'ನರೇಗಾ ಕಾಮಗಾರಿ ಕೂಲಿ ಪಾವತಿಸಿ'
ಸಮೀಪದ ರಾಮದುರ್ಗ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಲಿಂಗಪ್ಪ ಅವರ ಅಧ್ಯಕ್ಷ ತೆಯಲ್ಲಿ ಸೋಮವಾರ ವಿಶೇಷ ಸಮಾನ್ಯ ಸಭೆ ನಡೆಯಿತು.
ಗಬ್ಬೂರು; ಸಮೀಪದ ರಾಮದುರ್ಗ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷ ಲಿಂಗಪ್ಪ ಅವರ ಅಧ್ಯಕ್ಷ ತೆಯಲ್ಲಿ ಸೋಮವಾರ ವಿಶೇಷ ಸಮಾನ್ಯ ಸಭೆ ನಡೆಯಿತು.
ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಕೂಲಿ ಪಾವತಿ, ಸಿಬ್ಬಂದಿ ನಿರ್ಲಕ್ಷ ್ಯ, ಹೀಗೆ ಹಲವು ಸಮಸ್ಯೆಗಳ ಕುರಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶರಣಪ್ಪ ನೆಲಹಾಳ ಅವರಿಗೆ ಸದಸ್ಯರು ವಿವರಿಸಿದರು.
ಪಿಡಿಒ ಮಾತನಾಡಿ, ರಾಮದುರ್ಗ ಪಂಚಾಯಿತಿ ಉದ್ಯೋಗ ಖಾತರಿ ಯೋಜನೆಡಿ ಮಾನವ ದಿನಗಳು ತಾಲೂಕಿನಲ್ಲಿ ತೀರಾ ಹಿಂದುಳಿದಿದ್ದು, ಇಲ್ಲಿಯವರೆಗೆ ಕೈಗೊಂಡ ಬದು ನಿರ್ಮಾಣ, ಕೃಷಿ ಹೊಂಡ, ತೋಟಗಾರಿಕೆ, ಅರಣ್ಯೀಕರಣ, ವೈಯಕ್ತಿಕ ಶೌಚಾಲಯ, ಸಮುದಾಯ ಕಾಮಗಾರಿಗಳ ಕುರಿತು ಮಾತನಾಡುವಾಗ ಕಾಕರಗಲ್ ಸದಸ್ಯ ಚನ್ನಪ್ಪಗೌಡ ಮಧ್ಯಪ್ರವೇಶಿಸಿ, ನಮ್ಮ ಗ್ರಾಮದಲ್ಲಿ ಈಗಾಗಲೇ ಅನೇಕ ಫಲಾನುಭವಿಗಳು ದನದ ಶೆಡ್ಗಳನ್ನು ನಿರ್ಮಿಸಿಕೊಂಡು ತಿಂಗಳು ಕಳೆದಿವೆ. ಆದರೂ ಇಲ್ಲಿತನಕ ಕೂಲಿ ಪಾವತಿಸಿಲ್ಲ ಎಂದು ದೂರಿದರು.
ಆಯ್ಕೆಮಾಡಿಲ್ಲ : ಬಸವ ವಸತಿ ಹಾಗೂ ಅಂಬೇಡ್ಕರ್ ಯೋಜನೆಯ ಮನೆಗಳು ಗ್ರಾ.ಪಂ.ಗೆ ಮಂಜೂರಾಗಿ ತಿಂಗಳು ಗತಿಸಿವೆ. ಇಂದಿಗೂ ಗ್ರಾಮಸಭೆ ನಡೆಸಿ ಫಲಾನುಭವಿಗಳ ಆಯ್ಕೆಮಾಡಿಲ್ಲ ಎಂದು ರಾಮದುರ್ಗ ಗ್ರಾಮದ ಸದಸ್ಯ ಶರಣಯ್ಯಸ್ವಾಮಿ ಹೇಳಿದರು. ಈ ವಾರದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಕಳಿಸಲಾಗುವುದು ಎಂದು ಪಿಡಿಒ ಉತ್ತರಿಸಿದರು. ಉಳಿದಂತೆ ಸ್ವಚ್ಛ ಭಾರತ ಅಭಿಯಾನ, ಉದ್ಯೋಗ ಖಾತರಿ ಯೋಜನೆ ಕಾಮಗಾರಿಗಳು, 14ನೇ ಹಣಕಾಸು ಕ್ರಿಯಾ ಯೋಜನೆ ತಯಾರಿ, ಕರವಸೂಲಿ, ಸಿಬ್ಬಂದಿ ವೇತನ ಕುರಿತು ಚರ್ಚಿಸಿದರು.
ವಜಾಗೊಳಿಸಿ: ಪಂಚಾಯಿತಿ ಸರ್ವ ಸದಸ್ಯರು ಗಣಕಯಂತ್ರ ನಿರ್ವಾಹಕ ರಾಜು ಉಭಾಳೆಯ ವಿರುದ್ಧ ಉದ್ಯೋಗ ಖಾತರಿ ಯೋಜನೆ ಹಾಗೂ ಪಂಚಾಯಿತಿಗೆ ಸಂಬಂಧಿಸಿದಂತೆ ಅನೇಕ ಕೆಲಸಗಳಲ್ಲಿ ಹಣ ದುರುಪಯೋಗ, ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಈಗಾಗಲೇ ಕಳೆದ ಸಾಮಾನ್ಯ ಸಭೆಯಲ್ಲಿ ಠರಾವು ಪಾಸ್ ಮಾಡುವ ಮೂಲಕ ವಜಾಗೊಳಿಸಲಾಗಿದ್ದು. ಪುನಃ ಪಂಚಾಯಿತಿಗೆ ಬಂದು ಕಾಲಹರಣ ಮಾಡುತ್ತಿದ್ದಾನೆ. ಅವರ ಬದಲಿಗೆ ಬೇರೆಯವರನ್ನು ನೇಮಕ ಮಾಡಿಕೊಳ್ಳಿ ಎಂದು ಪಿಡಿಒಗೆ ತರಾಟೆಗೆ ತಗೆದುಕೊಂಡರು. ಪಿಡಿಒ ಮಾತನಾಡಿ, ಇಂದಿನಿಂದಲೇ ಬೇರೆಯವರನ್ನು ತಾತ್ಕಾಲಿಕ ನೇಮಕ ಮಾಡಿಕೊಳ್ಳಲಾಗುವುದು. ನಂತರ ದಿನಗಳಲ್ಲಿ ಖಾಲಿ ಹುದ್ದೆಗೆ ಅರ್ಜಿ ಕರೆದು ನೇಮಕ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಸುಕಮುನಿ ನಾಯಕ, ಶರಣಪ್ಪ ಸಾಹುಕಾರ, ಈಶಪ್ಪ ಕಬ್ಬೇರು, ಶರಣಯ್ಯಸ್ವಾಮಿ, ಚನ್ನಪ್ಪಗೌಡ ಕಾಕರಗಲ್, ಸಿದ್ದಲಿಂಗಪ್ಪ ಜಿನ್ನಾಪೂರು, ಬಸಪ್ಪ ಅಮಾರಪೂರು, ಯಲ್ಲಮ್ಮ, ಪಾರ್ವತಿ ಜಿಂದಪ್ಪ, ಸಾಬಮ್ಮ, ದೇವಿ ಬಸವರಾಜ ಹಾಗೂ ಸಿಬ್ಬಂದಿ ಇದ್ದರು.