ದೇವದುರ್ಗ: ಕಳಪೆ ಮಟ್ಟದ ಬಿತ್ತನೆ ಬೀಜ ಮಾರಾಟ ಮಾಡುತ್ತಿರುವ ಜಾಲಹಳ್ಳಿ ಆಗ್ರೋ ಏಜೆನ್ಸಿ ಹಾಗೂ ಕೃಷಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೆಆರ್ಎಸ್ ಮುಖಂಡರು ಜಾಲಹಳ್ಳಿ ನಾಡ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಜಾಲಹಳ್ಳಿ ವ್ಯಾಪ್ತಿಯಲ್ಲಿ ಕಳಪೆ ಬೀಜ ಮಾರಾಟ ಲೀಲಾಜಾಲ ತಲೆ ಎತ್ತಿದ್ದು, ಇದಕ್ಕೆ ಕೃಷಿ ಅಧಿಕಾರಿಗಳೂ ಸಾಥ್ ನೀಡುತ್ತಿದ್ದಾರೆ ಎಂದು ಸಮಿತಿ ಅಧ್ಯಕ್ಷ ನರಸಣ್ಣ ನಾಯಕ ಆರೋಪಿಸಿದರು. ಇಲ್ಲಿನ ಆಗ್ರೋ ಏಜೆನ್ಸಿ ಮಾಲೀಕರು ಮಾರಾಟ ಮಾಡುತ್ತಿರುವ ಸನ್ ಬ್ರಾಂಡ್ ನಂ.007 ಸೂರ್ಯಕಾಂತಿ ಬೀಜ ಬಿತ್ತನೆ ಮಾಡಿದ ಸಾವಿರಾರು ಎಕರೆಯಲ್ಲಿ ಬೆಳೆ ಕೈಕೊಟ್ಟಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ. ಕಳಪೆ ಬೀಜ ಮಾರಾಟ ದಂಧೆಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಹಲವಾರು ಬಾರಿ ಕೃಷಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಗಮನ ಹರಿಸಿಲ್ಲ. ಕೂಡಲೇ ಕಳಪೆ ಬೀಜ ಮಾರಾಟ ಮಾಡುತ್ತಿರುವ ಆಗ್ರೋ ಏಜೆನ್ಸಿ ಪರವಾನಗಿ ರದ್ದು ಮಾಡಬೇಕು ಎಂದು ಒತ್ತಾಯಿಸಿ ಕಂದಾಯ ಇಲಾಖೆ ಸಿಬ್ಬಂದಿ ಮೂಲಕ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.