ಆ್ಯಪ್ನಗರ

ಶಾಲೆಯಲ್ಲಿ ಬಿಸಿಯೂಟ ಸವಿದ ಐಪಿಎಸ್‌ ಅಧಿಕಾರಿ: ಸಾಮಾಜಿಕ ಜಾಲತಾಣದಲ್ಲಿ ವೈರಲ್

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್‌, ಕೊಪ್ಪರ ಗ್ರಾಮದ ಶಾಲೆ ಮಕ್ಕಳು ಫುಲ್‌ ಖುಷ್‌, ಶಾಲೆಯಲ್ಲಿ ಬಿಸಿಯೂಟ ಸವಿದ ಐಪಿಎಸ್‌ ಅಧಿಕಾರಿ.

Vijaya Karnataka 20 Mar 2019, 11:01 am
ಜಗನ್ನಾಥ ಆರ್‌.ದೇಸಾಯಿ ರಾಯಚೂರು
Vijaya Karnataka Web IPS


ಸರಕಾರಿ ಶಾಲೆ ಎಂದರೆ, ಮೂಗು ಮುರಿಯುವವರೇ ಹೆಚ್ಚು. ಆದರೆ, ಚುನಾವಣೆ ಕರ್ತವ್ಯಕ್ಕೆ ಬಂದಿದ್ದ ಪ್ರೊಬೇಷನರಿ ಪೊಲೀಸ್‌ ವರಿಷ್ಠಾಧಿಕಾರಿಯೊಬ್ಬರು ಗ್ರಾಮವೊಂದರ ಸರಕಾರಿ ಶಾಲೆಗೆ ಹೋಗಿ ಮಕ್ಕಳೊಂದಿಗೆ ಬೆರೆತು ಬಿಸಿಯೂಟ ಸವಿದು ಗಮನ ಸೆಳೆದಿದ್ದಾರೆ.

ದೇವದುರ್ಗ ತಾಲೂಕಿನ ಕೊಪ್ಪರ ಗ್ರಾಮದ ಸರಕಾರಿ ಶಾಲೆ ಇದಕ್ಕೆ ಸಾಕ್ಷಿಯಾಗಿದ್ದು, ಅಲ್ಲಿನ ಮಕ್ಕಳಲ್ಲಿ ಸಂತಸ ಮೂಡಿದೆ. ಚಿತ್ರದುರ್ಗ ಮೂಲದ ಐಪಿಎಸ್‌ ಅಧಿಕಾರಿ ನಿಖಿಲ್‌ ಬುಳ್ಳಾವರ್‌ ಅವರು ಜಿಲ್ಲೆಗೆ ಪ್ರೊಬೇಷನರಿ ಎಸ್ಪಿಯಾಗಿ ಬಂದಿದ್ದಾರೆ. ಚುನಾವಣೆ ಕೆಲಸಕ್ಕೆ ಕೈ ಜೋಡಿಸಿರುವ ಅವರು ಸೋಮವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ಸ್ಥಾಪನೆಯ ಮಾಹಿತಿ ಸಂಗ್ರಹಿಸಲು ತೆರಳಿದಾಗ ಅಲ್ಲಿಯೇ ಮಕ್ಕಳೊಂದಿಗೆ ಊಟ ಮಾಡಿ ಅವರೇ ಸರಳತೆ ಮೆರೆದಿದ್ದಾರೆ.

ಕೊಪ್ಪರ ಗ್ರಾಮದ ಮತಗಟ್ಟೆಯು ಅತೀ ಸೂಕ್ಷ್ಮ ಮತಗಟ್ಟೆ ಎಂದು ಹೇಳಲಾಗುತ್ತಿದ್ದು ಅಂತೆಯೇ ಅವರು ಏ.23ರಂದು ಗ್ರಾಮದಲ್ಲಿ ನಡೆಯುವ ಮತದಾನದ ವೇಳೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪರಿಶೀಲಿಸಲು ಗ್ರಾಮದ ಸರಕಾರಿ ಶಾಲೆಗೆ ತೆರಳಿದ್ದರು. ಗ್ರಾಮದಲ್ಲಿ ಶಾಲೆ ಕಾರ್ಯನಿರ್ವಹಿಸುತ್ತಿರುವ ವೇಳೆಯೇ ಪೊಲೀಸ್‌ ಅಕಾರಿಯೊಬ್ಬರು ಶಾಲೆಗೆ ಆಗಮಿಸಿದ್ದರಿಂದ ಅವರ ಭೇಟಿಯ ಬಗ್ಗೆ ಮಾಹಿತಿಯಿಲ್ಲದ್ದರಿಂದ ವಿದ್ಯಾರ್ಥಿಗಳು ಮೊದಲಿಗೆ ಆತಂಕಕ್ಕೆ ಸಿಲುಕಿದ್ದಾರೆ.

ನಿರಾಳ:

ಪೊಲೀಸ್‌ ಅಧಿಕಾರಿಯೊಬ್ಬರು ಶಾಲೆಗೆ ಆಗಮಿಸಿದ್ದನ್ನು ನೋಡಿ ಮೊದಲಿಗೆ ಮಕ್ಕಳಲ್ಲಿ ಆತಂಕ ಮೂಡಿದೆ. ಆದರೆ, ಅವರು ಏ.23 ರಂದು ನಡೆಯುವ ಮತದಾನದ ಹಿನ್ನೆಲೆಯಲ್ಲಿ ಮತಗಟ್ಟೆ ವೀಕ್ಷಣೆಗೆ ಆಗಮಿಸಿದ್ದಾರೆಂಬುದು ತಿಳಿಯುತ್ತಿದ್ದಂತೆ ನಿರಾಳತೆ ಮೂಡಿದೆ. ಬಳಿಕ ಐಪಿಎಸ್‌ ಅಧಿಕಾರಿ ನಿಖಿಲ್‌ ವಿದ್ಯಾರ್ಥಿಗಳೊಂದಿಗೆ ಕೆಲ ಹೊತ್ತು ಸಂವಾದ ನಡೆಸಿದ್ದಾರೆ. ಪೊಲೀಸ್‌ ಇಲಾಖೆಯ ಕಾರ್ಯವೈಖರಿ, ಐಪಿಎಸ್‌ ಪೂರ್ಣಗೊಳಿಸಲು ಹೇಗೆ ಅಧ್ಯಯನ ಮಾಡಬೇಕು ಎಂಬುದು ಸೇರಿ ನಾನಾ ರೀತಿಯ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಮಾತುಕತೆ ಮುಗಿಯುವಷ್ಟರಲ್ಲಿ ಮಧ್ಯಾಹ್ನದ ಊಟದ ಸಮಯವಾಗಿದ್ದರಿಂದ ಮಕ್ಕಳು ಶಾಲೆಯಲ್ಲಿ ಸಿದ್ಧಪಡಿಸಿದ ಬಿಸಿಯೂಟಕ್ಕೆ ತಾವು ಸಹ ಅವರೊಂದಿಗೆ ಊಟಕ್ಕೆ ಕುಳಿತು ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಅಚ್ಚರಿ ಮೂಡಿಸಿದ್ದಾರೆ.


ಜಾಲತಾಣದಲ್ಲಿ ವೈರಲ್‌:

ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರು ಗ್ರಾಮದ ಶಾಲೆಯೊಂದರಲ್ಲಿ ತಯಾರಿಸುವ ಬಿಸಿಯೂಟ ಸೇವಿಸುವ ಮೂಲಕ ಸರಳತೆ ಮೆರೆದಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಅಧಿಕಾರಿಯ ಸರಳತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪೊಲೀಸ್‌ ಅಧಿಕಾರಿಗಳು ಎಂದರೆ ಗ್ರಾಮೀಣ ಭಾಗದಲ್ಲಿ ಭಯ, ಆತಂಕವೇ ಹೆಚ್ಚು. ಐಪಿಎಸ್‌ ಹಂತದ ಅಧಿಕಾರಿಯೊಬ್ಬರು ಗ್ರಾಮೀಣ ಭಾಗದ ಶಾಲೆಯೊಂದರಲ್ಲಿ ಬಿಸಿಯೂಟ ಸವಿದು, ಮಕ್ಕಳೊಂದಿಗೆ ಬೆರೆತು ಕೆಲ ಹೊತ್ತು ಬೆರತು ಸರತೆಯನ್ನು ತೋರಿದ ಬಗ್ಗೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

ಲೋಕಸಭೆ ಚುನಾವಣೆಯ ಮತಗಟ್ಟೆ ಕೊಪ್ಪರ ಗ್ರಾಮದ ಶಾಲೆಯಲ್ಲಿ ಸ್ಥಾಪಿಸಲಿರುವುದರಿಂದ ಪರಿಶೀಲನೆಗೆ ತೆರಳಿದ್ದೆ. ಅದೇ ವೇಳೆ ಗ್ರಾಮೀಣ ಭಾಗದ ಮಕ್ಕಳೊಂದಿಗೆ ಕೆಲ ಹೊತ್ತಿದ್ದು, ಬಿಸಿಯೂಟ ಸವಿದು ಬಂದೆ. ಈ ಅನುಭವ ಖುಷಿ ಕೊಟ್ಟಿತು -ನಿಖಿಲ್‌ ಬುಳ್ಳಾವರ್‌, ಪ್ರೊಬೇಷನರಿ ಐಪಿಎಸ್‌ ಅಧಿಕಾರಿ, ರಾಯಚೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ