ಹಟ್ಟಿಚಿನ್ನದಗಣಿ: ಸಮೀಪದ ಗುಡದನಾಳ ಗ್ರಾಮದಲ್ಲಿ ಕಳೆದ ತಿಂಗಳು ಆರಂಭಿಸಲಾಗಿದ್ದ ತೊಗರಿ ಖರೀದಿ ಕೇಂದ್ರ ವಾರದಿಂದ ಬಂದಾಗಿದ್ದು, ರೈತರು ಪರದಾಡುವಂತಾಗಿದೆ!
ಕೇಂದ್ರ ಸರಕಾರದ 425 ರೂ. ಹಾಗೂ ರಾಜ್ಯ ಸರಕಾರದ 450 ರೂ. ಸಹಾಯಧನದೊಂದಿಗೆ ಬೆಂಬಲ ಬೆಲೆ 5500 ರೂಪಾಯಿಗೆ ಪ್ರತಿ ಕಿಂಟ್ವಾಲ್ ತೊಗರಿ ಖರೀದಿಸಲಾಗುತ್ತಿದೆ. ದೂರದ ಪಟ್ಟಣ ಪ್ರದೇಶದಗಳಿಗೆ ಹೋಗುವ ಬದಲು ಸ್ಥಳೀಯವಾಗಿ ರೈತರಿಗೆ ಅನುಕೂಲವಾಗಲಿ ಎಂದು ತೆರೆದ ಖರೀದಿ ಕೇಂದ್ರ ಏಕಾಏಕಿ ಬಂದಾಗಿದ್ದರಿಂದ ರೈತರು ತೊಂದರೆಗೆ ಸಿಲುಕಿದ್ದಾರೆ.
ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಆರಂಭಿಸಲಾದ ತೊಗರಿ ಖರೀದಿ ಕೇಂದ್ರಕ್ಕೆ ಗುಡದನಾಳ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳ ರೈತರಿಗೆ ತೊಗರಿ ಮಾರಾಟಮಾಡಲು ಕೇಂದ್ರ ತೆರೆಯಲಾಗಿತ್ತು. ಆದರೆ ಕಳೆದ ಒಂದು ವಾರದಿಂದ ತೊಗರಿ ಖರೀದಿ ಕೇಂದ್ರ ಏಕಾಏಕಿ ಬಂದ್ ಮಾಡಲಾಗಿದೆ. ತೊಗರಿ ಖರೀದಿ ಕೇಂದ್ರವಿದೆ ಎಂದು ನೂರಾರು ರೈತರು ವಾಹನಗಳಲ್ಲಿ ತಂದ ತೊಗರಿ ಮೂಟೆಗಳನ್ನು ಕೇಂದ್ರದ ಮುಂದೆ ಹಾಕಿಕೊಂಡು ಕುಳಿತುಕೊಂಡಿದ್ದಾರೆ.
ತೊಗರಿ ಚೀಲಗಳಿಗೆ ಪ್ಲ್ಯಾಸ್ಟಿಕ್ ಚೀಲದ ಹೊದಿಕೆ ಹಾಕಿ ಕೆಡದಂತೆ ನೋಡಿಕೊಂಡು ರೈತತು ಅಲ್ಲಿಯೇ ಮಲಗುತ್ತಿದ್ದಾರೆ. ಆಕಸ್ಮಿಕವಾಗಿ ಮಳೆಯೇನಾದರೂ ಬಂದರೆ ರೈತರ ಸ್ಥತಿ ಅಧೋಗತಿ. ಬಂದ್ ಮಾಡಲಾಗಿರುವ ಕೇಂದ್ರವನ್ನು ಆದಷ್ಟು ಶೀಘ್ರ ಆರಂಭಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.
------
ಗುಡದನಾಳ ಗ್ರಾಮದಲ್ಲಿ ತೊಗರಿ ಖರೀದಿ ಕೇಂದ್ರವನ್ನು ಆದಷ್ಟು ಶೀಘ್ರ ಆರಂಭಿಸಲು ಕ್ರಮಕೈಗೊಳ್ಳಬೇಕು. ರೈತರು ಕೇಂದ್ರವಿದೆ ಎಂದು ತೊಗರಿ ಮಾರಾಟ ಮಾಡಲು ಬಂದು ಮೂಟೆಗಳನ್ನು ಹಗಲು-ರಾತ್ರಿ ಕಾಯುತ್ತಾ ಕುಳಿತಿದ್ದಾರೆ. ತಕ್ಷ ಣವೇ ಖರೀದಿ ಕೇಂದ್ರ ಆರಂಭಿಸಬೇಕು. ಇಲ್ಲವಾದಲ್ಲಿ ಹೋರಾಟಕ್ಕಿಳಿಯಬೇಕಾಗುತ್ತದೆ.
-ಶಿವಣ್ಣ ಮ್ಯಾಗೇರಿ, ಡಿಎಸ್ಎಸ್, ಮುಖಂಡ, ಕೋಠಾ.
------
ತೊಗರಿ ಖರೀದಿ ಕೇಂದ್ರದಲ್ಲಿ ಹಮಾಲರ ವೆಚ್ಚವೆಂದು ಕಿಂಟಲ್ಗೆ 20 ರೂ. ತೆಗೆದುಕೊಂಡಿದ್ದಾರೆ. ಇದನ್ನು ಪ್ರಶ್ನಿಸಿ ಕೆಲವು ರೈತರು ವಾಗ್ವಾದ ನಡೆಸಿದ್ದರಿಂದ ಕೇಂದ್ರ ಬಂದ್ ಮಾಡಿದ್ದಾರೆ. ಆದರೆ ನಾವುಗಳು ಕೊಡಲು ಸಿದ್ಧರಿದ್ದೇವೆ. ಒಂದು ವಾರದಿಂದ ಕೇಂದ್ರದ ಮುಂದೆ ತೊಗರಿ ಮೂಟೆಗಳಿನ್ನಿಟ್ಟುಕೊಂಡು ಕಾಯುತ್ತಾ ಕುಳಿತ್ತಿದ್ದು ಆದಷ್ಟು ಶೀಘ್ರ ಕೇಂದ್ರ ಆರಂಭಿಸಬೇಕು.
-ಶಂಕರಗೌಡ ಮಾ.ಪಾ. ರೈತ, ಗುಡದನಾಳ.