ಆ್ಯಪ್ನಗರ

ಬೆಳೆ ವಿಮೆ ಅರ್ಜಿಗೆ ಹಣ ವಸೂಲಿ : ತಹಸೀಲ್ದಾರ್‌ಗೆ ಮುತ್ತಿಗೆ

ಬೆಳೆವಿಮೆ ಆನ್‌ಲೈನ್‌ ಅರ್ಜಿ ಸಲ್ಲಿಸಲು ರೈತರಿಂದ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ತಹಸೀಲ್ದಾರ್‌ ಚಾಮರಾಜ್‌ ಪಾಟೀಲ್‌ ಅವರನ್ನು ನಾನಾ ಗ್ರಾಮದ ರೈತರು ಮಂಗಳವಾರ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

Vijaya Karnataka 1 Aug 2018, 5:00 am
ಲಿಂಗಸುಗೂರು : ಬೆಳೆವಿಮೆ ಆನ್‌ಲೈನ್‌ ಅರ್ಜಿ ಸಲ್ಲಿಸಲು ರೈತರಿಂದ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ತಹಸೀಲ್ದಾರ್‌ ಚಾಮರಾಜ್‌ ಪಾಟೀಲ್‌ ಅವರನ್ನು ನಾನಾ ಗ್ರಾಮದ ರೈತರು ಮಂಗಳವಾರ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
Vijaya Karnataka Web RAC-RCH30LNG02


ಬೆಳೆ ವಿಮೆ ಅರ್ಜಿಗೆ ಗ್ರಾಮೀಣ ಪ್ರದೇಶದಲ್ಲಿ ಬೀದಿ ನಾಟಕ, ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಿ ಅಧಿಕ ಪ್ರಚಾರ ಮಾಡಲಾಗಿದೆ. ಆದರೆ, ಲಿಂಗಸುಗೂರು ಪಟ್ಟಣದಲ್ಲಿ ನಾಲ್ಕು ಕಡೆ, ಮುದಗಲ್‌ ಪಟ್ಟಣದ ನಾನಾ ಕಡೆ ಮತ್ತು ಮಸ್ಕಿಯಲ್ಲಿ ಆನ್‌ಲೈನ್‌ ಅರ್ಜಿ ಸಲ್ಲಿಸುವ ಸಿಬ್ಬಂದಿ ಹೆಚ್ಚುವರಿ ಹಣ ಪಡೆಯುತ್ತಿದ್ದಾರೆ. ಒಂದು ಅರ್ಜಿಗೆ 300 ರೂ. ಪಡೆಯುತ್ತಿದ್ದಾರೆ. ಆದರೂ ಸಕಾಲಕ್ಕೆ ಅರ್ಜಿ ಸಲ್ಲಿಸಲು ಆಗುತ್ತಿಲ್ಲ, ಇದಕ್ಕಾಗಿ ದಿನವಿಡೀ ಕಂಪ್ಯೂಟರ್‌ ಕೇಂದ್ರದಲ್ಲಿ ಸರತಿ ನಿಲ್ಲಬೇಕಾಗಿದೆ. ವಿಮೆಗೆ ಜು.31 ಕೊನೆ ದಿನವಾಗಿದ್ದರಿಂದ ನೆಟ್‌ವರ್ಕ್‌ ತೊಂದರೆಯಿಂದ ಭರ್ತಿಗೆ ತಡವಾಗುತ್ತಿದೆ. ಮಳೆ ಕೊರತೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆಯಾಗಿಲ್ಲ. ಆದ್ದರಿಂದ ಬೆಳೆ ವಿಮೆ ತುಂಬಲು ಕಾಲಾವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಗ್ರಾಮಲೆಕ್ಕಾಧಿಕಾರಿ ಹಾಗೂ ಕೃಷಿ ಅಧಿಕಾರಿಗಳು ರೈತರಿಂದ ಅರ್ಜಿಗಳನ್ನು ಪಡೆದು ಆನ್‌ಲೈನ್‌ನಲ್ಲಿ ಸಲ್ಲಿಸಬೇಕೆಂಬ ನಿಯಮವಿದ್ದರೂ ಇದಕ್ಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಈಗಾಗಲೇ ಶೇ.40 ರಷ್ಟು ರೈತರು ಆನ್‌ಲೈನ್‌ ಅರ್ಜಿ ಸಲ್ಲಿಸಿದ್ದಾರೆ. ಶೇ.60 ರಷ್ಟು ರೈತರು ಅರ್ಜಿ ಸಲ್ಲಿಸದೇ ಹಾಗೇ ಇದ್ದಾರೆ. ಕೊನೆ ದಿನಾಂಕ ವಿಸ್ತರಣೆ ಮಾಡುವಂತೆ ರೈತ ಮುಖಂಡ ಅಮರಣ್ಣ ಗುಡಿಹಾಳ ತಹಸೀಲ್ದಾರ್‌ ಅವರನ್ನು ಒತ್ತಾಯಿಸಿದರು.

ತಹಸೀಲ್ದಾರ್‌ ಚಾಮರಾಜ್‌ ಪಾಟೀಲ್‌ ಪ್ರತಿಕ್ರಿಯಿಸಿ, ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ, ಕೂಡಲೇ ಕ್ರಮಕೈಗೊಳ್ಳುತ್ತೇನೆ. ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಹೇಳಿದರು. ರೈತರಾದ ಆದಪ್ಪ ಫೂಲಬಾವಿ, ಹನುಮಂತ ಐದಬಾವಿ, ಯುಮನಪ್ಪ, ದುರುಗಪ್ಪ, ಕಂಠೆಪ್ಪ, ಹೊಳೆಯಪ್ಪ, ಗೋಪಿಚಂದ್‌, ಶರಣಮ್ಮ ಸೇರಿ ಇತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ