ಆ್ಯಪ್ನಗರ

ಗಾಳಿಯಿಲ್ಲ, ಮಳೆಯಿಲ್ಲ; ವಿದ್ಯುತ್‌ ಕಡಿತಕ್ಕೆ ಕೊನೆಯಿಲ್ಲ

ಆರ್‌ಟಿಪಿಎಸ್‌ ಮತ್ತು ವೈಟಿಪಿಎಸ್‌ನಲ್ಲಿ ಬೇಡಿಕೆಯಂತೆ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ನಾನಾ ಕಡೆ ಉತ್ತಮ ಮಳೆ ಹಿನ್ನೆಲೆಯಲ್ಲಿ ಜಲವಿದ್ಯುತ್‌ ಉತ್ಪಾದನೆಯೂ ಹೇರಳವಾಗಿದೆ.

Vijaya Karnataka 14 Aug 2018, 5:00 am
ಪ್ರಭಾಕರ್‌ ಹುಡೇದ್‌, ರಾಯಚೂರು
Vijaya Karnataka Web RAC-RCH13HD03


ಆರ್‌ಟಿಪಿಎಸ್‌ ಮತ್ತು ವೈಟಿಪಿಎಸ್‌ನಲ್ಲಿ ಬೇಡಿಕೆಯಂತೆ ವಿದ್ಯುತ್‌ ಉತ್ಪಾದಿಸಲಾಗುತ್ತಿದೆ. ನಾನಾ ಕಡೆ ಉತ್ತಮ ಮಳೆ ಹಿನ್ನೆಲೆಯಲ್ಲಿ ಜಲವಿದ್ಯುತ್‌ ಉತ್ಪಾದನೆಯೂ ಹೇರಳವಾಗಿದೆ. ರಾಯಚೂರು ನಗರ ಸೇರಿ ಗ್ರಾಮೀಣ ಪ್ರದೇಶದಲ್ಲಿ ಗಾಳಿ, ಮಳೆಯ ಸುಳಿವಿಲ್ಲದಿದ್ದರೂ ಅನಿಯಮಿತ ವಿದ್ಯುತ್‌ ಕಡಿತದಿಂದ ಮಾತ್ರ ಮುಕ್ತಿ ದೊರೆತಿಲ್ಲ.

ಸಾರ್ವಜನಿಕರಿಗೆ ಮಾಹಿತಿ ನೀಡಿ ವಿದ್ಯುತ್‌ ಕಡಿತಗೊಳಿಸುವುದು ಒಂದೆಡೆಯಾದರೆ, ಸಾರ್ವಜನಿಕರಿಗೆ ವಿದ್ಯುತ್‌ ಕಡಿತಗೊಳಿಸುವ ಕುರಿತು ಗಮನಕ್ಕೂ ಬಾರದಂತೆ ತಾಸುಗಟ್ಟಲೇ ವಿದ್ಯುತ್‌ ಕಡಿತಗೊಳಿಸುವುದು ನಗರದಲ್ಲಿ ಸರ್ವೇಸಾಮಾನ್ಯವಾಗಿದೆ. ಮುಂಜಾಗ್ರತಾ ಕ್ರಮಕೈಗೊಳ್ಳದೇ ಧಿಡೀರ್‌ ವಿದ್ಯುತ್‌ ಕಡಿತಗೊಳಿಸುತ್ತಿರುವುದು ಗ್ರಾಹಕರನ್ನು ಕಂಗೆಡೆಸಿದೆ.

ರಾಜ್ಯದ ನಾನಾ ಕಡೆ ಉತ್ತಮ ಮಳೆಯಾಗುತ್ತಿದ್ದು, ವಿದ್ಯುತ್‌ಗೆ ಸಹಜವಾಗಿ ಬೇಡಿಕೆ ತಗ್ಗಿದೆ. ಆರ್‌ಟಿಪಿಎಸ್‌ನ ಎರಡು ಘಟಕಗಳಿಂದ 300 ಮೆಗಾ ವ್ಯಾಟ್‌ ಮತ್ತು ವೈಟಿಪಿಎಸ್‌ನಲ್ಲಿ 300ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದಿಸಲಾಗುತಿದೆ. ಅಗತ್ಯಕ್ಕೆ ತಕ್ಕಂತೆ ವಿದ್ಯುತ್‌ ಉತ್ಪಾದನೆಯಾಗುತ್ತಿದ್ದರೂ ವಿದ್ಯುತ್‌ ಕಣ್ಣಾಮುಚ್ಚಾಲೆಗೆ ಮಾತ್ರ ಬ್ರೇಕ್‌ ಬಿದ್ದಿಲ್ಲ. ಜಿಲ್ಲೆಯಲ್ಲೇ ವಿದ್ಯುತ್‌ ಉತ್ಪಾದನೆಯಾಗುತ್ತಿದ್ದರೂ ಸೂಕ್ತ ಕಾರಣ ನೀಡದೇ ತಾಸುಗಟ್ಟಲೇ ವಿದ್ಯುತ್‌ ಕಡಿತಗೊಳಿಸುತ್ತಿರುವುದು ಸಾರ್ವಜನಿಕರ ನೆಮ್ಮದಿ ಭಂಗಗೊಳಿಸಿದೆ.

ಗಾಳಿ, ಮಳೆ ಹಿನ್ನೆಲೆ ವಿದ್ಯುತ್‌ ಕಡಿತಗೊಳಿಸುವುದು ಸಾಮಾನ್ಯ. ಆದರೆ, ಕೆಲವು ದಿನಗಳಿಂದ ನಗರ ಸೇರಿ ಗ್ರಾಮೀಣ ಪ್ರದೇಶದಲ್ಲಿ ಮಳೆ, ಗಾಳಿಯ ಸುಳಿವಿಲ್ಲ. ಆದರೆ, ವಿದ್ಯುತ್‌ ಕಡಿತ ಮಾತ್ರ ಮುಂದುವರಿದಿದೆ. ನಗರದಲ್ಲಿ ನಿತ್ಯ ವಿವಿಧ ಬಡಾವಣೆಗಳಲ್ಲಿ 2ರಿಂದ 3 ತಾಸು ವಿದ್ಯುತ್‌ ಕಡಿತಗೊಳಿಸಲಾಗುತ್ತಿದೆ. ಮತ್ತೊಂದೆಡೆ ಗ್ರಾಮೀಣ ಪ್ರದೇಶದಲ್ಲಿ ರಾತ್ರಿ ವೇಳೆ ವಿದ್ಯುತ್‌ ಕಣ್ಣಾಮುಚ್ಚಾಲೆ ನಿರಂತರವಾಗಿದೆ. ವೋಲ್ಟೇಜ್‌ ಏರಿಳಿತದಿಂದ ಲೈಟ್‌, ಫ್ಯಾನ್‌ ಸೇರಿ ಇತರ ವಿದ್ಯುತ್‌ ಪರಿಕರಗಳು ಸುಟ್ಟುಹೋಗುತ್ತಿದ್ದು, ಜನತೆ ನಷ್ಟ ಅನುಭವಿಸುವಂತಾಗಿದೆ.

ಕರೆಗೆ ಸ್ಪಂದನೆಯಿಲ್ಲ: ವಿದ್ಯುತ್‌ ಸಮಸ್ಯೆ ಕುರಿತು ಸಂಪರ್ಕಿಸಲು ಜೆಸ್ಕಾಂ, ಗ್ರಾಹಕರಿಗೆ ನೀಡಿರುವ ದೂರವಾಣಿ (08532-226386) ಗೆ ಕರೆಮಾಡಿದರೆ ಕರೆ ಸ್ವೀಕರಿಸಿ ಮಾತನಾಡುವಲ್ಲೂ ಸಿಬ್ಬಂದಿ ಹಿಂಜರಿಯುತ್ತಿದ್ದಾರೆ. ಪೂರ್ವಾಪರ ಮಾಹಿತಿ ನೀಡದೇ ಏಕಾಏಕಿ ವಿದ್ಯುತ್‌ ಕಡಿತಗೊಳಿಸಿದ ಸಂದರ್ಭದಲ್ಲಿ ಗ್ರಾಹಕರು ಕಚೇರಿ ಸಂಖ್ಯೆ ಸಂಪರ್ಕಿಸಿದರೆ ಅಲ್ಲಿಂದ ಸಮರ್ಪಕ ಸ್ಪಂದನೆ ಸಿಗುತ್ತಿಲ್ಲ. ಹೀಗಾಗಿ ಬಹುತೇಕ ಗ್ರಾಹಕರು, ತಮ್ಮ ಕುಂದುಕೊರತೆಗಳನ್ನು ಕಲಬುರಗಿಯ ಕೇಂದ್ರಕ್ಕೆ ಕರೆ ಮಾಡಿ ಅಳಲುತೋಡಿಕೊಳ್ಳುವಂತಾಗಿದೆ.

ಕನಸಾದ 12 ತಾಸು ವಿದ್ಯುತ್‌: ತಾಲೂಕಿನಾದ್ಯಂತ 12 ತಾಸು ವಿದ್ಯುತ್‌ ಗಗನಕುಸುಮವಾಗಿದೆ. ಸದ್ಯ 7ರಿಂದ 8 ತಾಸು ವಿದ್ಯುತ್‌ ಪೂರೈಸಲಾಗುತ್ತಿದೆ. ನಾನಾ ತಾಲೂಕುಗಳ ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರ 7 ತಾಸು ವಿದ್ಯುತ್‌ ಪೂರೈಸುವಲ್ಲೂ ಲೋಪ ಕಂಡುಬಂದಿದೆ. 4ರಿಂದ 5ತಾಸು ಮಾತ್ರ ವಿದ್ಯುತ್‌ ಪೂರೈಸಲಾಗುತ್ತಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೂ ತೊಂದರೆಯಾಗಿದೆ. ನಿರಂತರ ಜ್ಯೋತಿಯಡಿ ನೀಡಬೇಕಾದ ವಿದ್ಯುತ್‌ ಕೂಡ ಸರಿಯಾಗಿ ಪೂರೈಕೆಯಾಗದ್ದಕ್ಕೆ ಫಲಾನುಭವಿಗಳು ಜೆಸ್ಕಾಂ ಸಿಬ್ಬಂದಿ ವಿರುದ್ಧ ಹಿಡಿಶಾಪ ಹಾಕುವಂತಾಗಿದೆ.

.............

ಗ್ರಾಮೀಣ ಪ್ರದೇಶದಲ್ಲಿ ನಿಯಮದಂತೆ 12ತಾಸು ವಿದ್ಯುತ್‌ ಪೂರೈಕೆ ಮಾಡುತ್ತಿಲ್ಲ. ಕೃಷಿ ಪಂಪ್‌ಸೆಟ್‌ಗಳ ಚಾಲನೆಗೂ ತೀರಾ ತೊಂದರೆಯಾಗಿದೆ. ನಿರಂತರ ಜ್ಯೋತಿಯಡಿ ಕೇವಲ 4ತಾಸು ವಿದ್ಯುತ್‌ ನೀಡಲಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ವಿಚಾರಿಸಿದರೆ ಉಪ ಕೇಂದ್ರಗಳಲ್ಲಿ ಸಮಸ್ಯೆಗಳಿವೆ ಎಂಬ ಸಿದ್ಧ ಉತ್ತರ ಕೇಳಿಬರುತ್ತಿದೆ.

-ಲಕ್ಷ ್ಮಣಗೌಡ ಕಡಗಂದೊಡ್ಡಿ, ಜಿಲ್ಲಾಧ್ಯಕ್ಷ, ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ

...............

ಮಳೆಗಾಲದ ದಿನಗಳಾಗಿದ್ದರಿಂದ ಜೋರಾಗಿ ಗಾಳಿ ಬೀಸಿದಾಗ ಕೆಲವು ತಾಂತ್ರಿಕ ಕಾರಣಗಳಿಂದ ವಿದ್ಯುತ್‌ ಕಡಿತವಾಗುತ್ತಿದೆ. ಐಡಿಎಸ್‌ಎಂಟಿ ಬಡಾವಣೆಯ ಫೀಡರ್‌ನಲ್ಲಿ ತೊಂದರೆಯಿತ್ತು. ಅದನ್ನು ಸರಿಪಡಿಸಲಾಗುತ್ತಿದೆ.

-ಪುರುಷೋತ್ತಮ್‌, ಪ್ರಭಾರಿ ಎಸ್‌ಇ, ನಗರ ವೃತ್ತ, ಜೆಸ್ಕಾಂ, ರಾಯಚೂರು



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ