ಆ್ಯಪ್ನಗರ

ಪರಿಹಾರಕ್ಕೆ ಆಗ್ರಹಿಸಿ ಮುತ್ತಿಗೆ, ತಡೆಯೊಡ್ಡಿದ ಪೊಲೀಸರು

ನೆರೆ ಮತ್ತು ಬರ ಪರಿಹಾರದಿಂದ ಜಿಲ್ಲೆಯ ರೈತರು ತತ್ತರಿಸಿದ್ದು, ತಕ್ಷಣವೇ ಪರಿಹಾರ ಕ್ರಮ ಕೈಗೊಂಡು ಅವರ ಸಮಸ್ಯೆ ಆಲಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಸ್ವರಾಜ್‌ ಇಂಡಿಯಾ ಪಕ್ಷ ದ ನೇತೃತ್ವದಲ್ಲಿ ಶುಕ್ರವಾರ ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ, ಪೊಲೀಸರು ತಡೆಯೊಡ್ಡಿದರು.

Vijaya Karnataka 24 Aug 2019, 5:00 am
ರಾಯಚೂರು : ನೆರೆ ಮತ್ತು ಬರ ಪರಿಹಾರದಿಂದ ಜಿಲ್ಲೆಯ ರೈತರು ತತ್ತರಿಸಿದ್ದು, ತಕ್ಷ ಣವೇ ಪರಿಹಾರ ಕ್ರಮ ಕೈಗೊಂಡು ಅವರ ಸಮಸ್ಯೆ ಆಲಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಸ್ವರಾಜ್‌ ಇಂಡಿಯಾ ಪಕ್ಷದ ನೇತೃತ್ವದಲ್ಲಿ ಶುಕ್ರವಾರ ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ, ಪೊಲೀಸರು ತಡೆಯೊಡ್ಡಿದರು.
Vijaya Karnataka Web siege demanding relief
ಪರಿಹಾರಕ್ಕೆ ಆಗ್ರಹಿಸಿ ಮುತ್ತಿಗೆ, ತಡೆಯೊಡ್ಡಿದ ಪೊಲೀಸರು


ಬೆಳೆವಿಮೆ ಪಾವತಿಯಲ್ಲಿ ರೈತರಿಗೆ ಅನ್ಯಾಯವಾಗಿದೆ. ನೆರೆ, ಬರ ಪರಿಹಾರ ಕಾರ್ಯಗಳನ್ನು ಕೈಗೊಂಡರೂ ಬಿಡಿಗಾಸನ್ನೂ ರೈತರಿಗೆ ಪಾವತಿಸಿಲ್ಲ ಎಂದು ನಗರದ ಟಿಪ್ಪು ಉದ್ಯಾನದಲ್ಲಿ ಪ್ರತಿಭಟನೆ ನಡೆಸಿ, ಸರಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸದ್ದರಿಂದ ರೈತರು ಜಿಲ್ಲಾಡಳಿತಕ್ಕೆ ಮುತ್ತಿಗೆ ಹಾಕಲು ನುಗ್ಗಿಬಂದರು. ಜಿಲ್ಲಾಡಳಿತದ ಕಚೇರಿಯೊಳಗೆ ನುಗ್ಗುವಷ್ಟರಲ್ಲಿ ಪೊಲೀಸ್‌ ಸಿಬ್ಬಂದಿಗಳು ಕಚೇರಿ ಗೇಟ್‌ಗಳನ್ನು ಮುಚ್ಚಿ ತಡೆದರು.

ಹಣ ಎಲ್ಲಿ ಹೋಯಿತು?: ಜಿಲ್ಲೆಯಲ್ಲಿ ಕೆಲ ಭಾಗ ಅತಿವೃಷ್ಟಿಯಿಂದ ಹಾನಿಗೊಳಗಾದರೆ, ಮತ್ತೊಂದೆಡೆ ತೀವ್ರ ಬರಗಾಲದಿಂದ ಕಂಗೆಟ್ಟಿದೆ. ರೈತರ ಬಾಳು ಬೀದಿಗೆ ಬಂದಿದೆ. ರೈತರು ಗುಳೆ ಹೋಗುವ ಪರಿಸ್ಥಿತಿಯಿದೆ.

ರೈತರು ಕಣ್ಣೀರು ಹಾಕುವಂತಾಗಿದೆ. ರೈತರು ಕೆಲಸವಿಲ್ಲದೇ ಮಹಾನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ಫಸಲ್‌ ಬಿಮಾ ಯೋಜನೆಯಡಿಯಲ್ಲಿ ಪ್ರೀಮಿಯಂ ಹಣ ತುಂಬಿದ ಸಹಸ್ರಾರು ರೈತರ ಪೈಕಿ ಕೆಲವೇ ರೈತರಿಗೆ ಹಣ ನೀಡಲಾಗುತ್ತಿದೆ. ಲಿಂಗಸುಗೂರು ತಾಲೂಕಿನ ವಿವಿಧೆಡೆ ಬೆಳೆನಷ್ಟವಾದ ಪ್ರದೇಶವನ್ನು ಜಾಲಿಬೆಳೆದ ಪ್ರದೇಶ ಎಂದು ಕಂದಾಯ ಅಧಿಕಾರಿಗಳು ಜಿಪಿಎಸ್‌ ಮಾಡುವ ಮೂಲಕ ಅವಾಂತರ ಸೃಷ್ಟಿಸಿದ್ದಾರೆ. ರೈತರು ಬೆಂಗಳೂರಿನ ಕಚೇರಿಗೆ ಅಲೆದಾಡುತ್ತಿದ್ದಾರೆ. ಇಂತಹ ಭೀಕರ ಪರಿಸ್ಥಿತಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳು ನೈಸರ್ಗಿಕ ವಿಕೋಪಕ್ಕೆ ಒಳಗಾದ ರೈತರ ನೆರವಿಗೆ ಬರಬೇಕು. ಜಿಲ್ಲೆಗೆ 60 ಲಕ್ಷ ರೂ.ನೀಡಿದ್ದು, ಯಾವುದಕ್ಕೂ ಸಾಲುವುದಿಲ್ಲ. ಸರಕಾರ ಕೋಟ್ಯಂತರ ರೂ.ಪರಿಹಾರ ನೀಡಿದ್ದಾಗಿ ಹೇಳುತ್ತಿದ್ದು, ಹಣ ಎಲ್ಲಿಗೆ ಹೋಯಿತು? ಎಂದು ಪ್ರತಿಭಟನೆ ನಿರತ ರೈತರು ಪ್ರಶ್ನಿಸಿದರು.

ಬೇಡಿಕೆ ಈಡೇರಿಸಿ: ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ಕಂತು ಕಟ್ಟಿ ನಷ್ಟಕ್ಕೆ ಒಳಗಾದ ರೈತರೆಲ್ಲರಿಗೂ ಪರಿಹಾರ ನೀಡಬೇಕು. ಕಳೆದ ವರ್ಷ ಜಿಲ್ಲೆಯ 7ತಾಲೂಕುಗಳು ಬರವೆಂದು ಘೋಷಣೆಯಾದರೂ ಇದುವರೆಗೆ ಬೆಳೆನಷ್ಟ ಪರಿಹಾರ ಸಿಕ್ಕಿಲ್ಲ. ಕೂಡಲೇ ರೈತರ ಖಾತೆಗೆ ಹಣ ಜಮೆ ಮಾಡಬೇಕು. ಕೃಷಿ ಪಂಪ್‌ಸೆಟ್‌ಗಳಿಗೆ 12ಗಂಟೆ ವಿದ್ಯುತ್‌ ಪೂರೈಸಬೇಕು. ಸರ್ವೆ ಇಲಾಖೆಯಲ್ಲಿ ನನೆಗುದಿಗೆ ಬಿದ್ದ ಕಡತ ವಿಲೇವಾರಿ ಮಾಡಬೇಕು. ತುಂಗಭದ್ರಾ ಎಡದಂಡೆ ನಾಲೆಯ ಮೈಲ್‌ 69ರಲ್ಲಿ ಗೇಟ್‌ ಮಾಪನ ವ್ಯತಿರಿಕ್ತವಾಗಿದ್ದು, 12ಪಾಯಿಂಟ್‌ ಹೆಚ್ಚಿಗೆ ತೋರಿಸುತ್ತಿದೆ. ಕೂಡಲೇ ಅದನ್ನು ಸರಿಪಡಿಸಬೇಕು. ಮಾನ್ವಿ, ರಾಯಚೂರು ತಾಲೂಕಿನ ಕೆಳಭಾಗದ ರೈತರಿಗೆ ನೀರು ಕೊಡಬೇಕು ಎಂದು ಆಗ್ರಹಿಸಿದರು. ಪದಾಧಿಕಾರಿಗಳಾದ ಚಾಮರಸ ಮಾಲಿ ಪಾಟೀಲ್‌, ಅಮರಣ್ಣ ಗುಡಿಹಾಳ, ದೊಡ್ಡಬಸನಗೌಡ, ಸೂಗೂರಯ್ಯ ಆರ್‌.ಎಸ್‌.ಹಿರೇಮಠ, ಲಕ್ಷ ್ಮಣಗೌಡ ಕಡಗಂದೊಡ್ಡಿ, ಜಯಪ್ಪಸ್ವಾಮಿ ಉಡಮಗಲ್‌, ಬಸವರಾಜ ಮಾಲಿ ಪಾಟೀಲ್‌, ವಿ.ಭೀಮೇಶ್ವರರಾವ್‌, ಹುಲಿಗಪ್ಪ ಜಾಲಿಬೆಂಚಿ, ದೇವರಾಜ ನಾಯಕ, ಬೂದೆಯ್ಯಸ್ವಾಮಿ, ನರಸಪ್ಪ, ಮಲ್ಲಿಕಾರ್ಜುನ, ವೀರನಗೌಡ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ರೈತರು ನೆರೆದಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ