ಆ್ಯಪ್ನಗರ

ನರೇಗಾ ಕೂಲಿ ವೆಚ್ಚ ಕಡಿತ, ಪಿಡಿಓ ತರಾಟೆಗೆ

ಸಮೀಪದ ಆಮದಿಹಾಳ ಗ್ರಾ.ಪಂ. ವ್ಯಾಪ್ತಿಯ ಕನಸಾವಿ ಗ್ರಾಮದ ನರೇಗಾ ಕೂಲಿಕಾರರ ಕೂಲಿ ವೆಚ್ಚವನ್ನು ವಿನಾಕಾರಣ ಕಡಿತಗೊಳಿಸಿದ್ದಾರೆ ಎಂದು ಪಿಡಿಒನ್ನು ಕೂಲಿಕಾರರು ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ಜರುಗಿದೆ.

Vijaya Karnataka 21 May 2019, 5:00 am
ನಾಗರಹಾಳ : ಸಮೀಪದ ಆಮದಿಹಾಳ ಗ್ರಾ.ಪಂ. ವ್ಯಾಪ್ತಿಯ ಕನಸಾವಿ ಗ್ರಾಮದ ನರೇಗಾ ಕೂಲಿಕಾರರ ಕೂಲಿ ವೆಚ್ಚವನ್ನು ವಿನಾಕಾರಣ ಕಡಿತಗೊಳಿಸಿದ್ದಾರೆ ಎಂದು ಪಿಡಿಒನ್ನು ಕೂಲಿಕಾರರು ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ಜರುಗಿದೆ.
Vijaya Karnataka Web RAC-RCH20NAGARAHAL01


2019 -20ನೇ ಸಾಲಿನ ನರೇಗಾ ಯೋಜನೆಯಲ್ಲಿ ಸುಮಾರು 3 ಲಕ್ಷ ರೂ. ವೆಚ್ಚದಲ್ಲಿ ಹಳ್ಳದ ಹೂಳು ತೆಗೆಯುವ ಕಾಮಗಾರಿ ಕಳೆದ 1 ವಾರದಿಂದ ಮಾಡಲಾಗಿತ್ತು. ನಂತರ ಪಿಡಿಒ ಶಾಂತಪ್ಪ ಹಾಗೂ ತಾಂತ್ರಿಕ ಅಧಿಕಾರಿ ಮಹೇಂದ್ರ ಸೇರಿ ಕಾಮಗಾರಿಯ ಅಳತೆ ಪ್ರಮಾಣ ಪರಿಶೀಲಿಸಿದ್ದಾರೆ. ಸರಕಾರದ ನಿಯಮದ ಪ್ರಕಾರ ನರೇಗಾ ಯೋಜನೆಯ ಪ್ರತಿದಿನದ ಪ್ರತಿಯೊಬ್ಬ ವ್ಯಕ್ತಿಯ ಕೂಲಿ 249 ರೂ. ಮತ್ತು ಸಾಮಗ್ರಿಗಳ ವೆಚ್ಚ 10 ರೂ. ನೀಡಬೇಕು. ಆದರೆ ಕಾಮಗಾರಿಯ ಅಳತೆ ಪ್ರಕಾರ ಒಂದು ದಿನಕ್ಕೆ ಪ್ರತಿಯೊಬ್ಬರಿಗೆ ಕೇವಲ 160 ರೂ. ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ಆರೋಪ ಮಾಡಿದರು.

ಬರಗಾಲದಲ್ಲಿ ಬಿರುಬಿಸಿಲೆನ್ನದೇ ಸುಮಾರು 14 ದಿನಗಳ ಕಾಲ ತುತ್ತು ಅನ್ನಕ್ಕಾಗಿ ಕಾಮಗಾರಿ ನಿರ್ವಹಿಸಿದ್ದೇವೆ. ಕೂಲಿ ಹಣ ಯಾಕೇ ಕಡಿತಗೊಳಿಸಿದ್ದೀರಿ ಎಂದು ಪಿಡಿಒ ಶಾಂತಪ್ಪ ಅವರನ್ನು ಗ್ರಾ.ಪಂ. ಕಚೇರಿಯಲ್ಲಿ ತರಾಟೆಗೆ ತೆಗೆದುಕೊಂಡರು. ನಂತರ ಸ್ಥಳಕ್ಕೆ ತಾ.ಪಂ. ಸಹಾಯಕ ನಿರ್ದೇಶಕ ಅಮರೇಶ ಆಗಮಿಸಿದರು.

ಕೂಲಿಕಾರರ ಹಾಜರಾತಿ ದಾಖಲೆ ಪರಿಶೀಲಿಸಿದಾಗ ಹೂಳೆತ್ತುವ ಕಾಮಗಾರಿಯಲ್ಲಿ, ನಿಗದಿತ ಕೂಲಿಕಾರರಿಗಿಂತ ಹೆಚ್ಚಿನ ಕೂಲಿಕಾರರು ಕಾಮಗಾರಿ ನಿರ್ವಹಿಸಿದ್ದಾರೆ. ಇದರಿಂದ ಕಾಮಗಾರಿಯ ಅಳತೆ ಪ್ರಮಾಣದಲ್ಲಿ ಕಡಿಮೆ ಬಂದಿದೆ. ಆದ್ದರಿಂದ ಕೂಲಿಕಾರರ ಕೂಲಿ ವೆಚ್ಚ ಕಡಿತಗೊಳಿಸಲಾಗಿದೆ. ಪುನಃ ಕಾಮಗಾರಿಯ ಅಳತೆ ಹಾಗೂ ಹಾಜರಾತಿ ಪರಿಶೀಲಿಸಿ ನಿಗದಿತ ಹಣ ನೀಡಲಾಗುವುದು. ಯಾವುದೇ ಲೋಪದೋಷ ಬಂದರೆ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

ಈ ಸಂದರ್ಭದಲ್ಲಿ ತಾಂತ್ರಿಕ ಅಧಿಕಾರಿ ಮಹೇಂದ್ರ, ಗ್ರಾ.ಪಂ.ಸದಸ್ಯ ಆದಪ್ಪ, ಪ್ರಕಾಶಪ್ಪ, ಕೂಲಿಕಾರರಾದ ಸಂಗನಗೌಡ, ರಮೇಶ, ಶರಣಮ್ಮ, ಲಕ್ಷ್ಮಿದೇವಿ, ಅಂದಪ್ಪ, ಸವಿತಾ ಸೇರಿ ಇತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ