ಆ್ಯಪ್ನಗರ

ಕಾಲುವೆ, ಸೇತುವೆ ದುರಸ್ತಿಗೆ ಗ್ರಹಣ

ವರ್ಷದ ಹಿಂದೆ ಕುಸಿದು ಹೋಗಿರುವ ತುಂಗಭದ್ರಾ ಎಡದಂಡೆಯ ಉಪಕಾಲುವೆ ಹಾಗೂ ಇಂದೋ, ನಾಳೆಯೋ ಬೀಳುವ ಹಂತ ತಲುಪಿರುವ ಸೇತುವೆಯ ದುರಸ್ತಿಗೆ ಗ್ರಹಣ ಹಿಡಿದಿದೆ.

Vijaya Karnataka 15 Aug 2019, 5:00 am
ಸಿಂಧನೂರು : ವರ್ಷದ ಹಿಂದೆ ಕುಸಿದು ಹೋಗಿರುವ ತುಂಗಭದ್ರಾ ಎಡದಂಡೆಯ ಉಪಕಾಲುವೆ ಹಾಗೂ ಇಂದೋ, ನಾಳೆಯೋ ಬೀಳುವ ಹಂತ ತಲುಪಿರುವ ಸೇತುವೆಯ ದುರಸ್ತಿಗೆ ಗ್ರಹಣ ಹಿಡಿದಿದೆ.
Vijaya Karnataka Web repair canal bridge
ಕಾಲುವೆ, ಸೇತುವೆ ದುರಸ್ತಿಗೆ ಗ್ರಹಣ


ತಾಲೂಕಿನ ತುರುವಿಹಾಳ ಪಟ್ಟಣದ ಒಳ ಪ್ರವೇಶಿಸುವ ಮೊದಲು ಇರುವ ಕಿರಿದಾದ ಸೇತುವೆ ಸಂಪೂರ್ಣ ಶಿಥಿಲಗೊಂಡಿದೆ. ಪಟ್ಟಣ ಪಂಚಾಯಿತಿ ಕಚೇರಿ, ಪೊಲೀಸ ಠಾಣೆ ಸೇರಿದಂತೆ ಇಡೀ ಪಟ್ಟಣದ ಮುಖ್ಯ ರಸ್ತೆ ಇದೊಂದೇ ಆಗಿದೆ. ಕಾಲುವೆ ಮೇಲೆ ಇರುವ ಈ ರಸ್ತೆಯಲ್ಲಿ ದಿನವೂ ನೂರಾರು ವಾಹನಗಳು ಸಂಚರಿಸುತ್ತವೆ. ಲಾರಿ ಸೇರಿ ದೊಡ್ಡ ವಾಹನಗಳ ಸಂಚರಿಸಿದ ಸಮಯದಲ್ಲಿ ಸೇತುವೆಯಲ್ಲಿ ನಡುಗಿದ ಸದ್ದಾಗುತ್ತಿದೆ. ಇಷ್ಟೆಲ್ಲಾ ಆಗುತ್ತಿದ್ದರೂ ಯಾರೊಬ್ಬರು ಈ ಬಗ್ಗೆ ಗಮನಹರಿಸುತ್ತಿಲ್ಲ. ದಶಕದ ಹಿಂದೆ ನಿರ್ಮಿಸಿರುವ ಸೇತುವೆ ಕಾಂಕ್ರಿಟ್‌ನಲ್ಲಿ ಬಿರುಕು ಕಾಣಿಸಿಕೊಂಡಿದೆ. ದಿನ ಕಳೆದಂತೆ ಮತ್ತಷ್ಟು ಹದಗೆಡುತ್ತಿದೆ. ಪಟ್ಟಣ ವ್ಯಾಪ್ತಿಯಲ್ಲಿ ಕೋಟಿಗಟ್ಟಲೆ ಅನುದಾನ ಖರ್ಚು ಮಾಡಿ ಅಭಿವೃದ್ಧಿ ಮಾಡಲಾಗುತ್ತಿದೆ. ಆದರೆ ಸೇತುವೆ ನಿರ್ಮಾಣದ ಕುರಿತಾಗಿ ಯಾರೊಬ್ಬರೂ ಕಾಳಜಿವಹಿಸದೆ ಇರುವುದು ಬೇಜವಾಬ್ದಾರಿಗೆ ಹಿಡಿದ ಕೈಗನ್ನಡಿಯಂತಿದೆ.

ಅವಘಡ: ಸೇತುವೆ ಪಕ್ಕದಲ್ಲಿಯೇ ನೀರಾವರಿ ಇಲಾಖೆ ಕಚೇರಿ ಇದೆ. ಆದರೆ ಅಧಿಕಾರಿಗಳು ಇದುವರೆಗೆ ಸಮಸ್ಯೆ ಪರಿಹಾರಕ್ಕೆ ಚಿಂತನೆ ನಡೆಸಿಲ್ಲ ಎಂಬುದು ಜನರ ಆರೋಪ. ಸೇತುವೆಯ ಎರಡು ಬದಿಯಲ್ಲಿರುವ ಸಣ್ಣ ಗೋಡೆಗಳು ಬಾಗಿವೆ. ಈ ಬಗ್ಗೆ ಹಲವು ಬಾರಿ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟವರ ಗಮನಕ್ಕೆ ತಂದರೆ ಕ್ಯಾರೆ ಎಂದಿಲ್ಲ. ಅವಘಡ ಸಂಭವಿಸುವವರೆಗೂ ಜನ ಕಾಯಬೇಕೆ? ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಲುವೆ ಮೇಲೆ ದೊಡ್ಡದಾದ ಸೇತುವೆ ನಿರ್ಮಿಸಿದರೆ ಅನುಕೂಲವಾಗಲಿದೆ ಎಂಬುದು ಜನಾಭಿಪ್ರಾಯ.

ಕುಸಿದ ಕಾಲುವೆ: ಸೇತುವೆಯಿಂದ ಅನತಿ ದೂರದಲ್ಲಿಯೇ ತುಂಗಭದ್ರಾ ಎಡದಂಡೆ ನಾಲೆಯ ಉಪ ಕಾಲುವೆ ಕುಸಿದು ಬಿದ್ದಿದೆ. ನೀರು ಬಿಟ್ಟ ಸಮಯದಲ್ಲಿ ಕುಸಿತ ಹೆಚ್ಚುತ್ತಿದೆ. ಇದೇ ರೀತಿಯಾಗಿ ಮೂರ್ನಾಲ್ಕು ಕಡೆ ಬೋಂಗಾ ಬಿದ್ದಿದ್ದು, ಸಮಸ್ಯೆ ಜಟಿಲವಾಗಿದೆ. ಮಣ್ಣು ಹಾಕಿ ಮುಚ್ಚುವ ಕೆಲಸ ಮಾಡಿದರೂ ಪ್ರಯೋಜನವಾಗಿಲ್ಲ. ನೀರಾವರಿ ಇಲಾಖೆ ಕಚೇರಿ ಹಿಂಬದಿಯಲ್ಲಿಯೇ ಈ ಪ್ರಕರಣ ನಡೆದಿದೆ. ಗುಂಜಳ್ಳಿ, ಸಿಂಧನೂರು ನಗರಕ್ಕೆ ಇದೇ ಕಾಲುವೆ ನೀರು ಹರಿಯುತ್ತಿದೆ. ದುರಸ್ತಿ ಮಾಡಿ ಕಾಲುವೆಯನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತಿಲ್ಲ. ಅಪಾರ ಅನುದಾನ ಖರ್ಚು ಮಾಡಿ ಈ ಹಿಂದೆ ಕಾಲುವೆ ಅಧುನೀಕರಣ ಮಾಡಲಾಗಿತ್ತು. ಆದರೆ ವರ್ಷಗಳು ಕಳೆಯುವುದರೊಳಗೆ ಎಲ್ಲೆಂದರಲ್ಲಿ ಕಾಲುವೆ ಹಾಳಾಗುತ್ತಿವೆ. ನೀರು ರಭಸವಾಗಿ ಹರಿದು ಬಂದರೆ, ಕಾಲುವೆ ಸಂಪೂರ್ಣ ಒಡೆದು, ಹೊಲಗಳಿಗೆ ನೀರು ನುಗ್ಗುವ ಆತಂಕವಿದೆ. ಈ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಿ, ಸೂಕ್ತ ಕ್ರಮಕೈಗೊಳ್ಳಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.

---
ದಶಕಗಳ ಹಿಂದೆಯೇ ಕಾಲುವೆ ಮೇಲೆ ಸೇತುವೆ ನಿರ್ಮಿಸಿದ್ದಾರೆ. ಇತ್ತೀಚೆಗೆ ಸಂಪೂರ್ಣ ಕುಸಿದು ಹೋಗುವ ಹಂತ ತಲುಪಿದೆ. ದಿನವೂ ಹೆಚ್ಚಿನ ವಾಹನಗಳು ಇದೇ ರಸ್ತೆ ಮೇಲೆ ತಿರುಗಾಡುತ್ತಿವೆ. ಸೇತುವೆ ಕುಸಿದರೆ ಅವಘಡ ಸಂಭವಿಸುವ ಆತಂಕವಿದೆ. ಕೂಡಲೇ ಹೊಸದಾಗಿ ಸೇತುವೆ ನಿರ್ಮಿಸಬೇಕು. ಒಡೆದು ಹೋಗಿರುವ ಉಪ ಕಾಲುವೆಯನ್ನು ಸರಿಪಡಿಸಬೇಕು.

-ಹನುಮೇಶ ನಾಯಕ ಬಾಗೋಡಿ, ಗೌರವಾಧ್ಯಕ್ಷ ವಾಲ್ಮೀಕಿ ಯುವ ಪಡೆ ತುರುವಿಹಾಳ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ