ಆ್ಯಪ್ನಗರ

ಒಂದೇ ಕೊಠಡಿಯಲ್ಲಿ 76 ವಿದ್ಯಾರ್ಥಿಗಳ ಕಲಿಕೆ

ತಾಲೂಕಿನ ಮಲ್ಲಿಗೆಮಡುಗು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಒಂದೇ ಕೊಠಡಿಯಲ್ಲಿ 76 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಮಕ್ಕಳಿಗೆ ತೀವ್ರ ಸಮಸ್ಯೆ ಎನಿಸಿದೆ.

Vijaya Karnataka 3 Jul 2018, 5:00 am
ಮಾನ್ವಿ : ತಾಲೂಕಿನ ಮಲ್ಲಿಗೆಮಡುಗು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಒಂದೇ ಕೊಠಡಿಯಲ್ಲಿ 76 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಮಕ್ಕಳಿಗೆ ತೀವ್ರ ಸಮಸ್ಯೆ ಎನಿಸಿದೆ.
Vijaya Karnataka Web learning of 76 students in the same room
ಒಂದೇ ಕೊಠಡಿಯಲ್ಲಿ 76 ವಿದ್ಯಾರ್ಥಿಗಳ ಕಲಿಕೆ


ಸರಕಾರಿ ಶಾಲೆಗಳಲ್ಲಿ 40 ವಿದ್ಯಾರ್ಥಿಗಳಿಗೆ ಒಂದು ಕೊಠಡಿ ಬಳಕೆ ಮಾಡಬೇಕು ಎನ್ನುವ ನಿಯಮವಿದೆ. ಆದರೆ, ಇಲ್ಲಿನ ಸರಕಾರಿ ಶಾಲೆಯಲ್ಲಿ ಎರಡು ಕೊಠಡಿಯಲ್ಲಿ ಕುಳಿತುಕೊಳ್ಳಬೇಕಾದ ಮಕ್ಕಳು ಒಂದೇ ಕಡೆ ಕಲಿಕೆ ನಡೆಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಟ್ಟಡ ಕೊರತೆಯಿಂದ ಒಂದೇ ಕೊಠಡಿಯಲ್ಲಿ ಪಾಠ, ಅಡುಗೆ ಸಾಮಗ್ರಿ ದಾಸ್ತನು, ಸಿಲಿಂಡರ್‌, ಬಿಸಿಯೂಟ ಸೇರಿ ಎಲ್ಲ ಕೆಲಸ ಕಾರ್ಯಗಳನ್ನು ಮಾಡಬೇಕಾದ ಸ್ಥಿತಿ ಉಂಟಾಗಿದೆ.

ಒಂದೆ ಕೋಣೆ: ಇಲ್ಲಿನ ಶಾಲೆಯಲ್ಲಿ 1 -5ನೇ ತರಗತಿಯ ಒಟ್ಟು 76 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ನಿತ್ಯ ನಾಲ್ಕೈದು ವಿದ್ಯಾರ್ಥಿಗಳು ಗೈರು ಹಾಜರಿದ್ದರೆ ಶೇ.90 ರಷ್ಟು ವಿದ್ಯಾರ್ಥಿಗಳು ಶಾಲೆಗೆ ಆಗಮಿಸುತ್ತಾರೆ. ಇರುವ ಒಂದೇ ಕೊಠಡಿಯಲ್ಲಿ ಮುಖ್ಯ ಶಿಕ್ಷ ಕರ ಟೆಬಲ್‌, ಖುರ್ಚಿ, ಪಠ್ಯ ಪುಸ್ತಕ, ಶಾಲಾ ದಾಖಲಾತಿ, ಬಿಸಿಯೂಟದ ಅಕ್ಕಿ, ಬೇಳೆ ಕಾಳು, ತರಕಾರಿ, ಪಾತ್ರೆ ಇಡಲಾಗಿದೆ. ಉಳಿದ ಗೇಣು ಜಾಗದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಮಾಡಬೇಕಾಗಿದೆ. ಶಾಲೆಯ ಒಂದು ಕೊಠಡಿ ಹಾಗೂ ಬಿಸಿಯೂಟ ಕೊಣೆ ಶೀಥಿಲಗೊಂಡ ಕಾರಣ ಕಳೆದ 2017 ಡಿಸೆಂಬರ್‌ ತಿಂಗಳಲ್ಲೇ ನೆಲಸಮ ಮಾಡಲಾಗಿದೆ. ಪರ್ಯಾಯ ವ್ಯವಸ್ಥೆ ಇಲ್ಲದೆ ಪರಿಣಾಮ ಒಂದೇ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ಕಲಿಕೆಗೆ ವ್ಯವಸ್ಥೆ ಮಾಡಲಾಗಿದೆ. ಇಕ್ಕಟ್ಟಿನಲ್ಲಿ ಒಂದರಿಂದ ಐದನೇ ತರಗತಿ ವಿದ್ಯಾರ್ಥಿಗಳು ಅಭ್ಯಾಸ ಮಾಡಬೇಕಾಗಿದೆ.

ಅಪೂರ್ಣ ಕಾಮಗಾರಿ: 2009 ರಲ್ಲಿ ಸಂಭವಿಸಿದ ನೆರೆ ಹಾವಳಿ ಸಂದರ್ಭದಲ್ಲಿ ಈ ಶಾಲೆಗೆ ಒಂದು ಕೊಠಡಿ ಮಂಜೂರು ಮಾಡಲಾಗಿತ್ತು. ಆದರೆ, ಕಟ್ಟಡ ನಿರ್ಮಾಣದ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರ ಹಣ ಬಿಡುಗಡೆಯಾಗಿಲ್ಲ ಎಂದು ಅರ್ಧಕ್ಕೆ ಬಿಟ್ಟು ಹೋಗಿದ್ದರು. ವಿದ್ಯಾರ್ಥಿಗಳ ಕೊಠಡಿ ಸಮಸ್ಯೆ ಇರುವ ಕಾರಣ ಸಿಆರ್‌ಪಿ ಹಾಗೂ ಜಿ.ಪಂ.ಸದಸ್ಯರ ಒತ್ತಾಯದ ಮೇರೆಗೆ ಕೊಠಡಿಯ ಚಾವಣಿ ಅನುದಾನ ಬಿಡುಗಡೆ ಮಾಡಿಸಲಾಯಿತು. ಚಾವಣಿ ಕಾಮಗಾರಿ ಬಿಟ್ಟು ಗೊಡೆಗಳಿಗೆ ಪ್ಲ್ಯಾಸ್ಟರ್‌, ಕಿಣಕಿ-ಬಾಗಿಲು, ಬಂಡೆ ಹಾಸು ಇಲ್ಲದೇ ಅರ್ಧಂಬರ್ಧ ಕಾಮಗಾರಿ ಮಾಡಲಾಯಿತು. ಅದೇ ಕೊಠಡಿಯಲ್ಲಿ 4 ರಿಂದ 5 ನೇ ತರಗತಿ ಮಕ್ಕಳಿಗೆ ಪಾಠ ನಡೆಸಲಾಗುತ್ತಿದೆ. ಅಡುಗೆ ಕೊಣೆ ಇಲ್ಲದೆ ಬಿಸಿಯೂಟ ಯೋಜನೆಗೆ ತೊಂದರೆಯಾಗುತ್ತಿದೆ. ಇದರಿಂದ ಮಕ್ಕಳ ಕಲಿಕಗೆ ತೊಂದರೆಯಾಗುತ್ತಿದೆ. ಅನಿವಾರ್ಯ ಎಂಬಂತೆ ಶಿಕ್ಷಕರು ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಾರೆ. ಶಿಕ್ಷಣ ಇಲಾಖೆ ತಕ್ಷಣ ಮಲ್ಲಿಗೆಮಡುಗು ಶಾಲೆಗೆ ಕೊಠಡಿ ಮಂಜೂರು ಮಾಡಬೇಕೆಂಬುದು ವಿದ್ಯಾರ್ಥಿ ಪಾಲಕರ ಒತ್ತಾಯವಾಗಿದೆ.

.........

ಮಲ್ಲಿಗೆಮಡುಗು ಶಾಲೆಗೆ ಕೊಠಡಿಗಳ ಸಮಸ್ಯೆಯಿಂದ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗುತ್ತಿರುವ ಬಗ್ಗೆ ಮಾಹಿತಿ ಇದೆ. ಜಿ.ಪಂ. ಅನುದಾನದಲ್ಲಿ ಶಾಲೆಗೆ ಕೊಠಡಿ ಮಂಜೂರಾಗಿದ್ದು, ಆದಷ್ಟು ಬೇಗನೆ ಕೊಠಡಿ ಕಾಮಗಾರಿ ಆರಂಭಿಸುವಂತೆ ಪಂಚಾಯತ್‌ ರಾಜ್‌ ಇಲಾಖೆ ಅಧಿಕಾರಿಗಳಿಗೆ ಸೂಚಿಸುತ್ತೇನೆ.

-ವೆಂಕಟೇಶ ಗುಡಿಹಾಳ, ಕ್ಷೇತ್ರ ಶಿಕ್ಷ ಣಾಧಿಕಾರಿ, ಮಾನ್ವಿ

------

ಸರಕಾರಿ ಶಾಲೆಗೆ ಕೊಠಡಿ ಸಮಸ್ಯೆಯಿಂದ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಇಲ್ಲಿನ ಸಮಸ್ಯೆ ಕುರಿತು ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅಪೂರ್ಣಗೊಂಡ ಕೊಠಡಿ ಕಾಮಗಾರಿಯಿಂದಾಗಿ ತಾತ್ಕಾಲಿಕವಾಗಿ ಬಂಡೆ ಹಾಕಿಸಿ 4 ಮತ್ತು 5ನೇ ತರಗತಿ ಮಕ್ಕಳಿಗೆ ಪಾಠ ಹೇಳಲಾಗುತ್ತಿದೆ.

-ಶರಣಪ್ಪ, ಸಂಗಾಪೂರ, ಸಿಆರ್‌ಪಿ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ