ಆ್ಯಪ್ನಗರ

ನೂರಾರು ಕ್ವಿಂಟಾಲ್‌ ಅಕ್ಕಿ ಪತ್ತೆ

ತಾಲೂಕಿನ ಶ್ರೀಪುರಂಜಂಕ್ಷ ನ್‌ ಕೈಗಾರಿಕಾ ವಸಾಹತು ಪ್ರದೇಶದ ಗೋದಾಮೊಂದರಲ್ಲಿ ನೂರಾರು ಕ್ವಿಂಟಾಲ್‌ ಅಕ್ಕಿ ಪತ್ತೆಯಾಗಿದ್ದು, ಭಾರಿ ಗೋಲ್‌ಮಾಲ್‌ ಶಂಕೆ ವ್ಯಕ್ತವಾಗಿದೆ.

Vijaya Karnataka 19 Sep 2018, 5:00 am
ಸಿಂಧನೂರು : ತಾಲೂಕಿನ ಶ್ರೀಪುರಂಜಂಕ್ಷ ನ್‌ ಕೈಗಾರಿಕಾ ವಸಾಹತು ಪ್ರದೇಶದ ಗೋದಾಮೊಂದರಲ್ಲಿ ನೂರಾರು ಕ್ವಿಂಟಾಲ್‌ ಅಕ್ಕಿ ಪತ್ತೆಯಾಗಿದ್ದು, ಭಾರಿ ಗೋಲ್‌ಮಾಲ್‌ ಶಂಕೆ ವ್ಯಕ್ತವಾಗಿದೆ.
Vijaya Karnataka Web RAC-RCH18SND7


ಈ ಗೋದಾಮಿನಲ್ಲಿ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಶೇಖರಿಸಿಡಲಾಗಿದೆ ಎಂಬ ಕಾರಣಕ್ಕೆ ತಹಸೀಲ್ದಾರ್‌ ಸಂತೋಷ ಕಾಮಗೌಡ ಸೇರಿ ಆಹಾರ ಇಲಾಖೆಯ ಅಧಿಕಾರಿಗಳು ಸೋಮವಾರ ಮತ್ತು ಮಂಗಳವಾರ ಎರಡು ದಿನ ನಿರಂತರ ಕಾರ್ಯಾಚರಣೆ ನಡೆಸಿದರು. ಯುವ ಕಾಂಗ್ರೆಸ್‌ ಮುಖಂಡರ ಮಾಹಿತಿ ಮೇರೆಗೆ ಮಧ್ಯರಾತ್ರಿ ದಾಳಿ ನಡೆಸಿದ ತಹಸೀಲ್ದಾರ್‌, ಗೋದಾಮಿನಲ್ಲಿ ತಪಾಸಣೆಗೆ ಮುಂದಾದರು.

ಆದರೆ, ಅಕ್ರಮಕ್ಕೆ ಮುಂದಾದವರು ಗೋದಾಮಿನ ದ್ವಾರದ ಬೀಗ ಹಾಕಿ ನಾಪತ್ತೆಯಾಗಿದ್ದರು. ಇದರಿಂದಾಗಿ ಬೀಗ ತೆರೆಯದ ಸ್ಥಿತಿ ನಿರ್ಮಾಣವಾದಾಗ ಬೆಳಗಿನ ಜಾವ ಪಂಚನಾಮೆಗೆ ಅಧಿಕಾರಿಗಳು ಮುಂದಾದರು. ಈ ವೇಳೆ ಇಬ್ಬರು ಪೊಲೀಸರನ್ನು ಅಲ್ಲಿಯೇ ಭದ್ರತೆಗೆ ನಿಯೋಜಿಸಿ, ಲಾರಿಯೊಂದನ್ನು ಪೊಲೀಸರ ವಶಕ್ಕೆ ಒಪ್ಪಿಸಿದರು. ಘಟನಾ ಸ್ಥಳದಲ್ಲಿ ಹರಿಯಾಣ ಸರಕಾರದಿಂದ ಸರಬರಾಜಾದ ಅಕ್ಕಿಯ ಖಾಲಿ ಚೀಲ ಪತ್ತೆಯಾಗಿದ್ದು, ಅಕ್ರಮದ ಶಂಕೆಗೆ ಕಾರಣವಾಯಿತು.

ತಪಾಸಣೆ: ಅಕ್ಕಿ ಶೇಖರಿಸಿಟ್ಟ ಗೋದಾಮಿನ ಸ್ಥಳಕ್ಕೆ ಬೆಳಗಿನ ಜಾವ ಭೇಟಿ ನೀಡಿದ ಆಹಾರ ಇಲಾಖೆಯ ಶಿರಸ್ತೇದಾರ್‌ ಆನಂದ, ಕಂದಾಯ ಇಲಾಖೆ ಮಿಶ್ರಕೋಟಿ ಅವರು ತಾಸುಗಟ್ಟಲೇ ಗೋದಾಮಿನ ಬಳಿಯೇ ಕಾದು ಕುಳಿತರು. ಆದರೆ, ಯಾರೊಬ್ಬರೂ ಪ್ರವೇಶ ದ್ವಾರದ ಬೀಗ ತೆರೆಯಲು ಮುಂದಾಗಲಿಲ್ಲ. ಕೊನೆಗೆ ಸುರೇಂದ್ರ ಎನ್ನುವ ವ್ಯಕ್ತಿಯಿಂದ ಬೀಗ ತೆಗೆಯಿಸಿ, ಒಳಪ್ರವೇಶಿಸಲಾಯಿತು. ಭಾರಿ ಪ್ರಮಾಣದಲ್ಲಿ ಅಕ್ಕಿಯನ್ನು ಶೇಖರಿಸಿ, ಚೀಲದಲ್ಲಿ ತುಂಬಿಡಲಾಗಿತ್ತು. ಯಾವುದೇ ರೀತಿಯ ಬ್ರ್ಯಾಂಡ್‌ ಇಲ್ಲದ ಚೀಲಗಳಲ್ಲಿ ಅಕ್ಕಿ ತುಂಬಿದ್ದು ಅನುಮಾನ ಮೂಡಿಸಿತು. ಇಂತಹ ಅಕ್ಕಿಗೂ ನಮ್ಮ ಬಳಿ ದಾಖಲೆಯಿದೆ ಎಂದು ಗೋದಾಮು ಮಾಲೀಕ ಹೇಳುತ್ತಿದ್ದರು. ಆದರೆ, ಶ್ರೀಪುರಂಜಂಕ್ಷ ನ್‌ನಲ್ಲಿ ಮೊದಲಿನಿಂದಲೂ ಪಡಿತರ ಅಕ್ಕಿ ಕಳ್ಳತನ ಪ್ರಕರಣ ಹೆಚ್ಚಾಗಿ ನಡೆಯುವುದು ಮತ್ತೊಮ್ಮೆ ಸಾಬೀತಾಗಿದೆ. ರಾತ್ರಿ ಅಕ್ಕಿ ಸಾಗಣೆ ಮಾಡುವ ವೇಳೆ ಗುನ್ನೇಶ್ವರರಾವ್‌ ಅವರು ಸ್ಥಳದಲ್ಲಿಯೇ ಇದ್ದು, ಅವರೇ ಅಕ್ರಮಕ್ಕೆ ಕಾರಣ ಎಂದು ಯುವ ಕಾಂಗ್ರೆಸ್‌ ಮುಖಂಡರು, ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಡಿ.ಡಿ. ದೌಡು: ನೂರಾರು ಕ್ವಿಂಟಾಲ್‌ ಅಕ್ಕಿಯನ್ನು ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದೆ ಎಂಬ ವಿಷಯ ತಿಳಿದು ಆಹಾರ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಅಮರೇಶಪ್ಪ ಅವರು ಸ್ಥಳಕ್ಕೆ ಧಾವಿಸಿ, ಪಂಚನಾಮೆಗೆ ಮುಂದಾದರು. ಎಲ್ಲ ಅಕ್ಕಿಯನ್ನು ಚೀಲಗಳಲ್ಲಿ ತುಂಬಿಸಿ, ಲಾರಿಯಲ್ಲಿ ಲೋಡ್‌ ಮಾಡಿದರು. ನಂತರ ಎಫ್‌ಸಿಐ ಗೋದಾಮಿಗೆ ಕಳಿಸಿ, ಕಾನೂನು ರೀತ್ಯ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಅಕ್ಕಿ ಕಳ್ಳಸಾಗಣೆ ವಿಚಾರ ತಾಲೂಕಿನಾದ್ಯಂತ ಸುದ್ದಿಯಾಗಿದ್ದು, ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ.

ಸಚಿವರ ನಿರಂತರ ಕರೆ : ಅಕ್ಕಿ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಹಾರ ಇಲಾಖೆ ಸಚಿವ ಜಮೀರ್‌ ಆಹ್ಮದ್‌ ಅವರು ಮದ್ಯ ಪ್ರವೇಶಿಸಿದ್ದಾರೆ ಎನ್ನುವುದು ಅಚ್ಚರಿ ಮೂಡಿಸಿದೆ. ಅವರೇ ನೇರವಾಗಿ ತಹಸೀಲ್ದಾರ್‌ ಹಾಗೂ ಆಹಾರ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಕರೆಮಾಡಿ, ಅಕ್ರಮ ತಡೆಯುವಂತೆ ಖಡಕ್‌ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ರಾತ್ರಿ ಮತ್ತು ಬೆಳಗ್ಗೆ ಎರಡು ಬಾರಿ ಕರೆ ಮಾಡಿದ್ದರಿಂದ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಹೀಗಾಗಿ ರಾತ್ರಿಯಿಂದ ಮರುದಿನ ಸಂಜೆವರೆಗೂ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡರ ನೇತೃತ್ವದಲ್ಲಿ ರಾಯಚೂರಿನಲ್ಲಿ ಕೆಡಿಪಿ ಸಭೆಯಿದ್ದರೂ ಸಭೆಗೆ ಗೈರುಹಾಜರಾದ ಜಿಲ್ಲಾ ಉಪನಿರ್ದೇಶಕ ಅಮರೇಶಪ್ಪ, ಸಿಂಧನೂರಿನ ಕಡೆ ಓಡಿಬರುವುದಕ್ಕೂ ಆಹಾರ ಇಲಾಖೆ ಸಚಿವರ ಮೊಬೈಲ್‌ ಕರೆಯೇ ಮೂಲ ಕಾರಣ ಎನ್ನಲಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ