ಆ್ಯಪ್ನಗರ

‘ತ್ರಿವಿಧ ದಾಸೋಹವೇ ಶ್ರೇಷ್ಠ ಧರ್ಮ’

ಜಗತ್ತಿನ ಎಲ್ಲ ಧರ್ಮಗಳಲ್ಲಿ ತ್ರಿವಿಧ ದಾಸೋಹವೇ ಶ್ರೇಷ್ಠವಾಗಿದೆ ಎಂದು ಚೀಕಲಪರ್ವಿ ರುದ್ರಮುನೀಶ್ವರ ಮಠದ ಅಭಿನವ ರುದ್ರಮುನಿ ಶ್ರೀಗಳು ಹೇಳಿದರು.

Vijaya Karnataka 14 Aug 2019, 5:00 am
ಮಾನ್ವಿ : ಜಗತ್ತಿನ ಎಲ್ಲ ಧರ್ಮಗಳಲ್ಲಿ ತ್ರಿವಿಧ ದಾಸೋಹವೇ ಶ್ರೇಷ್ಠವಾಗಿದೆ ಎಂದು ಚೀಕಲಪರ್ವಿ ರುದ್ರಮುನೀಶ್ವರ ಮಠದ ಅಭಿನವ ರುದ್ರಮುನಿ ಶ್ರೀಗಳು ಹೇಳಿದರು.
Vijaya Karnataka Web great religion
‘ತ್ರಿವಿಧ ದಾಸೋಹವೇ ಶ್ರೇಷ್ಠ ಧರ್ಮ’


ಸಿಂಧನೂರು ತಾಲೂಕಿನ ತಿಡಿಗೋಳ ಗ್ರಾಮದಲ್ಲಿ ಮಂಗಳವಾರ, ಚೀಕಲಪರ್ವಿ ರುದ್ರಮುನೀಶ್ವರ ಮಠ ಹಾಗೂ 'ವಿಜಯ ಕರ್ನಾಟಕ' ಏರ್ಪಡಿಸಿದ್ದ 'ವಿಕ ಶ್ರಾವಣ ಸತ್ಸಂಗ ಕಾರ್ಯಕ್ರಮ'ದಲ್ಲಿ ಅವರು ಮಾತನಾಡಿದರು. ''ಸಮಾಜ, ಮಠ ಹಾಗೂ ಭಕ್ತರು ಎಣ್ಣೆ, ಬತ್ತಿ ಹಾಗೂ ಪ್ರಣತಿ ಇದ್ದಂತೆ. ಒಂದನ್ನೊಂದು ಬಿಟ್ಟು ಬೆಳಕು ಸಿಗದು. ಸಮಾಜಮುಖಿಯಾಗಿ ಧರ್ಮ ಕಾರ್ಯಗಳನ್ನು ನಡೆಸಲು ಸಮಾಜದ ಪ್ರತಿಯೊಬ್ಬರ ಸೇವೆ ಅವಶ್ಯಕ. ದೇಶ ಹಾಗೂ ವ್ಯವಸ್ಥೆ ಸರಿಪಡಿಸಲು ಧರ್ಮ ಮುಖ್ಯವಾಗಿದೆ. ಮಠಗಳೆಂದರೆ ಕೇವಲ ಧಾರ್ಮಿಕ ಕಾರ್ಯಕ್ರಮಗಳಿಗೆ ಮೀಸಲು ಎಂಬುದನ್ನು ಹೋಗಲಾಡಿಸಲು ತ್ರಿವಿಧ ದಾಸೋಹ ಪದ್ಧತಿಯನ್ನು ಶರಣರು ಪರಿಚಯಿಸಿದ್ದಾರೆ'' ಎಂದರು.

''ಸ್ವಾತಂತ್ರ್ಯ ಪೂರ್ವದಿಂದಲೂ ಭಾರತದಲ್ಲಿ ತ್ರಿವಿಧ ದಾಸೋಹ ಪದ್ಧತಿ ಜಾರಿಯಲ್ಲಿದೆ. ಭಕ್ತರೇ ಮಠಗಳ ಆಸ್ತಿಯಾಗಿದ್ದಾರೆ. ಭಕ್ತರೇ ನಿಜವಾದ ಶಕ್ತಿಯಾಗಿರುತ್ತಾರೆ. ಮಠದ ಪೀಠಾಧಿಪತಿಗಳು ಕೇವಲ ಮಾರ್ಗದರ್ಶನ ನೀಡುತ್ತಾರೆಯೇ ಹೊರತು ಅದು ಕಾರ್ಯಪ್ರಾಪ್ತಿಯಾಗಲು ಭಕ್ತರು ಕಾರಣರಾಗಿರುತ್ತಾರೆ. ತ್ರಿವಿಧ ದಾಸೋಹದಿಂದ ಸಮಾಜದ ಎಲ್ಲರಿಗೂ ಅನುಕೂಲ. ಮಠಕ್ಕೆ ಕೊಟ್ಟಿದ್ದೆಲ್ಲ ಸಮಾಜಕ್ಕೆ ಸೇರಿದ್ದು'' ಎಂದು ಅಭಿಪ್ರಾಯಪಟ್ಟರು.

ವೀರಗೋಟದ ಅಡವಿಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ''ಎಲ್ಲ ಜೀವರಾಶಿಗಳಲ್ಲಿಯೇ ಮನುಷ್ಯ ಶ್ರೇಷ್ಠನಾಗಿದ್ದಾನೆ. ಸ್ಪರ್ಶ, ಶಬ್ದ, ರಸ, ರೂಪ ಮತ್ತು ಗಂಧಗಳನ್ನು ಅರಿಯುವ ಶಕ್ತಿ ಹೊಂದಿದ್ದಾನೆ. ಆಧುನಿಕ ಜಗತ್ತಿನಲ್ಲಿ ಕೆಲವು ಸಂವೇದನೆಗಳನ್ನು ಕಳೆದುಕೊಂಡು ಮೂಲ ವಿಷಯಗಳನ್ನು ಮರೆಯುತ್ತಿದ್ದಾನೆ. ನಗರಕ್ಕಿಂತ ಗ್ರಾಮೀಣ ಪ್ರದೇಶದ ಜನರಲ್ಲೇ ಸಾಮಾನ್ಯ ಬುದ್ಧಿಮಟ್ಟ (ಐಕ್ಯೂ) ಹೆಚ್ಚಿರುವುದು ಕಂಡು ಬರುತ್ತಿದೆ. ಸಾಧ್ಯವಾದಷ್ಟು ಮನುಷ್ಯ ಧರ್ಮ, ಧಾರ್ಮಿಕ ಕಾರ್ಯ ಹಾಗೂ ಸತ್ಪಾತ್ರ ದಾನಗಳಿಗೆ ಮಹತ್ವ ನೀಡಬೇಕು. ಸಾಮಾನ್ಯ ಜನರಿಗೆ ಅನುಕೂಲ ಮಾಡುವ ಹಾಗೂ ಸಮಾಜದ ಪರವಾಗಿ ಕೆಲಸ ಮಾಡುವ ಕಾರ್ಯಗಳಿಗೆ ಬೆನ್ನೆಲುಬಾಗಿರಬೇಕು'' ಎಂದು ಹಿತವಚನ ನೀಡಿದರು.

ಗುಂಡಾ ಗ್ರಾಮದ ಶ್ರೀಶೈಲ ಪೀಠದ ರಾಚೋಟಿ ಸ್ವಾಮಿಗಳು ಮಾತನಾಡಿ, ''ವಿನಯವೇ ವಿದ್ಯೆಯ ಮೂಲ ಎಂಬಂತೆ ಜ್ಞಾನದಿಂದ ಮಾತ್ರ ಸದ್ಬುದ್ಧಿ ಸಿಗುತ್ತದೆ. ಇದಕ್ಕೆ ಗುರು ಮಾರ್ಗದರ್ಶನ ಮುಖ್ಯ. ಸತ್ಸಂಗ, ಧರ್ಮಸಭೆ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡರೆ ಸಮಾಜಮುಖಿಯಾಗಿ ಕೆಲಸ ಮಾಡಬಹುದು. ಮಾನವೀಯತೆಯ ಮೂಲವೇ ದಯೆಯಾಗಿದೆ. ಅದನ್ನು ಶಿವಶರಣರು, ಹಿರಿಯರು ಹಾಗೂ ಬಸವಣ್ಣನವರು ದಯೆಯೇ ಧರ್ಮದ ಮೂಲವಯ್ಯ ಎಂದು ಹೇಳಿದ್ದಾರೆ, ಎಲ್ಲವೂ ಒಂದಕ್ಕೊಂದು ಬೆಸೆದುಕೊಂಡಿದ್ದು, ಧರ್ಮದ ತಳಹದಿಗೆ ಇಂಬು ನೀಡಿವೆ'' ಎಂದು ಹೇಳಿದರು.

ಹಾಲ್ವಿ ಮಠದ ಅಭಿನವ ಮಹಾಂತ ಮಹಾಸ್ವಾಮಿಗಳು, ಗೆಜ್ಜೆಬಾವಿ ಪಶ್ಚಕಂತಿ ಮಠದ ಚನ್ನಬಸವ ಶಿವಾಚಾರ್ಯರು, ಮಾನ್ವಿ ಕಲ್ಮಠದ ಶಿವಮೂರ್ತಿ ಶಿವಾಚಾರ್ಯರು, ಅಮೀನಗಡದ ಪ್ರಭುಶಂಕರೇಶ್ವರ ಮಠದ ಪ್ರಭುಶಂಕರಲಿಂಗೇಶ್ವರ ಸ್ವಾಮಿಗಳು, ಯದ್ದಲದೊಡ್ಡಿಯ ಸುವರ್ಣಗಿರಿ ವಿರಕ್ತಮಠದ ಮಹಾಲಿಂಗ ಸ್ವಾಮಿಗಳು, ಬಳಗಾನೂರು ಮರಿಸಿದ್ಧೇಶ್ವರ ಮಠದ ಸಿದ್ಧಬಸವಸ್ವಾಮಿಗಳು, ರೌಡಕುಂದ ಹಿರೇಮಠದ ಮರಿಸಿದ್ಧಲಿಂಗ ಶಿವಾಚಾರ್ಯರು, ತುರುವಿಹಾಳ ಪುರವರ ಹಿರೇಮಠದ ಅಮರಗುಂಡೇಶ್ವರ ಶಿವಾಚಾರ್ಯರು, ಸಿದ್ಧರಾಮ ಶರಣರು ವೆಂಕಟಗಿರಿ ಕ್ಯಾಂಪ್‌ ಸಾನ್ನಿಧ್ಯವಹಿಸಿದ್ದರು. ಮಾಜಿ ಸಂಸದ ಕೆ.ವಿರೂಪಾಕ್ಷ ಪ್ಪ, ಶಾಸಕ ವೆಂಕಟರಾವ್‌ ನಾಡಗೌಡ, ಮಾಜಿ ಶಾಸಕರಾದ ಹಂಪಯ್ಯ ನಾಯಕ, ಬಸನಗೌಡ ಬ್ಯಾಗವಾಟ, ಮುಖಂಡರಾದ ಕೆ.ಕರಿಯಪ್ಪ, ಬಸನಗೌಡ ತುರುವಿಹಾಳ ಸೇರಿ ಹಲವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಗ್ರಾಮದ ಶಾಲಾ ಕಟ್ಟಡ ಹಾಗೂ ರುದ್ರಮುನೀಶ್ವರ ಶಾಖಾ ಮಠದ ಉದ್ಘಾಟನೆಯನ್ನು ನೆರವೇರಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ