ಚಂದ್ರಶೇಖರ ಬೆನ್ನೂರು, ಸಿಂಧನೂರು
ಸರಕಾರಿ ಆಸ್ಪತ್ರೆಯ ಎಆರ್ಟಿ ಕೇಂದ್ರಗಳಲ್ಲಿ ನಿವೃತ್ತಿ ವಯಸ್ಸು ದಾಟಿದ ಬಳಿಕವೂ ಕೆಲವು ವೈದ್ಯರು ಸೇವೆಯಲ್ಲಿ ನಿರಂತ ಮುಂದುವರಿದಿರುವ ಅಚ್ಚರಿ ಪ್ರಕರಣಗಳು ಬಯಲಾಗಿವೆ!
ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷÜನ್ ಸೊಸೈಟಿಯಡಿ ನಡೆಯುತ್ತಿರುವ ಈ ಕೇಂದ್ರಗಳಲ್ಲಿ ವಯೋಮಿತಿ ದಾಟಿಯೂ ಕೆಲಸ ಮಾಡುತ್ತಿರುವ ಈ ವೈದ್ಯರು ಕಾರ್ಯಾಭಾರ ತಡೆಯದೇ ಹಾಗೂ ವಯೋ ಸಹಜ ಕಾಯಿಲೆ ಪರಿಣಾಮ ರೋಗಿಗಳ ಜತೆ ಆಪ್ತಸಮಾಲೋಚನೆ, ಸಲಹೆಗಳನ್ನು ನೀಡುವ ಬದಲು ಅಸಭ್ಯ ವರ್ತನೆ ಮಾಡುತ್ತಿದ್ದಾರೆ ಎನ್ನುವ ಆಪಾದನೆಗಳೂ ಕೇಳಿ ಬರುತ್ತಿವೆ.
ಏನಿದು ದರ್ಬಾರ್?: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಮಾತ್ರ ಸಾರ್ವಜನಿಕರ ಹಿತದೃಷ್ಟಿಯಿಂದ 62 ವರ್ಷಕ್ಕೆ ಸಡಿಲಿಸಿದ್ದಾರೆ. ಆದರೆ ನ್ಯಾಕೋ ಆದೇಶವೊಂದರ ಆಧಾರದಲ್ಲಿ 65 ವರ್ಷವರೆಗೂ ಎಆರ್ಟಿ ಕೇಂದ್ರಗಳಲ್ಲಿ ವೈದ್ಯರನ್ನು ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ. ಇಷ್ಟರ ನಡುವೆಯೂ 65 ವರ್ಷ ಮೀರಿದವರು ಇನ್ನೂ ಸೇವೆಯಲ್ಲಿ ನಿರಂತರವಾಗಿ ಉಳಿದಿರುವುದು ಅನುಮಾನ ಉಂಟು ಮಾಡಿದೆ. ನಿವೃತ್ತಿ ಸಮಯದಲ್ಲಿ ಒತ್ತಡದಲ್ಲಿರುವ ಈ ವೈದ್ಯರು ರೋಗಿಗಳ ಜತೆ ನಿರಂತರ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಈ ಕುರಿತಾಗಿ ರೋಗಿಗಳು ಹಲವು ಬಾರಿ ದೂರುಗಳನ್ನು ನೀಡಿದ್ದರೂ ಪ್ರಯೋಜನವಾಗಿಲ್ಲ.
ಯಾರಾರಯರು?: ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿಯ ಉಪನಿರ್ದೇಶಕರು(ಸಿ.ಎಸ್.ಟಿ) ನೀಡಿರುವ ಆರ್ಟಿಐ ಮಾಹಿತಿಯಿಂದ ಈ ಅಂಶ ಬಹಿರಂಗವಾಗಿದ್ದು, ವೈದ್ಯರ ಎಸ್ಎಸ್ಎಲ್ಸಿ ದಾಖಲಾತಿಯಂತೆ ಗಂಗಾವತಿ ತಾಲೂಕಿನ ಸಾರ್ವಜನಿಕ ಆಸ್ಪತ್ರೆಯ ಎಆರ್ಟಿ ಕೇಂದ್ರದ ವೈದ್ಯಾಧಿಕಾರಿ ಡಾ.ಗುರುಮೂರ್ತಿ(1-2-1947), ಸಿಂಧನೂರು ಸಾರ್ವಜನಿಕ ಆಸ್ಪತ್ರೆಯ ಎಆರ್ಟಿ ಕೇಂದ್ರದ ವೈದ್ಯಾಧಿಕಾರಿ ಡಾ.ಎಸ್.ವಿ.ಪಾಟೀಲ್ (26-1-1952), ಬಳ್ಳಾರಿಯ ವಿಜಯ ನಗರ ವೈದ್ಯಕೀಯ ಮಹಾವಿದ್ಯಾಲಯದ ಎಆರ್ಟಿ ಕೇಂದ್ರದ ಡಾ.ಆರ್.ಹನುಮಯ್ಯ (15-6-1952) ಇವರ 65 ವರ್ಷ ಮುಗಿದರೂ ಇನ್ನೂ ಸೇವೆಯಲ್ಲಿ ಮುಂದುವರಿದಿದ್ದಾರೆ. ಈ ವಿಚಾರ ಮೇಲಧಿಕಾರಿಗಳ ಗಮನಕ್ಕೆ ಬಂದರೂ ಕ್ರಮ ಜರುಗಿಲ್ಲ. ಈ ವಿಷಯವಾಗಿ ಯಾರಾದರೂ ಪ್ರಶ್ನಿಸಿದರೆ, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಅವರನ್ನು ಮುಂದುವರಿಸಲಾಗಿದೆ ಎಂಬ ಸಮಜಾಯಿಷಿ ನೀಡಲಾಗುತ್ತಿದೆ.
ಸಚಿವರಿಗೆ ಮಾಹಿತಿ: ಸಿಂಧನೂರು ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಎಆರ್ಟಿ ಕೇಂದ್ರದ ವೈದ್ಯಾಧಿಕಾರಿ ಕುರಿತಾಗಿ ಸಚಿವ ರಮೇಶ ಕುಮಾರ್ ಅವರಿಗೂ ಮನವಿ ಪತ್ರ ರವಾನಿಸಲಾಗಿದೆ. ಎಆರ್ಟಿ ಕೇಂದ್ರಕ್ಕೆ ತೆರಳುವ ರೋಗಿಗಳಿಗೆ, ವೈದ್ಯಾಧಿಕಾರಿಗಳು ಅವಾಚ್ಯ ಶಬ್ದಗಳಿಂದ ನಿಂದಿಸುವುದಲ್ಲದೇ, ದೌರ್ಜನ್ಯ ನಡೆಸುವ ಪ್ರಯತ್ನಕ್ಕೆ ಮುಂದಾಗಿರುವ ಆರೋಪ ಮಾಡಲಾಗಿದೆ. ಆದರೆ ಕೆಲ ರೋಗಿಗಳು ಏನು ಪ್ರತಿಕ್ರಿಯೆ ನೀಡದೆ, ಮೌನಕ್ಕೆ ಶರಣಾಗಿದ್ದಾರೆ. ಎಚ್ಐವಿ/ಏಡ್ಸ್ ಬಾಧಿತರಿಗೆ ನೋವು ನೀಡುತ್ತಿರುವ ವೈದ್ಯರ ಕುರಿತು ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಬೇಕು ಎಂಬುದು ನೊಂದವರ ಅಳಲಾಗಿದೆ.