ಆ್ಯಪ್ನಗರ

ಹೈಟೆಕ್‌ ಬಸ್‌ ನಿಲ್ದಾಣ ಭಣಭಣ

ಹಟ್ಟಿ ಕ್ಯಾಂಪ್‌ ಹಾಗೂ ಪಟ್ಟಣದ ಮಧ್ಯೆ ಕಳೆದ ಆರು ವರ್ಷಗಳ ಹಿಂದೆಯೇ ನಿರ್ಮಾಣವಾದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೈಟೆಕ್‌ ಬಸ್‌ ನಿಲ್ದಾಣ, ಪ್ರಯಾಣಿಕರ ಸುಳಿವಿಲ್ಲದೇ ಭಣಗುಟ್ಟುತ್ತಿದೆ.

Vijaya Karnataka 27 Sep 2018, 5:00 am
ಹಟ್ಟಿಚಿನ್ನದಗಣಿ : ಹಟ್ಟಿ ಕ್ಯಾಂಪ್‌ ಹಾಗೂ ಪಟ್ಟಣದ ಮಧ್ಯೆ ಕಳೆದ ಆರು ವರ್ಷಗಳ ಹಿಂದೆಯೇ ನಿರ್ಮಾಣವಾದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೈಟೆಕ್‌ ಬಸ್‌ ನಿಲ್ದಾಣ, ಪ್ರಯಾಣಿಕರ ಸುಳಿವಿಲ್ಲದೇ ಭಣಗುಟ್ಟುತ್ತಿದೆ.
Vijaya Karnataka Web RAC-RCH25HGM P2


ಹಟ್ಟಿ ಪಟ್ಟಣ, ಚಿನ್ನ ಉತ್ಪಾದನೆ ಮೂಲಕ ದೇಶ, ವಿದೇಶದಲ್ಲೂ ಪ್ರಸಿದ್ಧಿ ಪಡೆದಿದೆ. ಪಟ್ಟಣದಲ್ಲಿ ಬಸ್‌ ನಿಲ್ದಾಣವಿಲ್ಲವೆಂಬ ಕೊರಗು ಬಹಳ ವರ್ಷಗಳಿಂದ ಕಾಡುತ್ತಿತ್ತು. ಬಸ್‌ ನಿಲ್ದಾಣಕ್ಕಾಗಿ ಜನತೆ ಸುದೀರ್ಘ ಹೋರಾವನ್ನೂ ನಡೆಸಿದ್ದರು. ಆದರೆ, ಬಸ್‌ ನಿಲ್ದಾಣ ಎಲ್ಲಿ ನಿರ್ಮಿಸಬೇಕೆಂಬುದು ವಿವಾದ ಸ್ವರೂಪ ಪಡೆಯಿತು. ಪಟ್ಟಣದ ಪಾಮನಕಲ್ಲೂರು ಕ್ರಾಸ್‌ ಬಳಿ ನಿಲ್ದಾಣ ನಿರ್ಮಾಣವಾಗಬೇಕೆಂದು ಕೆಲವರು ವಾದಿಸಿದರೆ, ಇನ್ನೂ ಕೆಲವರು ಕೋಠಾ ಕ್ರಾಸ್‌ ಬಳಿ ನಿಲ್ದಾಣವಾಗಬೇಕೆಂದು ಪಟ್ಟುಹಿಡಿದರು. ಇದರಿಂದ ಪಟ್ಟಣಕ್ಕೆ ಬಸ್‌ ನಿಲ್ದಾಣ ಮಂಜೂರು ತೀರಾ ವಿಳಂಬವಾಯಿತು.

ಬಯ್ಯಾಪುರ ಮುತುವರ್ಜಿ: ಗ್ರಾಮಸ್ಥರ ವಿವಾದವನ್ನೂ ಲೆಕ್ಕಿಸದ ಅಂದಿನ ಶಾಸಕ ಅಮರೇಗೌಡ ಪಾಟೀಲ್‌ ಬಯ್ಯಾಪುರ ಅವರು, ಯಾರ ಕಡೆ ವಾಲದೇ ಗಣಿ ಕಂಪನಿ ಜತೆ ಚರ್ಚಿಸಿದರು. ಅಧಿಸೂಚಿತ ಪ್ರದೇಶ ವ್ಯಾಪ್ತಿಯ ಸ್ಥಳದಲ್ಲಿ ಬಸ್‌ ನಿಲ್ದಾಣ ನಿರ್ಮಿಸಲು ಒಪ್ಪಿಗೆ ಸೂಚಿಸಿದರು. ಗಣಿ ಕಂಪನಿಯಿಂದ ನಿಲ್ದಾಣಕ್ಕೆ 65 ಲಕ್ಷ ರೂ. ಅನುದಾನವನ್ನೂ ಬಿಡುಗಡೆ ಮಾಡಿಸಿದರು. ಕ್ಯಾಂಪ್‌ ಪ್ರದೇಶದಲ್ಲಿ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಹಟ್ಟಿ ಪಟ್ಟಣದ ಜನತೆಯ ವಿರೋಧದ ನಡುವೆಯೂ ಬಸ್‌ ನಿಲ್ದಾಣ ಕಾಮಗಾರಿಗೆ 2008ರಲ್ಲಿ ಚಾಲನೆ ನೀಡಿದರು. ಕಾಮಗಾರಿ ಮುಗಿದು ಬಸ್‌ ನಿಲ್ದಾಣ 2012ರ ಆಗಸ್ಟ್‌ನಲ್ಲಿ ಉದ್ಘಾಟನೆಗೊಂಡಿತು.

ನಷ್ಟಕ್ಕೆ ದಾರಿ: ಬಸ್‌ ನಿಲ್ದಾಣವೇನೋ ಆರಂಭವಾಯಿತು. ಆದರೆ, ಪ್ರಯಾಣಿಕರು ಮಾತ್ರ ಇತ್ತ ಸುಳಿಯದಂತಾಗಿದೆ. ಬರುಬರುತ್ತ ಎಲ್ಲ ಸರಿ ಹೋಗುತ್ತದೆ ಎಂದು ನಂಬಿದವರಿಗೆ 6 ವರ್ಷ ಗತಿಸಿದರೂ ಯಾವುದೇ ಬದಲಾವಣೆ ಕಂಡಿಲ್ಲ. ಬಸ್‌ ನಿಲ್ದಾಣ ಸದ್ಯ ಬಿಕೋ ಎನ್ನುತ್ತಿದೆ. ದೂರವಾಗುತ್ತೆಂಬ ಕಾರಣದಿಂದ ಕ್ಯಾಂಪ್‌ನಲ್ಲಿ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಹಟ್ಟಿ ಜನತೆ ವಿರೋಧ ವ್ಯಕ್ತಪಡಿಸಿದ್ದರು. ಈಶಾನ್ಯ ಸಾರಿಗೆ ಸಂಸ್ಥೆಯ ಬಸ್‌ಗಳು ಹಟ್ಟಿ ಪಟ್ಟಣದ ಹಳೆ ಬಸ್‌ ನಿಲ್ದಾಣಕ್ಕೆ ಹೋಗದೇ ಸಾರಿಗೆ ಸಂಸ್ಥೆಯ ಹೈಟೆಕ್‌ ಬಸ್‌ ನಿಲ್ದಾಣದಿಂದಲೇ ಮರಳಿ ಹೋದರೆ ಆರ್ಥಿಕ ನಷ್ಟ ಅನುಭವಿಸುವ ಆತಂಕವಿದೆ.

ಪಟ್ಟಣದ ಜನತೆ, ನಗರ ಪ್ರದೇಶÜಗಳಿಗೆ ಹೋಗಬೇಕಾದರೆ ಇಲ್ಲಿಂದ ನೇರವಾದ ಬಸ್‌ ಸೌಲಭ್ಯಗಳಿಲ್ಲ. ಲಿಂಗಸುಗೂರಿಗೆ ಹೋಗಿ ಅಲ್ಲಿಂದ ಬೇರೆ ಬಸ್‌ಗಳಲ್ಲಿ ಸಂಚರಿಸಬೇಕು. ಅದಕ್ಕಾಗಿ ಪ್ರಯಾಣಿಕರು ಬಸ್‌ಗಳಿಗಾಗಿ ಕಾಯದೇ ಖಾಸಗಿ ವಾಹನಗಳ ಮೂಲಕ ಲಿಂಗಸುಗೂರು ತಲುಪಿ, ಮುಂದೆ ಪ್ರಯಾಣ ಬೆಳುಸುತ್ತಾರೆ. ಈ ಕಾರಣದಿಂದ ಸಾರಿಗೆ ಸಂಸ್ಥೆ ಬಸ್‌ಗಳೂ ಅನಿವಾರ್ಯವಾಗಿ ಜನರಿದ್ದಲ್ಲಿ ಹೋಗಬೇಕಾದ ಸ್ಥಿತಿಯಿದೆ. ಹೀಗಾಗಿ ಹೈಟೆಕ್‌ ನಿಲ್ದಾಣ ಇದ್ದೂ ಇಲ್ಲದಂತಿದೆ.

...........

ತಾತ್ಕಾಲಿಕ ಬಸ್‌ ನಿಲ್ದಾಣದಲ್ಲಿ ಹೆಚ್ಚು ಪ್ರಯಾಣಿಕರು ಸೇರುತ್ತಾರೆ. ಪಟ್ಟಣದ ಜನತೆಯಷ್ಟೇ ಅಲ್ಲದೆ ಸುತ್ತಲಿನ ಗ್ರಾಮಗಳ ಜನರೂ ಇಲ್ಲಿಂದಲೇ ಪ್ರಯಾಣ ಬೆಳೆಸುತ್ತಾರೆ. ಹೀಗಾಗಿ ಸಾರಿಗೆ ಸಂಸ್ಥೆಯ ಹೈಟೆಕ್‌ ಬಸ್‌ ನಿಲ್ದಾಣದ ಹತ್ತಿರ ಜನ ಸುಳಿಯದಂತಾಗಿದೆ. ಜನರಿಗೆæ ಅನುಕೂಲವಿದ್ದಲ್ಲಿ ಬಸ್‌ ನಿಲ್ದಾಣ ನಿರ್ಮಿಸಿದ್ದರೆ ಮಾತ್ರ ಅದರ ಸದುಪಯೋಗವಾಗುತಿತ್ತು. ಅನನುಕೂಲ ಸ್ಥಳದಲ್ಲಿ ಬಸ್‌ ನಿಲ್ದಾಣ ನಿರ್ಮಿಸಿದ್ದರಿಂದ ಜನತೆ ಅತ್ತಕಡೆ ಸುಳಿಯದಂತಾಗಿದೆ.

-ಎನ್‌.ಸ್ವಾಮಿ ನಾಯಿಕೊಡಿ, ಮುಖಂಡ, ಹಟ್ಟಿಚಿನ್ನದಗಣಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ