ಆ್ಯಪ್ನಗರ

‘ಉದ್ಯೋಗ ಕೊಡಿ, ಬಾಕಿ ಹಣ ನೀಡಿ’

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಕಲ್ಪಿಸಿ, ಬಾಕಿ ಹಣ ಪಾವತಿಸುವಂತೆ ಆಗ್ರಹಿಸಿ ಗ್ರಾಮೀಣ ಕೂಲಿಕಾರರ ಸಂಘಟನೆ (ಗ್ರಾಕೂಸ್‌) ನೇತೃತ್ವದಲ್ಲಿ ಕೂಲಿಕಾರರು ನಗರದ ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

Vijaya Karnataka 21 May 2019, 5:00 am
ರಾಯಚೂರು ; ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗ ಕಲ್ಪಿಸಿ, ಬಾಕಿ ಹಣ ಪಾವತಿಸುವಂತೆ ಆಗ್ರಹಿಸಿ ಗ್ರಾಮೀಣ ಕೂಲಿಕಾರರ ಸಂಘಟನೆ (ಗ್ರಾಕೂಸ್‌) ನೇತೃತ್ವದಲ್ಲಿ ಕೂಲಿಕಾರರು ನಗರದ ಟಿಪ್ಪು ಸುಲ್ತಾನ ಉದ್ಯಾನವನದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
Vijaya Karnataka Web RAC-RCH20HD03


ನಂತರ ಜಿಲ್ಲಾ ಪಂಚಾಯತ್‌ ಸಿಇಒ ಅವರಿಗೆ ಮನವಿ ಸಲ್ಲಿಸಿದ ಪದಾಧಿಕಾರಿಗಳು, ರಾಯಚೂರು ಜಿಲ್ಲೆಯ ನಾನಾ ತಾಲೂಕುಗಳಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕೆಲಸ ನೀಡುತ್ತಿಲ್ಲ. ಕೆಲಸ ನೀಡಿದರೆ ಸರಿಯಾದ ರೀತಿಯಲ್ಲಿ ಕೂಲಿಹಣ ಪಾವತಿಸುತ್ತಿಲ್ಲ ಎಂದು ಆಪಾದಿಸಿದರು.

ಅನ್ಯಾಯ: ಜಿಲ್ಲೆಯ ಏಳು ತಾಲೂಕಿನ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿನ ಕೂಲಿಕಾರರಿಗೆ ಕೂಲಿ ಹಣ ಸರಿಯಾಗಿ ಪಾವತಿಸುತ್ತಿಲ್ಲ. ಎನ್‌ಎಂಆರ್‌ ಕಾರ್ಡ್‌ನಲ್ಲಿ ಕೂಲಿಕಾರರ ಹೆಸರಿದ್ದರೂ ಗೈರು ಹಾಜರು ಎಂದು ನಮೂದಿಸುತ್ತಿದ್ದು, ಇದರಿಂದ ಕೂಲಿಕಾರರಿಗೆ ಅನ್ಯಾಯ ಮಾಡಲಾಗುತ್ತಿದೆ. ಉದ್ಯೋಗ ಚೀಟಿ ನೋಂದಾಯಿಸಲು ಕಂಪ್ಯೂಟರ್‌ ಆಪರೇಟರ್‌ಗಳು ವಿನಾಕಾರಣ ಅಲೆದಾಡಿಸುತ್ತಿದ್ದಾರೆ. ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳೂ ಉದ್ಯೋಗ ಚೀಟಿ ಶೀಘ್ರ ವಿತರಿಸಿ ಕೂಲಿ ಕೆಲಸ ನೀಡುತ್ತಿಲ್ಲ. ಭೀಕರ ಬರ ಪರಿಸ್ಥಿತಿ ಹಿನ್ನೆಲೆ ಗ್ರಾಮೀಣ ಪ್ರದೇಶದಲ್ಲಿ ಕೆಲಸಕ್ಕೆ ಬರ ಬಂದಿದೆ. ಕೆಲಸ ಅರಸಿ ಈಗಾಗಲೇ ಗುಳೆ ಹೋಗಿದ್ದೇವೆ ಎಂದರು.

ಒತ್ತಾಯ: ಜಾನುವಾರುಗಳನ್ನೂ ಮಾರಾಟ ಮಾಡಿಕೊಂಡಿದ್ದು, ದೈನಂದಿನ ಜೀವನಕ್ಕೆ ಸಂಕಷ್ಟ ಶುರುವಾಗಿದೆ. ಗ್ರಾಮ ಪಂಚಾಯತ್‌ಗಳಲ್ಲಿ ಉದ್ಯೋಗ ಖಾತರಿ ಯೋಜನೆಯನ್ನು ಸಮರ್ಪಕ ಜಾರಿಗೊಳಿಸಿ ಕೂಲಿಕಾರರಿಗೆ ಅನುಕೂಲ ಕಲ್ಪಿಸಬೇಕು. ಈ ಬಗ್ಗೆ ಜಿಲ್ಲಾ ಪಂಚಾಯತ್‌, ಜಿಲ್ಲಾಡಳಿತ ಹಾಗೂ ಸಚಿವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಜಿಲ್ಲಾ ಪಂಚಾಯತ್‌ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಬಡ ಕೂಲಿಕಾರ್ಮಿಕರಿಗೆ ಮಹತ್ವಾಕಾಂಕ್ಷಿ ಯೋಜನೆಯಡಿ ಅನುಕೂಲ ಕಲ್ಪಿಸಬೇಕು ಎಂದು ಗ್ರಾಕೂಸ್‌ ಸಂಘಟನೆ ಪದಾಧಿಕಾರಿಗಳು ಒತ್ತಾಯಿಸಿದರು.

ಲಕ್ಷ ್ಮಣಪ್ಪ, ನರಸಿಂಹರೆಡ್ಡಿ, ನಾಗಮ್ಮ, ನೀಲಮ್ಮ, ಗೋವರ್ಧನರೆಡ್ಡಿ ಸೇರಿ ಅನೇಕರು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ