ಆ್ಯಪ್ನಗರ

ಕುಡಿವ ನೀರಿಗಾಗಿ ಜನ ಹೈರಾಣ

ಶುದ್ಧ ಹಾಗೂ ಶಾಶ್ವತ ಕುಡಿವ ನೀರು ಪೂರೈಸಲು ಜಾರಿಗೊಳಿಸಿದ ಬಹು ಗ್ರಾಮಗಳ ಕುಡಿವ ನೀರಿನ ಯೋಜನೆ ಹಳ್ಳಹಿಡಿದ ಪರಿಣಾಮ ಸಾರ್ವಜನಿಕರು ನೀರಿಗಾಗಿ ಪರದಾಡುವಂತಾಗಿದೆ.

Vijaya Karnataka 27 Feb 2018, 2:53 pm

ಹಟ್ಟಿಚಿನ್ನದಗಣಿ: ಶುದ್ಧ ಹಾಗೂ ಶಾಶ್ವತ ಕುಡಿವ ನೀರು ಪೂರೈಸಲು ಜಾರಿಗೊಳಿಸಿದ ಬಹು ಗ್ರಾಮಗಳ ಕುಡಿವ ನೀರಿನ ಯೋಜನೆ ಹಳ್ಳಹಿಡಿದ ಪರಿಣಾಮ ಸಾರ್ವಜನಿಕರು ನೀರಿಗಾಗಿ ಪರದಾಡುವಂತಾಗಿದೆ.

ಪಟ್ಟಣ ಸೇರಿದಂತೆ ಐದು ಗ್ರಾಮಗಳಿಗೆ ಪೂರೈಕೆಯಾಗುವ ಬಹುಗ್ರಾಮ ಕುಡಿವ ನೀರು ಯೋಜನೆಯ ನಿರ್ವಹಣೆಯ ಕೊರತೆಯಿಂದ ಪದೇ ಪದೆ ನೀರು ಪೂರೈಕೆ ಸ್ಥಗಿತದಿಂದ ನೀರಿಗಾಗಿ ಜನರು ಪರದಾಡುವಂತಾಗಿದೆ.

ಹಟ್ಟಿ ಪಟ್ಟಣ ಪಂಚಾಯಿತಿ, ಕೋಠಾ, ಗುರುಗುಂಟಾ ಹಾಗೂ ಪೈದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಟ್ಟಿ ಪಟ್ಟಣ, ಹಟ್ಟಿ ಹೊಸೂರು, ಕೋಠಾ, ಗುರುಗುಂಟಾ ಹಾಗೂ ರಾಯದುರ್ಗ ಗ್ರಾಮಗಳಿಗೆ ನೀರು ಪೂರೈಸುವ ಉದ್ದೇಶದ ಬಹು ಗ್ರಾಮಗಳ ಕುಡಿವ ನೀರಿನ ಯೋಜನೆ ಇದಾಗಿದೆ.

ನಡೆಯದ ಟೆಂಡರ್‌: ಹಟ್ಟಿ ಪಟ್ಟಣದಿಂದ 18 ಕಿ.ಮೀ. ದೂರಲ್ಲಿನ ಟಣಮಕಲ್‌ ಬಳಿಯಲ್ಲಿ ಹರಿದಿರುವ ಕೃಷ್ಣಾ ನದಿಯಿಂದ ನೀರು ತಂದು ಕೊಳ್ಳಲಾಗುತ್ತಿದೆ. ಇದರ ನಿರ್ವಹಣೆ ಗುತ್ತಿಗೆ ಅವಧಿ ಕಳೆದ ಡಿಸೆಂಬರ್‌ನಲ್ಲಿ ಮುಕ್ತಾಯಗೊಂಡಿದ್ದು, ಪುನಃ ಟೆಂಡರ್‌ ಕರೆಯದಿದ್ದರಿಂದ ಸಮಸ್ಯೆ ಜಟಿಲಗೊಳ್ಳಲು ಕಾರಣವಾಗಿದೆ. ಪದೇ ಪದೆ ಮೋಟರ್‌ಗಳು ದುರಸ್ತಿಗೆ ಬಂದು ನೀರು ಪೂರೈಕೆ ಸ್ಥಗಿತವಾಗುತ್ತಿದ್ದು, ಕಳೆದ 2 ತಿಂಗಳಲ್ಲಿ ಮೂರು ಸಾರಿ ಈ ತೊಂದರೆ ಉಂಟಾಗಿದೆ.

ದುರಸ್ತಿಗೆ ಬಂದ ಮೋಟರ್‌ಗಳು: ಡಿಸೆಂಬರ್‌ನಲ್ಲಿ ನದಿ ದಡದಲ್ಲಿನ ಭಾರಿ ಪ್ರಮಾಣದ 55 ಎಚ್‌ಪಿ ಶಕ್ತಿಯ 2 ಮೋಟರ್‌ಗಳು ಕೆಟ್ಟು ಹೋಗಿದ್ದವು. ಗ್ರಾಮೀಣ ನೀರು ಸರಬರಾಜು ಇಲಾಖೆಯಿಂದ ದುರಸ್ತಿ ಮಾಡಿಕೊಡಲಾಗಿತ್ತು. ಇದೀಗ ಸಂಪ್‌ ಬಳಿಯಲ್ಲಿ ಎರಡು ಮೋಟರ್‌ಗಳು ದುರಸ್ತಿಗೆ ಬಂದಿದ್ದರಿಂದ ಮತ್ತೆ ನೀರು ಪೂರೈಕೆ ಸ್ಥಗಿತವಾಗಿ ಜನ ನೀರಿಗಾಗಿ ಅಲೆದಾಡುವಂತಾಗಿದೆ. ಪಂಚಾಯಿತಿಗಳಿಂದ ದುರಸ್ತಿ ಅಸಾಧ್ಯವಾಗಿದ್ದರಿಂದ ಒಂದು ವಾರದಿಂದ ನೀರು ಪೂರೈಕೆ ನಿಂತು ಹೋಗಿದೆ.

ಅಸಡ್ಡೆ: ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮೀಣ ನೀರು ಸರಬರಾಜು ಇಲಾಖೆ ಈ ಬಹುಗ್ರಾಮಗಳ ಯೋಜನೆಯ ನಿರ್ವಹಣೆ ನಿಭಾಯಿಸಬೇಕು. ಆದರೆ ಅವರು ಪಂಚಾಯಿತಿಗಳೇ ನಿರ್ವಹಿಸಿಕೊಂಡು ಹೋಗಬೇಕೆಂದು ಹೇಳುತ್ತಿರುವುದು ನಡೆದಿದೆ. ಗುರುಗುಂಟಾ, ಕೋಠಾ ಹಾಗೂ ಪೈದೊಡ್ಡಿ ಪಂಚಾಯಿತಿಗಳು ಯೋಜನೆಯಲ್ಲಿ ಶೇ.70 ರಷ್ಟು ನೀರು ಹಟ್ಟಿ ಪಟ್ಟಣಕ್ಕೆ ಹೋಗುತ್ತಿದ್ದು, ಅವರೆ ನಿರ್ವಹಣೆ ಮಾಡಬೇಕೆಂದು ನಿರ್ವಹಣೆಯಿಂದ ಹಿಂದೆ ಸರಿದಿದ್ದಾರೆ.

ನಿರ್ಲಕ್ಷ ್ಯ : ಹಟ್ಟಿ ಗ್ರಾಮ ಪಂಚಾಯಿತಿಯೂ ಇತ್ತೀಚೆಗೆ ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೇರಿದೆ. ಸರಕಾರದಿಂದ ಯಾವ ಅನುದಾನ ಬಂದಿಲ್ಲ. ಇನ್ನು ಮೋಟರ್‌ಗಳನ್ನು ದುರಸ್ತಿ ಎಲ್ಲಿಂದ ಮಾಡಬೇಕು ಎಂಬ ಪ್ರಶ್ನೆ ಉಂಟಾಗಿದೆ. ನವೆಂಬರ್‌ ಅಂತ್ಯಕ್ಕೆ ನಿರ್ವಹಣೆ ಗುತ್ತಿಗೆ ಅವಧಿ ಮುಗಿಯುವ ಮೊದಲೇ ಎಚ್ಚರಗೊಂಡು ನಿರ್ವಹಣೆ ಅವಧಿ ವಿಸ್ತರಣೆ ಅಥವಾ ಹೊಸದಾಗಿ ನಿರ್ವಹಣೆ ಟೆಂಡರ್‌ ಕರೆಯಲು ಗ್ರಾಮೀಣ ನೀರು ಸರಬರಾಜು ಇಲಾಖೆ ಮುಂದಾಗಬೇಕಾಗಿತ್ತು. ಅಧಿಕಾರಿಗಳ ನಿರ್ಲಕ್ಷ ್ಯದಿಂದ ಐದು ಗ್ರಾಮಗಳ ಜನ ನೀರಿಗಾಗಿ ಪದೇಪದೆ ಪರಿತಪಿಸುವಂತಾಗಿದೆ.

-----

Vijaya Karnataka Web people are drinking water
ಕುಡಿವ ನೀರಿಗಾಗಿ ಜನ ಹೈರಾಣ


ಬಹುಗ್ರಾಮಗಳ ಕುಡಿವ ನೀರಿನ ಯೋಜನೆಯ ನದಿ ಬಳಿಯಲ್ಲಿನ ಸಂಪ್‌ನ ಮೋಟರ್‌ಗಳು ದುರಸ್ತಿಗೆ ಬಂದಿವೆ. ಎರಡು ದಿನಗಳಲ್ಲಿ ನೀರು ಪೂರೈಕೆ ಯಥಾಸ್ಥಿತಿಗೆ ಬರಲಿದೆ.

- ಶಂಕರಗೌಡ ಬಳಗಾನೂರು, ಅಧ್ಯಕ್ಷ , ಪಂ.ಪ. ಹಟ್ಟಿಚಿನ್ನದಗಣಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ