ಆ್ಯಪ್ನಗರ

ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ

ತುಂಗಭದ್ರಾ ಎಡದಂಡೆ ನಾಲೆಯ 89ನೇ ವಿತರಣೆ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ, ತಾಲೂಕಿನ ನೀರಮಾನ್ವಿ ಕ್ರಾಸ್‌ನಲ್ಲಿಶನಿವಾರ ನೂರಾರು ರೈತರು, ಹೆದ್ದಾರಿ ಸಂಚಾರ ತಡೆದು ಪ್ರತಿಭಟಿಸಿದರು.

Vijaya Karnataka 18 Sep 2019, 2:58 pm
xಮಾನ್ವಿ: ತುಂಗಭದ್ರಾ ಎಡದಂಡೆ ನಾಲೆಯ 89ನೇ ವಿತರಣೆ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ, ತಾಲೂಕಿನ ನೀರಮಾನ್ವಿ ಕ್ರಾಸ್‌ನಲ್ಲಿಶನಿವಾರ ನೂರಾರು ರೈತರು, ಹೆದ್ದಾರಿ ಸಂಚಾರ ತಡೆದು ಪ್ರತಿಭಟಿಸಿದರು.
Vijaya Karnataka Web highway traffic protests
ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ


''ಕಾಲುವೆಗೆ ಕಳೆದ 3 ವರ್ಷಗಳಿಂದ ನೀರು ಬಂದಿಲ್ಲ. ಈ ಬಾರಿ ತುಂಗಭದ್ರಾ ಜಲಾಶಯ ತುಂಬಿ ಲಕ್ಷಾಂತರ ಕ್ಯೂಸೆಕ್‌ ನೀರು ನದಿಗೆ ಹರಿದುಹೋಗಿದ್ದರೂ 89ನೇ ವಿತರಣೆ ಕಾಲುವೆಗೆ ಹನಿ ನೀರು ಬಂದಿಲ್ಲ. ಇನ್ನೂ ಮೂರು ದಿನಗಳಲ್ಲಿಈ ಕಾಲುವೆಗೆ ನೀರು ಬಾರದಿದ್ದರೆ, ನೀರಾವರಿ ಅಧಿಕಾರಿಗಳನ್ನು ಗೃಹಬಂಧನಲ್ಲಿಇರಿಸಲಾಗುವುದು. ಉಗ್ರ ಪ್ರತಿಭಟನೆ ಹಾಗೂ ಮಾನ್ವಿ ಬಂದ್‌ ಮಾಡಿ, ಸರಕಾರಕ್ಕೆ ಬಿಸಿ ಮುಟ್ಟಿಸಲಾಗುವುದು'' ಎಂದು ಎಚ್ಚರಿಸಿದರು.

ಬೆಳಗ್ಗೆ 10ರಿಂದ ಸತತ ಮೂರು ತಾಸು ಹೆದ್ದಾರಿ ಸಂಚಾರ ತಡೆದು ರೈತರು ಪ್ರತಿಭಟಿಸಿದರು. ರಾಯಚೂರು-ಹುಬ್ಬಳ್ಳಿ ಹೆದ್ದಾರಿಯಲ್ಲಿಸಂಚಾರ ಸಂಪೂರ್ಣ ಸ್ಥಗಿತಗೊಂಡ ಹಿನ್ನೆಲೆಯಲ್ಲಿಪ್ರಯಾಣಿಕರು ತೀವ್ರ ತೊಂದರೆ ಅನುಭವಿಸದರು. ನೂರಾರು ವಾಹನಗಳು, ಹೆದ್ದಾರಿಯುದ್ದಕ್ಕೂ ನಿಂತಿದ್ದವು.

ರೈತರ ಆಕ್ರೋಶ:ನೀರಾವರಿ ಇಲಾಖೆ ಅಧಿಕಾರಿಗಳು, ಬರುವ ಮುಂಚೆ ಧರಣಿ ಸ್ಥಳಕ್ಕೆ ಆಗಮಿಸಿದ ಜೆಸ್ಕಾಂ ಜೆಇ ಸುಭಾಷ್‌ ಅವರನ್ನು ಸುತ್ತುವರಿದ ರೈತರು, ''ಬೋರ್‌ವೆಲ್‌ನಿಂದ ನೀರು ಪಡೆಯಲು ಆಗುತ್ತಿಲ್ಲ. ನಿತ್ಯ ಕನಿಷ್ಠ 4 ತಾಸಾದರೂ ನಿರಂತರ ವಿದ್ಯುತ್‌ ಪೂರೈಸದೇ ಇರುವುದರಿಂದ ಜಮೀನಿಗೆ ನೀರು ಹರಿಸುವುದಿರಲಿ, ಕುಡಿಯಲೂ ನೀರು ಸಿಗದಂತಾಗಿದೆ. ಸರಕಾರವೇನಾದರೂ ಲೋಡ್‌ ಶೆಡ್ಡಿಂಗ್‌ ಮಾಡಲು ಹೇಳಿದೆಯೇ?'' ಎಂದು ಪ್ರಶ್ನಿಸಿದರು. ''ಇನ್ಮುಂದೆ ನಿಗದಿತ ಸಮಯದವರೆಗೆ ವಿದ್ಯುತ್‌ ಸರಬರಾಜು ಮಾಡಲಾಗುವುದು'' ಜೆಇ ಸಮಜಾಯಿಷಿ ನೀಡಿದರು.

ಆತ್ಮಹತ್ಯೆ ಎಚ್ಚರಿಕೆ: ಎಇಇ ರಾಯಪ್ಪ ಮಾತನಾಡಿ, ''69ನೇ ವಿತರಣೆ ಕಾಲುವೆವರೆಗೂ ನಿಗದಿತ ಗೇಜ್‌ ನೀರು ಬಂದರೆ ಖಂಡಿತ 89ನೇ ಕಾಲುವೆಗೆ ನೀರು ಹರಿಸುತ್ತೇನೆ.ಆದರೆ, ಅಲ್ಲಿಪ್ರಮಾಣ ಮಟ್ಟದ ನೀರು ಬರುತ್ತಿಲ್ಲ'' ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿಕೋಪಗೊಂಡ ರೈತರು, ''ಗೇಜ್‌ ನೀರಿನ ಮಟ್ಟ ಕಾಪಾಡಿಕೊಳ್ಳುವುದು ಅಧಿಕಾರಿಗಳು ಹಾಗೂ ಸರಕಾರದ ಕೆಲಸ, ನಮಗೆ ನೀರು ಕೊಡದೇ ಇದ್ದರೆ ಕ್ರಿಮಿನಾಶಕ ಕೊಟ್ಟುಬಿಡಿ ಕುಡಿದು ಸಾಯುತ್ತೇವೆ'' ಎಂದು ರೈತರು ಆಕ್ರೋಶದಿಂದ ನುಡಿದರು.

ಸಮನಾಂತರ ಕಾಲುವೆ ನಿರ್ಮಾಣ ಹಾಗೂ ಸಮನಾಂತರ ಜಲಾಶಯ ನಿರ್ಮಿಸುವ ಮೂಲಕ ರೈತರಿಗೆ ಶಾಶ್ವತ ಪರಿಹಾರವನ್ನು ಒದಗಿಸಲು ಧರಣಿನಿರತ ರೈತರು, ಮುಖ್ಯಮಂತ್ರಿಗಳಿಗೆ ಮನವಿ ಪತ್ರವನ್ನು ತಹಸೀಲ್ದಾರ್‌ ಅಮರೇಶ್‌ ಬಿರಾದಾರ್‌ ಮುಖಾಂತರ ರಾಜ್ಯ ಸರಕಾರಕ್ಕೆ ರವಾನಿಸಿದರು. ''ಇನ್ನೂ ಮೂರು ದಿನದೊಳಗೆ ಕಾಲುವೆಗೆ ನೀರು ಹರಿಸಲಾಗುವುದು'' ಎಂದು ಅಧಿಕಾರಿಗಳು ಭರವಸೆ ನೀಡಿದರು. ಅಧಿಕಾರಿಗಳ ಭರವಸೆ ನಂತರ ರೈತರು ಧರಣಿ ಹಿಂಪಡೆದರು.

ಧರಣಿಯಲ್ಲಿಕಾಂಗ್ರೆಸ್‌ ಮುಖಂಡ ಶರಣಯ್ಯ ಗುಡದಿನ್ನಿ, ಶಶಿಧರಗೌಡ ಹರವಿ, ಬಸನಗೌಡ, ಮಲ್ಲಿಕಾರ್ಜುನಗೌಡ, ಹಳ್ಳಿಹೊಸೂರು ವೀರನಗೌಡ, ಬಜ್ಜಣ್ಣ, ಬಸವರಾಜ ಕಾರಮಂಚಿ, ಅರಕೇರಿ ರಾಮಣ್ಣ, ವೆಂಕಟೇಶ ರೆಡ್ಡಿ ಶರಣಪ್ಪ ಮೇಟಿ, ಭೀಮಣ್ಣ ನಾಯಕ, ವೆಂಕಿ ಯಾದವ್‌, ಬ್ರಹ್ಮರೆಡ್ಡಿ, ಎಂ.ಮಾರೆಪ್ಪ, ಅಮರೇಶ, ಮೌನೇಶ, ಹುಡೇದ್‌ ಬಸವರಾಜ್‌ ಸೇರಿ ನೂರಾರು ರೈತರು ಪಾಲ್ಗೊಂಡಿದ್ದರು.

ಸಿಪಿಐ ದತ್ತಾತ್ರೇಯ ಕಾರ್ನಾಡ್‌, ಪಿಎಸ್‌ಐ ರಂಗಪ್ಪ ದೊಡ್ಡಮನಿ, ಸಿರವಾರ ಪಿಎಸ್‌ಐ ಸುಜಾತಾ ಹಾಗೂ ಕವಿತಾಳ ಪಿಎಸ್‌ಐ ಅಮರೇಶ ಜಿ.ಕೆ. ಬಂದೋಬಸ್‌್ತ ನೇತೃತ್ವವಹಿಸಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ