ಆ್ಯಪ್ನಗರ

‘ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್‌ ಪೂರೈಸಿ’

ತಾಲೂಕಿನ ರೈತರ ಪಂಪ್‌ಸೆಟ್‌ಗಳಿಗೆ 3ಫೇಸ್‌ ನಿರಂತರ ವಿದ್ಯುತ್‌ ಪೂರೈಕೆ ಮಾಡುವಂತೆ ಒತ್ತಾಯಿಸಿ, ಕರ್ನಾಟಕ ಏತ ನೀರಾವರಿ ರೈತರ ಒಕ್ಕೂಟದಿಂದ ಸೋಮವಾರ ಪ್ರತಿಭಟನೆ ನಡೆಸಿ, ಸಚಿವ ವೆಂಕಟರಾವ್‌ ನಾಡಗೌಡ ಅವರಿಗೆ ಮನವಿ ಸಲ್ಲಿಸಲಾಯಿತು.

Vijaya Karnataka 24 Jul 2018, 5:00 am
ಸಿಂಧನೂರು : ತಾಲೂಕಿನ ರೈತರ ಪಂಪ್‌ಸೆಟ್‌ಗಳಿಗೆ 3ಫೇಸ್‌ ನಿರಂತರ ವಿದ್ಯುತ್‌ ಪೂರೈಕೆ ಮಾಡುವಂತೆ ಒತ್ತಾಯಿಸಿ, ಕರ್ನಾಟಕ ಏತ ನೀರಾವರಿ ರೈತರ ಒಕ್ಕೂಟದಿಂದ ಸೋಮವಾರ ಪ್ರತಿಭಟನೆ ನಡೆಸಿ, ಸಚಿವ ವೆಂಕಟರಾವ್‌ ನಾಡಗೌಡ ಅವರಿಗೆ ಮನವಿ ಸಲ್ಲಿಸಲಾಯಿತು.
Vijaya Karnataka Web RAC-RCH23SND1


ನಗರದ ಪ್ರವಾಸಿ ಮಂದಿರದಿಂದ ಆರಂಭಗೊಂಡ ಪ್ರತಿಭಟನೆ, ತಹಸಿಲ್‌ ಕಚೇರಿ ತಲುಪಿತು. ರೈತರ ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್‌ ಪೂರೈಸುವುದಾಗಿ ಸಿಎಂ ಎಚ್‌.ಡಿ.ಕುಮಾರಸ್ವಾಮಿಯವರು ಈ ಹಿಂದೆ ಭರವಸೆ ನೀಡಿದ್ದರು. ನಿರಂತರ ವಿದ್ಯುತ್‌ ಪೂರೈಸಿ, ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು. ಈ ಭಾಗದಲ್ಲಿ ಸಮರ್ಪಕ ಮಳೆ ಕೈಕೊಟ್ಟಿದೆ. ಮಲೆನಾಡಿನಲ್ಲಿ ಮಳೆಯಾಗಿದ್ದು, ನದಿಗಳು ತುಂಬಿ ಹರಿಯುತ್ತಿವೆ. ಆದರೆ, ವಿದ್ಯುತ್‌ ಅಸಮರ್ಪಕ ಪೂರೈಕೆಯಿಂದ ಹಳ್ಳ ಮತ್ತು ನದಿ ಪಾತ್ರದ ಜಮೀನುಗಳಿಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.

ತಾವೇ ಕೈಗೊಂಡ ಏತ ನೀರಾವರಿ ಯೋಜನೆಗಳ ವೆಚ್ಚ, ವಿದ್ಯುತ್‌ ಮತ್ತು ಉಸ್ತುವಾರಿಯನ್ನು ಸರಕಾರವೇ ನೋಡಿಕೊಳ್ಳುತ್ತದೆ. ಆದರೆ, ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಉಪಯೋಗಿಸಿ ರೈತರು ಒಣಭೂಮಿಯನ್ನು ಅಭಿವೃದ್ಧಿಪಡಿಸಿದರೆ, ಅಗತ್ಯ ವಿದ್ಯುತ್‌ ಸೌಕರ್ಯ ಒದಗಿಸುತ್ತಿಲ್ಲ. ಮುಖ್ಯಮಂತ್ರಿಗಳು ತಾವು ಕೊಟ್ಟ ಭರವಸೆಯನ್ನು ಕೂಡಲೇ ಈಡೇರಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಹೋರಾಟಗಾರರಾದ ಸರ್ವೋತ್ತಮರೆಡ್ಡಿ, ಅಶೋಕಭೂಪಾಲ್‌, ಚನ್ನಬಸವ ಉಪ್ಪಳ, ವಿರುಪಯ್ಯ, ಕಲ್ಲಪ್ಪ, ಈರಣ್ಣ, ರಡ್ಡೆಪ್ಪ ಸೇರಿ ಹಲವರಿದ್ದರು.

5 ತಾಸು ಹೆಚ್ಚುವರಿ ಪೂರೈಕೆ : ರೈತರ ಮನವಿಪತ್ರ ಸ್ವೀಕರಿಸಿ ಮಾತನಾಡಿದ ಸಚಿವ ವೆಂಕಟರಾವ್‌ ನಾಡಗೌಡ, ''ವಿದ್ಯುತ್‌ ಪೂರೈಕೆ ಸಮಸ್ಯೆ ಕುರಿತು ಮುಖ್ಯಮಂತ್ರಿಗಳ ಜತೆ ಚರ್ಚಿಸುವೆ. ನಮ್ಮದು ರೈತರ ಸರಕಾರ. ರೈತರಿಗೆ ತೊಂದರೆಯಾಗಲು ಅವಕಾಶ ಕೊಡುವುದಿಲ್ಲ. ಸದ್ಯ 7 ತಾಸು ವಿದ್ಯುತ್‌ ಪೂರೈಕೆಯಾಗುತ್ತಿದ್ದು, ಹೆಚ್ಚುವರಿಯಾಗಿ 5 ತಾಸು ಪೂರೈಕೆಗೆ ಕ್ರಮ ಜರುಗಿಸಲಾಗುವುದು. ಒಂದೆರಡು ದಿನ ಎಲ್ಲರೂ ಕಾಯಬೇಕು'' ಎಂದರು.

ಜು.26ಕ್ಕೆ ಹೋರಾಟ : ಪ್ರತಿಭಟನೆಗೂ ಮುನ್ನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರಾದ ಸರ್ವೋತ್ತಮರೆಡ್ಡಿ ಹಾಗೂ ಅಶೋಕ ಭೂಪಾಲ್‌ ಅವರು, ''ತಾಲೂಕು ವ್ಯಾಪ್ತಿಯ ನದಿ ಪಾತ್ರದಲ್ಲಿ 11 ಸಾವಿರಕ್ಕೂ ಹೆಚ್ಚು ಪಂಪ್‌ಸೆಟ್‌ಗಳಿವೆ. ಸಾವಿರಾರು ಎಕರೆ ಭೂಮಿಯನ್ನು ಒಣ ಬೇಸಾಯದಿಂದ ನೀರಾವರಿಯಾಗಿ ಮಾಡಿಕೊಂಡ ರೈತರ ಬೆಂಬಲಕ್ಕೆ ಸರಕಾರ ನಿಲ್ಲಬೇಕು. 7 ತಾಸು ವಿದ್ಯುತ್‌ ಪೂರೈಕೆ ಮಾಡಿದರೆ ಯಾವುದೇ ಪ್ರಯೋಜನ ಆಗುತ್ತಿಲ್ಲ. ನಿರಂತರ ವಿದ್ಯುತ್‌ನಿಂದ ಮಾತ್ರ ರೈತರ ಸಮಸ್ಯೆ ಬಗೆಹರಿಯುತ್ತದೆ. ಶೀಘ್ರ ಸಮಸ್ಯೆ ಪರಿಹರಿಸದಿದ್ದರೆ, ಜು.26ರಂದು ರಸ್ತೆ ಸಂಚಾರ ತಡೆದು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾಜಿ ಸಂಸದ ಕೆ.ವಿರೂಪಾಕ್ಷ ಪ್ಪ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಸೇರಿ ಪ್ರಮುಖರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ