ಆ್ಯಪ್ನಗರ

ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ

ಕರ್ನಾಟಕ ಪ್ರಾಂತ ರೈತ ಸಂಘದಿಂದ ವಿಧವೆಯರಿಗೆ ಸರಕಾರದಿಂದ ಭೂಮಿ ಹಂಚಿಕೆ ಮಾಡುವುದು ಸೇರಿ ರೈತರ ನಾನಾ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

Vijaya Karnataka 10 Jul 2018, 5:00 am
ಮಸ್ಕಿ : ಕರ್ನಾಟಕ ಪ್ರಾಂತ ರೈತ ಸಂಘದಿಂದ ವಿಧವೆಯರಿಗೆ ಸರಕಾರದಿಂದ ಭೂಮಿ ಹಂಚಿಕೆ ಮಾಡುವುದು ಸೇರಿ ರೈತರ ನಾನಾ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
Vijaya Karnataka Web RAC-RCH09MSK04


ಪಟ್ಟಣದ ಪ್ರವಾಸಿ ಮಂದಿರದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಮುದುಗಲ್‌ ಕ್ರಾಸ್‌, ಹಳೆ ಬಸ್‌ ನಿಲ್ದಾಣ, ಕನಕವೃತ್ತ ಮಾರ್ಗವಾಗಿ ಬಸವೇಶ್ವರ ನಗರದಲ್ಲಿರುವ ತಹಸಿಲ್‌ ಕಚೇರಿ ತಲುಪಿತು.

ಪ್ರಾಂತ ರೈತಸಂಘದ ಜಿಲ್ಲಾಧ್ಯಕ್ಷ ಡಿ.ವೀರನಗೌಡ ಮಾತನಾಡಿ, ವಿಧವೆಯರಿಗೆ ಸರಕಾರದಿಂದ ಭೂಮಿ ಹಂಚಲು ಯಾವ ನಿಗಮಕ್ಕೂ ವಹಿಸಬಾರದು. ಜಿಲ್ಲೆಯಲ್ಲಿ ಸರಕಾರಿ ಮತ್ತು ಗೈರಾಣು ಭೂಮಿ ಸಾವಿರಾರು ಎಕರೆಯಲ್ಲಿದೆ. ಅದನ್ನು ಸರಕಾರ ನೇರವಾಗಿ ಹಂಚಿಕೆ ಮಾಡಬೇಕು. ಭೂಮಿ ಹಂಚಿಕೆ ಮಾಡಲು ನಿಗಮಗಳಿಗೆ ಒಪ್ಪಿಸಿದರೆ, ಇದರಲ್ಲಿ ಮಧ್ಯವರ್ತಿಗಳು ಪ್ರವೇಶಿಸಿ ಭೂಮಿ ಮಾರಾಟಗಾರರಿಂದ ಮತ್ತು ಫಲಾನುಭವಿಗಳಿಂದ ಮಧ್ಯವರ್ತಿಗಳು ಕಮಿಷನ್‌ ವ್ಯಾಪಾರ ಮಾಡುತ್ತಾರೆ. ಆದ್ದರಿಂದ ಸರಕಾರದಿಂದ ನೇರವಾಗಿ ಫಲಾನುಭವಿಗಳಿಗೆ ಭೂಮಿ ಹಂಚಿಕೆ ಮಾಡಬೇಕು ಎಂದರು.

ರೈತ ವರ್ಗದ ಮೂಲ ಸಮಸ್ಯೆಗಳಾಗಿರುವ ದುಡಿಯುವ ಕೈಗೆ ಭೂಮಿ, ನೀರಾವರಿ ಸೌಲಭ್ಯ, ಗುಣಮಟ್ಟ ತಳಿಯ ಬೀಜ, ರಸಗೊಬ್ಬರ, ಕ್ರಿಮಿನಾಶಕ ಹಾಗೂ ಮಾರುಕಟ್ಟೆ, ಎನ್ನಾರ್ಬಿಸಿ 5ಎ ಕಾಲುವೆ ಅನುಷ್ಠಾನ, ಕೃಷ್ಣಾ ಬಲದಂಡೆ ನಾಲೆಯಿಂದ ಮಸ್ಕಿ ನಾಲೆಗೆ ನೀರು ಡಂಪ್‌ ಮಾಡಿಸುವುದು ಹಾಗೂ ರೈತರು ಬೆಳೆದ ಬೆಲೆಗೆ ಬೆಂಬಲ ಬೆಲೆ ಸೇರಿ ನಾನಾ ಬೇಡಿಕೆಗಳನ್ನು ಸರಕಾರ ಕೂಡಲೇ ಈಡೇರಿಸಬೇಕೆಂದು ಒತ್ತಾಯಿಸಿದರು.

ನಂತರ ಸಹಾಯಕ ಆಯುಕ್ತರಾದ ಎಂ.ಪಿ.ಮಾರುತಿ ಅವರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ಪ್ರಾಂತ ರೈತಸಂಘದ ಮಸ್ಕಿ ತಾಲೂಕಾಧ್ಯಕ್ಷೆ ಶಾಂತಾ ಬಾಯಿ, ಕಾರ್ಯದರ್ಶಿ ಹನುಮಂತ ಬಲದಂಡೆ, ವೀರೇಶ, ಗುರಣ್ಣ, ನಾಗರತ್ನ, ಬಸವರಾಜಪ್ಪಗೌಡ ಹರ್ವಾಪೂರು ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ