ಆ್ಯಪ್ನಗರ

ನೀರಿನ ಅಲೆಗೆ ಕೊಚ್ಚಿ ಹೋದ ‘ಕೈ’

ಎಲ್ಲರೂ ಜತೆಯಾಗಿದ್ದೀವಿ, ವಿಧಾನಸಭೆ ಚುನಾವಣೆಯ ಗೆಲುವು ಸುಲಭ ಎಂದು ಭಾವಿಸಿದ್ದ ಕಾಂಗ್ರೆಸಿಗರೀಗ ಮುಜುಗರಕ್ಕೆ ಒಳಗಾಗಿದ್ದಾರೆ. ತೋಳ್ಬಲದ ಎದುರು, ಜನ ಬಲ ಗೆದ್ದಿದ್ದು, ನೀರಿನ ಅಲೆಯಲ್ಲಿ ಕಾಂಗ್ರೆಸ್‌ ಕೊಚ್ಚಿ ಹೋಗಿದೆ. ವೆಂಕಟರಾವ್‌ ನಾಡಗೌಡರ ಕೈ ಹಿಡಿದಂತಾಗಿದೆ.

Vijaya Karnataka 16 May 2018, 5:00 am
ಸಿಂಧನೂರು : ಎಲ್ಲರೂ ಜತೆಯಾಗಿದ್ದೀವಿ, ವಿಧಾನಸಭೆ ಚುನಾವಣೆಯ ಗೆಲುವು ಸುಲಭ ಎಂದು ಭಾವಿಸಿದ್ದ ಕಾಂಗ್ರೆಸಿಗರೀಗ ಮುಜುಗರಕ್ಕೆ ಒಳಗಾಗಿದ್ದಾರೆ. ತೋಳ್ಬಲದ ಎದುರು, ಜನ ಬಲ ಗೆದ್ದಿದ್ದು, ನೀರಿನ ಅಲೆಯಲ್ಲಿ ಕಾಂಗ್ರೆಸ್‌ ಕೊಚ್ಚಿ ಹೋಗಿದೆ. ವೆಂಕಟರಾವ್‌ ನಾಡಗೌಡರ ಕೈ ಹಿಡಿದಂತಾಗಿದೆ.
Vijaya Karnataka Web hand washedout wave of water
ನೀರಿನ ಅಲೆಗೆ ಕೊಚ್ಚಿ ಹೋದ ‘ಕೈ’


ವಿಧಾನಸಭೆ ಚುನಾವಣೆ ಘೋಷಣೆಗೂ ಮೊದಲೇ ಕ್ಷೇತ್ರದಲ್ಲಿ ರೈತರ ಸಮಸ್ಯೆ ಹಾಗೂ ನೀರಿನ ವಿಚಾರವಾಗಿಯೇ ಆಡಳಿತ ಪಕ್ಷ ದವರ ನಿದ್ದೆ ಗೆಡಿಸಿದ್ದ ನಾಡಗೌಡ, ಕೊನೆಗೂ ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಮಾಜಿ ಸಂಸದ ಕೆ.ವಿರೂಪಾಕ್ಷ ಪ್ಪ ಕಾಂಗ್ರೆಸ್‌ಗೆ ಸೇರಿದ ನಂತರ ಹಂಪನಗೌಡ ಬಾದರ್ಲಿ ಅವರ ಶಕ್ತಿ ಹೆಚ್ಚಾಗಿದೆ ಎಂದು ಹೇಳಲಾಗಿತ್ತು. ಹೀಗಾಗಿ ಗೆಲುವು ಖಚಿತ ಎಂದು ಹೇಳಲಾಗಿತ್ತು. ಆದರೀಗ ಚಿತ್ರಣ ಬದಲಾಗಿದೆ. ಅನಿರೀಕ್ಷಿತ ಸೋಲಿನಿಂದಾಗಿ ಕೈ ಪಾಳಯ ಬೆಚ್ಚಿದೆ.

ಅಭಿವೃದ್ಧಿ ಮಂತ್ರ: ಐದು ವರ್ಷ ಮಾಡಿರುವ ಅಭಿವೃದ್ಧಿ ಮಂತ್ರವನ್ನೇ ಶಾಸಕ ಹಂಪನಗೌಡರು ಜಪಿಸಿದ್ದರು.

ಏತ ನೀರಾವರಿ, ರಸ್ತೆ, ನೀರಿನ ಸೌಕರ್ಯ ಒದಗಿಸುವ ಮೂಲಕ 1500 ಕೋಟಿ ರೂ. ಅನುದಾನವನ್ನು ಕ್ಷೇತ್ರಕ್ಕೆ ತಂದಿರುವ ಬಗ್ಗೆ ಹೇಳಿದ್ದರು. ಆದರೆ ತುಂಗಭದ್ರಾ ಎಡದಂಡೆ ನಾಲೆಯಿಂದ ನೀರು ಹರಿಸುವ ವಿಚಾರಕ್ಕೆ ಆದ ಗೊಂದಲ ಕಾಂಗ್ರೆಸಿಗರಿಗೆ ಮುಳುವಾಗಿ ಪರಿಣಮಿಸಿತು. ಅಲ್ಲಿಂದ ಆರಂಭವಾದ ಹಿನ್ನಡೆ ಮಧ್ಯದಲ್ಲಿ ಸುಧಾರಿಸಿತಾದರೂ ಪಕ್ಷ ದಲ್ಲಿ ಆದ ಆಂತರಿಕ ಬದಲಾವಣೆಯಿಂದ ಪರಿಸ್ಥಿತಿ ಕೈ ಮೀರಿವಂತಾಯಿತು. ಗೆಲ್ಲುವ ಆತ್ಮವಿಶ್ವಾಸದಲ್ಲಿ ಇದ್ದ ಬಾದರ್ಲಿ ಪಾಳಯಕ್ಕೆ ಸೋಲು ನುಂಗಲಾರದ ತುತ್ತಾದಂತಾಗಿದೆ.

ಜಾತಿ ಲಾಬಿ: ಪ್ರತಿ ಚುನಾವಣೆಯಲ್ಲೂ ಲಿಂಗಾಯತ ಮತ್ತು ಕುರುಬ ಸಮುದಾಯದ ನಾಯಕರ ನಡುವೆಯೇ ಚುನಾವಣೆ ಕದನ ಏರ್ಪಡುತ್ತಿತ್ತು. ಈ ಬಾರಿ ಇಬ್ಬರು ಲಿಂಗಾಯತರು ಸ್ಪರ್ಧೆಗೆ ಇಳಿದಿದ್ದರಿಂದ ಪರಿಸ್ಥಿತಿ ಗಂಭೀರ ಎನಿಸಿತ್ತು. ಗೆಲುವನ್ನು ಊಹಿಸುವುದು ಕಷ್ಟವಾಯಿತು. ಆದರೆ ಶಾಸಕ ಹಂಪನಗೌಡರ ಜತೆಗೆ ಮಾಜಿ ಸಂಸದ ಕೆ.ವಿರೂಪಾಕ್ಷ ಪ್ಪ, ಕೆಪಿಸಿಸಿ ಕಾರ್ಯದರ್ಶಿ ಕೆ.ಕರಿಯಪ್ಪ ಕೈ ಜೋಡಿಸಿದ್ದರಿಂದ ಕಾಂಗ್ರೆಸ್‌ಗೆ ಹೆಚ್ಚಿನ ಬಲ ಬಂದಂತಾಯಿತು. ಬಲವೆಲ್ಲ ಮತವಾಗಿ ಪರಿವರ್ತನೆಯಾಗಿಲ್ಲ ಎಂಬ ಚರ್ಚೆಯೂ ಇದೆ. ವೀರಶೈವ ಲಿಂಗಾಯತ, ಆಂಧ್ರ, ಆರ್ಯವೈಶ್ಯ ಸೇರಿ ಪ್ರಮುಖರ ಮತಗಳು ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್‌ ಕೈ ತಪ್ಪಿವೆ. ಕಾಂಗ್ರೆಸ್‌ ವಿರೋಧಿ ಮತಗಳು ಅನಾಯಾಸವಾಗಿ ಜೆಡಿಎಸ್‌ಗೆ ಹೋಗಿವೆ. ಅಲ್ಪಸಂಖ್ಯಾತರು ಸಹ ಅಲ್ಪ ಪ್ರಮಾಣದಲ್ಲಿ ಜೆಡಿಎಸ್‌ಗೆ ಬೆಂಬಲಿಸಿರುವುದಕ್ಕೆ ನಗರದಲ್ಲಿ ಪಡೆದಿರುವ ಮತವೂ ಕಾರಣವಾಗಿದೆ.

--------

ಹಂಪನಗೌಡ ಬಾದರ್ಲಿ 69,917 ಮತ, ವೆಂಕಟರಾವ್‌ ನಾಡಗೌಡ 71,514 ಮತ, ಬಿಜೆಪಿ ಅಭ್ಯರ್ಥಿ ಕೊಲ್ಲಾ ಶೇಷಗಿರಿರಾವ್‌ 14,795 ಮತ ಪಡೆದಿದ್ದು, ನಾಡಗೌಡ 1597 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಚುನಾವಣೆಯ ಲೆಕ್ಕಾಚಾರದಂತೆ ಕಾಂಗ್ರೆಸ್‌ಗೆ ಗೆಲ್ಲುವ ಅವಕಾಶಗಳು ಹೆಚ್ಚಿದ್ದವು. ಆದರೆ ಒಳಗೊಳಗೆ ಕಾರ್ಯಕರ್ತರ ಅಸಮಾಧಾನ, ಪ್ರಮುಖ ನಾಯಕರ ಸೇರ್ಪಡೆ ವಿಚಾರ, ವೀರಶೈವ ಲಿಂಗಾಯತರ ಬೇಸರ ಸೋಲಿಗೆ ಕಾರಣ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ