ಆ್ಯಪ್ನಗರ

ಸಂಪ್ರದಾಯ ಕಡೆಗಣಿಸುವುದು ಸರಿಯಲ್ಲ: ಮಂತ್ರಾಲಯ ಶ್ರೀ

ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ತೀರ್ಪು ಗೌರವಿಸಬೇಕು. ಜತೆಗೆ, ಅನೇಕ ವರ್ಷಗಳಿಂದ ನಡೆದುಬಂದಿರುವ ಸಂಪ್ರದಾಯವನ್ನು ಕಡೆಗಣಿಸುವುದು ಸರಿಯಲ್ಲ. ಭಕ್ತರ ಭಾವನೆಗೂ ಗೌರವ ನೀಡಬೇಕಿದೆ ಎಂದು ಮಂತ್ರಾಲಯ ಮಠಾಧೀಶರಾದ ಶ್ರೀಸುಬುಧೇಂದ್ರತೀರ್ಥರು ಹೇಳಿದರು.

Vijaya Karnataka 21 Nov 2018, 12:00 am
ರಾಯಚೂರು; ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ತೀರ್ಪು ಗೌರವಿಸಬೇಕು. ಜತೆಗೆ, ಅನೇಕ ವರ್ಷಗಳಿಂದ ನಡೆದುಬಂದಿರುವ ಸಂಪ್ರದಾಯವನ್ನು ಕಡೆಗಣಿಸುವುದು ಸರಿಯಲ್ಲ. ಭಕ್ತರ ಭಾವನೆಗೂ ಗೌರವ ನೀಡಬೇಕಿದೆ ಎಂದು ಮಂತ್ರಾಲಯ ಮಠಾಧೀಶರಾದ ಶ್ರೀಸುಬುಧೇಂದ್ರತೀರ್ಥರು ಹೇಳಿದರು.
Vijaya Karnataka Web RAC-RCH20JD01


ಅವರು ನಗರದ ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಕಣ್ಣಿನ ಉಚಿತ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಸಮಾರಂಭಕ್ಕೆ ಚಾಲನೆ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಶಬರಿ ಮಲೆ ಅಯ್ಯಪ್ಪ ದೇಗುಲಕ್ಕೆ ಸಂಬಂಧಿಸಿದ ವಿವಾದಕ್ಕೆ ಆದಷ್ಟು ಶೀಘ್ರ ಸಂಬಂಧಿಸಿದವರು ಪರಿಹಾರ ಕಂಡುಕೊಳ್ಳುವುದು ಸೂಕ್ತ. ಆ ಮೂಲಕ ಶಾಂತಿಗೆ ಅವಕಾಶ ಮಾಡಿಕೊಡಬೇಕಿದೆ ಎಂದರು.

ಬ್ಯಾರೇಜ್ ನಿರ್ಮಿಸಲು ಒತ್ತಾಯ: ಮಂತ್ರಾಲಯದಲ್ಲಿ ಬೇಸಿಗೆಯಲ್ಲಿ ಕುಡಿವ ನೀರಿನ ತೀವ್ರ ಅಭಾವ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ನದಿಗೆ ಅಡ್ಡಲಾಗಿ ಗ್ರಾಮದ ಬಳಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಲು ಆಂಧ್ರ ಸರಕಾರವನ್ನು ಒತ್ತಾಯಿಸಲಾಗಿದೆ. ಈ ಯೋಜನೆ ಜಾರಿಯಾದರೆ ಸುತ್ತಲಿನ ಗ್ರಾಮಗಳ ನೀರಿನ ಸಮಸ್ಯೆಗೂ ಪರಿಹಾರ ದೊರೆಯಲಿದೆ. ನದಿಯ ಆಚೆ ದಡದಿಂದ ಆಗಮಿಸುವ ಗ್ರಾಮಸ್ಥರಿಗೆ ಬ್ಯಾರೇಜ್ ಮೇಲೆ ಸಂಚಾರಕ್ಕೆ ಅನುವಾಗಲಿದೆ ಎಂದರು.

ರೈತರ ಸಾಲ ಮನ್ನಾ; ಕರ್ನಾಟಕದಲ್ಲಿ ಭೀಕರ ಬರ ಪರಿಸ್ಥಿತಿಯಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಸಿಎಂ ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡುವತ್ತ ತೀವ್ರಗತಿಯಲ್ಲಿ ಕ್ರಮ ಕೈಗೊಳ್ಳಬೇಕು. ರೈತರ ಸಾಲ ವಸೂಲಾತಿಗೆ ಬ್ಯಾಂಕುಗಳು ಮತ್ತು ಆರ್ಥಿಕ ಸಂಸ್ಥೆಗಳು ಮುಂದಾಗಿರುವುದು ಸರಿಯಲ್ಲ. ರೈತರು ಸಂಕಷ್ಟದಲ್ಲಿರುವಾಗ ಒತ್ತಡ ಹೇರುವುದು ಅನಾಹುತಕ್ಕೆ ದಾರಿ ಮಾಡಲಿದೆ. ಈ ನಿಟ್ಟಿನಲ್ಲಿ ಶೀಘ್ರವೇ ಸಿಎಂ ಅವರನ್ನು ಭೇಟಿ ಮಾಡಿ ರೈತರ ಸಂಕಷ್ಟಗಳ ಬಗ್ಗೆ ಪರಿಹಾರಕ್ಕೆ ಚರ್ಚಿಸಲಾಗುವುದು ಎಂದರು. ಶ್ರೀಮಠದ ಪ್ರಮುಖರಾದ ನರಸಿಂಗರಾವ್ ದೇಶಪಾಂಡೆ, ನರಹರಿ ಆಚಾರ್ಯ, ಬ್ರಾಹ್ಮಣ ಮಹಾಸಭಾದ ಜಿಲ್ಲಾಧ್ಯಕ್ಷ ಡಾ.ಆನಂದತೀರ್ಥ ಫಡ್ನೀಸ್, ಡಾ.ರವಿರಾಜೇಶ್ವರ್, ಸೇತುಮಾಧವ ಕನಕವೀಡು, ಜಯಕುಮಾರ್ ಗಬ್ಬೂರು ಸೇರಿದಂತೆ ಅನೇಕರಿದ್ದರು. ಶ್ರೀರಾಘವೇಂದ್ರಸ್ವಾಮಿಗಳ ಮಠ ಹಾಗೂ ಚೆನ್ನೈನ ಶ್ರೀ ಶಂಕರ ನೇತ್ರಾಲಯದ ಸಹಯೋಗದಲ್ಲಿ ಕಳೆದ ವರ್ಷ ಮಂತ್ರಾಲಯದಲ್ಲಿ ಕಣ್ಣಿನ ಉಚಿತ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಆಯೋಜಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ