ಆ್ಯಪ್ನಗರ

ಪರಿತ್ಯಕ್ತ ದೇವದಾಸಿಯರ ಮಕ್ಕಳಿಗೆ ಕಂಕಣಭಾಗ್ಯ

ಪರಿತ್ಯಕ್ತ ದೇವದಾಸಿರ ಕೆಲವು ಮಕ್ಕಳು, ಕಂಕಣಭಾಗ್ಯ ಪಡೆಯುವ ಮೂಲಕ ದೇವದಾಸಿ ಪದ್ಧತಿ ನಿರ್ಮೂಲನೆಗೆ ಮೊದಲ ಹೆಜ್ಜೆ ಇರಿಸಿದ ಅಪರೂಪದ ಕ್ಷಣಗಳಿಗೆ ನಗರದ ವಿಠ್ಠಲ ರುಕ್ಮಿಣಿ ಕಲ್ಯಾಣ ಮಂಟಪ ಸಾಕ್ಷಿಯಾಯಿತು.

Vijaya Karnataka 28 Jun 2019, 5:00 am
ರಾಯಚೂರು :ಪರಿತ್ಯಕ್ತ ದೇವದಾಸಿರ ಕೆಲವು ಮಕ್ಕಳು, ಕಂಕಣಭಾಗ್ಯ ಪಡೆಯುವ ಮೂಲಕ ದೇವದಾಸಿ ಪದ್ಧತಿ ನಿರ್ಮೂಲನೆಗೆ ಮೊದಲ ಹೆಜ್ಜೆ ಇರಿಸಿದ ಅಪರೂಪದ ಕ್ಷಣಗಳಿಗೆ ನಗರದ ವಿಠ್ಠಲ ರುಕ್ಮಿಣಿ ಕಲ್ಯಾಣ ಮಂಟಪ ಸಾಕ್ಷಿಯಾಯಿತು.
Vijaya Karnataka Web RAC-RCH27HD03


ದೇವದಾಸಿ ಪದ್ಧತಿ ನಿರ್ಮೂಲನಾ ಮಹಿಳಾ ಒಕ್ಕೂಟ ಹಾಗೂ ಪ್ರಗತಿಪರ ಸಂಘಟನೆಗಳ ಸಹಭಾಗಿತ್ವದಲ್ಲಿ ಗುರುವಾರ ಆಯೋಜಿಸಿದ್ದ ಪರಿತ್ಯಕ್ತ ದೇವದಾಸಿಯರ ರಾಜ್ಯ ಮಟ್ಟದ ಜಾಗೃತಿ ಶಿಬಿರ ಮತ್ತು ಅವರ ಮಕ್ಕಳ ಸಾಮೂಹಿಕ ಮದುವೆ ಸಮಾರಂಭ, ನೂರಾರು ಜನರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.

ಮಂಜುನಾಥ-ಲಕ್ಷ್ಮಿ, ಸುನೀಲ್‌-ಗೌತಮಿ, ಭೀಮರೆಡ್ಡಿ-ಅಂಬಮ್ಮ ದಾಂಪತ್ಯಜೀವನಕ್ಕೆ ಕಾಲಿರಿಸಿದ ಅಪರೂಪದ ನೂತನ ಜೋಡಿಗಳು. ಈ ಜೋಡಿಗಳು ಪರಸ್ಪರ ಒಪ್ಪಿದ್ದಲ್ಲದೇ ಅಸ್ಪೃಶ್ಯತೆ ಹೋಗಲಾಡಿಸಿ, ಅಂತರ್ಜಾತಿ ಮದುವೆಯಾಗುವ ಮೂಲಕ ಸಮಾನ ಸಮಾಜದತ್ತ ಸಾಗಲು ಪಣತೊಟ್ಟರು.

ಪ್ರಗತಿಪರ ಸಂಘಟನೆ ಮುಖಂಡ ನಿತ್ಯಾನಂದಸ್ವಾಮಿ ಮಾತನಾಡಿ, ''ದೇವದಾಸಿಯರು ತಮ್ಮ ಮಕ್ಕಳಿಗೆ ಸ್ವಾತಂತ್ರ್ಯ ನೀಡಬೇಕು. ಆಗ ಅವರು ಮುಕ್ತ ಮನಸ್ಸಿನಿಂದ ಆಲೋಚಿಸಿ ಸಂಗಾತಿಯನ್ನು ಆರಿಸಿಕೊಳ್ಳುತ್ತಾರೆ. ಆಗ ಅವಮಾನಕರ ಜೀವನದ ಬದಲಾಗಿ ಸ್ವಾಭಿಮಾನದ ಜೀವನ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ'' ಎಂದರು.

ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ಕೆ.ಜಿ.ವೀರೇಶ್‌ ಮಾತನಾಡಿ, ''ಪರಿತ್ಯಕ್ತ ದೇವದಾಸಿಯರ ಮಕ್ಕಳು ಸಮಾಜದಲ್ಲಿ ಜನಸಾಮಾನ್ಯರಂತೆ ಗೌರವದ ಜೀವನ ನಡೆಸಿ, ಭದ್ರತೆ ಹೊಂದಲು ಸರಕಾರ, ಪರಿತ್ಯಕ್ತ ದೇವದಾಸಿ ಮಹಿಳೆಯರ ಮಕ್ಕಳನ್ನು ವಿವಾಹವಾದರೆ ಪ್ರೋತ್ಸಾಹಧನ ನೀಡುತ್ತಿದೆ'' ಎಂದರು.

ಹಸೆಮಣೆ ಏರಿದ ಒಟ್ಟು 15 ಜೋಡಿಗಳಿಗೆ ಒಂದೇ ವೇದಿಕೆಯಲ್ಲಿ ನೂರಾರು ಜನರು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ವರಲಕ್ಷ್ಮಿ, ರೇಣುಕಾ, ರವಿ, ಶರಣಗೌಡ ಸೇರಿ ಹಲವರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ