ಮಾನ್ವಿ: ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಮಟ್ಕಾ, ಜೂಜಾಟ ಹಾವಳಿ ಹೆಚ್ಚಾಗಿದ್ದು. ಲಕ್ಷಾಂತರ ರೂ.ಕೈಬದಲಾಗುತ್ತಿದ್ದು, ಬಡ ಕುಟುಂಬಗಳು ಬೀದಿಗೆ ಬೀದ್ದಿವೆ.
ಪಟ್ಟಣದಲ್ಲಿ ಅತಿ ಹೆಚ್ಚು ಮಟ್ಕಾ ದಂಧೆ ನಡೆಯುತ್ತಿದೆ. ಟೈಮ್ ಬಜಾರ್, ಸುಪ್ರೀಂ ಬಜಾರ್, ಮಿಲನ್ ಡೇ, ರಾಜಧಾನಿ ಡೇ, ಕಲ್ಯಾಣ್, ಮಿಲನ್ ನೈಟ್, ರಾಜಧಾನಿ ನೈಟ್, ಮೇನ್ ಮುಂಬೈ, ಮೇನ್ ಮುಂಬೈ ಡೇ, ನ್ಯೂ ಮಿಲನ್ ಡೇ ಸೇರಿದಂತೆ ಹಲವಾರು ಆಟಗಳು ಚಾಲ್ತಿಯಲ್ಲಿದ್ದು, ಯುವಕರು ಸೇರಿದಂತೆ ಹಲವು ಆಟದ ಗುಂಗಿನಲ್ಲಿ ಆರ್ಥಿಕವಾಗಿ ದಿವಾಳಿ ಆಗುತ್ತಿದ್ದಾರೆ.
ಜಾಸ್ತಿ: ಪಟ್ಟಣದಲ್ಲಿ ಮೇನ್ ಮುಂಬೈ ಮತ್ತು ಕಲ್ಯಾಣ್ ಎರಡು ಆಟಗಳು ಹೆಚ್ಚಾಗಿ ಚಾಲ್ತಿಯಲ್ಲಿವೆ. ಕಲ್ಯಾಣ ಮಟ್ಕಾ 2 ಗಂಟೆಗೆ ಪ್ರಾರಂಭವಾಗಿ 4 ಗಂಟೆಗೆ ಮೊದಲ ಸಂಖ್ಯೆ(ಒಪನ್), 6 ಗಂಟೆಗೆ ಎರಡನೇ ಸಂಖ್ಯೆ(ಕ್ಲೋಸ್) ಬರುತ್ತದೆ. ರಾತ್ರಿ ನಡೆಯುವ ಮೇನ್ ಮುಂಬೈ ಆಟದಲ್ಲಿ 9.45ಕ್ಕೆ ಮೊದಲನೇ ಸಂಖ್ಯೆ(ಒಪನ್), 12.15ಕ್ಕೆ ಎರಡನೇ ಸಂಖ್ಯೆ(ಕ್ಲೋಸ್) ಬರುತ್ತದೆ. ಅಲ್ಲದೆ ಕ್ಲೋಸ್ ಸಂಖ್ಯೆ ಮೇಲೆಯೂ ಕೆಲವರು ಆಡುತ್ತಾರೆ. (ಸಾಮಾನ್ಯವಾಗಿ 10 ರೂ 700 ರೂ ನೀಡಲಾಗುತ್ತದೆ ಅದೆ ಕ್ಲೋಸ್ ಸಂಖ್ಯೆಗೆ ಆಡಿದರೆ 100 ರೂಪಾಯಿಗೆ 700 ರೂ ನೀಡಲಾಗುತ್ತದೆ).
ಹೈಟೆಕ್ ಮಟ್ಕಾ: ಹಿಂದೆಲ್ಲ ಕೆಲವು ಅಂಗಡಿಗಳಲ್ಲಿ, ಹೋಟಲ್ಗಳಲ್ಲಿ ಒಂದು ರೂಪಾಯಿಯಿಂದ ಸಾವಿರ ರೂಪಾಯಿಯವರೆಗೆ ಮಟ್ಕಾ ಚೀಟಿ ಬರೆಯುತ್ತಿದ್ದು. ಆದರೆ ಈಗ ಚೀಟಿ ಬರೆದರೆ ಪೊಲೀಸರಿಗೆ ಸಿಕ್ಕಿ ಬೀಳುತ್ತೇವೆ ಎನ್ನುವ ಭಯ. ಹೀಗಾಗಿ ಯಾವುದೇ ದಾಖಲೆ ಸಿಗದಂತೆ ಮೊಬೈಲ್ನ ಮೆಸೇಜ್ ಮತ್ತು ವಾಟ್ಸ್ ಆ್ಯಪ್ ಮೂಲಕ ಸದ್ದಿಲ್ಲದೇ ನಡೆಯುತ್ತಿದೆ. 5 ರೂ. ನಿಂದ ಪ್ರಾರಂಭವಾಗುವ ಮಟ್ಕಾ ಸಾವಿರಾರು ರೂಪಾಯಿಗಳವರೆಗೆ ಆಡಲಾಗುತ್ತದೆ. ಅಲ್ಲದೆ ಮಟ್ಕಾ ದಂಧೆಗೆ ವೆಬೆಸೈಟ್ನಲ್ಲಿ ಸತ್ತಾ ಮಟ್ಕಾ ಎಂದು ಟೈಪ್ ಮಾಡಿದರೆ ಕ್ಷ ಣ ಕ್ಷ ಣದ ಮಾಹಿತಿ ದೊರೆಯುತ್ತದೆ. ಪ್ರತಿಯೊಬ್ಬರ ಮೊಬೈಲ್ನಲ್ಲಿ ಇಂಟರ್ನೆಟ್ ಇರುವುದರಿಂದ ಬಹಳಷ್ಟು ಜನರು ಮಟ್ಕಾ ಆಟಕ್ಕೆ ಮರಳಾಗುತ್ತಿದ್ದಾರೆ. ಪೊಲೀಸರ ಕಣ್ ತಪ್ಪಿಸಿ ನಿರಾಂತಕವಾಗಿ ಮಟ್ಕಾ ದಂಧೆ ಸಾಗಿದೆ.
ಬೀದಿಪಾಲು: ಮಟ್ಕಾ ಹಾವಳಿಗೆ ಸರಕಾರಿ ನೌಕರರು, ರಾಜಕೀಯ ಮುಖಂಡರು, ಉದ್ಯಮಿಗಳಿಂದ ಹಿಡಿದು ಯವಕರು, ಕೂಲಿ ಮಾಡಿ ಬದಕುವ ಜನರು ಮಟ್ಕಾ ಹಿಂದೆ ಬಿದ್ದಿದ್ದು. ದುಡಿದ ಹಣವೆಲ್ಲಾ ಮಟ್ಕಾಕ್ಕೆ ಸುರಿಯುತ್ತಿದ್ದಾರೆ. ಬೆಳಗಿನ ಚಹ ಕುಡಿತದಿಂದ ಶುರುವಾಗುವ ಮಟ್ಕಾ ಚರ್ಚೆ ರಾತ್ರಿ ಮಲಗುವವರೆಗೂ ನಡೆದೆ ಇರುತ್ತದೆ. ಮಟ್ಕಾದಿಂದ ಆರ್ಥಿಕ ಸಂಕಷ್ಟ ಅನುಭವಿಸುವ ಕುಟಂಬಗಳು ಬೀದಿಗೆ ಬರುತ್ತಿವೆ.
ಲಕ್ಕಿ ಬುಕ್ಕಿಗಳು: ಒಂದೆಡೆ ಮಟ್ಕಾ ಆಡುತ್ತ ಬಡವರು ಬೀದಿಗೆ ಬೀಳುತ್ತಿದ್ದರೆ ಇತ್ತ ಬುಕ್ಕಿಗಳು ನಿತ್ಯ ಸಾವಿರಾರು ರೂಪಾಯಿ ಜೇಬಿಗಿಳಿಸಿ ಕೊಳ್ಳುತ್ತಿದ್ದಾರೆ. ಈಗೀಗ ಎಲ್ಲಂದರಲ್ಲಿ ಬುಕ್ಕಿಗಳು ಹುಟ್ಟಿಕೊಳ್ಳುತ್ತಿದ್ದು ನಿತ್ಯದ ಸಂಪಾದನೆಗೆ ಮಾರುಹೋಗಿದ್ದಾರೆ. ಪೊಲೀಸರ ಭಯವಿಲ್ಲದೆ ರಾಜಾರೋಷವಾಗಿ ಹಲವಾರು ಬುಕ್ಕಿಗಳು ಪಟ್ಟಣದಲ್ಲಿ ಓಡಾಡಿಕೊಂಡಿದ್ದಾರೆ.
.....................
ಮಟ್ಕಾ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು. ಎಲ್ಲಾದರೂ ಮಟ್ಕಾ ನಡೆಯುತ್ತಿದ್ದರೆ ಅದನ್ನು ನಮ್ಮ ಗಮನಕ್ಕೆ ತನ್ನಿ ಅಂತವರ ವಿರುದ್ದ ಕೂಡಲೇ ಕ್ರಮ ಕೈಗೊಳ್ಳಲಾಗುವುದು.
- ಚಂದ್ರಶೇಖರ ನಾಯಕ, ಸಿಪಿಐ ಮಾನ್ವಿ