲಿಸಲು ಸೂಚಿಸಿದರು. ಸಭೆ ನಡೆಸಿದ ನಂತರ ಜೂಕೂರು ಗ್ರಾಮದ ಹೊಸ ಬಡಾವಣೆ ಸಂತ್ರಸ್ತರಿಗೆ ಹಂಚಿಕೆಯಾಗಿರುವ ಜಾಗೆಗೆ ಸಂಬಂಸಿದ ಹಕ್ಕುಪತ್ರ ವಿತರಿಸಲಾಗಿದೆ.

ಇನ್ನುಳಿದಂತೆ ಮನೆ ನಿರ್ಮಾಣ, ಮೂಲ ಸೌಲಭ್ಯ ಕಲ್ಪಿಸಲು ದಾನಿಗಳನ್ನು ಸಂಪರ್ಕಿಸಲಾಗಿದೆ. ಈ ನಾಲ್ಕು ಗ್ರಾಮಗಳಲ್ಲಿ ಜಿಲ್ಲಾಡಳಿತದಿಂದ ಮೊದಲ ಹಂತದಲ್ಲಿ ಅಗತ್ಯ ಸೌಲಭ್ಯಗಳ ಸೃಷ್ಟಿಗೆ ನೆರವಾಗುವಂತೆ ಇನ್ಫೋಸಿಸ್‌ ಫೌಂಡೇಷನ್‌ ಹಾಗೂ ಶ್ರೀರಾಮಕೃಷ್ಣ ಮಿಶನ್‌ ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಜಿಲ್ಲಾಡಳಿತದಿಂದ ಮಂಡಿಸಿದ ಪ್ರಸ್ತಾವನೆಗೆ ಉಭಯ ಸಂಸ್ಥೆಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಸ್ತಾವನೆ ಒಪ್ಪಿಕೊಂಡರೆ, ನಾಲ್ಕು ಗ್ರಾಮಗಳ ನಿವಾಸಿಗಳಿಗೆ ನೆಮ್ಮದಿಯ ಸೂರು ದೊರೆಯುವ ದಿನಗಳು ದೂರವಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ